ತೀರ್ಪುಗಾರರ ನಿರ್ಲಕ್ಷ್ಯದಿಂದ ರಾಜ್ಯಮಟ್ಟದ ಆಯ್ಕೆಯಲ್ಲಿ ಅನ್ಯಾಯ

ಮೂಡಿಗೆರೆ: ‘ಜಿಲ್ಲಾ ಯುವ ಜನೋತ್ಸವದಲ್ಲಿ ತೀರ್ಪುಗಾರರ ನಿರ್ಲಕ್ಷ್ಯದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಬೇಕಿದ್ದ ನಮ್ಮ ಕಲಾ ಸಂಘಕ್ಕೆ ದ್ರೋಹವೆಸಗಲಾಗಿದೆ’ ಎಂದು ಮಿತ್ರ ಜಾನಪದ ಕಲಾ ಸಂಘದ ಸದಸ್ಯ ಕೆ.ಸಿ. ಚಂದ್ರಶೇಖರ್ ದೂರಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 4ರಂದು ಚಿಕ್ಕಮಗಳೂರು ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಶ್ರಯದಲ್ಲಿ ಜಿಲ್ಲಾಮಟ್ಟದ ಯುವ ಜನೋತ್ಸವ ಏರ್ಪಡಿಸಲಾಗಿತ್ತು. ಜಾನಪದ ಗೀತೆ ಹಾಗೂ ಜಾನಪದ ನೃತ್ಯ ಸ್ಪರ್ಧೆಯಲ್ಲಿ ನಮ್ಮ ತಂಡವು ಭಾಗವಹಿಸಿ ಗೆಲುವು ಸಾಧಿಸಿರುವುದು ಅಂಕಪಟ್ಟಿಯಲ್ಲಿ ಸ್ಪಷ್ಟವಾಗಿದೆ.

ಆದರೆ, ಈ ಸ್ಪರ್ಧೆಗೆ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದ್ದ ಶಿವಕುಮಾರ್ ಬ್ಯಾರುವಳ್ಳಿ ನೀಡಿರುವ ಅಂಕಪಟ್ಟಿಯಲ್ಲಿರುವ ಫಲಿತಾಂಶ ಹೊರತುಪಡಿಸಿ, ಪಿ.ಗೌರೀಶ್ ಹಾಗೂ ಕೆ. ಸುಜಾತ ಅವರು ನೀಡಿರುವ ಅಂಕಗಳಲ್ಲಿ ತಿದ್ದಿಪಡಿಯಾಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಇದರಿಂದ ತಮ್ಮ ತಂಡಕ್ಕೆ ಮೋಸವಾಗಿದೆ ಎಂದು ಹೇಳಿದರು.

‘ಈ ಪ್ರಕ್ರಿಯೆ ಗಮನಿಸಿದರೆ ಪ್ರಭಾವಿ ವ್ಯಕ್ತಿಗಳು  ತೀರ್ಪುಗಾರರ ಮೇಲೆ ಒತ್ತಡ  ಹೇರಿ, ಗೆಲುವು ಪಡೆಯಬೇಕಿದ್ದ ನಮ್ಮ ತಂಡವನ್ನು ಅಂಕಪಟ್ಟಿ ತಿದ್ದುವ ಮೂಲಕ ಸೋಲಿಸಿ, ಬೇರೆ ತಂಡಗಳನ್ನು ಗೆಲ್ಲಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗಿದೆ. ಹಾಗಾಗಿ ಪಾರದರ್ಶಕತೆ ಇಲ್ಲದ ಫಲಿತಾಂಶ ತಡೆ ಹಿಡಿದು, ತಿದ್ದುಪಡಿ ಮಾಡುವ ಮುನ್ನ ಅಂಕಪಟ್ಟಿಯಲ್ಲಿ ನಮೂದಿಸಿದ ಅಂಕಗಳ ಆಧಾರದ ಮೇಲೆ ನಮ್ಮ ತಂಡಕ್ಕೆ ಪ್ರಥಮ ಸ್ಥಾನ ಘೋಷಣೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಬೇಕು. ಇಲ್ಲವಾದರೆ ಯಾವುದೇ ತಂಡವನ್ನು ಕಳಿಸಬಾರದು’  ಎಂದು ಒತ್ತಾಯಿಸಿದರು.

ಮಿತ್ರ ಜಾನಪದ ಕಲಾ ಸಂಘದ ಸದಸ್ಯರಾದ ಜಯಪಾಲ್, ನವೀನ್ ಕಣಚೂರು, ಸುನೀಲ್ ಹಂತೂರು, ಶಶಿ ಜೇನುಬೈಲ್ ಭಾಗವಹಿಸಿದ್ದರು.

Injustice in state-level selection due to judges’ negligence

Comments

Leave a Reply

Your email address will not be published. Required fields are marked *