ಚಿಕ್ಕಮಗಳೂರು: ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಹಾಗೂ ಪಹಲ್ಗಾಮ್ನಲ್ಲಿ ಭಯೋತ್ಪಾಧಕರು ನಡೆಸಿದ ಹಿಂದೂ ನರಮೇಧವನ್ನು ಖಂಡಿಸಿ ವಿಶ್ವಹಿಂದೂ ಪರಿಷತ್-ಬಜರಂಗದಳ ಕರೆ ನೀಡಿದ್ದ ಜಿಲ್ಲಾ ಬಂದ್ಗೆ ಮಲೆನಾಡು ಭಾಗದಲ್ಲಿ ಬೆಂಬಲ ದೊರೆತಿದ್ದು, ಬಯಲು ತಾಲ್ಲೂಕುಗಳಲ್ಲಿ ಸ್ಪಂದನೆ ದೊರೆತಿಲ್ಲ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ ನಡುವೆಯೂ ಚಿಕ್ಕಮಗಳೂರು ಸೇರಿದಂತೆ ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ಎನ್.ಆರ್.ಪುರ ತಾಲ್ಲೂಕುಗಳಲ್ಲಿ ಬಂದ್ ಯಶಸ್ಸಾಗಿದೆ. ಬಯಲಿನ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲ್ಲೂಕುಗಳಲ್ಲಿ ಬೆಂಬಲ ಸಿಕ್ಕಿಲ್ಲ. ಚಿಕ್ಕಮಗಳೂರು ನಗರದ ಎಂಜಿ ರಸ್ತೆ, ಐಜಿ ರಸ್ತೆ, ಮಾರ್ಕೆಟ್ ರಸ್ತೆ ಸೇರಿದಂತೆ ಪ್ರಮುಖ ವಾಣಿಜ್ಯ ವಹಿವಾಟು ಪ್ರದೇಶಗಳಲ್ಲಿ ಬೆಳಗಿನಿಂದಲೇ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು.
ಬೆಳಗ್ಗೆ ವಿಶ್ವಹಿಂದೂ ಪರಿಷತ್-ಬಜರಂಗದಳದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿಯಿಂದ ಹನುಮಂತಪ್ಪ ವೃತ್ತದ ವರೆಗೆ ಮೆರವಣಿಗೆ ನಡೆಸಿ ಸುಹಾಸ್ ಶೆಟ್ಟಿ ಹಂತಕರು ಹಾಗೂ ಪೆಹಲ್ಗಾಮ್ ನರಮೇಧ ನಡೆಸಿದ ಭಯೋತ್ಪಾದಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಅನುಮತಿ ಇಲ್ಲದೆಯೂ ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ಹಾಗೂ ನಗರದಲ್ಲಿ ೧೪೪ ಸೆಕ್ಷನ್ ಜಾರಿಯಲ್ಲಿರುವ ಕಾರಣ ಸುಮಾರು ೨೦ ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ರಂಗನಾಥ್, ಮುಖಂಡರುಗಳಾದ ಯೋಗೀಶ್ ರಾಜ್ ಅರಸ್, ಪ್ರದೀಪ್ ರಾವ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಕೋಟೆ ರಂಗನಾಥ್, ಎಚ್.ಸಿ.ಕಲ್ಮರುಡಪ್ಪ ಇತರರು ಪ್ರತಭಟನೆಯಲ್ಲಿ ಭಾಗವಹಿಸಿದ್ದರು. ಇಷ್ಟಾದರೂ ಹಲವಾರು ಅಂಗಡಿಗಳನ್ನು ಬಂದ್ ಮಾಡಿ ವರ್ತಕರು ಬೆಂಬಲ ಸೂಚಿಸಿದರು. ಕೆಲವರು ಮಧ್ಯಾಹ್ನದ ವೇಳೆಗೆ ಅಂಗಡಿಗಳನ್ನು ತೆರೆದರೆ ಮತ್ತೆ ಕೆಲವರು ಸಂಜೆ ವರೆಗೆ ಬಂದ್ ಮಾಡಿದ್ದರು.
ಉಳಿದಂತೆ ನಗರದಲ್ಲಿ ಆಟೋ, ಸಾರಿಗೆ, ಹೋಟೆಲ್, ಪೆಟ್ರೋಲ್ ಸೇರಿದಂತೆ ಎಲ್ಲಾ ಸೇವೆಗಳು ಸುಗಮವಾಗಿ ನಡೆದವು. ಸರ್ಕಾರಿ ಕಚೇರಿಗಳು, ಪಿಯುಸಿ ಪೂರಕ ಪರೀಕ್ಷೆಗಳಿಗೆ ಅಡಚಣೆ ಆಗಲಿಲ್ಲ.
Support for Chikkamagaluru district bandh in Malnad region
