ಚಿಕ್ಕಮಗಳೂರು: ರಾಜ್ಯಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬಿದ ಬಳಿಕ ಅಭಿವೃದ್ಧಿಯ ಬಗ್ಗೆ ಸಾಧನೆ ರೂಪದಲ್ಲಿ ವಿವರಿಸುತ್ತೇನೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.
ಅವರು ಇಂದು ಮೂಗ್ತಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಮೆಣಸಿನ ಮಲ್ಲೇದೇವರಹಳ್ಳಿಯಲ್ಲಿ ಕೆ.ಎಂ. ರಸ್ತೆಯಿಂದ ಎಂಎಂಡಿ ಹಳ್ಳಿವರೆಗೆ ಸುಮಾರು ೧ ಕೋಟಿ ರೂ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿಗೆ ಔಪಚಾರಿಕವಾಗಿ ಚಾಲನೆ ನೀಡಿ ಮಾತನಾಡಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನೀಡಿರುವ ಸುಮಾರ್ ೧೪ ಕೋಟಿ ರೂ ವಿಶೇಷ ಅನುದಾನದಲ್ಲಿ ೧ ಕೋಟಿ ರೂ ವೆಚ್ಚದಲ್ಲಿ ಎಂಎಂಡಿ ಹಳ್ಳಿಗೆ ರಸ್ತೆ ಡಾಂಬರೀಕರಣಕ್ಕೆ ಮಂಜೂರು ಮಾಡಲಾಗಿದೆ. ಊರ ಹಬ್ಬ ಮುಗಿದ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದು ಭರವಸೆ ನೀಡಿದರು.
ಬಡವರು ಮತ್ತು ಶೋಷಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂದು ರಾಜ್ಯಸರ್ಕಾರ ಹಲವು ಯೋಜನೆಗಳನ್ನು ಜಾರಿಮಾಡಿದ್ದು, ಈ ನಿಟ್ಟಿನಲ್ಲಿ ಘೋಷಣೆ ಮಾಡಿದ್ದ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಬಡವರನ್ನು ಆರ್ಥಿಕವಾಗಿ ಮೇಲೆತ್ತುವ ಕಾರ್ಯ ಕೈಗೊಂಡಿದೆ ಎಂದು ಶ್ಲಾಘಿಸಿದರು.
ಮಲ್ಲೇಶ್ವರ ಸ್ವಾಮಿ, ವೀರಭದ್ರೇಶ್ವರ ಸ್ವಾಮಿ ಈ ಬಾರಿ ಮಳೆ, ಬೆಳೆ, ಬೆಲೆ ಕೊಟ್ಟು ಕಾಪಾಡಲಿ ಎಂದ ಶಾಸಕರು, ಸರ್ವರಿಗೂ ಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ಮುಖಂಡರಾದ ಜಯರಾಜ್ ಅರಸ್, ಮೂಗ್ತಿಹಳ್ಳಿ ಗ್ರಾ.ಪಂ. ಅಧ್ಯಕ್ಷ ಉಮೇಶ್ ಶೆಟ್ಟಿ, ಗ್ರಾಮಸ್ಥರುಗಳಾದ ಗಿರೀಶ್, ಪ್ರಭಾಕರ್, ಮಧು, ದಿನೇಶ್, ಹೇಮಂತ್, ಪಂಚಾಕ್ಷರಿ, ಕಾಂತರಾಜು, ವೇದಮೂರ್ತಿ, ತೋಟಯ್ಯ ಮತ್ತಿತರರು ಉಪಸ್ಥಿತರಿದ್ದರು.
MMD village road asphalting at a cost of Rs 1 crore
