June 15, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಚಲವಾದಿ ನಾರಾಯಣಸ್ವಾಮಿ ಮೇಲಿನ ಹಲ್ಲೆ ಖಂಡಿಸಿ ಕಲ್ಬುರ್ಗಿ ಚಲೋ

ಚಿಕ್ಕಮಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕುಟುಂಬದ ಅಕ್ರಮ ಆಸ್ತಿಗಳ ವಿರುದ್ಧ ಸದನದಲ್ಲಿ ಧ್ವನಿ ಎತ್ತಿದ್ದಕ್ಕಾಗಿ ಆಸ್ತಿ ಹಿಂದುರುಗಿಸಿದ ಸೇಡಿನಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರು ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆಗೆ ಮುಂದಾಗಿ ಕೊಲೆ ಮಾಡುವ ಯತ್ನ ನಡೆಸಿರುವುದನ್ನು ಜಿಲ್ಲಾ ಬಿಜೆಪಿ ಖಂಡಿಸಿ ನಾಳೆ (ಮೇ.೨೪) ಕಲ್ಬುರ್ಗಿ ಚಲೋ ನಡೆಸಲಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಲ್ಬುರ್ಗಿ ಚಲೋ ಕರೆನೀಡಿದ್ದು, ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವವರೆಗೂ ಬಿಜೆಪಿ ಹೋರಾಟ ಮಾಡಲಿದ್ದು, ಇದು ಕೇವಲ ವ್ಯಕ್ತಿಯ ವಿರುದ್ಧವಲ್ಲ, ನ್ಯಾಯ-ಸಂವಿಧಾನದ ರಕ್ಷಣೆ ಮತ್ತು ಸರ್ಕಾರದ ದಲಿತ ವಿರೋಧಿ ಧೋರಣೆಯ ವಿರುದ್ಧವಾಗಿದೆ ಎಂದು ಆರೋಪಿಸಿದರು.

ಕಲ್ಬುರ್ಗಿಯ ಚಿತ್ತಾಪುರದಲ್ಲಿ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಚಲವಾದಿ ನಾರಾಯಣಸ್ವಾಮಿ ಅವರನ್ನು ಗೃಹಬಂಧನದಲ್ಲಿಟ್ಟು ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುವ ಈ ಘಟನೆಯು ಪೂರ್ವ ನಿಯೋಜಿತ ಮತ್ತು ರಾಜಕೀಯ ಪ್ರೇರಿತ ದಾಳಿ ಎಂದು ದೂರಿದರು.

ಈ ಘಟನೆಯಲ್ಲಿ ಸಂವಿಧಾನ ಬದ್ಧವಾಗಿ ಹಾಗೂ ಕಾನೂನಾತ್ಮಕವಾಗಿ ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಗಳು ಪ್ರಿಯಾಂಕ್ ಖರ್ಗೆ ಅವರ ಏಜೆಂಟರಂತೆ ವರ್ತಿಸುತ್ತಿದ್ದು, ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರಿದ್ದರೂ ಕಾಂಗ್ರೆಸ್ ಗೂಂಡಾ ಕಾರ್ಯಕರ್ತರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.

ಚಲವಾದಿ ನಾರಾಯಣಸ್ವಾಮಿ ಅವರ ಮೇಲೆ ನಡೆದ ಹಲ್ಲೆ, ಅಕ್ರಮ ಬಂಧನ ಮತ್ತು ವಾಹನ ನಾಶಮಾಡಿದ ಸಂದರ್ಭದಲ್ಲಿಯೂ ಪೊಲೀಸರು ಮೂಖಪ್ರೇಕ್ಷಕರಾಗಿದ್ದು, ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿ ಖರ್ಗೆ ಅವರ ಕೈಗೊಂಬೆಯಂತೆ ವರ್ತಿಸಿದ್ದಾರೆಂದು ಲೇವಡಿ ಮಾಡಿದರು.

ಖರ್ಗೆ ಕುಟುಂಬದ ಅಕ್ರಮ ಆಸ್ತಿಗಳ ಬಗ್ಗೆ ಸದನದಲ್ಲಿ ಹೋರಾಟ ನಡೆಸಿದ ಪರಿಣಾಮವಾಗಿ ಕೆಐಎಡಿಬಿಯು ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ನೀಡಿದ್ದ ೫ ಎಕರೆ ಭೂಮಿಯನ್ನು ಹಿಂದುರಿಗಿಸಲಾಯಿತು. ಇದರ ಸೇಡಿನಿಂದ ಕಲ್ಬುರ್ಗಿಯಲ್ಲಿ ಚಲವಾದಿ ನಾರಾಯಣರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿದರು.

ರಾಜ್ಯದ ಪ್ರಮುಖ ದಲಿತ ನಾಯಕ ಚಲವಾದಿ ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂಧಿಸಿ ದಿಗ್ಬಂಧನ ಹಾಕಿ ನಂತರ ಅವರ ಅಧಿಕೃತ ವಾಹನದ ಮೇಲೆ ಇಂಕ್ ಹಾಕಿ ವಿಕೃತಿ ಮೆರೆದಿದ್ದಾರೆ ಎಂದು ದೂರಿದರು.

ದಲಿತರ ಮೇಲಿನ ದಾಳಿ ಇದೇ ಮೊದಲಲ್ಲ, ಜೇವರ್ಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಾಸಕ ಬಸವರಾಜ್ ಮುತ್ತಿಮುಡ್ ಅವರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಲಾಗಿತ್ತು. ಇಂತಹ ದಲಿತ ನಾಯಕರುಗಳ ಮೇಲಿನ ಹಲ್ಲೆ ನಡೆಸಿದವರ ಮೇಲೆ ರಾಜ್ಯಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಯವರಿಗೆ ಅನಧಿಕೃತವಾಗಿ ಬಂಧಿಸಿ ಹಲ್ಲೆ ನಡೆಸಿ ಬೆದರಿಕೆ ಒಡ್ಡಲಾಗಿದ್ದು, ಇದಕ್ಕೆ ಪ್ರತಿಯಾಗಿ ಚಿಕ್ಕಮಗಳೂರಿಗೆ ಆಗಮಿಸುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್‌ಕರ್ ಅವರಿಗೆ ಸ್ವಾಗತ ಕೋರುತ್ತೇವೆ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರುಗಳಾದ ಬಿ. ರಾಜಪ್ಪ, ಕೆ.ಪಿ ವೆಂಕಟೇಶ್, ಸೀತಾರಾಂಭರಣ್ಯ, ಹೆಚ್.ಎಸ್. ಪುಟ್ಟಸ್ವಾಮಿ, ಸುರೇಶ್, ಬಸವರಾಜ್ ಉಪಸ್ಥಿತರಿದ್ದರು.

Kalaburagi Chalo condemns attack on Chalavadi Narayanaswamy

Related posts

ಚಿಕ್ಕಮಗಳೂರಿಗೆ ನ್ಯೂರೋ ಸರ್ಜಿಕಲ್ ಕೇಂದ್ರದ ಅಗತ್ಯತೆ ಸಾಕಷ್ಟಿತ್ತು

Team Suddigara

ತಾಯಿ ಭುವನೇಶ್ವರಿ ಪ್ರತಿಯೊಬ್ಬ ಕನ್ನಡಿಗನ ಸ್ವಾಭಿಮಾನದ ಪ್ರತೀಕ

Team Suddigara

ರೈತರನ್ನು ಗೌರವಿಸಿದಾಗ ಜೀವನಕ್ಕೆ ನಿಜ ಅರ್ಥ

Team Suddigara

Leave a Comment