May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಬಿಜೆಪಿ-ಜೆಡಿಎಸ್ ಬೆಂಬಲಿತರು ಅತೀ ಹೆಚ್ಚು ನಿರ್ದೇಶಕ ಸ್ಥಾನ ಗೆದ್ದಿದ್ದಾರೆ

ಚಿಕ್ಕಮಗಳೂರು: ಜಿಲ್ಲೆಯ ಸಹಕಾರಿ ಕ್ಷೇತ್ರದ ಇತಿಹಾಸದಲ್ಲಿ ಅತೀ ಹೆಚ್ಚು ನಿರ್ದೇಶಕ ಸ್ಥಾನಗಳನ್ನು ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತರು ಗೆದ್ದಿದ್ದಾರೆ ಅದಕ್ಕಾಗಿ ಎರಡೂ ಪಕ್ಷದ ಕಾರ್ಯಕರ್ತರು, ನಾಯಕರು ಮತ್ತು ನಿರ್ದೇಶಕರುಗಳನ್ನು ಅಭಿನಂದಿಸುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಅವರು ಶನಿವಾರ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ-ಜೆಡಿಎಸ್ ಬೆಂಬಲಿತ ನಿರ್ದೇಶಕರುಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಚಿಕ್ಕಮಗಳೂರು ತಾಲ್ಲೂಕಿನ ೩೨ ಸೊಸೈಟಿಗಳ ಪೈಕಿ ೨೮ ರಲ್ಲಿ ಬಿಜೆಪಿ, ಜೆಡಿಎಸ್ ಬೆಂಬಲಿತರು ಗೆದ್ದಿದ್ದಾರೆ. ಉಳಿದ ೪ ಸೊಸೈಟಿಗಳಲ್ಲಿ ನಮ್ಮ ಸದಸ್ಯರು ಗೆದ್ದಿದ್ದರೂ ಬಹುಮತ ಇಲ್ಲ ಅಷ್ಟೇ ಎಂದರು.

ಕಡೂರು ತಾಲ್ಲೂಕಿನಲ್ಲಿ ೩೦ ಸೊಸೈಟಿಗಳ ಪೈಕಿ ೨೬ ಸೊಸೈಟಿಗಳನ್ನ ಬಿಜೆಪಿ-ಜೆಡಿಎಸ್ ಬೆಂಬಲಿತರು ಗೆದ್ದಿದ್ದಾರೆ. ಅದೇ ರೀತಿ ತರೀಕೆರೆ ತಾಲ್ಲೂಕಿನ ೨೫ ಸಹಕಾರ ಸಂಘಗಳ ಪೈಕಿ ೧೯ ರಲ್ಲಿ ಬಿಜೆಪಿ-ಜೆಡಿಎಸ್ ಬೆಂಬಲಿಗರು ಗೆದ್ದಿದ್ದಾರೆ. ನ.ರಾ.ಪುರ ತಾಲ್ಲೂಕಿನ ೬ ಸೊಸೈಟಿ ಪೈಕಿ ೫ ರಲ್ಲಿ, ಕೊಪ್ಪ ತಾಲ್ಲೂಕಿನ ೧೨ ಸಹಕಾರ ಸಂಘಗಳ ಪೈಕಿ ೬ ರಲ್ಲಿ, ಶೃಂಗೇರಿ ತಾಲ್ಲೂಕಿನ ೬ ಸೊಸೈಟಿ ಪೈಕಿ ೩ ರಲ್ಲಿ ಹಾಗೂ ಮೂಡಿಗೆರೆ ತಾಲ್ಲೂಕಿನ ೧೪ ಸೊಸೈಟಿಗಳ ಪೈಕಿ ೯ ರಲ್ಲಿ ಬಿಜೆಪಿ-ಜೆಡಿಎಸ್ ಬೆಂಬಲಿತರು ಗೆದ್ದಿದ್ದಾರೆ ಎಂದು ವಿವರಿಸಿದರು.

ಈ ಚುನಾವಣೆ ಗೆಲುವಿಗೆ ಕಡೂರು ಭಾಗದಲ್ಲಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಮಾಜಿ ಶಾಸಕ ದಿವಂಗತ ಎಸ್.ಎಲ್.ಧರ್ಮೇಗೌಡರ ಪುತ್ರ ಸೋನಲ್ ಗೌಡ ಅವರು ಸಹ ಸಹಕಾರ ಮಾಡಿದ್ದಾರೆ ಎಂದರು. ಸಹಕಾರ ಕ್ಷೇತ್ರದ ಹಣಕಾಸು ಸಂಸ್ಥೆಗಳನ್ನು ಕೆಡಲು ಬಿಡಬಾರದು. ಸೊಸೈಟಿ ಎಂದರೆ ಜಡವಸ್ತುವಲ್ಲ. ನಿರ್ದೇಶಕರುಗಳ ಮೇಲೆ ವಿಶ್ವಾಸ ಇಟ್ಟು ಜನ ಹಣವನ್ನು ಠೇವಣಿ ಇಡುತ್ತಾರೆ. ಆ ನಂಬಿಕೆ ಉಳಿಸಿಕೊಳ್ಳುವ ಕೆಲಸ ಎಲ್ಲಾ ನಿರ್ದೇಶಕರುಗಳಿಂದಾಗಬೇಕು ಎಂದು ಸಲಹೆ ಮಾಡಿದರು.

ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಎರಡೂ ಪಕ್ಷ ಒಂದಾಗಿದ್ದರೆ ಯಾವ ರೀತಿ ಚುನಾವಣೆ ಗೆಲ್ಲಬಹುದು ಎನ್ನುವುದನ್ನು ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ. ಅಧಿಕಾರ ಸಿಕ್ಕರೂ, ಸಿಗದಿದ್ದರೂ ಎಲ್ಲಿಯೂ ಹೊಂದಾಣಿಕೆ ಕೊರತೆ ಆಗಬಾರದು ಎಂದು ಕರೆ ನೀಡಿದರು.

ಹೊಂದಾಣಿಕೆ ವಿಚಾರದಲ್ಲಿ ಎರಡೂ ಪಕ್ಷಗಳು ಬಹಳ ಮುಂದೆ ಸಾಗಬೇಕಿದೆ. ಅದಕ್ಕಾಗಿ ಒಗ್ಗಟ್ಟಿನ ಬಲವನ್ನು ಇನ್ನಷ್ಟು ಹೆಚ್ಚಾಗಿ ತೋರಿಸಬೇಕಿದೆ. ಮುಂಬರುವ ಜಿಲ್ಲಾ ಬ್ಯಾಂಕ್ ಚುನಾವಣೆಯಲ್ಲಿ ಮತದಾನದಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಪಕ್ಷದ ನಾಯಕರು ತಗೆದುಕೊಳ್ಳುವ ತೀರ್ಮಾನವನ್ನು ದೂರದೃಷ್ಠಿಯಿಂದ ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.

ಸಹಕಾರಿ ಕ್ಷೇತ್ರ ನೇರವಾಗಿ ರೈತರೊಟ್ಟಿಗೆ ಸಂಪರ್ಕ ಇರುವ ಕ್ಷೇತ್ರ. ಕೆಲಸ ಮಾಡಲು ಇಲ್ಲಿ ಸಿಗುವ ಅವಕಾಶ, ವೇದಿಕೆಯಾಗಿದೆ. ರೈತರಿಗೆ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪ್ರಾಮಾಣಿಕವಾಗಿ ಸಾಲ ಕೊಡಿಸಲು ಅವಕಾಶವಿದೆ. ಶೂನ್ಯ ಬಡ್ಡಿದರದಲ್ಲಿ ೫ ಲಕ್ಷ ರೂ. ಸಾಲ ಕೊಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ ಆದರೆ ಈ ವರೆಗೆ ಒಬ್ಬನೇ ಒಬ್ಬ ರೈತರಿಗೆ ೫ ಲಕ್ಷ ರೂ. ಸಾಲ ಸಿಕ್ಕಿಲ್ಲ. ಅಲ್ಲದೆ ಮಧ್ಯಮಾವಧಿ ಮತ್ತು ಧೀರ್ಘಕಾಲದ ಸಾಲ ೧೫ ಲಕ್ಷಕ್ಕೆ ಹೆಚ್ಚಿಸಿರುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಯಾರೊಬ್ಬರಿಗೂ ೧೫ ಲಕ್ಷ ಸಾಲ ಸಿಕ್ಕಿಲ್ಲ. ಈ ಸರ್ಕಾರ ಎರಡೂ ಬಾರಿ ಬಜೆಟ್‌ನಲ್ಲಿ ಘೋಷಿಸಿದ್ದು ಸುಳ್ಳಾಗಿದೆ ಎಂದರು.

ಸಹಕಾರಿ ಸಂಸ್ಥೆಗಳ ಕತ್ತು ಹಿಸುಕುವ ಕೆಲಸ ಆಗುತ್ತಿದೆ. ಅವುಗಳಿಗೆ ಸ್ವಾಯತ್ತತೆ ಬರಬೇಕೆಂದರೆ ಎಲ್ಲಾ ನಿರ್ದೇಶಕರು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಗುಣಸಾಗರ ವಿಜಯಕುಮಾರ್ ಮಾತನಾಡಿದರು. ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಉಪಾಧ್ಯಕ್ಷ ಈಶ್ವರಳ್ಳಿ ಮಹೇಶ್, ಮುಖಂಡರುಗಳಾದ ನಿರಂಜನ್, ಬೀಕನಹಳ್ಳಿ ಸೋಮಶೇಖರ್, ರಾಜೀವ್ ಪ್ರಕಾಶ್, ಕೆ.ಪಿ.ವೆಂಕಟೇಶ್, ಚಿಕ್ಕದೇವನೂರು ರವಿ, ಬಸವರಾಜಪ್ಪ ಇತರರು ಹಾಜರಿದ್ದರು.

BJP-JDS supporters have won the most director seats.

Related posts

ತೀರ್ಪುಗಾರರ ನಿರ್ಲಕ್ಷ್ಯದಿಂದ ರಾಜ್ಯಮಟ್ಟದ ಆಯ್ಕೆಯಲ್ಲಿ ಅನ್ಯಾಯ

Team Suddigara

ಸ್ವಚ್ಚತೆ ಕುರಿತು ಅರಿವು ಮೂಡಿಸುವುದು ಸ್ವಚ್ಚ ಭಾರತ್ ಮಿಷನ್ ಉದ್ದೇಶ

Team Suddigara

ಗುರುಗಳ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಶ್ರಮಿಸಬೇಕು

Team Suddigara

Leave a Comment