Tag: Life is bright by upholding values.

  • ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲ

    ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲ

    ಕಡೂರು: ಮಾನವ ಜೀವನ ಅಮೂಲ್ಯ. ದೇವರು ಕೊಟ್ಟ ಕೊಡುಗೆ ಅಪಾರ. ಅರಿವು ಆದರ್ಶಗಳಿಂದ ಜೀವನ ಸಮೃದ್ಧಗೊಳ್ಳಬೇಕು. ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

    ಅವರು ಶನಿವಾರ ತಾಲೂಕಿನ ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳವರ ೮೦ನೇ ವರ್ಷದ ಜನ್ಮ ದಿನೋತ್ಸವ ಹಾಗೂ ಲಿಂ. ಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳ ಪುಣ್ಯ ಸ್ಮರಣೊತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

    ಮನುಷ್ಯನಲ್ಲಿ ಆತ್ಮ ಬಲ ಬೆಳೆಯಲು ಆಧ್ಯಾತ್ಮದ ಹಸಿವು ಬೇಕು. ಸನ್ಮಾರ್ಗದಲ್ಲಿ ನಡೆಯುವ ಛಲ ಬೇಕು. ಅನಾರೋಗ್ಯಕರ ಸಮಾಜಕ್ಕೆ ಅಡಿಗಲ್ಲು ಇಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಮನುಷ್ಯ ಜಾಗೃತಗೊಂಡು ಆದರ್ಶ ಸಂಸ್ಕೃತಿ ಉಳಿವಿಗಾಗಿ ಶ್ರಮಿಸಬೇಕಾಗಿದೆ. ಸತ್ಯ ಶುದ್ಧ ಕಾಯಕದಿಂದ ಜೀವನ ಸಾರ್ಥಕಗೊಳ್ಳುತ್ತದೆ. ಜೀವ ಶಿವನಾಗಲು ಅಂಗ ಲಿಂಗವಾಗಲು ಮತ್ತು ಭವಿ ಭಕ್ತನಾಗುವ ಸಾಧನಾ ಮಾರ್ಗವನ್ನು ಬೋಧಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳನ್ನು ಯಾರೂ ಮರೆಯುವಂತಿಲ್ಲ. ಲಿಂ. ಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳವರ ಸಂಸ್ಕಾರದ ಗರಡಿಯಲ್ಲಿ ಬೆಳೆದ ಸರಳತೆ ಮತ್ತು ಸಾತ್ವಿಕತೆಗೆ ಹೆಸರಾದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯರು ವೀರಶೈವ ಧರ್ಮ ಸಂಸ್ಕೃತಿ ಬಿತ್ತಿ ಬೆಳೆಯುವಲ್ಲಿ ಬಹಳಷ್ಟು ಶ್ರಮಿಸಿದ್ದಾರೆ. ಧಾರ್ಮಿಕ ಮತ್ತು ಶೈಕ್ಷಣಿಕ ರಂಗದಲ್ಲಿ ಅಮೂಲ್ಯ ಕೊಡುಗೆ ಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂದು ೮೦ ರ ಜನ್ಮ ದಿನೋತ್ಸವ ಆಚರಿಸಿಕೊಳ್ಳುತ್ತಿರುವ ಶ್ರೀಗಳು ಮುಂದೊಂದು ದಿನ ಜನ್ಮ ಶತಮಾನೋತ್ಸವ ಆಚರಿಸಿಕೊಳ್ಳುವ ಸೌಭಾಗ್ಯ ಪ್ರಾಪ್ತವಾಗಲೆಂದು ಬಯಸಿ ಶ್ರೀಗಳಿಗೆ ರೇಶ್ಮೆ ಪೀತಾಂಬರ ಸ್ಮರಣಿಕೆ ಫಲ ಪುಷ್ಪವಿತ್ತು ಶುಭ ಹಾರೈಸಿದರು.

    ಶ್ರೀ ರಂಭಾಪುರಿ ಜಗದ್ಗುರುಗಳಿಂದ ಮತ್ತು ಭಕ್ತರಿಂದ ಸನ್ಮಾನಿತರಾದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ನಮ್ಮ ಜನ್ಮ ಇಂದು ಸಾರ್ಥಕಗೊಂಡಿದೆ. ಭಕ್ತ ಸಮೂಹದ ಸಮ್ಮುಖದಲ್ಲಿ ಆಗಮಿಸಿದ ಶಿವಾಚಾರ್ಯರ ಸಮಕ್ಷಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ದಯಮಾಡಿಸಿ ಆಶೀರ್ವದಿಸಿದ್ದು ನಮಗೆ ಆನೆ ಬಲ ಬಂದಂತಾಗಿದೆ. ಉಸಿರು ಇರುವ ತನಕ ವೀರಶೈವ ಸಂಸ್ಕೃತಿ ಮತ್ತು ಗುರು ಪರಂಪರೆ ವೈಶಿಷ್ಠ್ಯಗಳನ್ನು ಬೆಳೆಸುವುದಾಗಿ ಪಣ ತೊಟ್ಟರು. ಉಪದೇಶಾಮೃತ ನೀಡಿದ ಹುಲಿಕೆರೆ ದೊಡ್ಡಮಠದ ನೂತನ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮದಲ್ಲಿ ಗುರುವಿಗೆ ಅಗ್ರ ಸ್ಥಾನವಿದೆ. ಗುರು ಕಾರುಣ್ಯವಿಲ್ಲದೇ ಬಾಳು ಬೆಳೆಯದು ಬಲಿಯದು. ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ನಮ್ಮ ಪಾಲಿನ ದೇವರು. ಅವರ ಸೇವೆಯೇ ನಮ್ಮ ಜೀವನದ ಉಸಿರು. ಅವರ ಆಶೀರ್ವಾದ ನಮ್ಮ ಮತ್ತು ಭಕ್ತರ ಮೇಲೆ ಸದ ಇರಲೆಂದು ಬಯಸಿದರು. ನೇತೃತ್ವ ವಹಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಜಗ ಬೆಳಗಲು ಸೂರ್ಯ ಬೇಕು. ಬದುಕು ಬೆಳಗಲು ಗುರು ಬೇಕು. ಗುರುವಿಗೂ-ಶಿವನಿಗೂ ಭೇದವಿಲ್ಲ. ಶಿವನ ಸಾಕಾರ ರೂಪವೇ ಶ್ರೀ ಗುರು. ವಿರೂಪಾಕ್ಷಲಿಂಗ ಶಿವಾಚಾರ್ಯರು ನಮಗೆ ಅತ್ಯಂತ ಆತ್ಮೀಯರು. ಸದ್ದು ಗದ್ದಲವಿಲ್ಲದ ಸಾಧನೆ ಅವರದೆಂದರು.

    ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವಿಧಾನ ಪರಿ?ತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಧರ್ಮದ ಅರ್ಥ ಬಹಳ? ವಿಶಾಲವಾದದ್ದು. ಧರ್ಮವೊಂದು ಅಶ್ವತ್ಥವೃಕ್ಷ. ಆ ವೃಕ್ಷದ ರೆಂಬೆ ಕೊಂಬೆಗಳಂತೆ ಧರ್ಮಕ್ಕೆ ಹಲವಾರು ಮತ ಪಂಥಗಳಿವೆ. ಆದರೆ ಅವುಗಳನ್ನೇ ಧರ್ಮವೆಂದು ತಿಳಿದಿರುವ ಕಾರಣ ಆತಂಕ ಸಂಘ?ಕ್ಕೆ ಕಾರಣವಾಗಿದೆ. ಸನಾತನ ಧರ್ಮದ ಮೌಲ್ಯಗಳನ್ನು ಸಂರಕ್ಷಿಸಿಕೊಂಡು ಬಂದರೆ ಎಲ್ಲ ಮತ ಧರ್ಮಗಳು ಸಾಮರಸ್ಯದಿಂದ ಬದುಕಿ ಬಾಳಲು ಸಾಧ್ಯವಾಗುತ್ತದೆ. ಹುಲಿಕೆರೆ ದೊಡ್ಡ ಮಠದ ವಿರೂಪಾಕ್ಷಲಿಂಗ ಶ್ರೀಗಳು ಜೀವನದುದ್ದಕ್ಕೂ ಧರ್ಮವನ್ನು ಮತ್ತು ಸಮಾಜವನ್ನು ಕಟ್ಟುವ ಕೆಲಸ ಮಾಡಿದ್ದಾರೆ ಎಂದರು.

    ಸಮಾರಂಭ ಉದ್ಘಾಟಿಸಿದ ಅ.ಭಾ.ವೀ.ಲಿಂ.ಮಹಾಸಭೆ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ. ಲೋಕೇಶ್ ಮಾತನಾಡಿ ಜೀವನ ವಿಕಾಸಕ್ಕೆ ಆಧ್ಯಾತ್ಮದ ಅರಿವು ಮುಖ್ಯ. ವೀರೂಪಾಕ್ಷಲಿಂಗ ಶ್ರೀಗಳು ಧರ್ಮ ಮುಖಿಯಾಗಿ ಮತ್ತು ಸಮಾಜ ಮುಖಿಗಳಾಗಿ ಸಮಾಜಕ್ಕೆ ಮಾರ್ಗದರ್ಶನ ತೋರಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು. ವಿರೂಪಾಕ್ಷಲಿಂಗ ಶ್ರೀಗಳವರ ೮೦ನೇ ವರ್ಷದ ನಿಮಿತ್ಯವಾಗಿ ವರಯೋಗಿ ನಾಮಾಂಕಿತ ಅಭಿನಂದನಾ ಗ್ರಂಥವನ್ನು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯನವರು ಬಿಡುಗಡೆ ಮಾಡಿ ‘ಸಾಹಿತ್ಯ ಮತ್ತು ಸಂಸ್ಕೃತಿಯ ಅರಿವಿಲ್ಲದ ಜೀವನ ವ್ಯರ್ಥವಾದುದು. ಶ್ರೀಗಳವರ ಜೀವನದ ಸಿದ್ಧಿ ಸಾಧನೆಗಳನ್ನು ಒಳಗೊಂಡ ಅನೇಕ ವಿಚಾರಗಳಿವೆ. ಸಾಧನೆ ಮಾತನಾಡಬೇಕೆ ಹೊರತು ಮಾತನಾಡುವುದೇ ಸಾಧನೆಯಲ್ಲ. ಶ್ರೀಗಳವರ ಜೀವನವೇ ಒಂದು ತಪಸ್ಸು’ ಎಂದು ತಮ್ಮ ಹರುಷ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಬೆಳ್ಳಿಪ್ರಕಾಶ್, ದಿಣ್ಣೇಕೆರೆ ಡಿ.ಎಂ. ಮಂಜುನಾಥಸ್ವಾಮಿ, ಹೆಚ್.ಸಿ.ಕಲ್ಕರುಡಪ್ಪ, ಎ.ಎನ್.ಮಹೇಶ್, ಬಿ.ಎ.ಶಿವಶಂಕರ್, ಹೆಚ್.ಎನ್.ನಂಜೇಗೌಡ, ಎಂ.ಎಲ್.ಮೂರ್ತಿ, ಲೋಕೇಶ್ ಪಿಳ್ಳೇನಹಳ್ಳಿ, ಎಮ್.ಬಿ. ಮುಂಡ್ರೇಗಿರಿರಾಜ್, ಎಸ್.ಬಿ.ರೇಣುಕಾರಾಧ್ಯ ಭಾಗವಹಿಸಿದ್ದರು.

    ಈ ಪವಿತ್ರ ಸಮಾರಂಭದಲ್ಲಿ ಕೆ.ಬಿದರೆ ಪ್ರಭುಕುಮಾರ ಶಿವಾಚಾರ್ಯರು, ಹುಣಸಘಟ್ಟ ಗುರುಮೂರ್ತಿ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ತರೀಕೆರೆ ಜಗದೀಶ ಶಿವಾಚಾರ್ಯರು, ಹಣ್ಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು, ಬೇರುಗಂಡಿ ರೇಣುಕ ಮಹಂತ ಶಿವಾಚಾರ್ಯರು, ನಂದೀಪುರದ ನಂದೀಶ್ವರ ಶಿವಾಚಾರ್ಯರು, ಮಾದಿಹಳ್ಳಿ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಫಲಾಹಾರಸ್ವಾಮಿ ಮಠದ ಮುರುಘೇಂದ್ರ ಶಿವಾಚಾರ್ಯರು, ಕರಡೀಗವಿಮಠದ ಶಿವಯೋಗಿ ಶಿವಶಂಕರ ಸ್ವಾಮಿಗಳು, ಕುಪ್ಪೂರು ತೇಜೇಶ್ವರ ಶಿವಾಚಾರ್ಯರು, ಕೊಡ್ಲಿಪೇಟೆ ಮಹಾಂತಸ್ವಾಮಿಗಳು, ಕಿರಿಕೊಡ್ಲಿಮಠದ ಸದಾಶಿವ ಸ್ವಾಮಿಗಳು ಪಾಲ್ಗೊಂಡಿದ್ದರು. ಈ ಪವಿತ್ರ ಸಮಾರಂಭಕ್ಕೆ ಸಾಕ್ಷಿಯಾಗಿ ಹಲವಾರು ಗಣ್ಯರು-ಭಕ್ತರು ಉಪಸ್ಥಿತರಿದ್ದು ಶ್ರೀಗಳವರಿಗೆ ಅಭಿನಂದನೆ ಸಲ್ಲಿಸಿದರು. ಮೈಸೂರಿನ ಸಂಶೋಧಕ ಗಿರಿಜಾಪತಿ ಉಪನ್ಯಾಸ ನೀಡಿದರು. ಸಖರಾಯಪಟ್ಟಣದ ಸತೀಶ್ ಮಹಡಿಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊಸಹಳ್ಳಿ ಜಿ.ಮಲ್ಲೇಗೌಡ ಸ್ವಾಗತಿಸಿದರು. ಸಖರಾಯಪಟ್ಟಣದ ಶಿಕ್ಷಕ ಜಗದೀಶ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

    Life is bright by upholding values.