ಶೃಂಗೇರಿ: ಇಲ್ಲಿನ ತ್ಯಾವಣದಲ್ಲಿ ಕೆಎಸ್ಆರ್ಟಿಸಿ ಡಿಪೊ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಡಿಪೊ ಕಾಮಗಾರಿ ಇನ್ನು ಎರಡು ವರ್ಷದಲ್ಲಿ ಮುಗಿಯಲಿದೆ. ಈಗ ಮಳೆಗಾಲ ಆಗಿರುವುದರಿಂದ ಕಾಮಗಾರಿ ನಡೆಯುತ್ತಿಲ್ಲ. ಡಿಪೊದ ಒಳಗೆ ಬಸ್ ನಿಲ್ಲಲು ತಂಗುದಾಣ, ಕಟ್ಟಡ ಮತ್ತು ಡೀಸೆಲ್ ಟ್ಯಾಂಕ್ ನಿರ್ಮಾಣವಾಗಲಿದೆ.
ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ನಾನೇ ಡಿಪೋದ ಸ್ಥಳ ಪರಿಶೀಲನೆ ಮಾಡಿದ್ದೇನೆ. ಇದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ’ ಎಂದರು.
ಬಳಿಕ ಜಿಲ್ಲಾಧಿಕಾರಿ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ನಾಡ ಕಚೇರಿಯ ಕಾಮಗಾರಿ ಪರಿಶೀಲಿಸಿದರು. ತಹಶೀಲ್ದಾರ್ ಅನೂಪ್ ಸಂಜೋಗ್, ಶಿರೇಸ್ತೆದಾರ್ ಪ್ರವೀಣ್, ಜಗದೀಶ್, ಸಚಿನ್, ಆಹಾರ ನಿರೀಕ್ಷಕ ಬಿ.ಜಿ ನಾಗೇಶ್, ಇತರ ಅಧಿಕಾರಿಗಳು ಇದ್ದರು.
‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೊಪ್ಪ ತಾಲ್ಲೂಕು ಕಚೇರಿಯಲ್ಲಿ ನಡೆದ ಅವ್ಯವಹಾರ ಕುರಿತು ತನಿಖಾ ತಂಡ ರಚಿಸಿ ಆದೇಶಿಸಲಾಗಿದೆ. ವರದಿ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪ್ರತಿಕ್ರಿಯಿಸಿದರು.
Inspection of KSRTC Depot work by Collector

Leave a Reply