May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಮಳೆಗಾಲ ಮುಗಿದ ಬಳಿಕ ನಗರದ ಎಲ್ಲಾ ರಸ್ತೆಗಳ ಡಾಂಬರೀಕರಣ

ಚಿಕ್ಕಮಗಳೂರು: ಮಳೆಗಾಲ ಮುಗಿದ ಬಳಿಕ ನಗರದ ಎಲ್ಲಾ ರಸ್ತೆಗಳನ್ನು ಸುಮಾರು ೧೨.೫ ಕೋಟಿ ರೂ ವೆಚ್ಚದಲ್ಲಿ ಡಾಂಬರೀಕರಣಗೊಳಿಸಲು ಕ್ರಮ ವಹಿಸುವುದಾಗಿ ಶಾಸಕ ಹೆಚ್.ಡಿ. ತಮ್ಮಯ್ಯ ಭರವಸೆ ನೀಡಿದರು.

ಅವರು ೧೫ನೇ ಹಣಕಾಸು ಯೋಜನೆಯಡಿ ೯೫ ಲಕ್ಷ ರೂ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಲ್ಲಿ ರಾಂಪುರದಿಂದ ಕತ್ರಿಮಾರಮ್ಮ ದೇವಸ್ಥಾನದವರೆಗೆ ಅಳವಡಿಸಲಾಗಿರುವ ವಿದ್ಯುತ್ ದೀಪಗಳಿಗೆ ಚಾಲನೆ ನೀಡಿ ಮಾತನಾಡಿದರು.

ಅತೀ ಹೆಚ್ಚು ಮಳೆಯಿಂದ ನಗರದಲ್ಲಿ ರಸ್ತೆಗಳು ಹಾನಿಯಾಗಿದ್ದು, ನಗರಸಭೆ ಇಂಜಿನಿಯರ್‌ಗಳು ರಸ್ತೆ ದುರಸ್ಥಿಗೆ ಬೇಕಾದ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ಕಾರ್ಯಾದೇಶ ನೀಡಿದ್ದು, ಈ ಹಿನ್ನೆಲೆಯಲ್ಲಿ ಮಳೆಗಾಲ ಮುಗಿದ ಬಳಿಕ ರಸ್ತೆಗಳನ್ನು ಡಾಂಬರೀಕರಣಗೊಳಿಸಿ ಅಭಿವೃದ್ಧಿಗೊಳಿಸಲಾಗುವುದೆಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶೇಷ ಅನುದಾನ ಘೋಷಣೆ ಮಾಡಿದ್ದು, ಜು.೩೦, ೩೧ ರಂದು ಭೇಟಿಮಾಡಿ ಬಹುಪಾಲು ಅನುದಾನವನ್ನು ಪಡೆದು ನಗರದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬದ್ಧವಾಗಿರುವುದಾಗಿ ತಿಳಿಸಿದರು.

ಬಹಳ ದಿನಗಳ ನಂತರ ನಗರದ ನಾಗರೀಕರಿಗೆ ಕತ್ತಲೆಯಿಂದ ತೊಂದರೆಯಾಗಿದ್ದು, ನಗರದ ಹೆದ್ದಾರಿಯಿಂದ ಸುತ್ತಮುತ್ತಲ ವಾರ್ಡ್‌ಗಳಿಗೆ ತೆರಳುವವರಿಗೆ ಇಂದು ವಿದ್ಯುತ್ ದೀಪಗಳಿಗೆ ಚಾಲನೆ ನೀಡಿರುವುದು ಬೆಳಕಿನೆಡೆಗೆ ತರುವ ಪ್ರಯತ್ನ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು, ಪುರಷರು ದೈರ್ಯವಾಗಿ ಸಂಚರಿಸಬಹುದಾಗಿದೆ ಎಂದು ಹೇಳಿದರು.

ನಗರದ ಜನತೆಗೆ ಸ್ವಚ್ಚತೆ, ಕುಡಿಯುವ ನೀರು, ಬೀದಿದೀಪ ಮುಂತಾದವುಗಳನ್ನು ಕಲ್ಪಿಸಲು ಮೊದಲ ಆದ್ಯತೆ ನೀಡುತ್ತೇನೆ. ಪ್ರತಿದಿನ ಕಸ ಸಂಗ್ರಹಣೆಗೆ ಗಂಟೆಗಾಡಿ ಬರುತ್ತಿಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಹೊಸ ಟೆಂಡರ್ ಕರೆದು ಪ್ರತೀ ದಿನ ಮನೆಯಲ್ಲಿಯೇ ಒಣ ಕಸ, ಹಸಿ ಕಸ ವಿಂಗಡಿಸಿ ಸಂಗ್ರಹಿಸಲು ಸೂಚನೆ ನೀಡಲಾಗಿದೆ ಎಂದರು.

ಈ ಕಾರ್ಯ ಯಶಸ್ವಿಯಾಗಬೇಕಾದರೆ ಸಾರ್ವಜನಿಕ ಸಹಭಾಗಿತ್ವ ಅಗತ್ಯ. ಹೌಸಿಂಗ್‌ಬೋರ್ಡ್ ಮತ್ತು ಕಲ್ಯಾಣ ನಗರದಲ್ಲಿ ಸ್ಥಳೀಯರು ವೆಲ್ಫೇರ್ ಟ್ರಸ್ಟ್ ರಚಿಸಿ ಸಹಕಾರ ನೀಡಿದ್ದಾರೆ. ಇದೇ ಮಾದರಿಯಲ್ಲಿ ನಗರದ ಎಲ್ಲಾ ವಾರ್ಡ್‌ಗಳಲ್ಲಿಯೂ ವೆಲ್ಫೇರ್ ಟ್ರಸ್ಟ್ ರಚಿಸುವ ಮೂಲಕ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಕಸ ವಿಲೇವಾರಿ ಮಾಡುವುದು ದೇಶದಲ್ಲೇ ಒಂದು ಪಿಡುಗಾಗಿದ್ದು, ಜೊತೆಗೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ನಗರಸಭೆ ವಿಧಿಸಿರುವ ಸೂಚನೆಗಳನ್ನು ನಾಗರೀಕರು ಪಾಲಿಸುವ ಮೂಲಕ ಸಾರ್ವಜನಿಕ ಸಹಭಾಗಿತ್ವ ಅಗತ್ಯವಾಗಿದ್ದು, ಪ್ಲಾಸ್ಟಿಕ್ ನಿಯಂತ್ರಣಕ್ಕೆ ಕ್ರಮವಹಿಸಬೇಕೆಂದು ಹೇಳಿದರು.

ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಬೀದಿದೀಪ ಉದ್ಘಾಟಿಸಿದ ಶಾಸಕ ಹೆಚ್.ಡಿ. ತಮ್ಮಯ್ಯ ಅವರಿಗೆ ನಗರಸಭೆ ಮತ್ತು ೩೫ ವಾರ್ಡ್ ಸದಸ್ಯರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.

ಸದಸ್ಯ ಎ.ಸಿ. ಕುಮಾರಗೌಡ ಮಾತನಾಡಿ, ನಮ್ಮ ವಾರ್ಡಿನಲ್ಲಿ ಬೀದಿದೀಪ ಇಲ್ಲದೆ ನಾಗರೀಕರಿಗೆ ತೊಂದರೆಯಾಗುತ್ತಿತ್ತು. ಜೊತೆಗೆ ವಾಹನ ಸಂಚಾರಕ್ಕೂ ಅಡಚಣೆಯಾಗುತ್ತಿತ್ತು. ಈ ಕತ್ತಲೆ ಕೂಪದಿಂದ ಹೊರತಂದ ಶಾಸಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

ಮುಖ್ಯಮಂತ್ರಿಗಳ ವಿಶೇಷ ಅನುದಾನವನ್ನು ಶಾಸಕರು ತಂದು ನಗರದ ಎಲ್ಲಾ ವಾರ್ಡ್‌ಗಳಲ್ಲಿ ಗುಣಮಟ್ಟದ ಚರಂಡಿ, ಪಾರ್ಕ್, ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಸದಸ್ಯರುಗಳಾದ ಪರಮೇಶ್ ರಾಜ್ ಅರಸ್, ರೂಪಾ ಕುಮಾರ್, ಲಕ್ಷ್ಮಣ್, ಅರುಣ್ ಕುಮಾರ್, ಗೋಪಿ, ಗುರುಮಲ್ಲಪ್ಪ, ಸಿ.ಪಿ ಲಕ್ಷ್ಮಣ, ಮಾಜಿ ಸದಸ್ಯರುಗಳಾದ ದಿನೇಶ್, ಶ್ರೀಧರ್ ಉರಾಳ್, ಜೇಮ್ಸ್, ಎಂ.ಸಿ. ಪ್ರಕಾಶ್, ಪೌರಾಯುಕ್ತ ಬಿ.ಸಿ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

All city roads to be asphalted after the rainy season ends

Related posts

ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ನೂತನ ಕಚೇರಿ ಉದ್ಘಾಟನೆ

Team Suddigara

ಕಂದಾಯ ಭೂಮಿ ಅರಣ್ಯ ಇಲಾಖೆಗೆ ವರ್ಗಾಯಿಸದಿರಲು ಒತ್ತಾಯ

Team Suddigara

ಸಚಿವ ಪ್ರಿಯಾಂಕ್ ಖರ್ಗೆಗೆ ಆಪ್ತನ ಡ್ರಗ್ಸ್ ದಂಧೆ ಬಗ್ಗೆ ಗೊತ್ತಿಲ್ಲವೇ ….?

Team Suddigara

Leave a Comment