ಬುಕ್ಕಾಂಬುಧಿ ಬೆಟ್ಟದಲ್ಲಿ ಅಮವಾಸ್ಯೆ ಪೂಜೆ

ಅಜ್ಜಂಪುರ:  ಪರಮ ತಪಸ್ವಿ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಪಗೈದ ಬುಕ್ಕಾಂಬುಧಿ ಬೆಟ್ಟದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ರುದ್ರಾಭಿಷೇಕ ಅಷ್ಟೋತ್ತರ ಮಹಾಮಂಗಲ ಕಾರ್ಯಕ್ರಮಗಳು ಜರುಗುತ್ತವೆ ಎಂದು ಟ್ರಸ್ಟಿನ ಅಧ್ಯಕ್ಷರಾದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಪಡಿಸಿದರು.

ಅವರು ಗುರುವಾರ ತಾಲೂಕಿನ ಬುಕ್ಕಾಂಬುಧಿ ಬೆಟ್ಟದಲ್ಲಿ ಅಮವಾಸ್ಯೆ ಪೂಜೆ ನೆರವೇರಿಸಿ ಶ್ರಾವಣ ಪೂಜಾ ಕಾರ್ಯಕ್ಕೆ ಚಾಲನೆಯಿತ್ತು ಆಶೀರ್ವಚನ ನೀಡಿ
ವೀರಶೈವ ಧರ್ಮ ಸಂಸ್ಕೃತಿ-ಗುರು ಪರಂಪರೆಯ ಆದರ್ಶ ಮೌಲ್ಯಗಳನ್ನು ಬೆಳೆಸಿದ ಕೀರ್ತಿ ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳಿಗೆ ಸಲ್ಲುತ್ತದೆ. ಮೂರು ತಿಂಗಳ ಕಾಲ ಬುಕ್ಕಾಂಬುಧಿ ಬೆಟ್ಟದ ಮೇಲಿದ್ದು ಉಗ್ರ ತಪಸ್ಸನ್ನಾಚರಿಸಿದರು.

ಯುಗ ಪುರುಷರಾಗಿ ಸರ್ವ ಭಕ್ತರ ಬಾಳಿಗೆ ಆಧ್ಯಾತ್ಮದ ಚಿಂತನೆಗಳನ್ನು ಬೋಧಿಸಿ ಸನ್ಮಾರ್ಗಕ್ಕೆ ಕರೆತಂದ ಕೀರ್ತಿ ಅವರದಾಗಿದೆ. ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟ ಒಂದು ತಿಂಗಳ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮ ರೂಪಿಸಿದೆ. ದಿನ ನಿತ್ಯ ಭಕ್ತರ ಸೇವೆಯಲ್ಲಿ ಪೂಜೆ ನೆರವೇರುತ್ತದೆ. ಆಸಕ್ತಿವುಳ್ಳ ಧರ್ಮಾಭಿಮಾನಿಗಳು ತನು ಮನ ಧನ ಪೂರ್ವಕ ಸೇವೆ ಸಲ್ಲಿಸಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳವರ ಕೃಪೆಗೆ ಪಾತ್ರರಾಗಬೇಕೆಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟಿನ ಉಪಾಧ್ಯಕ್ಷ ಶೀಲವಂತರ ವೀರಭದ್ರಪ್ಪ, ಕಾರ್ಯದರ್ಶಿ ಹೆಚ್.ಪಿ..ಸುರೇಶ್ ಮೊದಲ್ಗೊಂಡು ಟ್ರಸ್ಟಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Amavasya Puja at Bukkambudhi hill

Comments

Leave a Reply

Your email address will not be published. Required fields are marked *