ಚಿಕ್ಕಮಗಳೂರು: ತಾಲ್ಲೂಕಿನ ಅಲ್ಲಂಪುರ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪೂರ್ಣಿಮಾ ಪ್ರದೀಪ್ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಅವರು ಪೂರ್ಣಿಮಾ ಅವರ ಆಯ್ಕೆಯನ್ನು ಘೋಷಿಸಿದರು. ಈ ವೇಳೆ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಬಿಜೆಪಿ ಮುಖಂಡ ಟಿ.ರಾಜಶೇಖರ್ ಅಲ್ಲಂಪುರ ದೊಡ್ಡ ಪಂಚಾಯ್ತಿಯಾಗಿದ್ದು, ಗಿರಿ ಭಾಗಕ್ಕೆ ತೆರಳುವ ಎಲ್ಲಾ ಪ್ರವಾಸಿಗರು ಈ ಗ್ರಾಮವನ್ನು ಹಾದುಹೋಗುವುದಿರಿಂದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯಬೇಕಾಗುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಪೂರ್ಣಿಮಾ ಅವರ ಪತಿ ಪ್ರದೀಪ್ ಅವರು ಈ ಭಾಗದಲ್ಲಿ ಜನಾನುರಾಗಿಯಾಗಿದ್ದಾರೆ ಅಲ್ಲದೆ ಅಧ್ಯಕ್ಷರೊಂದಿಗೆ ಉತ್ತಮ ಸದಸ್ಯರ ತಂಡವೂ ಇದೆ. ಸ್ಥಳೀಯ ಬಿಜೆಪಿ ಮುಖಂಡರುಗಳ ವಿಶ್ವಾಸಕ್ಕೆ ಪಡೆದು ಪಂಚಾಯ್ತಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಮಾರ್ಗದರ್ಶನದ ಜೊತೆಗೆ ಅವರು ಶಾಸಕರಾಗಿದ್ದಾಗ ಈ ಪಂಚಾಯ್ತಿ ಅಭಿವೃದ್ಧಿಗೆ ಮೂಲ ಕಾರಣಕರ್ತರೂ ಆಗಿದ್ದಾರೆ. ಮುಂದೆಯೂ ಅವರ ಮಾರ್ಗದರ್ಶನದಲ್ಲಿ ಪಂಚಾಯ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೋಯ್ಯಬೇಕು ಎಂದರು.
ಜಿ.ಪಂ. ಮಾಜಿ ಸದಸ್ಯ ಜೆಡಿ.ಲೋಕೇಶ್ ಮಾತನಾಡಿ, ಪೂರ್ಣಿಮಾ ಪ್ರದೀಪ್ ನೇತೃತ್ವದಲ್ಲಿ ಉತ್ತಮ ಕೆಲಸಗಳು ನಡೆದು ಪಂಚಾಯ್ತಿಗೂ, ಬಿಜೆಪಿಗೂ, ಸಿ.ಟಿ.ರವಿ ಅವರಿಗೂ ಒಳ್ಳೆಯ ಹೆಸರು ಬರುವಂತಾಗಲಿ ಎಂದರು.
ನೂತನ ಅಧ್ಯಕ್ಷೆ ಪೂರ್ಣಿಮಾಪ್ರದೀಪ್ ಮಾತನಾಡಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು, ಅಭಿವೃದ್ಧಿ ಕೆಲಸಗಳಿಗೂ ಎಲ್ಲಾ ಸದಸ್ಯರು ತಮ್ಮ ಸಲಹೆ, ಸಹಕಾರ ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ದ್ರಾಕ್ಷಾಯಿಣಿ ಪೂರ್ಣೇಶ್, ಮುಖಂಡರುಗಳಾದ ಮಂಜುನಾಥ್, ಸುರೇಶ್, ದೇವರಾಜ್, ಗೌರಮ್ಮ, ವೇಣು, ಮೋಹನ್, ಪಂಚಾಯ್ತಿ ಉಪಾಧ್ಯಕ್ಷ ಧಾನೇಶ್, ಸದಸ್ಯರುಗಳಾದ ಅರ್ಪಿತಾ, ವಸಂತಕುಮಾರ್, ಮಧುಸೂಧನ್ ರಾವ್, ಎ.ಟಿ.ರಮೇಶ್, ಶಿವರಾಜ್, ಜಯಂತಿ, ಪದ್ಮಾಕ್ಷಿ, ಕೃಷ್ಣ, ಎಚ್.ಆರ್.ಕಮಲ, ಶಿಲ್ಪ ಇತರರು ಇದ್ದರು.
Purnima Pradeep elected unopposed as the new president of Allampura Gram Panchayat
