May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಶಿಕ್ಷಕ ವೃತ್ತಿಗೆ ಸಿಗುವ ಗೌರವ ಬೇರೆ ಯಾವುದೇ ಹುದ್ದೆಗೆ ಸಿಗುವುದಿಲ್ಲ

ಚಿಕ್ಕಮಗಳೂರು: ಸರ್ಕಾರಿ ಉದ್ಯೋಗದಲ್ಲಿ ಶಿಕ್ಷಕ ವೃತ್ತಿಗೆ ಸಿಗುವ ಗೌರವ ಬೇರೆ ಯಾವುದೇ ಹುದ್ದೆಗೆ ಸಿಗುವುದಿಲ್ಲ. ಇದೊಂದು ಸಮಾಜವನ್ನು ತಿದ್ದುವ ಪರಿಣಾಮಕಾರಿ ಸೇವೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅಭಿಪ್ರಾಯಿಸಿದರು.

ಅವರು ಇಂದು ಕುವೆಂಪು ಕಲಾಮಂದಿರದಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಜಿ.ಪಂ, ತಾ.ಪಂ, ತಾಲ್ಲೂಕು ಶಿಕ್ಷಕರ ದಿನಾಚರಣಾ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ೧೩೮ನೇ ಜನ್ಮದಿನೋತ್ಸವ ಮತ್ತು ೬೪ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರು ಶಿಕ್ಷಣ ತಜ್ಞ, ಶಿಕ್ಷಣ ಪ್ರೇಮಿ, ಹೆಚ್ಚು ಶಿಕ್ಷಣದ ಜ್ಞಾನವನ್ನು ಹೊಂದಿದ್ದ ಅವರನ್ನು ನೆನಪಿಸಿಕೊಳ್ಳಲು ಸೆ.೫ ರಂದೇ ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಟಿಬದ್ಧರಾದಾಗ ಶಿಕ್ಷಕರ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.

ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬುದನ್ನು ಅರಿತು ಶಿಕ್ಷಣ ನೀಡುವ ಅಗತ್ಯ ಇದೆ ಎಂದು ಹೇಳಿದರು.

ರಾಜಕಾರಣಿಗಳಿಗೆ ಅಧಿಕಾರದಲ್ಲಿರುವವರೆಗೆ ಮಾತ್ರ ಗೌರವ ಸಿಗುತ್ತದೆ. ಆದರೆ, ಶಿಕ್ಷಕರು ನಿವೃತ್ತಿ ಹೊಂದಿದರೂ ಗೌರವಕ್ಕೆ ಪಾತ್ರರಾಗುತ್ತಾರೆ. ಇದೊಂದು ಸಮಾಜವನ್ನು ಜಾಗೃತಗೊಳಿಸುವ ಹುದ್ದೆ ಎಂದು ಬಣ್ಣಿಸಿದರು.

ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತಂದು ಸಮಾಜದ ಆಸ್ತಿಯನ್ನಾಗಿಸುವ ಹೊಣೆ ಶಿಕ್ಷಕರ ಮೇಲಿದೆ. ಅದಕ್ಕಾಗಿ ತುಂಬು ಹೃದಯದ ಕೃತಜ್ಞತೆ ಸಲ್ಲಿಸಬಯಸುತ್ತೇನೆ ಎಂದರು.

ವಿದ್ಯಾರ್ಥಿಗಳು ಗುರಿ ತಲುಪಬೇಕಾದರೆ ಗುರುವಿನ ಆಶೀರ್ವಾದ ಮತ್ತು ಅವರ ಜ್ಞಾನ ಕಂಡಿತವಾಗಿಯೂ ಬೇಕು. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂಬ ನಾಣ್ಣುಡಿಯಂತೆ ಎಲ್ಲರೂ ನಡೆಯಬೇಕಾಗಿದೆ. ಇಂದು ಶಿಕ್ಷಕರ ದಿನಾಚರಣೆಯನ್ನು ಸಂಭ್ರಮ ಸಡಗರದೊಂದಿಗೆ ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಂವಿಧಾನ ಬದ್ಧ ಹಕ್ಕುಗಳಾಗಿದ್ದು, ಇವುಗಳನ್ನು ತಲುಪಿಸುವಲ್ಲಿ ಸರ್ಕಾರಗಳು ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕೆಂದು ಹೇಳಿದರು.

ಸಮಾಜವನ್ನು ತಿದ್ದಿ ತೀಡಿ ಉತ್ತಮ ಪ್ರಜೆಗಳನ್ನಾಗಿಸಿ ಶಕ್ತಿ ತುಂಬುವ ಕೆಲಸ ಶಿಕ್ಷಕರ ಮೇಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದರೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಶಿಕ್ಷಕರು ಹಿಂದೆ ಬಿದ್ದಿಲ್ಲ ಎಂದು ಶ್ಲಾಘಿಸಿದರು.

ಈ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳು ಮತ್ತು ಸರ್ಕಾರದ ಕರ್ತವ್ಯವಾಗಿದ್ದು, ಸರ್ಕಾರಿ ನೌಕರನಾಗಿ ಆಯ್ಕೆಯಾದ ಬಳಿಕ ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯಲು ಶಿಕ್ಷಕರಿಗೆ ಅವಕಾಶವಿದ್ದು, ಅದರಂತೆ ೫ ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ, ಕಾಲಕಾಲಕ್ಕೆ ಬಡ್ತಿ ಅಗತ್ಯವಾಗಿದ್ದು, ಇವುಗಳನ್ನು ಪಡೆಯಲು ಇಂದು ಹೋರಾಟ ಮಾಡುತ್ತಿರುವುದು ವಿಷಾಧನೀಯ ಎಂದರು.

ಸಮಾಜದ ಸ್ವಾಸ್ಥ್ಯ ಕಾಪಾಡುವುದೇ ಶಿಕ್ಷಣ ಮತ್ತು ಆರೋಗ್ಯ. ಉತ್ತಮ ವಾತಾವರಣ ನಿರ್ಮಾಣವಾಗಬೇಕಾದರೆ ಶಿಸ್ತುಬದ್ಧ ಶಿಕ್ಷಣ ಅಗತ್ಯ. ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತು ಕಾಪಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಸರ್ಕಾರದ ಬಿಸಿಯೂಟ ವ್ಯವಸ್ಥೆ ಶಿಕ್ಷಕರ ನಿದ್ದೆಗೆಡಿಸಿದೆ. ನಿವೃತ್ತಿಯಾದಾಗ ಪಿಂಚಣಿ ಪಡೆಯುವುದು ನಾಡಿನ ಸರ್ವರ ಹಕ್ಕಾಗಿದ್ದು, ಎನ್‌ಪಿಎಸ್, ಓಪಿಎಸ್ ಬಗ್ಗೆ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಗ್ಗೆ ಎಚ್ಚರಿಸಿದರು.

ಎಂಎಲ್‌ಸಿ ಸಿ.ಟಿ ರವಿ ಮಾತನಾಡಿ, ವರ್ತನೆಯಲ್ಲಿ ಪರಿವರ್ತಿಸುವುದೇ ಶಿಕ್ಷಣ, ಮಾಹಿತಿ ಜೊತೆಗೆ ಶಿಕ್ಷಣ ನೀಡುವವನೇ ಉಪಾಧ್ಯಾಯ. ಜ್ಞಾನದ ಒಳನೋಟ ನೀಡುವವರು ಪಂಡಿತ, ಸುತ್ತ ಜ್ಞಾನವನ್ನು ಜಾಗೃತಿಗೊಳಿಸಿ ಬೆಳಕಿನೆಡೆಗೆ ತಂದು ಆತ್ಮವಿಶ್ವಾಸ ತುಂಬುವವನೇ ಗುರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮೊದಲಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಸ್ವಾಗತಿಸಿದರು. ಪ್ರಶಾಂತ್, ನೀಲಕಂಠಪ್ಪ ಸೇರಿದಂತೆ ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

The respect that teaching brings is unmatched by any other profession.

Related posts

ಧರ್ಮದ ರಕ್ಷಣೆ-ಅಧರ್ಮದ ನಾಶ ನಾಡಹಬ್ಬ ದಸರಾದ ಉದ್ದೇಶ

Team Suddigara

ಎನ್ ಆರ್ ಪುರ ಮುಖ್ಯ ರಸ್ತೆ ಅಭಿವೃದ್ದಿಗೆ 60 ಕೋಟಿ ಮಂಜೂರು ಸಚಿವ ಸಂಪುಟ ಅನುಮೋದನೆ

Team Suddigara

ಸಂಸತ್ ಅಧಿವೇಶನದಲ್ಲಿ ಸರ್ಫೇಸಿ ಕಾಯ್ದೆ ಬಗ್ಗೆ ಚರ್ಚೆ

Team Suddigara

Leave a Comment