ಚಿಕ್ಕಮಗಳೂರು: ನಗರದಲ್ಲಿ ಅಮೃತ್ ಯೋಜನೆ ಹಾಗೂ ಒಳಚರಂಡಿ ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಹಾನಿಯಾಗಿರುವ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಎಸ್ಎಫ್ಸಿ ಅನುದಾನದಡಿ ೧೦ ಕೋಟಿ ರೂಗಳನ್ನು ನೀಡಿದ್ದಾರೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು
ಅವರು ಇಂದು ನಗರದ ತಲಾ ೪ ಲಕ್ಷ ರೂ ವೆಚ್ಚದಲ್ಲಿ ಆಶೀರ್ವಾದ್ ಆಟೋ ಸರ್ಕಲ್ ಮತ್ತು ಶೃಂಗಾರ್ ಸರ್ಕಲ್ ಆಟೋ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಜೂರು ಮಾಡಿರುವ ಈ ೧೦ ಕೋಟಿ ಅನುದಾನದಲ್ಲಿ ನಗರದ ಪ್ರಮುಖ ರಸ್ತೆಗಳು ಹಾನಿಯಾಗಿದ್ದು, ಹೊಸದಾಗಿ ಡಾಂಬರೀಕರಣ ಮಾಡುವುದರಿಂದ ಹೊಸ ವರ್ಷದಲ್ಲಿ ಆಟೋ ಚಾಲಕರಿಗೆ ಸಂತೋಷವಾಗಲಿದೆ ಎಂದು ಭಾವಿಸುತ್ತೇನೆ ಎಂದರು.
ಯುಜಿಡಿ ಮತ್ತು ಅಮೃತ್ ಯೋಜನೆಯಡಿ ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಬಹಳಷ್ಟು ರಸ್ತೆಗಳು ಹಾನಿಯಾಗಿದ್ದು, ಆಟೋ ಚಾಲಕರು ಮತ್ತು ನಾಗರೀಕರಿಗೆ ತೊಂದರೆಯಾಗುತ್ತಿತ್ತು. ಈ ಸಂಬಂಧ ಈಗಾಗಲೇ ಕ್ರಿಯಾಯೋಜನೆ ತಯಾರಿಸಿ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಸಧ್ಯದಲ್ಲೇ ಕಾಮಗಾರಿ ಆರಂಭವಾಗಿ ಇನ್ನೆರಡು ತಿಂಗಳಲ್ಲಿ ನಗರದ ಎಲ್ಲಾ ರಸ್ತೆಗಳು ಸಂಪೂರ್ಣ ಡಾಂಬರೀಕರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಟೋ ಚಾಲಕರೆಂದರೆ ಕಾಯಕ ಯೋಗಿಗಳು. ಪ್ರತೀ ದಿನ ಸಾರ್ವಜನಿಕರ ಸೇವೆ ಸಲ್ಲಿಸುವ ಮೂಲಕ ದುಡಿಮೆ ಮಾಡುತ್ತಿದ್ದಾರೆ. ನಾಗರೀಕರ ಆರೋಗ್ಯ ಕಾಪಾಡುವಲ್ಲಿ ಆಟೋ ಚಾಲಕರು ಪ್ರಮುಖ ಪಾತ್ರ ವಹಿಸುತ್ತಿದ್ದು, ಚಾಲಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದನ್ನು ಮನಗಂಡು ಆಟೋ ನಿಲ್ದಾಣ ನಿರ್ಮಾಣ ಮಾಡಲು ಮುಂದಾಗಿದ್ದೇವೆ ಎಂದರು.
ಇಂದು ನೀಡಿರುವ ಆಟೋ ಚಾಲಕರ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು.
ರಾಮನಹಳ್ಳಿಯ ಆಟೋ ಚಾಲಕ ವಿಶ್ವನಾಥ ಮಾತನಾಡಿ, ಕಳೆದ ೩೦ ವರ್ಷಗಳಿಂದ ಆಟೋ ಓಡಿಸಿ ಜೀವನ ನಡೆಸುತ್ತಿದ್ದೇವೆ, ಶಾಸಕರಾಗಲೀ, ಸರ್ಕಾರವಾಗಲಿ ಆಟೋ ಚಾಲಕರಿಗೆ ಯಾವುದೇ ರೀತಿಯ ಸೌಲಭ್ಯ ನೀಡಿಲ್ಲ. ಈಗಲಾದರೂ ತಾವು ಆಟೋ ಚಾಲಕರು ಮತ್ತು ಮಾಲಿಕರಿಗೆ ಪ್ರತ್ಯೇಕ ಬಡಾವಣೆ ನಿರ್ಮಿಸಿ ನಿವೇಶನ, ಮನೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸದಸ್ಯ ಸಿ.ಪಿ. ಲಕ್ಷ್ಮಣ, ಸದಸ್ಯ ವಿಫುಲ್ ಕುಮಾರ್ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ನಗರಸಭೆ ಮಾಜಿ ಸದಸ್ಯ ಮಧು, ನಗರಸಭೆ ಇಂಜಿನಿಯರ್ಗಳಾದ ಲೋಕೇಶ್, ಸೌಜನ್ಯ, ಮಿಥುನ, ಶಿವಾನಂದ, ಅಣ್ಣಯ್ಯ, ಆಟೋ ಸಂಘದ ಅಧ್ಯಕ್ಷ ಕೋಟೆ ಜಗದೀಶ್, ಶಶಿ ಮತ್ತಿತರರು ಉಪಸ್ಥಿತರಿದ್ದರು.
All the roads in the city will be asphalted at a cost of Rs 9 crore.
