May 16, 2025
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಕರ್ನಾಟಕದ ಜಾತಿ ಗಣತಿಗೆ ಸಂಬಂಧಿಸಿದ ವರದಿಗೆ ವಿರೋಧ

ಚಿಕ್ಕಮಗಳೂರು: ರಾಜ್ಯ, ರಾಷ್ಟ್ರಾದ್ಯಂತ ಸದ್ದು ಮಾಡುತ್ತಿರುವ ಕರ್ನಾಟಕದ ಜಾತಿ ಗಣತಿಗೆ ಸಂಬಂಧಿಸಿದ ವರದಿಯನ್ನು ವಿರೋಧಿಸುವುದಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಸುಧಾರಕರ ಶೆಟ್ಟಿ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗ ಬಹಿರಂಗವಾಗಿರುವ ಜಾತಿಗಣತಿ ವರದಿಯಲ್ಲಿ ಬಂಟರು ೩.೫೨ ಲಕ್ಷ ಜನರಿದ್ದಾರೆ ಎಂದು ತಿಳಿಸಲಾಗಿದೆ. ಆದರೆ ನನ್ನ ಪ್ರಕಾರ ರಾಜ್ಯದಲ್ಲಿ ೧೨ ಲಕ್ಷ ಜನ ಬಂಟರಿದ್ದಾರೆ. ಹೊರ ರಾಜ್ಯಗಳಲ್ಲಿ ೨ ಲಕ್ಷ ಮಂದಿ ಇದ್ದಾರೆ. ಹೀಗಿರುವಾಗಿ ಜಾತಿಗಣತಿಗೆ ಅಳವಡಿಸಿರುವ ಮಾನದಂಡಗಳೇನು ಎನ್ನುವುದು ಗೊತ್ತಾಗುತ್ತಿಲ್ಲ ಎಂದರು.

ನನ್ನ ಮನೆ ಹಾಗೂ ನನ್ನ ಕುಟುಂಬದಲ್ಲೇ ಯಾರ ಮನೆಯಲ್ಲೂ ಜಾತಿ ಗಣತಿ ನಡೆದಿಲ್ಲ. ಹಾಗಾದರೆ ಉಪಗ್ರಹ ಸರ್ವೇ ಏನಾದರೂ ಮಾಡಿದ್ದಾರಾ? ಅಥವಾ ಪಂಚಾಯ್ತಿ ಮಟ್ಟದಲ್ಲಿ ಎಂಟತ್ತು ಜನರ ಅಭಿಪ್ರಾಯ ಪಡೆದು ಚುನಾವಣೆ ಸಮೀಕ್ಷೆ ಏನಾದರೂ ಮಾಡಿದ್ದೀರಾ? ಎಂದು ಪ್ರಶ್ನಿದ ಅವರು, ಅವೈಜ್ಞಾನಿಕವಾಗಿ ಜಾತಿಗಣತಿ ವರದಿ ತಯಾರಿಸಲಾಗಿದೆ ಎಂದು ದೂರಿದರು.

ಜಾತಿ ಜನಗಣತಿ ಮಾಡಲು ಬಹಳ ಸಮಯ ಬೇಕಾಗುತ್ತದೆ. ಹಿಂದೆ ಕಾಂತರಾಜು ಅವರನ್ನು ಆಯೋಗದ ಅಧ್ಯಕ್ಷರಾಗಿ ಏಪ್ರಿಲ್ ೨೦೧೪ ರಲ್ಲಿ ನೇಮಕ ಮಾಡಲಾಗುತ್ತದೆ. ಆದರೆ ಕೇವಲ ೯ ತಿಂಗಳಲ್ಲಿ ಅಂದರೆ ೨೦೧೫ ವರದಿ ಸಲ್ಲಿಸುತ್ತಾರೆ. ಅಂದರೆ ೫.೯೮ ಕೋಟಿ ಜನರನ್ನು ಇಷ್ಟು ಕಡಿಮೆ ಅವಧಿಯಲ್ಲಿ ಮುಟ್ಟಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಅದಕ್ಕಾಗಿ ಸೆನ್ಸಸ್ ರೀತಿಯಲ್ಲಿ ಪ್ರತಿ ಮನೆ ಮನೆಗೆ ಹೋಗಬೇಕಾಗುತ್ತದೆ. ಎಷ್ಟು ಆಧಾರ್ ಕಾರ್ಡ್, ವೋಟರ್ ಕಾರ್ಡ್, ರೇಷನ್ ಕಾರ್ಡ್ ಎಲ್ಲದಕ್ಕೂ ಕೆಲವು ಸಂದರ್ಭದಲ್ಲಿ ವ್ಯತ್ಯಾಸವಿರುತ್ತದೆ. ಕಾರಣಾಂತರದಿಂದ ಮನೆ ಸದಸ್ಯರು ಕೆಲವು ಸಂದರ್ಭದಲ್ಲಿ ಮನೆಯಿಂದ ಹೊರಗಿರುತ್ತಾರೆ. ಅದೆಲ್ಲವನ್ನೂ ಗಮನಿಸಬೇಕಾಗುತ್ತದೆ ಎಂದರು.

ಬ್ರಿಟೀಷರ ಕಾಲದಲ್ಲಿ ೧೯೩೧ ರಲ್ಲಿ ಜಾತಿ ಗಣತಿ ಆಗಿತ್ತು. ಪ್ರತಿ ವರ್ಷಕ್ಕೊಮ್ಮೆ ಅಂಕಿ ಅಂಶಗಳು ಬದಲಾಗುತ್ತವೆ. ಇಂದಿನ ವರದಿ ಪ್ರಕಾರ ೭.೧೨ ಕೋಟಿ ಜನರು ಕರ್ನಾಟಕದಲ್ಲಿದ್ದಾರೆ. ನಿಮ್ಮ ವರದಿ ೫.೯೮ ಕೋಟಿ ಜನರಿಗೆ ಸಂಬಂಧಿಸಿದ್ದಾಗಿದೆ. ಹಾಗಾದರೆ ೧.೪೦ ಕೋಟಿ ಜನರನ್ನು ಜಾತಿಗಣತಿ ವರದಿಯಲ್ಲಿ ಏಕೆ ತೋರಿಸುತ್ತಿಲ್ಲ. ಅವರಿಗೆ ಮೋಸವಾಗುತ್ತಿದೆ. ಹೀಗಿರುವಾಗ ಏತಕ್ಕಾಗಿ ಈ ತರಾತುರಿ ಎಂದು ಪ್ರಶ್ನಿಸಿದರು.

೨೦೧೫ ರಿಂದ ೨೦೧೮ ರ ವರೆಗೆ ಕಾಂಗ್ರೆಸ್ ಸರ್ಕಾರವೇ ಇತ್ತು. ಆಗ ಏಕೆ ವರದಿಯನ್ನು ಮಂಡಿಸಿರಲಿಲ್ಲ. ಇಂದು ನಿಮ್ಮ ಉಳಿವಿಗಾಗಿ ವರದಿ ಬಿಡುಗಡೆ ಮಾಡಲು ಹೊರಟಿದ್ದೀರಿ. ಇದರಿಂದ ಇಡೀ ರಾಜ್ಯಕ್ಕೆ ಅನ್ಯಾಯವಾಗುತ್ತದೆ. ಬಿಲ್ಲವ ಸಮಾಜ ೪ ಲಕ್ಷ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ೯ ಲಕ್ಷ ಬಿಲ್ಲವರಿದ್ದಾರೆ. ಇಡೀ ರಾಜ್ಯದಲ್ಲಿ ೧೪ ಲಕ್ಷ ಜನ ಬ್ರಾಹ್ಮಣರು ಎನ್ನುತ್ತೀರಿ. ಇನ್ನೊಂದೆಡೆ ಅವರು ಮುಂದುವರಿದ್ದಾರೆ ೪೪ ಲಕ್ಷ ಜನರಿದ್ದಾರೆ ಎಂದು ನೀವೇ ಹೇಳುತ್ತೀರಿ ಇದೆಷ್ಟು ಸರಿ ಎಂದರು.

ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಾತಿ ಗಣತಿ ವರದಿಗೆ ಯಾವುದೇ ಆಧಾರ ಇಲ್ಲ ಎನ್ನುತ್ತಿದ್ದಾರೆ. ಕ್ಯಾಬಿನೆಟ್ ಸದಸ್ಯರಿಗೆ ಸರಿಯಾದ ಮಾಹಿತಿ ಇಲ್ಲವಾದರೆ ಸಾಮಾನ್ಯ ಜನರಿಗೆಲ್ಲಿದೆ. ಹಿಂದೆ ಜನರಿಗೆ ಜಾತಿಗಣತಿಯ ಮಹತ್ವ ಗೊತ್ತಾಗದೆ ಇದ್ದಿರಬಹುದು. ಇಂದು ವರದಿಯಲ್ಲಿ ತೋರಿಸಲಾಗಿರುವ ಎಲ್ಲಾ ಜಾತಿಗಳಿಗೆ ಅನ್ಯಾಯವಾಗಿದೆ. ನಿಮ್ಮ ಮನಸ್ಸಿನಲ್ಲಿ ಯಾವುದೋ ಕಲ್ಪನೆ ಇಟ್ಟುಕೊಂಡು ವರದಿ ಹೊರ ತಂದರೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.

ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರ ಈ ಜಾತಿ ಜನಗಣತಿ ವರದಿಯನ್ನು ಒಪ್ಪಬಾರದು. ವಾಸ್ತವಿಕವಾದ ಗಣತಿ ಆದ ಮೇಲೆ ಒಪ್ಪಬೇಕು. ಹೊಸದಾಗಿ ಸೆನ್ಸಸ್ ಮಾದರಿ ಗಣತಿ ಮಾಡಬೇಕು. ಆಧಾರ್ ಕಾರ್ಡ್, ರೇಷನ್ ಕಾರ್ಡ್‌ಗಳಲ್ಲಿರುವ ಲೋಪಗಳನ್ನು ಸಹ ಅದರಿಂದ ಸರಿಪಡಿಸಬಹುದು ಎಂದರು.

ಹಿಂದುಳಿದ ಮುಂಡಾಳು ಸಮಾಜಕ್ಕೆ ನಿಮ್ಮ ವರದಿಯಲ್ಲಿ ನ್ಯಾಯವೇ ಸಿಕ್ಕಿಲ್ಲ.ಈ ರೀತಿ ಹಲವಾರು ಸಂಶಯಗಳನ್ನು ಈ ವರದಿ ಹುಟ್ಟುಹಾಕಿದೆ. ಅಲ್ಲದೆ ಜಾತಿ ಜಾತಿಗಳ ನಡುವೆ ದೊಡ್ಡದಾದ ಕಂದವನ್ನು ಸೃಷ್ಠಿಸಲಾಗಿದೆ. ಕೆಲವರಿಗಾಗಿ ಮಾತ್ರ ಗಣತಿ ಮಾಡಿದಂತಿದೆ. ಎಲ್ಲರಿಗೂ ನ್ಯಾಯ ಸಿಗಬೇಕೆಂದಿದ್ದರೆ ಮತ್ತೊಮ್ಮೆ ಅಮೂಲಾಗ್ರ ಸಮೀಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ಯಾಕೆ ೧೧ ವರ್ಷದ ವರೆಗೆ ವರದಿ ಬಿಡುಗಡೆ ಮಾಡದೆ ಸುಮ್ಮನಿದ್ದಿರಿ. ನಿಮ್ಮ ಅವಧಿಯಲ್ಲಿ ನೀಡಿದ ವರದಿಯನ್ನು ಹಾಗೆ ಇಟ್ಟುಕೊಂಡು ಮತ್ತೊಂದು ಅವಧಿಯಲ್ಲಿ ಜಿಲ್ಲಾ ಪಂಚಾಯ್ತಿ ಚುನಾವಣೆಗಾಗಿ ವರದಿ ಬಿಡುಗಡೆ ಮಾಡುತ್ತಿದ್ದೀರ ಎಂದು ಆರೋಪಿಸಿದರು.

Opposition to the report related to the caste census in Karnataka

Related posts

ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ರಾಮನವಮಿ

Team Suddigara

ಗ್ಯಾರಂಟಿ ಯೋಜನೆ ಬಳಕೆಯಲ್ಲಿ ಜಿಲ್ಲೆ ಪ್ರಥಮ ಸ್ಥಾನ

Team Suddigara

ಮಾದಕ ವಸ್ತುಗಳ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ 

Team Suddigara

Leave a Comment

[t4b-ticker] [t4b-ticker]