ಚಿಕ್ಕಮಗಳೂರು: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಯಲ್ಲಿ ಸ್ಪೂರ್ತಿಯಿಂದ ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಬೇಕು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಕರೆನೀಡಿದರು.
ಅವರು ಇಂದು ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ತಾ.ಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಪ್ರಕೃತಿ ಅಕಾಡೆಮಿ, ಹಿರಿಯ ಪ್ರಾಥಮಿಕ ಶಾಲೆ, ಗವನಹಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಸಬಾ-೨ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ೨೦೨೫-೨೬ ನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ, ಸಾಂಸ್ಕೃತಿಕ, ಭಾವಗೀತೆ, ಭಕ್ತಿಗೀತೆ ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ದೈಹಿಕ, ಮನಸ್ಸು, ಹೃದಯ, ಮೆದುಳು ಚುರುಕಾಗುತ್ತದೆ. ಈ ನಿಟ್ಟಿನಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದರು. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಂಸ್ಕಾರ ಕಲಿಸುವಂತಾದಾಗ ಮಾತ್ರ ದೇಶ, ನಾಡು-ನುಡಿ, ನೆಲ-ಜಲ ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸುವುದು ಅಗತ್ಯ ಎಂದರು.
ಎಲ್ಲಾ ವರ್ಗದ ವಿದ್ಯಾರ್ಥಿಗಳಲ್ಲಿ ಮೊದಲು ದೇಶಪ್ರೇಮ ಬೆಳೆಸಬೇಕು. ದೇಶ ಮತ್ತು ಧರ್ಮ ಇದ್ದರೆ ನಾವು ಉಳಿಯುತ್ತೇವೆ. ಈ ಬಗ್ಗೆ ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳಿಗೆ ಕಲಿಸುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕಾಗಿದೆ ಎಂದು ಹೇಳಿದರು. ನ್ಯಾಯ ನಿರ್ಣಾಯಕರು ವಿಜೇತರಾದ ತಂಡಗಳಿಗೆ ಪ್ರಾಮಾಣಿಕವಾಗಿ ತೀರ್ಪು ನೀಡುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ, ನಗರಸಭೆ ಸದಸ್ಯ ಪರಮೇಶ್ ರಾಜ್ ಅರಸ್, ಪ್ರಕೃತಿ ಅಕಾಡೆಮಿಯ ಅಧ್ಯಕ್ಷರಾದ ಹೆಚ್.ಜಿ ನಾಗೇಶ್, ದಾನಿಗಳಾದ ನೀಲಕಂಠಾಚಾರಿ, ಜಿಲ್ಲಾದೈಹಿಕ ಪರಿವೀಕ್ಷಕರು ಪಾಲಾಕ್ಷಪ್ಪ, ಮಹೇಶ್ವರಪ್ಪ, ಕಿರಣ್ ಕುಮಾರ್, ಪರಮೇಶ್, ಚಂದ್ರಕಾಂತ್, ವಿಲ್ಮಾ, ದಿನೇಶ್, ಶಿವಪ್ಪ, ಮೋಹನಾಕ್ಷಿ, ಕೃಷ್ಣರಾಜ್ ಅರಸ್, ಜಾನಕಮ್ಮ, ಉಪಸ್ಥಿತರಿದ್ದರು. ಮೊದಲಿಗೆ ಶಿಕ್ಷಕಿ ರೇಣುಕ ಸ್ವಾಗತಿಸಿದರು.
Students should participate with a sportsmanlike spirit.
