Tag: Karnataka tops efforts to strengthen mental health

  • ಮಾನಸಿಕ ಸ್ವಾಸ್ಥ್ಯಬಲಪಡಿಸುವ ಪ್ರಯತ್ನಗಳಲ್ಲಿ ಕರ್ನಾಟಕ ಅಗ್ರ ಸ್ಥಾನ

    ಮಾನಸಿಕ ಸ್ವಾಸ್ಥ್ಯಬಲಪಡಿಸುವ ಪ್ರಯತ್ನಗಳಲ್ಲಿ ಕರ್ನಾಟಕ ಅಗ್ರ ಸ್ಥಾನ

    ಚಿಕ್ಕಮಗಳೂರು: ರಾಷ್ಟ್ರ ಮಟ್ಟದಲ್ಲಿ ಮಾನಸಿಕ ಸ್ವಾಸ್ಥ್ಯವನ್ನು ಬಲಪಡಿಸುವ ಎಲ್ಲಾ ಪ್ರಯತ್ನಗಳಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಿಮಾನ್ಸ್‌ನ ಮಾಜಿ ನಿರ್ದೇಶಕರು ಹಾಗೂ ನ್ಯಾಷನಲ್ ಮೆಡಿಕಲ್ ಕೌನ್ಸಿಲ್‌ನ ಮಾಜಿ ಆಧ್ಯಕ್ಷರೂ ಆದ ಡಾ. ಬಿ.ಎನ್.ಗಂಗಾಧರ್ ಹೇಳಿದರು.

    ಅವರು ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಭಾಂಗಣದಲ್ಲಿ ಭಾರತೀಯ ಮನೋವೈದ್ಯರ ಸಂಘ ಕರ್ನಾಟಕ ಶಾಖೆ, ಚಿಕ್ಕಮಗಳೂರು ಮನೋವೈದ್ಯರ ಸಂಘ ಮತ್ತು ಮಾನಸಿಕ ಆರೋಗ್ಯ ವಿಭಾಗ ಹಾಗೂ ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ರಾಜ್ಯಮಟ್ಟದ ಮಾನಸಿಕ ಆರೋಗ್ಯ ತಜ್ಞರ ೩೫ನೇ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

    ಮಾನಸಿಕ ಸ್ವಾಸ್ಥ್ಯ ಕಾಪಾಡುವ ಪ್ರಯತ್ನದ ಪ್ರಮುಖ ರೂವಾರಿಗಳು, ಅದರ ಚುಕ್ಕಾಣಿ ಹಿಡಿದ ಅನೇಕರು ಇಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರೀಯ ಮಾನಸಿಕ ಆರೋಗ್ಯದ ಎನ್‌ಎಂಎಚ್‌ಬಿ ಜೊತೆಗೆ ಈಗ ಜಿಲ್ಲಾ ಮಟ್ಟದಲ್ಲಿ ಡಿಎಂಎಚ್‌ಬಿ ವ್ಯವಸ್ಥೆ ನಡೆಯುತ್ತಿದೆ. ಆಧುನಿಕ ತಂತ್ರಜ್ಞಾವನ್ನು ಪ್ರಾರಂಭಿಸಿರುವ ಟೆಲಿ ಮಾನಸ್ ಪ್ರಾರಂಭಿಸಲಾಗಿದೆ. ಅದಕ್ಕೂ ಸಹ ಕರ್ನಾಟಕವೇ ಚುಕ್ಕಾಣಿ ಹಿಡಿದಿದೆ. ಎಲ್ಲ ವೈದ್ಯಕೀಯ ತಜ್ಞರೂ ಸಹ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

    ರಾಷ್ಟ್ರಮಟ್ಟದಲ್ಲಿ ಮಾನಸಿಕ ಸ್ವಾಸ್ಥ್ಯದ ಧ್ವಜವನ್ನು ಎತ್ತಿ ಹಿಡಿಯಲು ಕರ್ನಾಟಕದ ದೊಡ್ಡ ಪಾಲುದಾರಿಕೆ ಇದೆ. ಆ ಹೊಣೆಗಾರಿಕೆ ಸಹ ನಮಗೆ ಮುಂದಿನ ದಿನಗಳಲ್ಲಿ ಇರಬೇಕು. ಕಳೆದ ೨೫-೩೦ ವರ್ಷಗಳಲ್ಲಿ ಅತ್ಯಂತ ವೇಗವಾಗಿ ಹಾಗೂ ಅತ್ಯಂತ ವೈಜ್ಞಾನಿಕವಾಗಿ ಮುಂದೆ ಹೋಗಿರುವ ಮನೋವೈದ್ಯಕೀಯ ಪ್ರಾಂತದ ಶಾಖೆ ಎಂದರೆ ಅದು ಕರ್ನಾಟಕ ಎಂದು ಹೇಳಿದರು.

    ಕರ್ನಾಟಕ ಶಾಖೆಗೆ ಈಗಾಗಲೆ ಭಾರತೀಯ ಮನೋ ವೈದ್ಯಕೀಯ ಸಂಘದ ಮುಖೇನ ಹಲವಾರು ಪ್ರಶಸ್ತಿಗಳು ಸಿಕ್ಕಿವೆ. ಎಲ್ಲರೂ ಒಟ್ಟಿಗೆ ಸೇರಿ, ಹೊಣೆಗಾರಿಕೆ ಅರಿತುಕೊಂಡು ಕೆಲಸ ಮಾಡಿರುವುದು ಇದಕ್ಕೆ ಕಾರಣವಾಗಿರುವುದು ಹೆಮ್ಮೆಯ ವಿಷಯ ಎಂದರು.

    ಬೆಂಗಳೂರು ಎಸ್‌ಜೆಐಸಿ ನಿವೃತ್ತ ಪ್ರಾಧ್ಯಾಪಕರು, ಹೆಸರಾಂತ ಹೃದ್ರೋಗ ತಜ್ಞರೂ ಆದ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಮಾತನಾಡಿ, ಕೃಷ್ಣಶಕ ೫೦೦೦ ವರ್ಷಗಳ ಹಿಂದೆಯೇ ಕೃಷ್ಣ ಪರಮಾತ್ಮ ಕೊಟ್ಟಂತಹ ಭಗವದ್ಗೀತೆಗಿಂತಲೂ ಅದ್ಭುತವಾದ ಮನೋತಜ್ಞ ಪುಸ್ತಕ ಮತ್ತೊಂದಿಲ್ಲ ಎಂದರು.

    ಭಗವದ್ಗೀತೆಗೂ ಮೊದಲು ಸ್ವತಃ ಶಿವ ತನ್ನ ಪತ್ನಿ ಪಾರ್ವತಿಗೆ ಸ್ಮೃತಿ ಹೋದಾಗ ಯೋಗ, ಧ್ಯಾನ, ಅಪಸ್ಮಾರವನ್ನು ಕಾಲಿನಲ್ಲಿ ನಿಯಂತ್ರಿಸಿ ನಟರಾಜನಾಗಿ ಅಜ್ಞಾನ, ಅಂಧಕಾರವನ್ನು ನಿಯಂತ್ರಿಸುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾನೆ. ಶಿವನಿಗೆ ವೈದ್ಯನಾಥೇಶ್ವರ, ಜ್ಯೋತಿರ್ಲಿಂಗ, ಪರಂಜ್ಯೋತಿ ಎನ್ನುತ್ತೇವೆ. ಆ ಮೂಲಕ ವಿಶ್ವಕ್ಕೆ ಪ್ರಥಮ ಮನೋರೋಗ ತಜ್ಞ ಎನಿಸಿಕೊಂಡಿದ್ದಾನೆ ಎಂದರು.

    ನಮ್ಮ ಸಮಾಜದಲ್ಲಿ ಆಗುತ್ತಿರುವ ಆತ್ಮಹತ್ಯೆ ಪ್ರವೃತ್ತಿಯನ್ನು ಕಡಿಮೆ ಮಾಡುವ ಕಡೆಗೆ ಎಲ್ಲ ತಜ್ಞರು ಗಂಭೀರವಾಗಿ ಗಮನಹರಿಸಬೇಕು. ಯುವಕರಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಾಗುತ್ತಿದೆ. ಮನೋರೊಗ ತಜ್ಞರು ಬರವಣಿಗೆ ಮೂಲಕ ಸಾರ್ವಜನಿಕರಲ್ಲಿ ಆತ್ಮಹತ್ಯೆ ತಡೆ ಕುರಿತು ಅರಿವು ಮೂಡಿಸಬೇಕು. ಪ್ರತಿ ತಿಂಗಳು ಕನಿಷ್ಠ ೧ ಗಂಟೆ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವುದರಿಂದ ಆತ್ಮಹತ್ಯೆ ಪ್ರವೃತ್ತಿ ಕಡಿಮೆ ಆಗುತ್ತದೆ ಎಂದರು.

    ದುರಂತ ಎಂದರೆ ನಿಮಾನ್ಸ್‌ನಲ್ಲಿ ಮಹಿಳಾ ವ್ಯಸನ ಮುಕ್ತ ವಾರ್ಡ್ ತೆರೆಯಲಾಗಿದೆ. ಅಲ್ಲಿ ಹಾಸಿಗೆಗಳು ಸಾಕಾಗದ ಸ್ಥಿತಿ ಇದೆ. ಇದು ದೇಶದ ಅತ್ಯಂತ ಕೆಟ್ಟ ಸಂಗತಿ. ಇಡೀ ಕುಟುಂಬವನ್ನು ಕಾಪಾಡಬೇಕಾದ ತಾಯಂದಿರೆ ಇಂತಹ ಹೀನ ಕೃತ್ಯಕ್ಕೆ ಹೋದರೆ ಬರೇ ಕುಟುಂಬವಲ್ಲ, ಇಡೀ ಸಮಾಜ ಹಾಳಾಗುತ್ತದೆ. ಈ ಹಿನ್ನೆಲೆಯಲ್ಲಿ ಇಡೀ ಸಂಘಟನೆಯು ಮಕ್ಕಳು, ಯುವಕರು ವ್ಯಸನಕ್ಕೆ ದಾಸರಾಗದಿರುವಂತೆ ತಡೆಯುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.

    ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಡೀನ್ ಡಾ. ಎಂ.ಆರ್.ಹರೀಶ್, ಕರ್ನಾಟಕ ಭಾರತಿಯ ಮನೋವೈದ್ಯ ಸಂಘದ ಅಧ್ಯಕ್ಷ ಡಾ.ಸೋಮಶೇಖರ್ ಬಿಜ್ಜಳ್, ಡಾ. ಹರೀಶ್ ದೇಲಂತಬೆಟ್ಟು, ಡಾ. ಅನಿಲ್ ಕುಮಾರ್ ನಾಗರಾಜ್, ಡಾ. ಟಿಎಸ್. ಸತ್ಯನಾರಾಯಣ ರಾವ್, ಖಜಾಂಚಿ ಡಾ. ಚಂದ್ರಶೇಖರ್ ಸಹ ಕಾರ್ಯದರ್ಶಿ ಕೆ.ಎಸ್ ವಿನಯ್ ಕುಮಾರ್, ರವೀಂದ್ರ ಮುನೋಳಿ, ಡಾ. ಪವಿತ್ರ, ಡಾ. ವೆಂಕಟೇಶ್, ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು. ಚಿಕ್ಕಮಗಳೂರು ಮನೋವೈದ್ಯರ ಸಂಘದ ಸಂಘಟನಾ ಅಧ್ಯಕ್ಷ ಡಾ. ವೆಂಕಟೇಶ್ ಸ್ವಾಗತಿಸಿ ಡಾ. ಲೋಕೇಶ್ ಬಾಬು ವಂದಿಸಿದರು,

    Karnataka tops efforts to strengthen mental health