ಚಿಕ್ಕಮಗಳೂರು: ಹುಲಗಾರುಬೈಲು ಅರಣ್ಯದಲ್ಲಿ ಬಂದೂಕು ಪತ್ತೆಯಾಗಿದ್ದು, ಶರಣಾದ ನಕ್ಸಲರು ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಗಾರುಬೈಲು ಅರಣ್ಯದ ನಡುವೆ ಒಂದು ನಾಡ ಬಂದೂಕು, ೧೮ ಖಾಲಿ ಕಾಟ್ರೇಜ್ ಪತ್ತೆಯಾಗಿದ್ದು, ಇದರ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಕ್ಸಲರ ಶರಣಾಗತಿ ಬೆನ್ನಲ್ಲೇ ಕಾಡಿನಲ್ಲಿ ಬಂದೂಕು ಪತ್ತೆಯಾಗಿದೆ.
ಫೆಬ್ರವರಿ ೧ ರಂದು ನಕ್ಸಲ್ ಕೋಟೆಹೊಂಡ ರವೀಂದ್ರ ಶಸ್ತ್ರ ರಹಿತವಾಗಿ ಶರಣಾಗತಿಯಾಗಿದ್ದ. ರವೀಂದ್ರ ಬಳಿ ಇದ್ದ ಶಸ್ತ್ರ ಇದೀಗ ಪತ್ತೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಶರಣಾಗತಿ ಮುನ್ನ ರವೀಂದ್ರ ಕಾಡಿನಲ್ಲಿ ಎಸೆದಿರಬಹುದು ಎನ್ನಲಾಗುತ್ತಿದೆ.
ಶೃಂಗೇರಿ ಪೊಲೀಸರು ನಾಡ ಬಂದೂಕು ಸೇರಿದಂತೆ ೧೮ ಖಾಲಿ ಕಾಟ್ರೇಜ್ ವಶಕ್ಕೆ ಪಡೆದಿದ್ದಾರೆ. ನರಸಿಂಹ ರಾಜಪುರ ಠಾಣಾ ವ್ಯಾಪ್ತಿಯಲ್ಲೂ ಈ ಹಿಂದೆ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಕಾಡಿನ ನಡುವೆ ಭೂಮಿಯೊಳಗೆ ಹೂತುಹಾಕಿದ್ದ ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು.
ಈ ವೇಳೆ ಎಕೆ ೫೬ ಸೇರಿದಂತೆ ೬ ಬಂದೂಕು ಜೀವಂತ ಮದ್ದುಗುಂಡು ಪತ್ತೆಯಾಗಿದ್ದವು.
ಹುಲುಗಾರು ಬೈಲಿನ ಕಾಡಿನಲ್ಲಿ ಪತ್ತೆಯಾಗಿರುವ ಒಂಟಿನಳಿಕೆ ಬಂದೂಕು ಶಿಕಾರಿಗೆಂದು ಬಂದವರು ಬಿಟ್ಟುಹೋಗಿದ್ದಾರೆಯೋ ಅಥವಾ ಇತ್ತೀಚೆಗೆ ಶಸ್ತ್ರರಹಿತವಾಗಿ ಶರಣಾಗಿರುವ ನಕ್ಸಲ್ ರವೀಂದ್ರ ಎಸೆದಿರುವ ಬಂದೂಕು ಎಂಬುದು ತನಿಖೆಯಿಂದ ತಿಳಿಯಬೇಕಿದೆ.
ಶರಣಾಗತಿಯಾದ ರವೀಂದ್ರ ಹೇಳಿದ್ದು, ನನ್ನ ಬಳಿ ಶಸ್ತ್ರ ಇಲ್ಲವೆಂದು ಇದು ಯಾರಿಗೆ ಸೇರಿರಬಹುದೆಂಬುದು ತಿಳಿಯದಾಗಿದೆ.
Gun found in Hulagarubailu forest
