Tag: Demand for implementation of real caste survey report of Vishwakarma Samaj

  • ವಿಶ್ವಕರ್ಮ ಸಮಾಜದ ಜಾತಿ ಸಮೀಕ್ಷೆ ನೈಜ ವರದಿ ಜಾರಿಗೆ ಆಗ್ರಹ

    ವಿಶ್ವಕರ್ಮ ಸಮಾಜದ ಜಾತಿ ಸಮೀಕ್ಷೆ ನೈಜ ವರದಿ ಜಾರಿಗೆ ಆಗ್ರಹ

    ಚಿಕ್ಕಮಗಳೂರು: ಸರ್ಕಾರ ವಿಶ್ವಕರ್ಮ ಸಮಾಜಕ್ಕೆ ಜಾತಿ ಸಮೀಕ್ಷೆಯ ನೈಜ ವರದಿ ಜಾರಿಮಾಡುವಂತೆ ಆಗ್ರಹಿಸಿ ಹಾಗೂ ಸಿದ್ದವಾಗಿರುವ ಅವೈಜ್ಞಾನಿಕ ವರದಿಯನ್ನು ತಿರಸ್ಕರಿಸಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಭಾ ಎಚ್ಚರಿಸಿದೆ.

    ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಜಿಲ್ಲಾಧ್ಯಕ್ಷ ಹೆಚ್.ಆರ್ ಉಮಾಶಂಕರ್ ಅವರು ಜಾತಿ ಸಮೀಕ್ಷೆಯಲ್ಲಿ ಸರ್ಕಾರ ವಿಶ್ವಕರ್ಮ ಸಮಾಜದ ಅಂಕಿಅಂಶಗಳನ್ನು ಗುರ್ತಿಸುವಲ್ಲಿ ವಿಫಲವಾಗಿದೆ. ಸಮಾಜದಲ್ಲಿ ೨೦೧೫ ರಲ್ಲಿ ೩೫ ಲಕ್ಷ ಜನಸಂಖ್ಯೆ ಇದ್ದು, ೨೦೨೫ ರ ಜಾಗತಿಗಣತಿಯಲ್ಲಿ ೬ ಲಕ್ಷಕ್ಕೆ ಇಳಿಸಿರುವುದನ್ನು ಖಂಡಿಸಿದರು.

    ಈ ಬಗ್ಗೆ ಸಮಾಜ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ೧೫ ಲಕ್ಷ ಜನಸಂಖ್ಯೆ ಇದೆ ಎಂದು ವರದಿ ಸಿದ್ದಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು ೩೫ ಸಾವಿರ ಜನಸಂಖ್ಯೆ ಇದ್ದು, ಇದರಲ್ಲಿ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ೪ ಸಾವಿರ, ತರೀಕೆರೆ ೬ ಸಾವಿರ, ಶೃಂಗೇರಿಯಲ್ಲಿ ೨ ಸಾವಿರ ಸಮುದಾಯದ ಜನರಿದ್ದಾರೆಂದು ಹೇಳಿದರು.

    ಕೂಡಲೇ ಮರು ಜಾತಿಗಣತಿ ನಡೆಸುವ ಮೂಲಕ ನೈಜ ವರದಿಯನ್ನು ಸಿದ್ದಪಡಿಸಿ ಜಾರಿಮಾಡಬೇಕು. ಇಲ್ಲವಾದಲ್ಲಿ ಸಮಾಜವು ಸಂಘಟನೆಗಳೊಂದಿಗೆ ಸೇರಿ ಮುಂದೆ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

    ಈ ರೀತಿ ಹಲವಾರು ಸಮಸ್ಯೆಗಳನ್ನು ಮುಂದಿಟ್ಟು ವಿಶ್ವಕರ್ಮ ಸಮಾಜಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿದ ಅವರು, ಜಾತಿಗಣತಿ ವರದಿಯನ್ನು ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿದರು.

    ವಿಶ್ವಕರ್ಮ ಸಮಾಜಕ್ಕೆ ಜಾತಿನಿಂದನೆ ಮಾಡುತ್ತಿರುವುದು ಎದ್ದು ಕಾಣುತ್ತಿದ್ದು, ಸಿಇಟಿ ಪರೀಕ್ಷೆಯಲ್ಲಿ ಜನಿವಾರವನ್ನು ತೆಗೆಸಿ ಪರೀಕ್ಷಾ ಕೊಠಡಿಗೆ ಕಳುಹಿಸಿರುವುದು ಹಿಂದೂ ಧರ್ಮದ ಆಚರಣೆಗೆ ಅಡ್ಡಿಪಡಿಸಿದಂತಾಗಿದೆ ಎಂದು ದೂರಿದರು.

    ಈ ಎಲ್ಲಾ ಘಟನೆಗಳು ನಡೆಯುತ್ತಿರುವಾಗಲೇ ಲಕ್ಷ್ಮೀ ನಿವಾಸ ಧಾರಾವಾಹಿಯ ಸನ್ನಿವೇಶ ಒಂದರಲ್ಲಿ ಮಾತನಾಡುವ ಭರದಲ್ಲಿ ಕಳ್ಳ ಆಚಾರಿ ಎಂದು ಪದೇ ಪದೇ ನಿಂದಿಸಿರುವುದು ಖಂಡನೀಯ, ಮನೆಯಲ್ಲೇ ಕುಳಿತು ಧಾರಾವಾಹಿಯ ನಿರ್ಮಾಪಕರು ಕ್ಷಮೆ ಕೇಳಿರುವುದನ್ನು ಒಪ್ಪುವುದಿಲ್ಲ. ಧಾರವಾಹಿಯಲ್ಲಿ ಪ್ರಸಾರವಾಗುತ್ತಿರುವ ಈ ಸನ್ನಿವೇಶವನ್ನು ಕಡಿತಗೊಳಿಸಿ ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಎಂ.ಜೆ. ಚಂದ್ರಶೇಖರ ಆಚಾರ್ಯ, ವಿಶ್ವಕರ್ಮ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ. ರತೀಶ್, ಉಪಾಧ್ಯಕ್ಷ ಸಿ.ಜೆ. ಬಾಲಕೃಷ್ಣ, ರಾಮಪ್ಪಾಚಾರ್ಯ, ಮೋಹನ್, ಅರವಿಂದ, ಪರಮೇಶ್ವರಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

    Demand for implementation of real caste survey report of Vishwakarma Samaj