ಚಿಕ್ಕಮಗಳೂರು: ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡುವ ಸಂದರ್ಭದಲ್ಲಿ ಜನಸಂಖ್ಯಾ ಆಧಾರ ಹಾಗೂ ಭೌಗೋಳಿಕ ಆಧಾರವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ಪರಿಶೀಲನೆ ನಡೆಸಿದ ಬಳಿಕ ಜಾರಿಮಾಡಬೇಕೆಂದು ಮಾಜಿ ಸಭಾಪತಿ ಬಿ.ಎಲ್. ಶಂಕರ್ ಅಭಿಪ್ರಾಯಿಸಿದರು.
ಅವರು ಇಂದು ನಗರದ ಪ್ರಸ್ ಕ್ಲಬ್ನಲ್ಲಿ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಸಂವಾದ ನಡೆಸಿ ಐಡಿಎಸ್ಜಿ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಾರ್ಯಾಗಾರದಲ್ಲಿ ಮಾತನಾಡಿದರು.
ಕ್ಷೇತ್ರ ಪುನರ್ ವಿಂಗಡಣೆ ಪ್ರತಿ ೧೦ ವರ್ಷಗಳಿಗೊಮ್ಮೆ ನಡೆಯಬೇಕಿದ್ದು, ೨೦೧೧ ರಲ್ಲಿ ಕ್ಷೇತ್ರ ವಿಂಗಡಣೆ ಮಾಡಲಾಗಿದೆ. ೨೦೨೧ ರಲ್ಲಿ ಕ್ಷೇತ್ರ ವಿಂಗಡಣೆ ಆಗದಿರುವುದಕ್ಕೆ ಕೋವಿಡ್ ಕಾರಣದಿಂದ ಮುಂದೂಡಲಾಗಿದೆ. ಜನಗಣತಿ ಆಧರಿಸಿ ಈ ವರ್ಷ ಕ್ಷೇತ್ರ ಪುನರ್ ವಿಂಗಡಣೆ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.
ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ಆ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳು ಹೆಚ್ಚಾಗಲಿದ್ದು, ದಕ್ಷಿಣ ಭಾರತ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳು ಕಡಿಮೆಯಾಗುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಜಾತಿ ಸಮೀಕ್ಷೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಅಸಮಾನತೆ ಇದ್ದರೆ ಅಂತಹ ಸಮುದಾಯಗಳಿಗೆ ಸಾಮಾಜಿಕ ಸಮಾನತೆ ಕೊಡಲು ಪ್ರಯತ್ನಗಳು ನಡೆಯುತ್ತಿದ್ದು, ಜಾತಿಗಣತಿ ನಡೆಸಬೇಕಿರುವುದು ಅನಿವಾರ್ಯ ಎಂದರು.
ಈ ಹಿಂದೆ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳು ಜನಸಂಖ್ಯೆ ಆಧರಿಸಿ ಕ್ಷೇತ್ರ ಪುನರ್ ವಿಂಗಡಣೆ ಮಾಡುತ್ತಿದ್ದವು. ಕೆಲವು ರಾಜ್ಯಗಳು ಜನಸಂಖ್ಯಾ ನಿಯಂತ್ರಣ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರಿಂದ ಜನಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ರಾಜ್ಯದ ಈಗಿರುವ ಲೋಕಸಭಾ ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಕಳೆದುಕೊಳ್ಳಲಿವೆ ಎಂದು ಹೇಳಿದರು.
ಭೌಗೋಳಿಕವಾಗಿ ಪೂರ್ವೋತ್ತರ ರಾಜ್ಯದಲ್ಲಿ ಜನಸಂಖ್ಯೆ ಅನ್ವಯವಾಗುವುದಿಲ್ಲ. ಮಣಿಪುರ, ಸಿಕ್ಕಿಂ, ನಾಗಲ್ಯಾಂಡ್ ಮುಂತಾದ ರಾಜ್ಯಗಳು ಭೌಗೋಳಿಕ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆಗುತ್ತವೆ. ಆದರೆ, ದಕ್ಷಿಣ ರಾಜ್ಯದಲ್ಲಿ ಜನಸಂಖ್ಯೆ ಆಧಾರದ ಜೊತೆಗೆ ಮಲೆನಾಡು, ಪಶ್ಚಿಮ ಘಟ್ಟ ಪ್ರದೇಶ ಹೊಂದಿರುವ ಕರಾವಳಿ ಪ್ರದೇಶವನ್ನು ಒಳಗೊಂಡಂತೆ ಜನಸಂಖ್ಯೆ ಮತ್ತು ಭೌಗೋಳಿಕ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕೆಂದು ಒತ್ತಾಯಿಸಿದರು.
ಪ.ಜಾ, ಪ.ಪಂ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕ್ಷೇತ್ರಗಳನ್ನು ವಿಂಗಡಣೆ ಮಾಡಲಾಗುತ್ತದೆ. ಸಾಮಾಜಿಕ ಜವಾಬ್ದಾರಿ ಇರುವ ಕಾರಣ ಸ್ಥಾನಗಳು ಹೆಚ್ಚಾಗಲಿವೆ. ಮಹಿಳಾ ಮೀಸಲಾತಿ ಜಾರಿಯಾಗಿರುವ ಸಂಬಂಧ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಮಹಿಳೆಯರು ಸ್ಪರ್ಧೆ ಮಾಡುವ ಮೂಲಕ ಸಮಾನತೆ ಮೂಡಲಿದೆ ಎಂದು ವಿಶ್ಲೇಷಿಸಿದರು.
ಒಟ್ಟು ೧೬೧೮ ಭಾಷೆಗಳು ಭಾರತದಲ್ಲಿವೆ. ಭಾಷೆ ಕಲಿಕೆಗೆ ಯಾವುದೇ ಮಾನದಂಡ ಇಲ್ಲ. ಮಾತೃಭಾಷೆ ಶಿಕ್ಷಣಕ್ಕೆ ಪರ್ಯಾಯ ಇಲ್ಲ, ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಸಂವಹನಕ್ಕೆ ಸಹಕಾರಿಯಾಗಿ ಉಪಯುಕ್ತವಾಗುತ್ತದೆ. ಬಲವಂತ ಮತ್ತು ಕಾನೂನು ಮೂಲಕ ಭಾಷೆ ಹೇರಿಕೆ ಸರಿಯಲ್ಲ ಎಂದು ತಿಳಿಸಿದರು.
ಹೀಗೆ ಹೇಳಿದರೆ ಮೂಲ ಅಸ್ಮಿತೆಗೆ ಕಾರಣವಾಗುತ್ತದೆ. ಹನಿಟ್ರ್ಯಾಪ್ ನೈತಿಕತೆ ಪ್ರಶ್ನೆಯಾಗಿದ್ದು, ಈ ಆಮಿಷ, ಹಣ, ಅಧಿಕಾರ ಸೇರಿದಂತೆ ಯಾವುದಾದರೂ ಒಂದು ವಿಷಯ ನಿಗ್ರಹಿಸುವ ಶಕ್ತಿಯನ್ನು ಜನಪ್ರತಿನಿಧಿಗಳು ಮೈಗೂಡಿಸಿಕೊಳ್ಳಬೇಕು. ಇದಾಗದಿದ್ದರೆ ಇವುಗಳನ್ನೇ ಅಸ್ತ್ರ ಮಾಡಿಕೊಂಡು ಅನೈತಿಕ ಚಟುವಟಿಕೆಗೆ ಎಳೆಯುತ್ತಾರೆ ಈ ಹಿನ್ನೆಲೆಯಲ್ಲಿ ಜಾಗರೂಕರಾಗಿರಬೇಕೆಂದು ಎಚ್ಚರಿಸಿದರು.
ಬದುಕಿನ ವಿಚಾರದಲ್ಲಿ ಪ್ರಸ್ತುತ ಭಾವನೆಗಳು ಬೆಸೆಯುತ್ತಿವೆ. ತತ್ವ ಸಿದ್ಧಾಂತ ಇದ್ದ ಜಾಗಕ್ಕೆ ಹಣ ಬಂದು ನಿಂತಿದೆ. ಹಣದ ಮೇಲೆ ಆಯ್ಕೆಯಾಗುವವರಿಂದ ಸದನದಲ್ಲಿ ಅಸಂವಿಧಾನಿಕ ಪದ ಬಳಕೆಯಾಗುತ್ತಿದೆ ಎಂದು ವಿಷಾಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಪ್ರಸ್ಕ್ಲಬ್ ಅಧ್ಯಕ್ಷ ಪಿ. ರಾಜೇಶ್ ವಹಿಸಿದ್ದರು. ಹಿರಿಯ ಉಪಾಧ್ಯಕ್ಷ ಸಿ.ಡಿ. ಚಂದ್ರೇಗೌಡ, ಪತ್ರಕರ್ತ ಉಮೇಶ್ ಕುಮಾರ್, ಅತಿಥಿ ಉಪನ್ಯಾಸಕ ಉಮೇಶ್ ಉಪಸ್ಥಿತರಿದ್ದರು. ಪ್ರಸ್ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ತಾರಾನಾಥ್ ಸ್ವಾಗತಿಸಿ, ನಿರೂಪಿಸಿದರು. ಇದೇ ಸಂದರ್ಭದಲ್ಲಿ ಐಡಿಎಸ್ಜಿ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Guest of the Month event organized at the Press Club
