ಹಿರೇಮಗಳೂರಿನಲ್ಲಿ ಪಂಚವಟಿ ಯಾತ್ರಿ ನಿವಾಸ ಉದ್ಘಾಟನೆ

ಹಿರೇಮಗಳೂರಿನಲ್ಲಿ ಪಂಚವಟಿ ಯಾತ್ರಿ ನಿವಾಸ ಉದ್ಘಾಟನೆ

ಚಿಕ್ಕಮಗಳೂರು: ಹಿರೇಮಗಳೂರು ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪಂಚವಟಿ ಯಾತ್ರಿ ನಿವಾಸವನ್ನು ಶಾಸಕ ಎಚ್.ಡಿ.ತಮ್ಮಯ್ಯ ಅವರು ಭಾನುವಾರ ಲೋಕಾರ್ಪಣೆಗೊಳಿಸಿದರು.

ಶ್ರೀಕೋದಂಡರಾಮನ ಸನ್ನಿಧಾನಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು ೨ ಕೋಟಿ ರೂ. ವೆಚ್ಚದಲ್ಲಿ ಪಂಚವಟಿ ಯಾತ್ರಿ ನಿವಾಸ ನಿರ್ಮಿಸಲಾಗಿದೆ. ಸುಮಾರು ೧೪೪ ವರ್ಷಗಳಿಗೊಮ್ಮೆ ಬರುವಂತಹ ಅಪರೂಪದ ನಕ್ಷತ್ರದಲ್ಲಿ ಬ್ರಹ್ಮರಥೋತ್ಸವ ಆಚರಿಸುತ್ತಿರುವ ಕಾರಣ ಯಾತ್ರಿ ನಿವಾಸವನ್ನು ಇದೇ ದಿನ ಲೋಕಾರ್ಪಣೆ ಮಾಡಲು ಅರ್ಚಕರಾದ ಕಣ್ಣನ್ ಅವರು ನಿಶ್ಚಯಿಸಿದ್ದರು.

ಸಿ.ಟಿ.ರವಿ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾಗ ನಾನು ದೇವಾಲಯ ಸಮಿತಿಯಲ್ಲಿ ಅಧ್ಯಕ್ಷನಾಗಿ ಪಂಚವಟಿ ನಿವಾಸಕ್ಕೆ ಹಣ ನೀಡಬೇಕು ಎಂದು ಒತ್ತಾಯಿಸಿದ್ದೆವು. ಆಗ ಸಚಿವರಾಗಿದ್ದ ಸಿ.ಟಿ.ರವಿ ಅವರು ೨ ಕೋಟಿ ರೂ. ಮಂಜೂರು ಮಾಡಿದ್ದಾರೆ. ಆ ಯಾತ್ರಿ ನಿವಾಸವನ್ನು ನಾನು ಉದ್ಘಾಟನೆ ಮಾಡುತ್ತಿರುವುದು ನನ್ನ ಪುಣ್ಯ ಎಂದು ಹೇಳಿದರು.

ಇದಲ್ಲದೆ ಯಾತ್ರಿ ನಿವಾಸ ಕಾಂಪೌಂಡ್ ನಿರ್ಮಿಸಲು ನಮ್ಮ ಸರಕಾರ ೫೦ ಲಕ್ಷ ರೂ.ಗೆ ಮಂಜೂರಾತಿ ನೀಡಿದ್ದು ಈಗಾಗಲೇ ೨೫ ಲಕ್ಷ ರೂ.ಬಿಡುಗಡೆ ಮಾಡಿದೆ. ಕ್ಷೇತ್ರದ ಮಾಜಿ ಶಾಸಕರು ಪ್ರವಾ ಸೋದ್ಯಮ ಸಚಿವರಾದ ವೇಳೆಯಲ್ಲಿ ೨ ಕೋಟಿ ಅನುದಾನ ಮಂಜೂರಾಗಿತ್ತು. ಇದೀಗ ಯಾತ್ರಿಕರ ನಿವಾಸ ಪೂರ್ಣ ಗೊಂಡು ಭಕ್ತಾಗಳಿಗೆ ಸಮರ್ಪಿಸಲಾಗಿದೆ ಎಂದು ಹೇಳಿದರು.ಈ ಕಟ್ಟಡಕ್ಕೆ ಅಡುಗೆ ಮನೆಯ ಅವಶ್ಯಕವಿರುವ ಹಿನ್ನೆಲೆ ಸದ್ಯದಲ್ಲೇ ಅಡುಗೆ ಕೋಣೆಗೆ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ದೇವಾಲಯ ಪ್ರಧಾನ ಅರ್ಚಕ ಹಿರೇಮಗಳೂರು ಕಣ್ಣನ್ ಮಾತನಾಡಿ, ಭಾರ್ಗರಿಪುರಿ ಶ್ರೀ ಕೋದಂಡ ರಾಮಚಂದ್ರ ಸ್ವಾಮಿ ದೇವಾಲಯಕ್ಕೆ ದೇಶ-ವಿದೇಶಗಳಲ್ಲಿ ಭಕ್ತಗಣವಿದೆ. ವಿಶೇಷವಾಗಿ ಈ ಬ್ರಹ್ಮ ರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಗಳು, ದೇವಾಲಯ ಒಕ್ಕಲಿನವರು ಸಂತೋಷದಿಂದ ಪಾಲ್ಗೊಂಡು ಜಾತ್ರಾ ಮಹೋತ್ಸವ ಸಂಭ್ರಮದಿಂದ ಆಚರಿಸುತ್ತಾರೆ ಎಂದರು.

ನಗರಸಭಾ ಅಧ್ಯಕ್ಷೆ ಸುಜಾತಶಿವಕುಮಾರ್, ಗ್ಯಾರಂಟಿ ಪ್ರಾಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಗುತ್ತಿಗೆದಾರ ಜಯಣ್ಣ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ನಗರಸಭೆ ಸದಸ್ಯೆ ವಿದ್ಯಾ ಬಸವರಾಜ್, ಹಿರೇಮಗಳೂರು, ಪ್ರವಾಸೋದ್ಯಮ ಇಲಾಖೆ ಅಕಾರಿ ಲೋಹಿತ್, ನಿರ್ಮಿತಿ ಕೇಂದ್ರದ ಗಂಗಾಧರ್, ದೇವಾಲಯ ಟ್ರಸ್ಟಿ ಎಂ.ಎನ್.ರಂಗನಾಥ್ ಮತ್ತಿತರರಿದ್ದರು.

Panchavati Pilgrim Residence inaugurated in Hiremagaluru

Comments

Leave a Reply

Your email address will not be published. Required fields are marked *