ಚಿಕ್ಕಮಗಳೂರು: ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಪರಮಪೂಜ್ಯ ಶ್ರೀ ಬಾಲಗಂಗಾಧನಾಥ ಸ್ವಾಮೀಜಿಗಳು ಎಲ್ಲಾ ವರ್ಗದ ಜನರ ತಲೆಗೊಂದು ಮರ ಇರಬೇಕೆಂಬ ಸಂಕಲ್ಪ ಮಾಡಿ ಪರಿಸರ ವನಕ್ರಾಂತಿಯನ್ನು ಮಾಡಿದ್ದರು ಎಂದು ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಹೇಳಿದರು.
ಅವರು ಇಂದು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘ ಏರ್ಪಡಿಸಿದ್ದ ಆದಿಚುಂಚನಗಿರಿ ಮಹಾ ಸಂಸ್ಥಾನದ ಜಗದ್ಗುರು ಭೈರವೈಕ್ಯ ಡಾ. ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ೮೦ ನೇ ಜಯಂತ್ಯೋತ್ಸವ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹಿರಿಯ ಪರಮ ಪೂಜ್ಯರ ಹೆಸರಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರ್ತಿಸಿ ಪ್ರೋತ್ಸಾಹಿಸುವ ಕಾರ್ಯ ನಿಜವಾದ ಪುಣ್ಯದ ಕಾರ್ಯ ಎಂದ ಅವರು, ದೇವರು ದೇವಾಲಯಗಳಿಂದ ಮಾತ್ರ ಪುಣ್ಯದ ಕಾರ್ಯ ಅಲ್ಲ, ಸಮಾಜಮುಖಿ ಕಾರ್ಯಗಳಿಂದ ಮಾತ್ರ ಸಾಧ್ಯ ಎಂದರು.
ಬಾಲಗಂಗಾಧರನಾಥ ಮಹಾಸ್ವಾಮಿಗಳು ದೇವಸ್ಥಾನ, ದೇವರು ಎಂಬುದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿನ ಬಡವರು, ದೀನದಲಿತರು, ಅನಾಥರ ಸೇವೆ ಮಾಡಬೇಕೆಂದು ಹೇಳುತ್ತಿದ್ದರು. ಜೊತೆಗೆ ಅದನ್ನು ಸಾಧಿಸಿ ತೋರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆಂದು ಹೇಳಿದರು.
ಈ ನಿಟ್ಟಿನಲ್ಲಿ ಜಿಲ್ಲಾ ಒಕ್ಕಲಿಗರ ಸಂಘ ಕಳೆದ ಮೂರುವರೆ ದಶಕಗಳಿಂದ ಇಂತಹ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತ ಬರುತ್ತಿರುವುದು ಶ್ಲಾಘನೀಯ ಎಂದ ಅವರು, ಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಒಂದು ವರ್ಗಕ್ಕೆ ಸೀಮಿತವಾಗಿಲ್ಲ, ಎಲ್ಲಾ ವರ್ಗದ ಜನ ಸಮುದಾಯ ಇಂತಹ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಅಂದು ಆದಿಚುಂಚನಗಿರಿ ತಾಂತ್ರಿಕ ಮಾಹಾವಿದ್ಯಾಲಯವನ್ನು ಸ್ಥಾಪಿಸಿದ ಪರಿಣಾಮ ಎಲ್ಲಾ ಸಮುದಾಯದ ಪ್ರಸ್ತುತ ಸಾವಿರಾರು ವಿದ್ಯಾರ್ಥಿಗಳು ಹೊರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಾಲಿನಲ್ಲಿ ಒಕ್ಕಲಿಗ ಸಮುದಾಯ ಹೊರತುಪಡಿಸಿದೆ ಎಂದು ವಿಷಾಧಿಸಿದರು.
ಬಾಲಗಂಗಾಧರನಾಥ ಮಹಾಸ್ವಾಮಿಗಳು ಇಡೀ ಮನುಕುಲಕ್ಕೆ ಸಹಾಯಹಸ್ತ ನೀಡಲು ಅವತಾರವನ್ನು ತಾಳಿ ಬಂದಿದ್ದರು. ಇದು ನಮ್ಮ ಪುಣ್ಯ. ಎಲ್ಲರೂ ನಮ್ಮವರೇ ಎಂಬ ಭಾವನೆ ರಾಷ್ಟ್ರಕವಿ ಕುವೆಂಪು ಅವರಲ್ಲಿ ಅಡಗಿತ್ತು. ಅವರಂತೆ ಸಕಲ ಜೀವರಾಶಿಗಳನ್ನು ಉಳಿಸಿ ಬೆಳೆಸುವಂತ ಕಾರ್ಯವನ್ನು ಶ್ರೀಗಳು ಮಾಡಿದ್ದಾರೆ ಎಂದು ಬಣ್ಣಿಸಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಕಳೆದ ೭೦ ವರ್ಷಗಳಲ್ಲಿ ಬಾಲಗಂಗಾಧರನಾಥ ಸ್ವಾಮಿಗಳು ಸ್ಮರಣೆ ಮಾಡಲು ಹಲವಾರು ಕಾರಣಗಳಿದ್ದು ಅವರ ಜೀವಿತಾವಧಿಯಲ್ಲಿ ಮಾಡಿರುವ ಸಾಧನೆಗಳು ಒಕ್ಕಲಿಗರ ಸಮಾಜಕ್ಕೆ ಗುರುತು ತಂದುಕೊಟ್ಟಿದೆ ಎಂದರು.
ಭಿಕ್ಷಾಟನೆ ಮೂಲಕ ಮಠವನ್ನು ಕಟ್ಟಿ ಬೆಳೆಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ. ಅವರ ತ್ಯಾಗ, ಶ್ರಮ ಒಕ್ಕಲಿಗರಲ್ಲಿ ಒಮ್ಮತ ಮೂಡಿಸಲು ಪ್ರಯತ್ನ ಕಾರಣ. ಎಲ್ಲಾ ರೀತಿಯ ಸಮಾಜಮುಖಿ ಕಾರ್ಯಗಳ ಜೊತೆಗೆ ೫ ಕೋಟಿ ಸಸ್ಯಗಳನ್ನು ನೆಡುವ ಮೂಲಕ ರಾಜ್ಯದಲ್ಲೇ ಪರಿಸರ ಪ್ರೀತಿಸುವ ವನಕ್ರಾಂತಿ ಮಾಡಿದ್ದಾರೆಂದು ಬಣ್ಣಿಸಿದರು.
೪೫೦ ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳನ್ನು ಸ್ಥಾಪಿಸಿದ ಏಕೈಕ ಬಾಲಗಂಗಾಧರನಾಥ ಶ್ರೀಗಳು ೧೯೮೫ ರಲ್ಲಿ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯವನ್ನು ಸ್ಥಾಪಿಸಿದ ಪರಿಣಾಮ ಶ್ರೀಗಳ ಹೆಸರಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಹೊರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆಂದು ಹೇಳಿದರು.
ಬಿಜಿಎಸ್ ವಿಶ್ವವಿದ್ಯಾ ನಿಲಯದ ಕುಲಸಚಿವರಾದ ಡಾ. ಸಿ.ಕೆ. ಸುಬ್ರಾಯ ಮಾತನಾಡಿ, ಜಿಲ್ಲಾ ಒಕ್ಕಲಿಗರ ಸಂಘ ಜಿಲ್ಲೆಯನ್ನು ಶೈಕ್ಷಣಿಕವಾಗಿ, ಆಧ್ಯಾತ್ಮಿಕವಾಗಿ ವಿಶ್ವದಲ್ಲೇ ಹೆಸರು ಮಾಡಿರುವ ವಿಶೇಷವಾದ ಸಂಘವಾಗಿದ್ದು, ಶಿಸ್ತು, ಸಂಯಮ, ಗುಣಮಟ್ಟ ಹೊಂದಿದೆ ಎಂದು ಶ್ಲಾಘಿಸಿದರು.
ಬಾಲಗಂಗಾಧರನಾಥ ಶ್ರೀಗಳು ಕೆರೆಕಟ್ಟೆ ತುಂಬಿಸಿ ಹಸಿರು ಕ್ರಾಂತಿ ಮಾಡಿದ ಆಧುನಿಕ ಭಗೀರಥ ಎಂದು ಬಣ್ಣಿಸಿದ ಅವರು, ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನುಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಶ್ರೀಗಳು ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ ಎಂ.ಎಸ್ ಪ್ರದೀಪ್ ಕುಮಾರ್, ಉಪಾಧ್ಯಕ್ಷ ಟಿ.ಡಿ. ಮಲ್ಲೇಶ್, ನಿರ್ದೇಶಕರುಗಳಾದ ಬಿ.ಸಿ.ಲೋಕಪ್ಪಗೌಡ, ಕೆ.ಬಿ.ಅನಂತೇಗೌಡ, ಕೆ.ಪಿ.ರಾಜೇಂದ್ರ, ರತೀಶ್ ಕುಮಾರ್ ಕೆ.ಯು, ಹರಿಣಾಕ್ಷಿ ನಾಗರಾಜ್, ಎಂ. ಅಶೋಕ್, ಎಂ.ಬಿ ಸತೀಶ್, ಯು.ಪಿ ಮನುಕುಮಾರ್, ಕೆ.ಪಿ ಪೃಥ್ವಿರಾಜ್, ಹೆಚ್.ಕೆ.ನವೀನ್, ಬಿ.ಸಿ.ಶ್ರೀನಾಥ್, ಟಿ.ರಾಜು, ಹೆಚ್.ಎಸ್ ಮೋಹನ್, ಕೆ.ಬಿ.ಸಜಿತ್, ಸಿ.ಟಿ.ರೇವತಿ. ಎಂ.ಬಿ ಸಂತೋಷ್, ಟಿ.ಎಂ ಉಮಾಶಂಕರ್, ಭವ್ಯನಟೇಶ್, ಪವಿತ್ರರತೀಶ್, ಹೋಯ್ಸಳ, ಮಂಜುಚೇತನ್, ಪ್ರಮೋದ್ ಸಿಇಓ ಕುಳ್ಳೇಗೌಡ, ವ್ಯವಸ್ಥಾಪಕರಾದ ತೇಜಸ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
80th Birth Anniversary of Dr. Sri Balagangadharnath Mahaswamy
