Tag: Sincere efforts needed to prevent human trafficking

  • ಮಾನವ ಕಳ್ಳಸಾಗಣೆ ತಡೆಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ

    ಮಾನವ ಕಳ್ಳಸಾಗಣೆ ತಡೆಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ

    ಚಿಕ್ಕಮಗಳೂರು: ಮಾನವ ಕಳ್ಳಸಾಗಣೆಯಂತಹ ಹೀನಕೃತ್ಯದ ಅಪರಾಧ ಕೃತ್ಯದಿಂದ ಈ ಜಿಲ್ಲೆಯನ್ನು ಮುಕ್ತಗೊಳಿಸಲು ಪ್ರಾಮಾಣಿಕವಾದ ಪ್ರಯತ್ನದ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆದ ವಿ.ಹನುಮಂತಪ್ಪ ಹೇಳಿದರು.

    ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಇಂದು ಮಾನವ ಕಳ್ಳಸಾಗಣೆ ತಡೆ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಮಹಿಳೆಯರು, ಮಕ್ಕಳು ಅಬಲರಾಗಿದ್ದು, ಪ್ರತಿರೋಧವೊಡ್ಡಲು ಅಸಾಧ್ಯವಾಗಿರುವ ಪರಿಸ್ಥಿತಿಯಲ್ಲಿ ಆಮಿಷವೊಡ್ಡುವ ಮುಖಾಂತರ ಅವರನ್ನು ಕರೆದೊಯ್ದು ಜೀತ ಪದ್ಧತಿ ಇಲ್ಲವೆ ಲೈಂಗಿಕ ಶೋಷಣೆಗೆ ಒಳಪಡಿಸುವ ಹೀನ ಕೃತ್ಯ ನಿರಂತರವಾಗಿ ನಡೆಯುತ್ತಿದೆ. ಮಕ್ಕಳನ್ನು ಸಹ ಕಳ್ಳಸಾಗಣೆ ಮಾಡಿ ಬಾಲಕಾರ್ಮಿಕ ಪದ್ಧತಿಗೆ ದೂಡುವಂತಹ ಪದ್ಧತಿ ನಡೆಯುತ್ತಿದೆ. ಇದರ ವಿರುದ್ಧ ವಿಶ್ವಾದ್ಯಂತ ಸಾಕಷ್ಟು ಹೋರಾಟಗಳು ನಡೆಯುತ್ತಿವೆ. ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವುದು ಈ ಜಾಥಾದ ಪ್ರಮುಖ ಉದ್ದೇಶ ಎಂದರು.

    ವಕೀಲರ ಸಂಘದ ಅಧ್ಯಕ್ಷ ಸುಜೇಂದ್ರ ಮಾನವ ಕಳ್ಳಸಾಗಣೆ ಹೆಚ್ಚುತ್ತಲೇ ಇದೆ. ಲೈಂಗಿಕ ದೌರ್ಜನ್ಯ ಎಸಗುವುದಕ್ಕಾಗಿ, ಅಂಗಾಂಗಗಳನ್ನು ಪಡೆಯುವುದಕ್ಕಾಗಿ ಹಾಗೂ ಗುಲಾಮಗಿರಿಗಾಗಿ ಮತ್ತು ಹತ್ತು ಹಲವು ಕಾರಣಗಳಿಗಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಲೇ ಬಂದಿದೆ. ಜೊತೆಗೆ ಮಹಿಳೆಯರನ್ನು ಮತ್ತು ಮಕ್ಕಳನ್ನು ವಸ್ತುಗಳು ಅಥವಾ ಪ್ರಾಣಿಗಳ ರೀತಿಯಲ್ಲಿ ವಿದೇಶಗಳಿಗೆ ಮಾರಾಟ ಮಾಡುವ ದಂಧೆಯೂ ಅವರ ಶೋಷಣೆಗೆ ಕಾರಣವಾಗಿದೆ.

    ಈ ಪರಿಸ್ಥಿತಿ ಇರಬಾರದು. ಈ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದು ಒಂದು ದಿನಕ್ಕೆ ಸೀಮಿತವಾಗಬಾರದು. ಜನರು ನಿರಂತರವಾಗಿ ಜಾಗೃತರಾಗಿರಬೇಕು. ಹಾಗೆಯೇ ಈ ಶೋಷಣೆ ನಿಲ್ಲಬೇಕು. ಈ ನಿಟ್ಟಿನಲ್ಲಿ ಎಲ್ಲರ ಕಣ್ಣು ಮತ್ತು ಹೃದಯಗಳು ತೆರೆಯಲಿ ಎಂದು ಅವರು ಆಶಿಸಿದರು.

    ಸ್ವಾಗತಿಸಿದ ಶಿಶು ಅಭಿವೃದ್ಧಿ ಅಧಿಕಾರಿ ರಂಗನಾಥ್ ಮಾತನಾಡಿದರು. ಉಪವಿಭಾಗಾಧಿಕಾರಿಗಳಾದ ಸುಂದರೇಶ್, ಆರಕ್ಷಕ ಹೆಚ್ಚುವರಿ ಅಧೀಕ್ಷಕ ಸಿ.ಟಿ.ಜಯಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್ ವೈ.ಆಲವತ್ತಿ, ಜಿಲ್ಲಾ ನಿರೂಪಣಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಂತೋಷ್, ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.

    ಇದೇ ಸಂದರ್ಭದಲ್ಲಿ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ತಾಲ್ಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಜಾಥಾ ನಡೆಯಿತು.

    Sincere efforts needed to prevent human trafficking