ಚಿಕ್ಕಮಗಳೂರು: ಕಳೆದ ಮೂರು ವರ್ಷಗಳ ಹಿಂದೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೇವಲ ಆರು ಮತಗಳಿಂದ ಪರಭವಗೊಂಡಿದ್ದ ಎ.ವಿ.ಗಾಯತ್ರಿಶಾಂತೇಗೌಡ ನ್ಯಾಯಾಲಯದ ಮೆಟ್ಟಿಲೇರಿದ್ದು, ಮುಂದಿನ ೩೦ ದಿನಗಳ ಒಳಗೆ ಮರು ಮತಎಣಿಕೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.
ಬುಧವಾರ ರಾಜ್ಯ ಉಚ್ಛ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಕೈಗೆತ್ತುಕೊಂಡಿದ್ದು, ಮುಂದಿನ ೩೦ ದಿನದೊಳಗೆ ಮರು ಮತ ಎಣಿಕೆ ನಡೆಸಿ ವರದಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯದ ಆದೇಶದಿಂದ ಮುಂದೇನಾಗಲಿದೆ ಎಂಬ ಕುತೂಹಲ ಮೂಡಿಸಿದೆ.
ಏನಿದು ಪ್ರಕರಣ: ಕಳೆದ ಮೂರು ವರ್ಷಗಳ ಹಿಂದೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪರ ಅಭ್ಯರ್ಥಿಯಾಗಿ ಎಂ.ಕೆ.ಪ್ರಾಣೇಶ್ ಹಾಗೂ ಕಾಂಗ್ರೆಸ್ ಪರ ಅಭ್ಯರ್ಥಿಯಾಗಿ ಎ.ವಿ.ಗಾಯತ್ರಿ ಶಾಂತೇಗೌಡ ಚುನಾವಣೆಯಲ್ಲಿ ಸ್ಫರ್ಧಿಸಿದ್ದರು. ಎ.ವಿ.ಗಾಯತ್ರಿ ಶಾಂತೇಗೌಡ ಕೇವಲ ಆರು ಮತಗಳ ಅಂತರದಲ್ಲಿ ಎಂ.ಕೆ.ಪ್ರಾಣೇಶ್ ವಿರುದ್ದ ಪರಭವಗೊಂಡಿದ್ದರು.
ಚುನಾವಣೆ ಫಲಿತಾಂಶದಿಂದ ಅಸಮಾಧಾನಗೊಂಡ ಎ.ವಿ.ಗಾಯತ್ರಿ ಶಾಂತೇಗೌಡ ಸರ್ಕಾರದ ೧೨ ಜನ ನಾಮ ನಿರ್ದೇಶಕರ ಮತ ದಾನವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ೧೨ ಮತಗಳನ್ನು ಹೊರತುಪಡಿಸಿ ಮಾ.೭ರ ಒಳಗೆ ಮರು ಮತ ಎಣಿಕೆ ಮಾಡಿ ವರದಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಎಂ.ಕೆ.ಪ್ರಾಣೇಶ್ ವಿಧಾನಪರಿಷತ್ ಉಪಸಭಾಪತಿ ಹುದ್ದೆಯನ್ನು ಸದ್ಯ ಅಲಂಕರಿಸಿದ್ದು, ಮತಗಳ ಮರು ಎಣಿಗೆ ನಂತರ ಎಂ.ಕೆ.ಪ್ರಾಣೇಶ್ ಅವರಿಗೆ ಹಿನ್ನಡೆಯಾದಲ್ಲಿ ಸವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನೂ ಮೂರು ವರ್ಷಗಳ ಕಾಲ ಅಧಿಕಾರದ ಅವಧಿಯಿದ್ದು ಮುಂದೇನಾಗಲಿದೆ ಎಂಬ ಕುತೂಹಲ ಕೇರಳಿಸಿದೆ.
Vidhan Parishad election re-counting ladder
