ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ಅವಧಿ ವಿಸ್ತರಣೆ

ಚಿಕ್ಕಮಗಳೂರು: ಸರ್ಕಾರದ ಆದೇಶ ಕಳೆದ ವರ್ಷದ ನವೆಂಬರ್ ೧೨ ರಂದು ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು (ಎಂಪೆರಿಕಲ್ ಡಾಟಾ) ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಗ್ಗೆ ಸೂಕ್ತ ಶಿಫಾರಸ್ಸಿನೊಂದಿಗೆ ವರದಿ ಸಲ್ಲಿಸಲು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಡಾ.ಹೆಚ್.ಎನ್.ನಾಗಮೋಹನ್‌ದಾಸ್ ಇವರ ಅಧ್ಯಕ್ಷತೆಯಲ್ಲಿ ಈಗಾಗಲೇ ಏಕ ಸದಸ್ಯ ಆಯೋಗವನ್ನು ರಚಿಸಲಾಗಿದೆ.

ಪರಿಶಿಷ್ಟ ಜಾತಿಯಲ್ಲಿನ ೧೦೧ ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ದತ್ತಾಂಶವನ್ನು (ಎಂಪೆರಿಕಲ್ ಡಾಟಾ) ಸಂಗ್ರಹಿಸಲು ಹೊಸದಾದ ಸಮೀಕ್ಷೆಯನ್ನು ನಡೆಸಲು ಕಳೆದ ಮಾರ್ಚ್ ೨೭ರ ಆಯೋಗದ ಮಧ್ಯಂತರ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾದ ಹಿನ್ನೆಲೆಯಲ್ಲಿ ಮೇ ೫ರಿಂದ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವುದರ ಮೂಲಕ ರಾಜ್ಯಾದ್ಯಂತ ಈಗಾಗಲೇ ಸಮೀಕ್ಷೆ ನಡೆಯುತ್ತಿದೆ.

ಬಿಬಿಎಂಪಿ ವ್ಯಾಪ್ತಿಯ ವಲಯಗಳಲ್ಲಿ ಪರಿಶಿಷ್ಟ ಜಾತಿ ಜನಾಂಗದ ಸಮೀಕ್ಷೆ ಕಾರ್ಯವು ಇನ್ನೂ ಪ್ರಗತಿಯಾಗಬೇಕಾಗಿರುವುದರಿಂದ, ಮಳೆ, ಹವಾಮಾನ ವೈಪರೀತ್ಯ ಕಾರಣಗಳಿಂದಾಗಿ ಅನೇಕ ಪರಿಶಿಷ್ಟ ಜಾತಿ ಸಂಘಗಳಿಂದ ಮತ್ತು ಬೆಂಗಳೂರು ಮಹಾನಗರ ಪಾಲಿಕೆಯ ಕೋರಿಕೆ ಮೇರೆಗೆ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಲು ಅನುವಾಗುವಂತೆ ದಿನಾಂಕವನ್ನು ವಿಸ್ತರಿಸಲು ನಿರ್ಣಯಿಸಲಾಗಿದೆ.

ಮನೆ-ಮನೆ ಭೇಟಿ ನೀಡುವ ಸಮೀಕ್ಷೆಯನ್ನು ಮೇ ೨೬ ರಿಂದ ೨೯ ರವರೆಗೆ ವಿಸ್ತರಿಸಲಾಗಿದೆ. ವಿಶೇಷ ಶಿಬಿರ (ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ) ಮೂರು ದಿನಗಳ ಕಾಲ ಅಂದರೆ ಮೇ ೩೦, ೩೧ ಹಾಗೂ ಜೂನ್ ೧ ರವರೆಗೆ ಮರು ನಿಗದಿಪಡಿಸಲಾಗಿದೆ ಮತ್ತು ಆನ್‌ಲೈನ್ ಮೂಲಕ ಸ್ವಯಂಘೋಷಣೆ- ಜೂನ್ ೧ ರವರೆಗೆ ಮುಂದುವರೆಯಲಿದೆ ಎಂದು ಏಕ ಸದಸ್ಯ ಆಯೋಗದ ಕಾರ್ಯದರ್ಶಿಗಳು ತಿಳಿಸಿರುವುದಾಗಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comprehensive Survey of Scheduled Castes-2025 Extension

Comments

Leave a Reply

Your email address will not be published. Required fields are marked *