ಚಿಕ್ಕಮಗಳೂರು: ಆದ್ಯಾತ್ಮ ಮತ್ತು ಆರೋಗ್ಯ ಪ್ರತಿಯೊಬ್ಬರಲ್ಲೂ ಅವಶ್ಯಕ. ದುರಾದೃಷ್ಟ ಇಂದು ಇವೆರಡೂ ಇಲ್ಲದ ಸಮಾಜವನ್ನು ನಾವು ನೋಡುತ್ತಿದ್ದೇವೆ ಎಂದು ವಿಶ್ವ ಧರ್ಮಪೀಠ ಶ್ರೀ ಜಯಬಸವಾನಂದ ಸ್ವಾಮೀಜಿ ಹೇಳಿದರು.
ನಗರ ಹೊರವಲಯದ ಉಂಡಾಡಿಹಳ್ಳಿ ಶ್ರೀ ಜಯಬಸವ ತಪೋವನದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಶಿವಕುಮಾರ್ ಸ್ವಾಮಿಯವರ ಸ್ಮರಣಾರ್ಥ ೪೧ ನೇ ಮಾಸಿಕ ಶಿವಾನುಭವ, ಆರೋಗ್ಯ ಮತ್ತು ರೈತ ಸಂಗಮ ಕಾರ್ಯಕ್ರಮದ ಸಾನಿದ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಭೂಮಿಗೆ ಬೇಸಾಯ ಮಾಡಿ ಬೆಳೆ ಬಿತ್ತಿದರೆ ಉತ್ತಮ ಬೆಳೆ ತೆಗೆಯಬಹುದು. ಅದೇ ರೀತಿ ಶರೀರಕ್ಕೆ ಉತ್ತಮ ಸಂಸ್ಕಾರ ನೀಡಿದರೆ ಮಾತ್ರ ಉತ್ತಮ ನಾಗರೀಕನಾಗಲು ಸಾದ್ಯ ಆದ್ಯಾತ್ಮಿಕ, ಶಿಕ್ಷಣ, ಆಚಾರ, ವಿಚಾರ, ಹಿರಿಯರ ಬಗ್ಗೆ ಗೌರವ, ವಿನಯತೆ, ದಯೆ, ಕರುಣೆ ಪ್ರೀತಿ ಇಂತಹ ಹತ್ತಾರು ಸಂಸ್ಕಾರಗಳನ್ನು ಮೈಗೂಡಿಸಿ ಕೊಂಡಾಗ ಮಾತ್ರ ನಾವು ಸ್ವಾಸ್ಥ್ಯ ಸಮಾಜ ನಿರ್ಮಿಸಲು ಸಾದ್ಯ ಎಂದು ಹೇಳಿದರು.
ಧನ್ವಂತರಿ ಲೋಕಸಿರಿ ಇಂಡಿಯಾ ಸಂಸ್ಥೆಯ ಸಂಯೋಜಕ ಡಾ.ವಿಶ್ವರಾಜ್ ಆರೋಗ್ಯರೈತ ಸಂಗಮದ ಬಗ್ಗೆ ಮಾತನಾಡಿ, ಕಳೆದ ೩೦-೩೫ ವರ್ಷದ ಹಿಂದೆ ಇಷ್ಟು ಖಾಯಿಲೆಗಳಿರಲಿಲ್ಲ. ಆಸ್ಪತ್ರೆ, ವೆದ್ಯರೂ ಕೂಡ ಇರಲಿಲ್ಲ. ಅಂದು ಹೊಲಗದ್ದೆಗೆ ಸಾವಯವ ಗೊಬ್ಬರ ಹಾಕಿ ತಾನು ಬೆಳೆದ ಪೌಷ್ಠಿಕ ಆಹಾರವನ್ನೇ ರೈತ ಸೇವಿಸುತ್ತಿದ್ದ. ಆತನ ಆಹಾರದಲ್ಲೇ ಔಷದೀಯ ಗುಣವಿತ್ತು.
ಆದರೆ, ಯಾವಾಗ ಭೂಮಿಗೆ ರಾಸಾಯನಿಕ, ಕ್ರಿಮಿನಾಶಕ ಹಾಕಲು ಪ್ರಾರಂಭಿಸಿದನೋ ಅಂದಿನಿಂದ ಕಾಯಿಲೆಗಳು ಹೆಚ್ಚಾದವು. ಸಾಂಕ್ರಾಮಿಕ ರೋಗಳನ್ನು ಸಾದ್ಯವಾದಷ್ಟು ಮಟ್ಟಿಗೆ ತಡೆಗಟ್ಟಿಕೊಂಡಿದ್ದೇವೆ. ಆದರೆ, ನಮ್ಮಿಂದ ನಾವೆ ತಂದು ಕೊಂಡಿರುವ ಅನೇಕ ರೋಗಗಳಿಗೆ ಇನ್ನೂ ಮದ್ದುಕಂಡುಕೊಂಡಿಲ್ಲ. ಇದಕ್ಕೆ ನಮ್ಮ ಜೀವನ ಪದ್ದತಿಯೆ ಕಾರಣ ಎಂದರು.
ಡಿಎಲ್ಎಸ್ ಸಂಸ್ಥೆಯ ಸಂಸ್ಥಾಪಕ ಡಾ.ಎಚ್.ಬಿ.ಲೋಕೇಶ್ ಮಾತನಾಡಿ, ರೈತ ಬೆಳೆದ ಬೆಳೆಗಳಿಗೆ ಈ ಸರಕಾರ ಒಂದು ನಿಗದಿತ ಬೆಲೆಯನ್ನು ಏಕೆ ನಿಗದಿಪಡಿಸುವುದಿಲ್ಲ ಎಂದು ಪ್ರಶ್ನಿಸಿ ರೈತರಿಗೆ ನಿಗದಿತ ಬೆಳೆ ನೀಡಿದಲ್ಲಿ ರೈತರ ಸಾಮರ್ಥ್ಯ ಹೆಚ್ಚಾಗಿ ನಮ್ಮ ನಿಯಂತ್ರಣಕ್ಕೆ ಸಿಗುವುದಿಲ್ಲ ಎಂಬ ಭಯದಿಂದ ರಾಜಕಾರಣಿಗಳು ಬೆಲೆ ನಿಗದಿಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಕಾಫಿ ಬೆಳಗಾರ ಕೆ.ಆರ್.ರುದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘದ ತಾಲೂಕು ಅಧ್ಯಕ್ಷ ಸುನಿಲ್ಕುಮಾರ್, ಗೌರವಾಧಕ್ಷ ಬಸವರಾಜು, ಉಮೇಶ್ ಹಿರೇಗೌಜ, ಮುಲ್ಲುಂಡಪ್ಪ, ಕೆ.ಬಿ.ಲೋಕೇಶ್, ಬಿ.ಕೆ.ಕಿರಣ್, ಡಾ. ಮಲ್ಲಿಕಾರ್ಜುನ ಸ್ವಾಮಿ, ಎಂ.ಬಿ.ಚಂದ್ರಶೇಖರ, ಸಂಗಮನಾಥ ಸರ್ವಮಂಗಳ ಮತ್ತಿತರರು ಉಪಸ್ಥಿತರಿದ್ದರು.
Health and Farmers’ Union Program