May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಕ್ಷೇತ್ರದ ಅಭಿವೃದ್ಧಿಗೆ ಹಣ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ

ಚಿಕ್ಕಮಗಳೂರು: ಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಜನ ನೆನಪಿನಲ್ಲಿಟ್ಟುಕೊಳ್ಳುವಂತಹ ಶಾಶ್ವತ ಯೋಜನೆಗಳಾದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಭದ್ರಾ ಉಪಕಣಿವೆ ಯೋಜನೆ, ನಗರದ ನೂತನ ಬಸ್ ನಿಲ್ದಾಣ, ಶತಮಾನೋತ್ಸವ ಕ್ರೀಡಾಂಗಣ ಅಭಿವೃದ್ಧಿ ಸದ್ಯದ ನನ್ನ ಕನಸಿನ ಯೋಜನೆಗಳು ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸರಕಾರ ಬಂದಾಗಿನಿಂದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬಡವರು, ಶೋಷಿತರ ಪರವಾದ ಕೆಲಸ ಮಾಡಲಾಗುತ್ತಿದೆ. ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಗ್ಯಾರಂಟಿ ಯೋಜನೆಗಳು ಸಮಾಧಾನ ತಂದಿವೆ. ಆದರೆ, ಪ್ರತಿಪಕ್ಷದವರು ಅಭಿವೃದ್ಧಿ ಶೂನ್ಯ ಎಂದು ಟೀಕಿಸಿದ್ದಾರೆ ಎಂದು ಆರೋಪಿಸಿದರು.

ಕಳೆದ ೨೦ ವರ್ಷ ಕ್ಷೇತ್ರದಲ್ಲಿ ಆಡಳಿತ ನಡೆಸಿದವರು ಕೊನೆಯ ೫ ವರ್ಷದ ಅವಧಿ ಬಿಟ್ಟರೆ ಹಿಂದಿನ ೩ ಅವಧಿಯಲ್ಲಿ ಯಾವ ಶಾಶ್ವತ ಕೆಲಸ ಮಾಡಿದ್ದಾರೆ ತೋರಿಸಲಿ ಎಂದ ಅವರು, ಕಾಮಗಾರಿಗಳಿಗೆ ಬರಿ ಮಂಜೂರಾತಿ ಕೊಡಿಸಿದ್ದರು, ಹಣ ಬಿಡುಗಡೆಯಾಗಿರಲಿಲ್ಲ. ನಾನು ಹಣ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಉದಾಹರಣೆ ಸಹಿತಿ ವಿವರಿಸಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿತ್ತೇ ವಿನಾಃ ಅದಕ್ಕೆ ಹಣ ಬಿಡುಗಡೆ ಆಗಿರಲಿಲ್ಲ. ಅದಕ್ಕೆ ೩೯.೬ ಕೋಟಿ ರೂ. ಬಿಡುಗಡೆ ಮಾಡಿಸಿದ್ದೇನೆ. ಮಲ್ಲೇನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡಕ್ಕೆ ೨೨ ಕೋಟಿ ರೂ ಬಿಡುಗಡೆ ಮಾಡಿಸಿದ್ದು ಕಟ್ಟಡ ನಿರ್ಮಾಣಕ್ಕೆ ನಿವೇಶನವೂ ದೊರೆತಿದೆ ಎಂದು ಹೇಳಿದರು.

೨೦೨೩-೨೪ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ೧೫ ಕೋಟಿ ರೂ., ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿಗೆ ೨೨ ಕೋಟಿ ರೂ., ವೈದ್ಯಕೀಯ ಕಾಲೇಜು ೩೩೯ ಕೋಟಿ ರೂ.ನಿಂದ ೪೫೫ ಕೋಟಿ ರೂ.ಗೆ ಹೆಚ್ಚಿಸಿ ಅನುಮೋದನೆ, ಅಲ್ಲದೆ ಹೆಚ್ಚುವರಿಯಾಗಿ ೮೦ ಕೋಟಿ ರೂ. ಹಣ ಒದಗಿಸಲಾಗಿದೆ. ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ ೧೦ ಕೋಟಿ ರೂ., ಹಿಂದುಳಿದ ವರ್ಗಗಳ ಸಮುದಾಯಭವನ ೩ ಕೋಟಿ ರೂ., ನಗರದ ಒಳಚರಂಡಿ ಉನ್ನತೀಕರಣಕ್ಕೆ ೨೦ ಕೋಟಿ ರೂ. ಬಿಡುಗಡೆ ಮಾಡಿಸಿದ್ದೇನೆ ಎಂದು ಮಾಹಿತಿ ನೀಡಿದರು.

೨೦೨೪-೨೫ ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆಗಳ ಅಭಿವೃದ್ಧಿಗೆ ೫೧ ಕೋಟಿ ರೂ., ಜಿಲ್ಲಾಡಳಿತ ಭವನಕ್ಕೆ ೨೬.೪೮ ಕೋಟಿ ರೂ., ಸಾರಿಗೆ ಗ್ರಾಮೀಣ ಬಸ್ ನಿಲ್ದಾಣ ೧೯.೮೭ ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ರಸ್ತೆಗಳ ಅಭಿವೃದ್ಧಿಗೆ ೧೦ ಕೋಟಿ ರೂ. ಮಂಜೂರಾಗಿದೆ ಎಂದು ಹೇಳಿದರು.

ಕಳೆದ ಮೇ ತಿಂಗಳಿಂದಲೇ ಮಳೆ ಆರಂಭವಾದ ಕಾರಣ ರಸ್ತೆಗಳಿಗೆ ಡಾಂಬರ್ ಹಾಕಲು ಸಾಧ್ಯವಾಗಿಲ್ಲ. ಮುಂದಿನ ಡಿಸೆಂಬರ್‌ನಿಂದ ಮೇ ವರೆಗೆ ಗ್ರಾಮಾಂತರ ಮತ್ತು ನಗರ ಹಾಗೂ ಲೋಕೋಪಯೋಗಿ ಇಲಾಖೆಗೆ ಸೇರಿದ ಎಲ್ಲ ರಸ್ತೆಗಳ ಅಭಿವೃದ್ಧಿಯನ್ನು ಸಮರೋಪಾದಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಇದಲ್ಲದೆ ಕೆರೆಗಳ ಅಭಿವೃದ್ಧಿ ಚೆಕ್ ಡ್ಯಾಂ ನಿರ್ಮಾಣಕ್ಕೆ ೧೩.೨೫ ಕೋಟಿ ಅನುದಾನ ಬಿಡುಗಡೆ ಮಾಡಿಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಸಿಡಿಎ ಅಧ್ಯಕ್ಷ ನಯಾಜ್ ಅಹ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಡಿ.ತಮ್ಮಯ್ಯ, ಶಿವಾನಂದಸ್ವಾಮಿ, ಮಲ್ಲೇಶಸ್ವಾಮಿ, ತನೋಜ್ ನಾಯ್ಡು ಇದ್ದರು.

I have made an honest effort to raise money for the development of the sector.

 

Related posts

ಯುವಜನತೆ ರಾಷ್ಟ್ರಕವಿ ಕುವೆಂಪು ಆಶಯದಂತೆ ವಿಶ್ವಮಾನವರಾಗಬೇಕು

Team Suddigara

ರಾಜ್ಯಕ್ಕೆ ಅಪ್ರತಿಮ ಕೊಡುಗೆ ನೀಡಿದವರು ಡಿ.ದೇವರಾಜ ಅರಸು

Team Suddigara

Leave a Comment