ಸರ್ವರ ಪ್ರಗತಿಗೆ ಶ್ರಮಿಸುವುದು ಜನಪ್ರತಿನಿಧಿಗಳ ಕರ್ತವ್ಯ

ಚಿಕ್ಕಮಗಳೂರು:  ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಜಾತಿ, ಮತ ನೋಡದೆ ಸರ್ವರ ಪ್ರಗತಿಗೆ ಶ್ರಮಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.

ಅವರು ಇಂದು ಬೆಳವಾಡಿ ಗ್ರಾಮದಲ್ಲಿ ಶನೇಶ್ವರ ದೇವಾಲಯಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ೫ ಲಕ್ಷ ರೂ ಚೆಕ್ ವಿತರಣೆ ಮಾಡಿ ಮಾತನಾಡಿ  ಚುನಾವಣೆಯಲ್ಲಿ ಮಾತ್ರ ಪಕ್ಷ ರಾಜಕಾರಣ ಮಾಡುವುದು ಬಿಟ್ಟರೆ ನಂತರ ಎಲ್ಲರನ್ನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನೋಡಬೇಕೆಂಬುದನ್ನು ಮನಗಂಡಿದ್ದ ಮಾಜಿ ಸಂಸದ ದಿವಂಗತ ಡಿ.ಸಿ. ಶ್ರೀಕಂಠಪ್ಪ ಮಾದರಿ ಎಂದು ಹೇಳಿದರು.

ಕ್ಷೇತ್ರದ ಮತದಾರರು ನೀಡಿದ ಶಾಸಕ ಎಂಬ ಅಧಿಕಾರವನ್ನು ನಿಮ್ಮ ಸೇವೆಗೆ ಬಳಸುವ ಮೂಲಕ ಮುಖ್ಯಮಂತ್ರಿಗಳ ವಿಶೇಷ ಅನುದಾನ ೪ ಕೋಟಿ ರೂಗಳಲ್ಲಿ ಈಶ್ವರಹಳ್ಳಿ, ಬೆಳವಾಡಿ, ಶನೇಶ್ವರ ದೇವಸ್ಥಾನಕ್ಕೆ ಕಳಸಾಪುರ ರಂಗನಾಥಸ್ವಾಮಿ ದೇವಸ್ಥಾನಕ್ಕೆ, ದೇವಗೊಂಡನಹಳ್ಳಿ ವೀರಭದ್ರಸ್ವಾಮಿ ದೇವಸ್ಥಾನ, ಗುರುವಾಯನಪುರ ದೇವಾಲಯಕ್ಕೆ ಈ ಎಲ್ಲಾ ಹಿಂದೂ ದೇವಲಯಗಳ ಜೊತೆಗೆ ಕೆಲವು ಮುಸಲ್ಮಾನ ಬಾಂಧವರ ಮಸೀದಿಗಳಿಗೂ ಸರ್ಕಾರ ಅನುದಾನ ನೀಡಿದೆ ಎಂದು ತಿಳಿಸಿದರು.

ಸುಮಾರು ೪ ಕೋಟಿ ರೂ ಹಿಂದೂ ದೇವಾಲಯಗಳಿಗೆ, ೧ ಕೋಟಿಗೂ ಅಧಿಕ ಹಣವನ್ನು ಮುಸಲ್ಮಾನರ ಮಸೀದಿ ಮತ್ತು ದರ್ಗಾಗಳಿಗೆ ಅನುದಾನ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಜಾತ್ಯಾತೀತ ಪಕ್ಷವೆಂದು ದೃಢಪಟ್ಟಿದೆ ಎಂದು ತಿಳಿಸಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಮಾಡಬೇಕೆಂಬ ಸಂಕಲ್ಪ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಶ್ವಗುರು ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್, ಕನಕದಾಸ ಇವರುಗಳ ವಿಚಾರಧಾರೆಗಳನ್ನು ತಮ್ಮ ರಾಜಕೀಯ ಜೀವನದಲ್ಲಿ ಅಳವಡಿಸಿಕೊಂಡು ಎಲ್ಲಾ ವರ್ಗದ ಜನರನ್ನು ಪ್ರಗತಿಪಥದತ್ತ ಸಾಗುವಂತೆ ಸೇವೆ ಸಲ್ಲಿಸುತ್ತಿದ್ದಾರೆಂದು ಶ್ಲಾಘಿಸಿದರು.

ವಿಧಾನಸಭಾ ಕ್ಷೇತ್ರದ ಜನತೆ ನನ್ನನ್ನು ನೋಡದೆ ಮತನೀಡಿ ಆಶೀರ್ವದಿಸಿದ್ದೀರಿ ಅದಕ್ಕೆ ಪೂರಕವಾಗಿ ನಿಮ್ಮ ಬಳಿಗೆ ಬಂದು ಸರ್ಕಾರದ ಅನುದಾನವನ್ನು ವಿತರಣೆ ಮಾಡುತ್ತಿದ್ದೇನೆ, ಈ ನಿಟ್ಟಿನಲ್ಲಿ ಮುಂಬರುವ ಜಿ.ಪಂ, ತಾ.ಪಂ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಆಶೀರ್ವದಿಸಿದಾಗ ನಾಯಕರಾಗಿ ಬೆಳೆದು ಸುಲಭವಾಗಿ ನಿಮ್ಮ ಕೆಲಸಕಾರ್ಯಗಳನ್ನು ಮಾಡುತ್ತಾರೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ೨೦ ಲಕ್ಷ ರೂ ವೆಚ್ಚದಲ್ಲಿ ವಡೆಯರಹಳ್ಳಿಯಿಂದ ಸಿಸಿ ರಸ್ತೆಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಗೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ, ಉಪಾಧ್ಯಕ್ಷ ರಂಗನಾಥ್, ನಾಗರಾಜ್, ಅಚ್ಯುತರಾವ್, ಕೃಷ್ಣಮೂರ್ತಿ, ಶೋಭ ಯೋಗಿಶ್, ಹರೀಶ್, ಮಧು, ಹರ್ಷಿತ್, ಅಮೀರ್, ಚಂದ್ರಶೇಖರ್, ಮಲ್ಲೇಶ್, ರತ್ನಾಕರ್, ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.

It is the duty of people’s representatives to strive for the progress of all.

Comments

Leave a Reply

Your email address will not be published. Required fields are marked *