ಕಾಂಗ್ರೆಸಿಗರಿಗೆ ಸುಳ್ಳು ಹೇಳುವ ಕಾಯಿಲೆ ಅಂಟಿಕೊಂಡಿದೆ

ಚಿಕ್ಕಮಗಳೂರು: ಮತಗಳ್ಳತನ, ಚುನಾವಣಾ ಅಕ್ರಮ ಎಂದೆಲ್ಲಾ ಆರೋಪ ಮಾಡತ್ತಿರುವ ಕಾಂಗ್ರೆಸ್ ಪಕ್ಷ ಆ ಬಗ್ಗೆ ಅಧಿಕೃತ ದೂರು ನೀಡದೆ ಬೀದಿಯಲ್ಲಿ ಆರೋಪ ಮಾಡಿ ಅನುಮಾನ ಮತ್ತು ಅಪನಂಬಿಕೆ ಸೃಷ್ಠಿಸುವ ಷಡ್ಯಂತ್ರವನ್ನು ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ದೂರಿದರು.

ಶುಕ್ರವಾರ ನಗರದಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸಿಗರಿಗೆ ಸುಳ್ಳು ಹೇಳುವ ಕಾಯಿಲೆ ಅಂಟಿಕೊಂಡಿದೆ. ತಾವು ಗೆದ್ದರೆ ಪ್ರಜಾಪ್ರಭುತ್ವದ ಗೆಲುವು ಎನ್ನುತ್ತಾರೆ. ಸೋತರೆ ಇವಿಎಂ ಮೇಲೆ ದೂರುತ್ತಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಚುನಾವಣಾ ಆಯೋಗವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದಾರೆ. ಅವರು ಮಿಸ್‌ಗೈಡೆಡ್ ಲೀಡರ್. ಮೂರ್ಖ ನಾಯಕನಿಗೆ ಮೂಢರಂತೆ ಕಾಂಗ್ರೆಸ್ ಮುಖಂಡರು ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದು ಟೀಕಿಸಿದರು.

ಚುನಾವಣಾ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವ ಸಮಾನ್ಯ ಜ್ಞಾನವೂ ರಾಹುಲ್ ಅವರಿಗೆ ಇದ್ದಂತಿಲ್ಲ. ಕಾಗೆ ಬೆಳ್ಳಗಿದೆ ಎಂದು ರಾಹುಲ್ ಹೇಳಿದರೆ ಹೌದು ಎಂದು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ಗೋಣು ಹಾಕುತ್ತಿದ್ದಾರೆ. ಅದು ಬುದ್ಧಿವಂತಿಕೆ ಲಕ್ಷಣವಲ್ಲ. ಬುದ್ಧಿಯನ್ನ ಒತ್ತೆ ಇಟ್ಟವರ ಲಕ್ಷಣ ಎಂದು ಟೀಕಿಸಿದರು.

ಚುನಾವಣಾ ಆಯೋಗಕ್ಕೆ ಪ್ರಮುಖ ಕಚೇರಿ, ಸಿಬ್ಬಂದಿ ಇರುವುದು ಹೊರತುಪಡಿಸಿದರೆ ಮೂಲಭೂತ ಸಂರಚನೆ ಬೂತ್ ಮಟ್ಟದ ವರೆಗೆ ಇರುವುದಿಲ್ಲ. ಚುನಾವಣಾ ನೊಂದಣಿ ಕಾರ್ಯಕ್ಕೆ ಬೂತ್ ಮಟ್ಟದಲ್ಲಿ ಬಿಎಲ್‌ಓಗಳಿರುತ್ತಾರೆ. ಅವರೆಲ್ಲ ಬಹುತೇಕ ಶಿಕ್ಷಕರು ಮತ್ತು ರಾಜ್ಯ ಸರ್ಕಾರಿ ಇತರೆ ನೌಕರರು ಇರುತ್ತಾರೆ. ತಹಸೀಲ್ದಾರರು ಮತ್ತು ಉಪ ತಹಸೀಲ್ದಾರರು ಸೂಪರ್ ವೈಸರ್‌ಗಳು ಮತ್ತು ಇಓಳಾಗಿರುತ್ತಾರೆ. ಅವರ ಮೇಲೆ ಎಸಿ ಕೇಡರ್ ಹಂತದ ಎಇಓಗಳು ಇರುತ್ತಾರೆ. ಅವರ ಮೇಲೆ ಜಿಲ್ಲಾಧಿಕಾರಿಗಳು ಡಿಇಓ ಆಗಿರುತ್ತಾರೆ. ಮತಗಳ್ಳತನ ಮಾಡಲು ಚುನಾವಣಾ ಆಯೋಗಕ್ಕೆ ನೆಟ್‌ವರ್ಕ್ ಇರುವುದೇ ಇಲ್ಲ ಎಂದು ಹೇಳಿದರು.

ಜಿಲ್ಲಾ ಚುನಾವಣಾಧಿಕಾರಿ ಮತದಾರರ ಕರಡು ಪಟ್ಟಿಯನ್ನು ಪ್ರಕಟ ಮಾಡಿದ ಸಂದರ್ಭದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಎಲ್ಲ ರಾಜಕೀಯ ಪಕ್ಷಕ್ಕೆ ಕರಡು ಮತದಾರರ ಪಟ್ಟಿಯನ್ನ ಚುನಾವಣೆ ಸಂದರ್ಭದಲ್ಲಿ ಆಯೋಗವು ಮುಫತ್ತಾಗಿ ಎಲ್ಲಾ ಅಂಗೀಕೃತ ರಾಜಕೀಯ ಪಕ್ಷಗಳಿಗೆ ಕಳಿಸಿಕೊಡುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದೆ. ೨೦೧೪, ೨೦೧೯ ರಲ್ಲೂ ಇವರದ್ದೇ ಸರ್ಕಾರ ಇತ್ತು. ಇಷ್ಟಾದರೂ ಸಿದ್ದರಾಮಯ್ಯ ಆಗಲಿ, ಡಿ.ಕೆ.ಶಿವಕುಮಾರ್ ಆಗಲಿ ಯಾವುದೇ ದೂರು ನೀಡಲಿಲ್ಲ ಎಂದರು.

ಮತಗಳ್ಳತನ ನಡೆದಿರುವುದು, ಚುನಾವಣೆ ಅಕ್ರಮ ನಡೆದಿರುವುದು ನಿಜವೇ ಆಗಿದ್ದರೆ ಬೀದಿಯಲ್ಲಿ ಪ್ರತಿಭಟನೆ ಮಾಡುವ ಮೊದಲೇ ಪ್ರಮಾಣ ಪತ್ರ ಸಲ್ಲಿಸಿ ಆಯೋಗಕ್ಕೆ ದೂರು ನೀಡಿಲ್ಲ, ನ್ಯಾಯಾಲಯಕ್ಕೆ ಹೋಗಲಿಲ್ಲ ಏಕೆ ಎಂದ ಅವರು, ಸುಳ್ಳು ಆರೋಪ ಮಾಡುತ್ತಾ ಪ್ರಜಾಪ್ರಭುತ್ವವನ್ನು ಅಪಮಾನ ಮಾಡಲಾಗುತ್ತಿದೆ ಎಂದು ದೂರಿದರು.

ಯಾವ ಡಿಸಿ, ತಹಸೀಲ್ದಾರ್ ಮತಗಳ್ಳತನ ಮಾಡಲು ಚುನಾವಣಾ ಆಯೋಗದೊಂದಿಗೆ ಕೈಜೋಡಿಸಿದ್ದಾರೆ ಎಂಬುದನ್ನು ಮುಖ್ಯಮಂತ್ರಿಗಳು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

Congressmen are infected with the disease of lying.

Comments

Leave a Reply

Your email address will not be published. Required fields are marked *