May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ರೈತ ವಿರೋಧಿ ಬಜೆಟ್‌ ವಿರೋಧಿಸಿ ಎರಡೂ ಸದನಗಳಲ್ಲಿ ಬಿಜೆಪಿ ಪ್ರತಿಭಟನೆ

ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರೈತ ವಿರೋಧಿ, ಮುಸ್ಲಿಂ ತಷ್ಠೀಕರಣದ ಬಜೆಟ್ ವಿರೋಧಿಸಿ ಸೋಮವಾರ ಎರಡೂ ಸದನಗಳಲ್ಲಿ ಬಿಜೆಪಿ ಪ್ರತಿಭಟಿಸಲಿದೆ ಎಂದು ಪಕ್ಷದ ಮುಖಂಡ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಬಹುಸಂಖ್ಯಾತರನ್ನು ಕಡೆಗಣಿಸಿರುವ ಹಲಾಲ್ ಬಜೆಟ್, ರಂಜಾನ್ ಬಜೆಟ್, ಸಾಲದ ಬಜೆಟ್, ರೈತರು ಹಾಗೂ ದಲಿತರ ವಿರೋಧಿ ಬಜೆಟ್ ಆಗಿದ್ದು, ರಾಜ್ಯವನ್ನು ಕಾಂಗ್ರೆಸ್ ಸಕಾರ ದಿವಾಳಿಯತ್ತ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ಬಜೆಟ್‌ನ ಒಟ್ಟು ೪.೯೦ ಲಕ್ಷ ಕೋಟಿ ರೂ.ಗಳಾಗಿದ್ದು, ಇದೊಂದು ಐತಿಹಾಸಿಕ ಗಾತ್ರದ ಬಜೆಟ್ ಎಂದು ಕಾಂಗ್ರೆಸಿಗರು ಹೇಳಿಕೊಳ್ಳುತ್ತಿದ್ದಾರೆ. ಇದೇ ವೇಳೆ ೧.೧೬ ಲಕ್ಷ ಕೋಟಿ ರೂ. ಸಾಲದ ಬಜೆಟ್ ಮಂಡಿಸಿರುವ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಇತಿಹಾಸ ಸೃಷ್ಠಿಗೂ ಕಾರಣವಾಗಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಸಕಾರ ಕೇವಲ ೨ ವರ್ಷದಲ್ಲಿ ೨.೨೧ ಲಕ್ಷ ಕೋಟಿ ರೂ. ಸಾಲ ಮಾಡಿದೆ. ಈಗ ರಾಜ್ಯದ ಒಟ್ಟು ಸಾಲ ೭.೪೬ ಲಕ್ಷ ಕೋಟಿಗೆ ತಲುಪಿದೆ ಎಂದು ಹೇಳಿದರು.

ಬಜೆಟ್‌ನಲ್ಲಿ ಬೃಹತ್ ನೀರಾವರಿ ಯೋಜನೆಗಳಿಗೆ ನಯಾಪೈಸೆ ಹಣ ನೀಡಿಲ್ಲ. ಇದೊಂದು ರೈತ ವಿರೋಧಿ ಬಜೆಟ್ ಆಗಿದೆ. ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಭೂ ಪ್ರದೇಶಕ್ಕೆ ನೀರೊದಗಿಸುವ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ನೀಡಿಲ್ಲ. ತುಂಗಾ-ಭದ್ರಾ ಡ್ಯಾಂನಲ್ಲಿ ಶೇ.೩೦ ರಷ್ಟು ಹೂಳು ತುಂಬಿದೆ. ಇದೇ ಕಾರಣಕ್ಕೆ ಪರ್‍ಯಾಯವಾಗಿ ಹಿಂದೆ ಬಿಜೆಪಿ ಸರ್ಕಾರ ನವುಲೆ ಡ್ಯಾಂ ನಿರ್ಮಾಣಕ್ಕೆ ೧೦೦೦ ಕೋಟಿ ಮೀಸಲಿಟ್ಟಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಒಂದು ಪೈಸೆ ಹಣ ಇಟ್ಟಿಲ್ಲ. ಭೀಮಾ, ಎತ್ತಿಹ ಹೊಳೆ, ಮಹದಾಯಿ ಯೋಜನೆಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ದೂರಿದರು.

ಯಡಿಯೂರಪ್ಪ ಅವರ ಅವಧಿಯಲ್ಲಿ ಕೇಂದ್ರದ ೬ ಸಾವಿರ ರೂ.ಗೆ ರಾಜ್ಯದ ೪ ಸಾವಿರ ರೂ. ಸೇರಿಸಿ ೧೦ ಸಾವಿರ ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಬಂದ ನಂತರ ೪ ಸಾವಿರ ರೂ. ನಿಲ್ಲಿಸಿದೆ. ರೈತರ ಪ್ರತಿ ಹೆಕ್ಟರ್‌ಗೆ ನೀಡಲಾಗುತ್ತಿದ್ದ ೫ ಸಾವಿರ ರೂ. ಡೀಸೆಲ್ ಸಹಾಯಧನ, ರೈತರ ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನೂ ನಿಲ್ಲಿಸಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಎಸ್‌ಸಿ, ಎಸ್ಟಿಗಳನ್ನು ತುಚ್ಛೀಕರಿಸುವ ಬಜೆಟ್ ಮಂಡಿಸಿದ್ದಾರೆ. ಸದಾ ಅಂಬೇಡ್ಕರ್, ಸಂವಿಧಾನ ಆಧಾರದ ಸಮಾನತೆ ಎಂದು ಮಾತನಾಡುವ ಅವರು, ದಲಿತರ ಉದ್ಧಾರಕ್ಕೆ ಮೀಸಲಾದ ಎಸ್ಸಿಪಿ, ಟಿಎಸ್‌ಪಿ ಗ್ಯಾರಂಟಿಗೆ ಬಳಸಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯಕ್ಕೆ ಬಜೆಟ್‌ನಲ್ಲಿ ಮೀಸಲಿಡಲಾಗಿರುವ ೪೧,೦೦೦ ರೂ. ಅನುದಾನದಲ್ಲಿ ಈ ಬಾರಿಯೂ ೧೩,೯೧೩ ಕೋಟಿ ರೂ.ಗಳನ್ನು ಬೇರೆಯದ್ದಕ್ಕೆ ಬಳಸಲಾಗುತ್ತಿದೆ. ೨೦೨೪-೨೫ ನೇ ಸಾಲಿನಲ್ಲಿ ೧೪,೨೮೨ ಕೋಟಿ ರೂ. ಎಸ್ಸಿಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗೆ ಬಳಸಲಾಗಿದೆ. ೨೦೨೩-೨೪ ನೇ ಸಾಲಿನಲ್ಲಿ ೧೧,೧೪೪ ಕೋಟಿ ರೂ.ಗಳನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ. ಹೀಗೆ ಒಟ್ಟು ೩೯,೩೩೯ ಕೋಟಿ ರೂ.ಗಳನ್ನು ಬೇರೆಯದ್ದಕ್ಕೆ ಬಳಸಿ ಎಸ್ಸಿ, ಎಸ್ಟಿಗಳ ಅಭಿವೃದ್ಧಿಗೆ ಕಲ್ಲು ಹಾಕಿ, ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.

ಬಿಜೆಪಿಯನ್ನು ದಲಿತ ವಿರೋಧಿ ಎಂದು ಡಂಗೂರ ಸಾರುವ ಸಿದ್ದರಾಮಯ್ಯ ಕಾನೂನು ಧಿಕ್ಕರಿಸಿ ದಲಿತರ ಅನುದಾನವನ್ನು ಗ್ಯಾರಂಟಿಗೆ ಬಳಸುತ್ತಿದ್ದಾರೆ. ಇದೇನು ಸರ್ವಾಧಿಕಾರವೇ, ಅವರನ್ನು ಕೇಳುವವರು ಯಾರೂ ಇಲ್ಲ ಎಂದುಕೊಂಡಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಅಲ್ಪಸಂಖ್ಯಾತರನ್ನು ತುಷ್ಠೀಕರಿಸುವ, ಹಲಾಲ್, ರಂಜಾಜ್ ಬಜೆಟ್ಟನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ. ವಕ್ಫ್ ಆಸ್ತಿ ದುರಸ್ತಿ, ನವೀಕರಣಕ್ಕೆ ೧೫೦ ಕೋಟಿ ರೂ., ಉರ್ದುಶಾಲೆಗಳ ನಿಮರ್ಕಾಣಕ್ಕೆ ೧೦೦ ಕೋಟಿ ರೂ., ಇಮಾಮ್‌ಗಳಿಗೆ ೬ ಸಾವಿರ ರೂ. ಗೌರವಧನವನ್ನು ಹೆಚ್ಚಿಸಿದ್ದಾರೆ. ಹಿಂದೂ ದೇವಸ್ಥಾನದ ಅರ್ಚಕರಿಗೆ ೨ ಸಾವಿರ ರೂ. ಗೌರವಧನ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಸ್ಟಾರ್ಟ್‌ಅಪ್‌ನಲ್ಲಿ ಮೊದಲ ಸ್ಥಾನದಲ್ಲಿದ್ದ ರಾಜ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎರಡನೇ ಸ್ಥಾನಕ್ಕೆ ಕುಸಿದಿದೆ. ವೃದ್ಧಾಪ್ಯ ವೇತನ ಸೇರಿದಂತೆ ಸಾಮಾಜಿಕ ಭದ್ರತೆ ನೀಡುವ ಯೋಜನೆಗಳಿಗೆ ಹಣವಿಲ್ಲದೆ ಸರ್ಕಾರ ದಿವಾಳಿಯತ್ತ ಸಾಗುತ್ತಿದೆ. ಉದ್ಯೋಗ ಸೃಷ್ಠಿ, ಬಂಡವಾಳ ಹೆಚ್ಚಿಸಲು ಬಜೆಟ್‌ನಲ್ಲಿ ಯಾವುದೇ ಕಾರ್ಯಕ್ರಮಗಳಿಲ್ಲ. ಇದೆಲ್ಲವನ್ನೂ ಖಂಡಿಸಿ ಎರಡೂ ಸದನದಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಂಜನಗೂಡು ಶಾಸಕ ಹರ್ಷವರ್ಧನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜಶೆಟ್ಟಿ, ಎಸ್‌ಸಿ ಘಟಕದ ಅಧ್ಯಕ್ಷ ಕೆ.ಪಿ.ವೆಂಕಟೇಶ್, ಮುಖಂಡರುಗಳಾದ ದೀಪಕ್ ದೊಡ್ಡಯ್ಯ, ಹಿರೇಮಗಳೂರು ಪುಟ್ಟಸ್ವಾಮಿ, ನಂದೀಶ್ ಮದಕರಿ ಇದ್ದರು.

BJP protests in both houses of parliament against anti-farmer budget

Related posts

ದುರ್ಬಲರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಪಕ್ಷಾತೀತ ಸಭೆ

Team Suddigara

ಕಸ್ತೂರಿಬಾ ಸದನದಲ್ಲಿ ಸಾಂತ್ವನ ಕೇಂದ್ರ ಮುಂದುವರೆಸಲು ಮನವಿ

Team Suddigara

ರಾಜ್ಯದ ಕಾಂಗ್ರೆಸ್ ವರಿಷ್ಟ ನಾಯಕರ ಅವಹೇಳನ ಖಂಡಿಸಿ ಪ್ರತಿಭಟನೆ

Team Suddigara

Leave a Comment