Tag: We will seek votes based on people’s livelihood and pro-people programs.

  • ಜನರ ಬದುಕು-ಜನಪರ ಕಾರ್ಯಕ್ರಮಗಳ ಆಧಾರದಲ್ಲಿ ಮತ ಕೇಳುತ್ತೇವೆ

    ಜನರ ಬದುಕು-ಜನಪರ ಕಾರ್ಯಕ್ರಮಗಳ ಆಧಾರದಲ್ಲಿ ಮತ ಕೇಳುತ್ತೇವೆ

    ಚಿಕ್ಕಮಗಳೂರು: ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ಮತ ಕೇಳುವವರು ನಾವಲ್ಲ, ಜನರ ಬದುಕು, ಜನಪರ ಕಾರ್ಯಕ್ರಮಗಳ ಆಧಾರದಲ್ಲಿ ಮತ ಕೇಳುತ್ತೇವೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

    ಅವರು ಇಂದು ಮೇದರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ಕ್ಷೇತ್ರದ ಈಶ್ವರಹಳ್ಳಿ ಗ್ರಾಮದಿಂದ ನೂತನವಾಗಿ ಕಂದಾಯ ಗ್ರಾಮವನ್ನಾಗಿ ರಚಿಸಿರುವ ಮೇದರಹಳ್ಳಿ ಮತ್ತು ವಡೇರಹಳ್ಳಿ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ ಮತ್ತು ಇ-ಸ್ವತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಒಳ್ಳೆಯ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಬದುಕು ನೀಡುವುದನ್ನು ಗುರಿಯಾಗಿಸಿಕೊಂಡ ರಾಜ್ಯಸರ್ಕಾರ, ಪಂಚ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ಜನಪರ ಆಡಳಿತ ನಡೆಸುವ ಮೂಲಕ ಜನಪ್ರತಿನಿಧಿಗಳ ಕರ್ತವ್ಯವನ್ನು ನೆನಪಿಸಿದೆ ಎಂದರು.

    ತಮ್ಮ ಅಧಿಕಾರವಧಿಯಲ್ಲಿ ಕಾನೂನು ಬಾಹಿರ ಕೆಲಸವನ್ನು ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಬಡಜನರ ಪರವಾದ ಕೆಲಸ ಮಾಡುವುದಾಗಿ ಭರವಸೆ ನೀಡಿದರಲ್ಲದೆ, ಎತ್ತಿನ ಹೊಳೆ ಯೋಜನೆಯಿಂದಾಗಿ ಕ್ಷೇತ್ರದ ಬೆಳವಾಡಿ, ದೇವನೂರು ಕೆರೆಗಳು ಭರ್ತಿಯಾಗಿವೆ ಎಂದು ತಿಳಿಸಿದರು.

    ಜನಪರವಾದ ಕೆಲಸಗಳನ್ನು ಕೈಗೊಳ್ಳುತ್ತಿರುವ ಬಗ್ಗೆ ಸಹಿಸದ ಕೆಲವರು ಹೊಟ್ಟೆಕಿಚ್ಚುಪಟ್ಟುಕೊಳ್ಳುತ್ತಿದ್ದಾರೆ. ಇದಕ್ಕೆ ಔಷಧಿ ಇಲ್ಲ ಎಂದು ಮಾರ್ಮಿಕವಾಗಿ ನುಡಿದು ಅಂತಹವರಿಗೆ ಒಳ್ಳೆಯ ಬುದ್ದಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

    ಪಂಚಾಯಿತಿ ವ್ಯಾಪ್ತಿಯಲ್ಲಿ ಹಕ್ಕುಪತ್ರ ಕೊಡುವಾಗ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಸಮ್ಮುಖದಲ್ಲಿ ನೀಡಿ ಜನಪರವಾದ ಇಂತಹ ಕಾರ್ಯಕ್ರಮಗಳಿಗೆ ಯಾವುದೇ ಪಕ್ಷದಿಂದ ಚುನಾಯಿತರಾಗಿದ್ದರೂ ಅಂತಹವರನ್ನು ಆಹ್ವಾನಿಸಿ ಎಂದು ಸಲಹೆ ನೀಡಿದರು.

    ಇನ್ನೂ ೩ ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದ ಅವರು, ಹಿರೇಮಗಳೂರಿನಲ್ಲಿ ನಾನು ವ್ಯಾಸಂಗ ಮಾಡಿದ ಶಾಲೆಗೆ ೧.೫೦ ಕೋಟಿ ರೂ. ವೆಚ್ಚದಲ್ಲಿ ಉತ್ತಮವಾದ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

    ಜಿಲ್ಲೆಯ ಜನರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಬೇರೆ ಬೇರೆ ಜಿಲ್ಲೆಗಳ ಆಸ್ಪತ್ರೆಗಳಿಗೆ ಹೋಗುತ್ತಿರುವುದನ್ನು ತಪ್ಪಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಈಗಾಗಲೇ ೧೦೦ ಕೋಟಿ ರೂ. ಬಿಡುಗಡೆಯಾಗಿದ್ದು, ಇನ್ನೂ ೮೦ ಕೋಟಿ ರೂಗಳನ್ನು ಮಂಜೂರು ಮಾಡಿಸಿ ಮುಂದಿನ ಒಂದೂವರೆ ವರ್ಷದಲ್ಲಿ ಸಾರ್ವಜನಿಕರಿಗೆ ಸಮರ್ಪಿಸುವುದಾಗಿ ತಿಳಿಸಿದರು.

    ವಾಸಿಸುವವನೇ ಮನೆಯ ಒಡೆಯ ಯೋಜನೆಯಡಿ ಬಡವರ ನೇತಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಕ್ಕುಪತ್ರಗಳನ್ನು ನೀಡುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದು, ಮೇದರಹಳ್ಳಿಯಲ್ಲಿ ಸುಮಾರು ೧೫೦ ಕುಟುಂಬಗಳು ಈ ಯೋಜನೆಯಡಿ ನೊಂದಾಯಿಸಿಕೊಂಡಿದ್ದು, ಬಾಕಿ ಇರುವ ೪೦ ಜನರು ನೊಂದಾಯಿಸಿಕೊಂಡರೆ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದರು.

    ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಷ್ಮ, ಇಓ ವಿಜಯ್‌ಕುಮಾರ್ , ಗ್ರಾ.ಪಂ ಅಧ್ಯಕ್ಷರುಗಳಾದ ಸೈಯದ್ ಜಮೀರ್ ಜಮ್ಮು, ಅಮೀರ್ ಜಾನ್, ಶಂಕರ್ ನಾಯ್ಕು, ಮಧು, ಯೋಗೀಶ್, ಕೆಂಗೇಗೌಡ, ಶಂಖರ್ ನಾಯಕ್, ಗ್ರಾಪಂ ಸದಸ್ಯರಾದ ನಾಗರಾಜ್, ಶೋಭ ಯೋಗೀಶ್, ಮಧು, ಹರ್ಷದ್, ಮುಖಂಡರುಗಳಾದ ಅಮೀರ್, ಯೋಗೀಶ್, ಚೌಡ ಬೋವಿ, ಚಿನ್ನ ಬೋವಿ, ಅಚ್ಚುತ್ ರಾವ್, ಶಿವಕುಮಾರ್, ರತ್ನಕುಮಾರ್, ಇರ್ಷಾದ್ ಮತ್ತಿತರರಿದ್ದರು.

    We will seek votes based on people’s livelihood and pro-people programs.