ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶಸ್ತ್ರ – ಶಾಸ್ತ್ರದ ಭಯ ಅಗತ್ಯ

ಚಿಕ್ಕಮಗಳೂರು: ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶಸ್ತ್ರ ಮತ್ತು ಶಾಸ್ತ್ರದ ಭಯ ಅಗತ್ಯ ಎಂದು ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಿಸಿದರು.

ಅಜ್ಜಂಪುರ ಸಮೀಪದ ಬಗ್ಗವಳ್ಳಿ ಗ್ರಾಮದ ಮಠದಮನೆಯಲ್ಲಿ ಲೋಕಕಲ್ಯಾರ್ಥವಾಗಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಾನುವಾರ ಅವರು ಶುಭಸಂದೇಶ ನೀಡಿದರು.

ವೀರಶೈವ ಸಂಸ್ಕೃತಿಯಲ್ಲಿ ಇಷ್ಟಲಿಂಗಪೂಜೆಗೆ ಮಹತ್ವ ನೀಡಲಾಗಿದೆ. ಭಕ್ತಿಭಾವದ ಸದುದ್ದೇಶದ ಸಂಕಲ್ಪ ಸಾಕಾರಗೊಳ್ಳುತ್ತದೆ. ಏಕಾಂತವಾಗಿದ್ದ ಇಷ್ಟಲಿಂಗಪೂಜೆಯನ್ನು ಲೋಕಾಂತಗೊಳಿಸಲಾಗಿದೆ. ಆಸ್ತಿಕ ಮಹಾಶಯರೆಲ್ಲರೂ ಪೂಜೆಯಲ್ಲಿ ಪಾಲ್ಗೊಂಡು ಸಂತೋಷಪಡುವ ಅವಕಾಶ ಕಲ್ಪಿಸಿರುವುದು ಹರ್ಷದ ಸಂಗತಿ ಎಂದರು.
ದೇವರಲ್ಲಿ ಶ್ರದ್ಧೆ ನಂಬಿಕೆ ಅತ್ಯಗತ್ಯ. ಆದಿ ಜಗದ್ಗುರು ರೇಣುಕಾಚಾರ್ಯರರು ಮನುಕುಲದ ಉದ್ಧಾರಕ್ಕಾಗಿ ದಶಧರ್ಮಸೂತ್ರಗಳನ್ನು ಬೋಧಿಸಿದ್ದಾರೆ. ಅವುಗಳನ್ನು ನಿಜವಾಗಿ ಪಾಲಿಸಿದ್ದೆ ಆದರೆ ಶಾಂತಿ-ನೆಮ್ಮದಿ ಬದುಕು ನಮ್ಮೆಲ್ಲರದ್ದಾಗುತ್ತದೆ ಎಂದ ಜಗದ್ಗುರುಗಳು, ಶಾಸ್ತ್ರ ಭಯದ ಮರ್ಯಾದೆ ಮೀರಿ ನಡೆದಾಗ ಶಸ್ತ್ರದ ಭಯ ಇರುತ್ತದೆ ಎಂದರು.

ಜೀವನ ಜಂಜಾಟದಲ್ಲಿ ಸಿಲುಕಿದ ಮನುಷ್ಯನಿಗೆ ಪೂಜಾದಿ ಧಾರ್ಮಿಕ ಕಾರ್ಯಗಳಲ್ಲಿ ಸ್ಫೂರ್ತಿ ನೆಮ್ಮದಿ ಇದೆ. ಸಂಮೃದ್ಧ ಮತ್ತು ಶಾಂತಿಯ ನಾಡನ್ನು ಕಟ್ಟುವುದೇ ಧರ್ಮದ ಧ್ಯೇಯ. ವ್ಯಕ್ತಿತ್ವ ವಿಕಾಸವೇ ಗುರಿ. ಹೆತ್ತತಾಯಿ, ಹೊತ್ತಭೂಮಿ ಎಷ್ಟು ಮುಖ್ಯವೋ ಧರ್ಮವೂ ಅಷ್ಟೇ ಮುಖ್ಯ. ವಿವೇಕದ ತುತ್ತ ತುದಿಯೆ ದೈವಸಾಕ್ಷಾತ್ಕಾರ. ಧರ್ಮದಲ್ಲಿ ಮಾರ್ಗವಿದೆ, ಆದರೆ ವೇಗವಿಲ್ಲ. ವಿಜ್ಞಾನದಲ್ಲಿ ವೇಗವಿದೆ ಆದರೆ ಮಾರ್ಗವಿಲ್ಲ. ಧರ್ಮ ಮತ್ತು ವಿಜ್ಞಾನ ಸಮನ್ವಯತೆಯಿಂದ ಸಾಗಿದರೆ ಮಾನವನ ಬದುಕಿಗೆ ಶ್ರೇಯಸ್ಸು ಇದೆ ಎಂದು ಶ್ರೀಮದ್ರಾಂಭಾಪುರಿ ಜಗದ್ಗುರುಗಳು ಅಭಿಪಾಯಿಸಿದರು.
ಸಮಾರಂಭದ ಆಯೋಜಕರಾದ ವಿಶ್ರಾಂತಶಿಕ್ಷಕ ಬಿ.ಪಿ.ಲಿಂಗಮೂರ್ತಿ ಪ್ರಾಚೀನ ಇತಿಹಾಸ ಹೊಂದಿರುವ ಬಗ್ಗವಳ್ಳಿ ಗ್ರಾಮಕ್ಕೆ ರಂಭಾಪುರಿ ಪ್ರಸ್ತುತ ಜಗದ್ಗುರುಗಳು ಎರಡನೆಬಾರಿ ಆಗಮಿಸಿರುವುದು ಸಂತೋಷದ ಸಂಗತಿ. ಗ್ರಾಮಸ್ಥರಿಗೆ ದರ್ಶನಾಶೀರ್ವಾದದ ಜೊತೆಗೆ ಇಷ್ಟಲಿಂಗಪೂಜೆಯಲ್ಲಿ ಪಾಲ್ಗೊಳ್ಳುವ ಅವಕಾಶವಾಗಿದ್ದು ಸಂತಸದ ಸಂಗತಿ ಎಂದರು.

ಜಂಗಮಸಮಾಜದ ಮುಖ್ಯಸ್ಥ ಬಿ.ಪಿ.ಶಿವಮೂರ್ತಿ ಮಾತನಾಡಿ ಪಂಚಪೀಠಗಳಲ್ಲಿ ಪ್ರಥಮ ಪೀಠವಾಗಿ ಶ್ರೀಮದ್ರಂಭಾಪುರಿ ವೀರಸಿಂಹಾಸನ ಮಹಾಪೀಠವು ಜನರ ಬಳಿಗೆ ಬಂದು ನಿಜಧರ್ಮದ ಬೋಧೆ ಮಾಡುತ್ತಿದೆ. ಆದಿಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮಹಾಮುನಿಗಳನ್ನು ನಿಮಿತ್ತಮಾಡಿಕೊಂಡು ಮಾನವಸಂಕುಲಕ್ಕೆ ಉಪಯುಕ್ತವಾದ ಸತ್ಯ, ಜಪ, ತಪ, ಪೂಜೆ, ಧ್ಯಾನ, ಕ್ಷಮೆ, ದಯೆ, ದಾನ, ಅಸ್ತೇಯ, ಬ್ರಹ್ಮಚರ್ಯದಂತಹ ಹತ್ತು ವಿಧದ ಸಂಹಿತೆಯನ್ನು ನೀಡಿ ಉಪಕರಿಸಿದ್ದಾರೆಂದರು.

ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗಗಳ ಅನುಸಂಧಾನದ ಮೂಲಕ ಮಾಡುವ ಗುರು-ಜಂಗಮಗಳ ಅರ್ಚನೆಯೆ ಪೂಜೆ ಎನಿಸುತ್ತದೆ. ಚಂಚಲವಾದ ಮನಸ್ಸನ್ನು ಏಕಾಗ್ರಗೊಳಿಸುವ ಸಲುವಾಗಿ ನಾನಾ ಬಗೆಯ ಉಪಚಾರಗಳಿಂದ ಮಾಡುವ ಇಷ್ಟಲಿಂಗಪೂಜೆಯು ಆಸ್ತಿಕರಲ್ಲಿ ಸಂತೋಷವನ್ನುಂಟು ಮಾಡುತ್ತದೆ ಎಂದರು.
ಪ್ರತಿ ಧರ್ಮವೂ ನೈತಿಕವಿಚಾರ, ಸಾಂಪ್ರದಾಯಕವಿಚಾರ ಮತ್ತು ದಾರ್ಶನಿಕವಿಚಾರಗಳನ್ನು ಒಳಗೊಂಡಿರುತ್ತವೆ. ಎಲ್ಲ ಧರ್ಮದಲ್ಲೂ ನೈತಿಕ ವಿಚಾರಗಳು ಒಂದೇ ಆಗಿರುತ್ತದೆ. ದಾರ್ಶನಿಕ ವಿಚಾರದಲ್ಲಿ ವಿಭಿನ್ನತೆ ಇದ್ದು, ಸಾಂಪ್ರದಾಯಕ ವಿಚಾರಗಳು ಬೇರೆ ಬೇರೆ ಆಗಿರುತ್ತವೆ ಎಂದ ಶಿವಮೂರ್ತಿ, ಅಷ್ಟಾವರಣ -ಪಂಚಾಚಾರ ಮತ್ತು ಷಟ್‌ಸ್ಥಲಗಳು ವೀರಶೈವ ಧರ್ಮಕ್ಕೆ ಮೂಲಾಧಾರ. ಇವುಗಳ ಕನಿಷ್ಟಜ್ಞಾನ ವೀರಶೈವರಿಗೆ ಅತ್ಯಗತ್ಯ ಎಂದರು.

ಅಖಿಲಭಾರತ ಶಿವಾಚಾರ್ಯ ಸಂಸ್ಥೆಯ ಗೌರವಾಧ್ಯಕ್ಷ ಶ್ರೀರೇಣುಕ ಶಿವಾಚಾರ್ಯರು, ಹುಣಸಘಟ್ಟದ ಶ್ರೀಗುರುಮೂರ್ತಿ ಶಿವಾಚಾರ್ಯರು ಹಾಗೂ ತಾವರೆಕೆರೆ ಶಿಲಾಮಠದ ಡಾ.ಅಭಿನವಸಿದ್ದಲಿಂಗಶಿವಾಚಾರ್ಯರು ಪೂಜಾಕಾರ್‍ಯದಲ್ಲಿ ಪಾಲ್ಗೊಂಡಿದ್ದರು.

ಶನಿವಾರ ಸಂಜೆ ಬಗ್ಗವಳ್ಳಿಗೆ ಆಗಮಿಸಿದ ಶ್ರೀಮದ್ರಂಭಾಪುರಿ ಜಗದ್ಗುರುಗಳನ್ನು ತಳಿರುತೋರಣ, ಜಯಘೋಷ, ಪಟಾಕಿಸಿಡಿಸುವುದರ ಮೂಲಕ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಕುಂಭಹೊತ್ತ ಮಹಿಳೆಯರೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮದ ಸಮುದಾಯಭವನದಲ್ಲಿ ಸ್ವಾಗತ ಧರ್ಮ ಸಮಾರಂಭ ನಡೆಯಿತು.

ತರೀಕೆರೆ ಶಾಸಕ ಎಸ್.ಜಿ.ಶ್ರೀನಿವಾಸ, ಅಜ್ಜಂಪುರ ತಾಲ್ಲೂಕು ಜಂಗಮಸಮಾಜದ ಅಧ್ಯಕ್ಷ ಗಂಗಾಧರಯ್ಯ ಮತ್ತು ಬಗ್ಗವಳ್ಳಿಯ ಬಡಗನಾಡು ಹೇಮರಡ್ಡ್ಡಿ ಮಲ್ಲಮ್ಮ ವೀರಶೈವ ಜನಾಂಗ ಸಂಘದ ಅಧ್ಯಕ್ಷ ಹೇಮಂತಕುಮಾರ್, ಜಂಗಮಬಳಗ ಸಂಚಾಲಕ ಪ್ರಭುಲಿಂಗಶಾಸ್ತ್ರಿ , ಗ್ರಾ.ಪಂ.ಸದಸ್ಯ ಗುರುಪಾದಪ್ಪ, ಗ್ರಾಮದ ಮುಖಂಡ ಮರುಳಸಿದ್ದಪ್ಪ, ಮರುಳಪ್ಪ, ಗೊಂಡೇದಹಳ್ಳಿ ಗಿರೀಶ್, ಕಾಟೆಗನೆರೆ ಉಮಾಪತಿ ಆರಾಧ್ಯ, ಅಮೃತಾಪುರದ ಪ್ರಭು, ಬಿ.ಎಸ್.ಚಂದ್ರಶೇಖರಪ್ಪ, ಉಪನ್ಯಾಸಕರುಗಳಾದ ಯಶವಂತಕುಮಾರ ಮತ್ತು ಕಿರಣಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. ಮಠದಮನೆ ವತಿಯಿಂದ ನೂರಕ್ಕೂ ಹೆಚ್ಚು ಪ್ರಮುಖರಿಗೆ ಗುರುರಕ್ಷೆ ನೀಡಿ ಜಗದ್ಗುರುಗಳಿಂದ ಆಶೀರ್ವದ ಕೊಡಿಸಲಾಯಿತ.

ಮಠದಮನೆಯ ಲಿಂಗರಾಧ್ಯ ಸ್ವಾಗತಿಸಿ, ಡಾ.ಮೋಹನ್‌ಕಮಾರ್ ವಂದಿಸಿದರು. ಶಿವಮೂರ್ತಯ್ಯ ಪ್ರಾಸ್ತಾವಿಸಿದ್ದು, ಸೌಮ್ಯಶ್ರೀಯಶವಂತ್ ಪ್ರಾರ್ಥಿಸಿ ಜ್ಯೋತಿಕಿರಣ ನಿರೂಪಿಸಿದರು.

Fear of surgery is necessary to build a healthy society

Comments

Leave a Reply

Your email address will not be published. Required fields are marked *