ಬೆಲೆ ಏರಿಕೆ ವಿರೋಧಿಸಿ ಏ.೫ಕ್ಕೆ ಜಿಲೆಯಾದ್ಯಂತ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ಹುಟ್ಟಿನಿಂದ ಸಾವಿನವರೆಗೂ ಬೆಲೆ ಏರಿಕೆ ಮಾಡಿರುವ ಅಪಕೀರ್ತಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ, ಸಲ್ಲುತ್ತಿದ್ದು, ರಾಜ್ಯ ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಏ.೫ ರಂದು ಜಿಲೆಯಾದ್ಯಂತ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ತಿಳಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲೇ ಅತ್ಯಂತ ದುಬಾರಿಯಾದ ಜೀವನವನ್ನು ಕರ್ನಾಟಕದ ಜನತೆಯು ನಡೆಸುವಂತಹ ಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿದೆ. ಗಾಳಿಯನ್ನು ಹೊರತು ಪಡಿಸಿ, ಮಿಕ್ಕೆಲ್ಲಾ ವಸ್ತುಗಳ ಬೆಲೆಯನ್ನು ಕಾಂಗ್ರೆಸ್ ಸರ್ಕಾರ ಹೆಚ್ಚಿಸಿದೆ. ಜನರ ಕಷ್ಟವನ್ನು ಕಿಂಚಿತ್ತು ಅರ್ಥ ಮಾಡಿಕೊಳ್ಳಲು ಅಸಮರ್ಥವಾದ – ಆಡಳಿತವನ್ನು ಸಿದ್ಧರಾಮಯ್ಯ ನೀಡುತ್ತಿದೆ. ಮತಕೊಟ್ಟು ಅಧಿಕಾರಕ್ಕೆ ತಂದ ಮತದಾರರಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ ಎಂದು ತರಾಟೆಗೆ ತೆಗೆದುಕೊಂಡರು.

ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ೩ ರೂ ಹೆಚ್ಚಿಸುವ ಮೂಲಕ ಬೆಲೆ ಏರಿಕೆ ಪರ್ವಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ ಸರ್ಕಾರ ಈಗ ಹಾಲಿನ ದರವನ್ನು ರೂ.೪ ಹೆಚ್ಚಳ ಮಾಡುವವರೆಗೂ ಬಂದಿದ್ದು, ಕಿಂಚಿತ್ತು ಸಂವೇದನಾಶೀಲತೆಯಿಲ್ಲದಂತೆ ವರ್ತಿಸಿದೆ ಎಂದು ಆರೋಪಿಸಿದರು.

ಹಾಲಿನ ದರವನ್ನು ಕಳೆದ ಎರಡು ವರ್ಷದಲ್ಲಿ ಮೂರು ಬಾರಿ ಒಟ್ಟು ೯ ರೂ. ಹೆಚ್ಚಿಸಿ, ಬಡ, ಮಧ್ಯಮದವರ ಮಗ್ಗಲು ಮುರಿಯುವ ಕೆಲಸ ಮಾಡಿದ್ದಾರೆ. ದೌರ್ಭಾಗ್ಯವೆಂದರೆ ಬೆಲೆಏರಿಕೆಯನ್ನು ಸಮರ್ಥಿಸಿಕೊಳ್ಳಲು ರೈತ ಸಮುದಾಯವನ್ನು ಗುರಾಣಿಯ ಹಾಗೆ ಬಳಸಿಕೊಳ್ಳುತ್ತಿರುವುದು ಶೋಚನೀಯ ಎಂದು ಟೀಕಿಸಿದರು.

ಹೆಚ್ಚಳ ಮಾಡಿರುವ ದರವನ್ನು ರೈತರಿಗೆ ವರ್ಗಾಯಿಸಲಾಗುವುದು ಎಂಬ ದಾರಿ ತಪ್ಪಿಸುವ ಮಾತನ್ನು ಸರ್ಕಾರ ಆಡುತ್ತಿದ್ದಾರೆ. ಕಳೆದ ಎರಡು ವರ್ಷದಲ್ಲಿ ಇದನ್ನೇ ಹೇಳಿ ದರ ಹೆಚ್ಚಿಸಿ ರೈತರು, ಗ್ರಾಹಕರಿಗೆ ವಂಚಿಸಿದೆ. ಇಷ್ಟಾದರೂ ಇತರ ರಾಜ್ಯಗಳ ಹಾಲು ದರಕ್ಕೆ ಹೋಲಿಕೆ ಮಾಡಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯದ ಜನ ಮತ ಕೊಟ್ಟಿರುವುದು ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಹೊರತು, ಹೊರ ರಾಜ್ಯದ ಸರ್ಕಾರ ಚುನಾಯಿಸಲು ಅಲ್ಲ ಎಂದು ಲೇವಡಿ ಮಾಡಿದರು.

ಇವರಿಗೆ ಇತರ ರಾಜ್ಯಗಳ ದರವನ್ನು ಹೋಲಿಕೆ ಮಾಡುವುದಾದರೆ ಬಿಜೆಪಿ ಆಡಳಿತವಿರುವ ವಿವಿಧ ರಾಜ್ಯಗಳಿಗೆ ಹೋಲಿಕೆ ಮಾಡಿ ನಮ್ಮ ರಾಜ್ಯದ ಇಂಧನ ದರವನ್ನು ಅದರ ಸಮಕ್ಕೆ ತರಬೇಕೆಂದು ಒತ್ತಾಯಿಸುತ್ತೇವೆ ಎಂದರು.

ಕಾಂಗ್ರೆಸ್ ಸರ್ಕಾರ ಎಷ್ಟು ಬರಗೆಟ್ಟಿದೆಯೆಂದರೆ ಬಡ ರೋಗಿಗಳು ಚಿಕಿತ್ಸೆಗೆ ಬರುವ ಸರ್ಕಾರಿ ಆಸ್ಪತ್ರೆಯನ್ನು ಸುಲಿಗೆ ಕೇಂದ್ರವನ್ನಾಗಿ ಮಾಡಿಕೊಂಡಿದೆ. ಉಚಿತ ಚಿಕಿತ್ಸೆ ನೀಡಬೇಕಾದ ಸರ್ಕಾರ ಬಡವರ ಹಣವನ್ನು ಆದಾಯ ಮೂಲವಾಗಿಸಿರುವುದು ಅತ್ಯಂತ ನೋವಿನ ಸಂಗತಿ ಎಂದರು.

ವಿದ್ಯುತ್ ದರವನ್ನು ಹೆಚ್ಚಳ ಮಾಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಮಾರಣಾಂತಿಕ ಪೆಟ್ಟನ್ನು ನೀಡಿದ್ದಾರೆ. ವಿದ್ಯುತ್ ಇಲಾಖೆಯ ನೌಕರರಿಗೆ ಪಿಂಚಣಿ ಕೊಡಲು ಹಣವಿಲ್ಲದೆ ದಿವಾಳಿಯಾಗಿರುವ ಸರ್ಕಾರ ಮತ್ತೆ ಗ್ರಾಹಕರಿಂದ ಸುಲಿಗೆ ಮಾಡಿ ಕೊಡಲು ಮುಂದಾಗಿರುವುದು ನಾಚಿಗೇಡಿನ ಸಂಗತಿ ಎಂದು ದೂರಿದರು.

ಬೆಂಗಳೂರು ಮೆಟ್ರೋ, ಮತ್ತು ಬಸ್ ದರ ಏರಿಕೆಯು ಕೆಳಗೆ ಬಿದ್ದವರ ಮೇಲೆ ಕಲ್ಲು ಹೇರಿದಂತಾಗಿದೆ. ಬಿತ್ತನೆ ಬೀಜ ದರವನ್ನು ಹೆಚ್ಚಿಸಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದ್ದಾರೆ. ಬೆಲೆಏರಿಕೆ ಬಿಸಿಗೆ ತತ್ತರಿಸಿರುವ ರಾಜ್ಯದ ಜನತೆಯು ಕಾಂಗ್ರೆಸ್ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದರು.
ಸಂಕಷ್ಟದ ಈ ಸಮಯದಲ್ಲಿ ಬಿಜೆಪಿ ಜನರ ಧ್ವನಿಯಾಗಿ ನಿಲ್ಲುತ್ತಿದೆ. ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವ ದರಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ ಆಗ್ರಹಿಸುತ್ತದೆ. ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಏಪ್ರಿಲ್ ೨ ರಂದು ಅಹೋರಾತ್ರಿ ಧರಣಿ ಬೆಂಗಳೂರಿನಲ್ಲಿ ಆರಂಭಿಸಲಾಗುವುದು. ಈ ಧರಣಿಯಲ್ಲಿ ಬಿಜೆಪಿಯ ಶಾಸಕರು, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಪಕ್ಷದ ಪದಾಧಿಕಾರಿಗಳು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಇದೇ ವೇಳೆ ಏಪ್ರಿಲ್ ೫ ರಂದು ಜಿಲ್ಲೆಯಾದ್ಯಂತ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಗರಮಂಡಲ ಅಧ್ಯಕ್ಷ ಪುಷ್ಪರಾಜ್, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತಾರಾಮಭರಣ್ಯ, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮುಖಂಡರುಗಳಾದ ಕನಕರಾಜ್ ಅರಸ್, ಕಾಯಿ ರವಿ, ಎಸ್‌ಡಿಎಂ ಮಂಜು ಉಪಸ್ಥಿತರಿದ್ದರು.

BJP protests across the district on April 5 against price hike

Comments

Leave a Reply

Your email address will not be published. Required fields are marked *