ಚಿಕ್ಕಮಗಳೂರು: ಯುದ್ಧ ತಣ್ಣಗಾಗಿ ಭಾರತೀಯಸೇನೆ ಶಾಂತಿ ಸುರಕ್ಷೆ ಅನುಭವಿಸುವವರೆಗೆ ಅಡ್ಡಪಲ್ಲಕ್ಕಿ-ಸಾರೋಟ ಮೆರವಣಿಗೆಯನ್ನು ಸ್ಥಗಿತಗೊಳಿಸುವುದಾಗಿ ಶ್ರೀ ಶೈಲದ ಗಿರಿರಾಜಸೂರ್ಯ ಸಿಂಹಾಸನ ಮಹಾಪೀಠದ ಜಗದ್ಗುರು ಶ್ರೀಶ್ರೀಶ್ರೀ ೧೦೦೮ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಪ್ರಕಟಿಸಿದರು.
ಬಡಗನಾಡು ಹೇಮರಡ್ಡಿ ವೀರಶೈವ ಜನಾಂಗ ಸಂಘದ ಬಾಸೂರು ಘಟಕದ ನೇತೃತ್ವದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಶಿವಶರಣೆ ಶ್ರೀ ಹೇಮರಡ್ಡಿಮಲ್ಲಮ್ಮ ಅವರ ಜಯಂತ್ಯುತ್ಸವದ ದಿವ್ಯ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿ ಪೆಹಲ್ಗಾವ್ ಧಾಳಿಯ ಮೂಲಕ ಪಾಕಿಸ್ತಾನ ಕೆಟ್ಟ ಕೃತ್ಯ ಮಾಡಿದೆ. ಏರ್ಸ್ಟ್ರೈಕ್ ಮೂಲಕ ಭಾರತ ದಿಟ್ಟ ಉತ್ತರ ಕೊಟ್ಟಿದೆ. ಉಗ್ರವಾದಿಗಳಿಗೆ ಪ್ರತ್ಯುತ್ತರ ಕೊಡುವ ಕೆಲಸವನ್ನು ಭಾರತೀಯ ಸೇನೆ ಮಾಡುತ್ತಿದ್ದು ಪಾಕ್ ನಮ್ಮ ಮೇಲೆ ಧಾಳಿ ನಡೆಯುತ್ತಿರುವುದು ದುರಾದೃಷ್ಟಕರ. ಯುದ್ಧದ ಸ್ವರೂಪವನ್ನು ಪಡೆದು ವ್ಯಾಪಕವಾಗುತ್ತಿರುವ ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ ಎಂದ ಜಗದ್ಗುರುಗಳು, ಯುವಕರು ಸೈನ್ಯ ಸೇರಿ ದೇಶ ಸೇವೆ ಮಾಡಬೇಕೆಂದು ಕರೆ ನೀಡಿದರು.
ಯುದ್ಧದ ಸಂಕ್ರಮಣ ಕಾಲದಲ್ಲಿ ಸಂಭ್ರಮಾಚರಣೆಯ ಪ್ರತೀಕವಾದ ಅಡ್ಡಪಲ್ಲಕ್ಕಿ ಉತ್ಸವ. ಸಾರೋಟ ಸೇರಿದಂತೆ ಭವ್ಯ ಮೆರವಣಿಗೆಗಳು ಬೇಡ.
ಲಿಂಗಪೂಜೆಯ ಮೂಲಕ ಮಲ್ಲಮ್ಮ ಶ್ರೀಶೈಲಮಲ್ಲಿಕಾರ್ಜುನನ ಕೃಪೆಗೆ ಪಾತ್ರಳಾದವಳು. ಆದರೆ ಇಂದು ಲಿಂಗಸಂಸ್ಕೃತಿಯಿಂದ ಭಕ್ತರನ್ನು ದೂರಮಾಡುವ ವ್ಯರ್ಥ ಪ್ರಯತ್ನ ಕೆಲವರಿಂದಾಗುತ್ತಿದೆ ಎಂದು ವಿಷಾದಿಸಿದ ಜಗದ್ಗುರುಗಳು, ತಾಳ್ಮೆ-ಸಹನೆಗೆ ಮತ್ತೊಂದು ಹೆಸರು ಸಾಧ್ವಿಮಲ್ಲಮ್ಮ ಎಂದರು.
ಸಮಾರಂಭ ಉದ್ಘಾಟಿಸಿದ ಭಾರತ ಭೂಸೇನೆಯ ನಿಕಟಪೂರ್ವ ಉಪದಂಡನಾಯಕ ಲೆ.ಜ.ಬಗ್ಗವಳ್ಳಿ ಎಸ್.ರಾಜು ಸಮಾರಂಭ ಉದ್ಘಾಟಿಸಿ ಮಾತನಾಡಿ ದರು. ಕಾಶೀ ಮತ್ತು ಉಜ್ಜಯಿನಿ ಜಗದ್ಗುರುಗಳು ಹೇಮರಡ್ಡಿಮಲ್ಲಮ್ಮ ಹಾಗೂ ವಾಮನನ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ಕಡೂರು ಶಾಸಕ ಕೆ.ಎಸ್.ಆನಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿದರು. ಚಿತ್ರದುರ್ಗದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಬೆಂಗಳೂರು ಕೇಂದ್ರ ಸಂಘದ ಅಧ್ಯಕ್ಷ ಶೇಖರೇಗೌಡ ಮಾಲಿಪಾಟೀಲ ಮತ್ತು ಡಾ.ಶಂಭುಬಳಗಾರ್ ಮಾತನಾಡಿದರು.
ಬಡಗನಾಡು ಶ್ರೀ ಹೇಮರಡ್ಡಿ ವೀರಶೈವ ಜನಾಂಗ ಸಂಘದ ಬಾಸೂರು ಘಟಕದ ಅಧ್ಯಕ್ಷ ಬಿ.ಕೆ.ವಸಂತಕುಮಾರ ಸಮಾರಂಭದ ಅಧ್ಯಕ್ಷತವಹಿಸಿದ್ದರು. ಗಿರಿಯಾಪುರ ಕೇಂದ್ರಸಂಘದ ಅಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ವಿನಯಕುಮಾರ್ ಸ್ವಾಗತಿಸಿ, ಲಿಂಗರಾಜು ನಿರೂಪಿಸಿದರು.
No palanquin-charoen procession
