ಅರಿವಿಗಿಂತ ಆಚಾರ ದೊಡ್ಡದ್ದು

ಚಿಕ್ಕಮಗಳೂರು: ಅರಿವಿಗಿಂತ ಆಚಾರ ದೊಡ್ಡದ್ದು. ತಾಳಿದವರು ಬಾಳುತ್ತಾರೆ ಎಂಬುದಕ್ಕೆ ಹೇಮರಡ್ಡಿಮಲ್ಲಮ್ಮ ಸ್ಪಷ್ಟ ನಿದರ್ಶನ ಎಂದು ಉಜ್ಜಯಿನಿ ಶ್ರೀಮದ್‌ಗಿರಿರಾಜಸೂರ್‍ಯಸಿಂಹಾಸನ ಪೀಠದ ಶ್ರೀಶ್ರೀಶ್ರೀ ೧೦೦೮ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಿಸಿದರು.

ಬಡಗನಾಡು ಶ್ರೀಹೇಮರಡ್ಡಿ ವೀರಶೈವ ಜನಾಂಗ ಸಂಘದ ಬಾಸೂರು ಘಟಕ ಎರಡುದಿನಗಳ ಕಾಲ ಆಯೋಜಿಸಿದ್ದ ಸಮಾರಂಭದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರವನ್ನು ಅನಾವರಣಗೊಳಿಸಿ ಅವರು ಆಶೀರ್ವಚನ ನೀಡಿದರು.

ಸಂಸಾರದಲ್ಲಿದ್ದುಕೊಂಡು ಹಿಂಸೆ ಅನುಭವಿಸಿ ಜೊತೆಯಲ್ಲಿರುವವರನ್ನೆಲ್ಲ ಸಾತ್ವಿಕರನ್ನಾಗಿಸಿದ ವಿಶಿಷ್ಟ ದಾಖಲೆಯ ಶ್ರೇಷ್ಠ ಸದ್‌ಗೃಹಿಣಿ ಹೇಮರಡ್ಡಿಮಲ್ಲಮ್ಮ. ಲೋಕದಲ್ಲಿ ಹುಟ್ಟಿದ ಬಳಿಕ ಸಮಾಧಾನಿಯಾಗಿರಬೇಕು ಎಂಬ ಅಕ್ಕನ ಅನುಭಾವದ ನುಡಿಗೆ ತಕ್ಕಂತೆ ಬದುಕಿದಾಕೆ. ಮಲ್ಲಮ್ಮನ ಬದುಕು ಕಣ್ಣೀರಿನ ಕಥೆಯಾಗಿದ್ದರೂ ಆ ಬದುಕಿನಿಂದ ಸಂಸಾರಿಗಳೆಲ್ಲ ಕಲಿಯಬೇಕಾದ ಒಂದು ಉದಾತ್ತ ಗುಣವೆಂದರೆ ಸಹನೆ. ಸುಗಮಸಂಸಾರಕ್ಕೆ ಸಿದ್ಧೌಷಧ. ಸಂಸಾರಜೀವನ ಮಾತ್ರವಲ್ಲ, ಮಾನವರ ಸಮಸ್ತ ವ್ಯವಹಾರದಲ್ಲೂ ಸಹನೆಯ ಪಾತ್ರ ಅಗಾಧ ಮತ್ತು ಅನನ್ಯ ಎಂದರು.

ಹೇಮರಡ್ಡಿಮಲ್ಲಮ್ಮ ಮೂಲ ನೆಲೆಯಾದ ಶ್ರೀಶೈಲ ಪ್ರದೇಶದಿಂದ ವಲಸೆಬಂದ ಭಕ್ತರು ಕರ್ನಾಟಕ ನಾನಾ ಪ್ರದೇಶಗಳಂತೆ ಚಿಕ್ಕಮಗಳೂರು ಜಿಲ್ಲೆಯಲ್ಲೂ ಶತಮಾನಗಳ ಹಿಂದಿನಿಂದ ನೆಲೆಸಿದ್ದಾರೆ. ಸಂಘಟಿತರಾಗಿ ಪ್ರತಿವರ್ಷ ಮಲ್ಲಮ್ಮನ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸುತ್ತಾ ವೀರಶೈವ ಪಂಚಪೀಠದ ಆಚಾರ್ಯರನ್ನೂ ಆಹ್ವಾನಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದಾರೆಂದು ಶ್ರೀಮದ್ ಉಜ್ಜಯಿನಿ ಜಗದ್ಗುರುಗಳು ಹರ್ಷ ವ್ಯಕ್ತಪಡಿಸಿದರು.

ಬಾಸೂರು ಘಟಕದ ಅಧ್ಯಕ್ಷ ಬಿ.ಕೆ.ವಸಂತಕುಮಾರ, ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ಕಾರ್‍ಯದರ್ಶಿ ಬಿ.ಎಸ್.ಪ್ರಭು, ಗಿರಿಯಾಪುರದ ಕೇಂದ್ರಸಂಘದ ಅಧ್ಯಕ್ಷ ರೇವಣ್ಣಸಿದ್ದಪ್ಪ, ಗೌರವಾಧ್ಯಕ್ಷ ಮುರಿಗೇಶ್, ಬಾಸೂರು ಗ್ರಾ.ಪಂ.ಸದಸ್ಯ ನಾಗಭೂಷಣ, ಚಿಕ್ಕಮಗಳೂರು ಜಂಗಮಬಳಗದ ಸಂಚಾಲಕ ಪ್ರಭುಲಿಂಗಶಾಸ್ತ್ರಿ ಮತ್ತಿತರರು ಉಜ್ಜಯಿನಿ ಜಗದ್ಗುರುಗಳನ್ನು ಗೌರವಿಸಿದರು.

ಕಡೂರು ತಾಲ್ಲೂಕು ವೀರಶೈವ ಲಿಂಗಾಯತ ನೌಕರರ ಸಂಘದ ವತಿಯಿಂದ ಸಂಪತ್‌ಕುಮಾರ್ ನೇತೃತ್ವದಲ್ಲಿ ಉಚಿತ ಮಜ್ಜಿಗೆ ದಿನವಿಡಿ ವಿತರಿಸಲಾಯಿತು. ವಸಂತಕುಮಾರ್ ದಂಪತಿಗಳು ಜಗದ್ಗುರುಗಳು ಪಾದಪೂಜೆ ನೆರವೇರಿಸಿದ್ದು, ಇದಕ್ಕೆ ಮುನ್ನ ಬಾಸೂರಿನ ಈಶ್ವರದೇವಸ್ಥಾನ ಹಾಗೂ ಆಂಜನೇಯಸ್ವಾಮಿ ದೇವಾಲಯಗಳಿಗೆ ಉಜ್ಜಯಿನಿ ಜಗದ್ಗುರುಗಳು ಭೇಟಿ ನೀಡಿದ್ದು, ದೇವಸ್ಥಾನ ಸಮಿತಿ ವತಿಯಿಂದ ಗೌರವ ಸಮರ್ಪಿಸಲಾಯಿತು.

Practice is greater than knowledge.

Comments

Leave a Reply

Your email address will not be published. Required fields are marked *