ಚಿಕ್ಕಮಗಳೂರು: ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ನೇರ ಪಾವತಿ ಅಡಿ ಕಾಯಂ ನೌಕರರಾಗಿ ನೇಮಕ ಮಾಡಿಕೊಳ್ಳುವುದು ಸೇರಿದಂತೆ ವಿವಿಧ ೧೪ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಾಸಕ ಹೆಚ್.ಡಿ. ತಮ್ಮಯ್ಯ ಅವರಿಗೆ ಪೌರನೌಕರರ ಜಿಲ್ಲಾ ಸಂಘ ಮನವಿ ಸಲ್ಲಿಸಿದೆ.
ಇಂದು ಬೆಳಗ್ಗೆ ಶಾಸಕರ ಕಚೇರಿಯಲ್ಲಿ ಮನವಿ ಸಲ್ಲಿಸಿದ ಸಂಘದ ಜಿಲ್ಲಾಧ್ಯಕ್ಷ ಎನ್. ಅಣ್ಣಯ್ಯ ಮತ್ತು ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ನೇತೃತ್ವದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರು, ನೀರು ಸರಬರಾಜು ಸಹಾಯಕರು, ವಾಹನ ಚಾಲಕರು, ಲೋಡರ್ಸ್, ಗಾರ್ಡನರ್, ಕಾವಲುಗಾರ, ಸ್ಯಾನಿಟರಿ ಸೂಪರ್ವೈಸರ್ ಇವರುಗಳನ್ನು ಖಾಯಂ ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿಯನ್ನು ಸ್ವೀಕರಿಸಿದ ನಂತರ ಮಾತನಾಡಿದ ಶಾಸಕ ಹೆಚ್.ಡಿ. ತಮ್ಮಯ್ಯ ಪೌರ ಕಾರ್ಮಿಕರನ್ನು ಖಾಯಂ ನೌಕರರೆಂದು ಸರ್ಕಾರ ಪರಿಗಣಿಸಿದ್ದು, ಸ್ಥಳೀಯ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಖಾಯಂಗೊಳಿಸುವ ಸಂಬಂಧ ಈಗಾಗಲೇ ಬೆಳಗಾವಿ ಅಧಿವೇಶನದಲ್ಲಿ ವಿಷಯ ಪ್ರಸ್ಥಾಪಿಸಲಾಗಿದ್ದು, ಕೆಲವು ಕಾರಣಾಂತರಗಳಿಂದ ಖಾಯಂಗೊಳಿಸದೆ ಕೈಬಿಡಲಾಗಿದೆ ಎಂದರು.
ಮನವಿಯಲ್ಲಿ ತಿಳಿಸಿರುವ ವಿವಿಧ ಬೇಡಿಕೆಗಳ ಬಗ್ಗೆ ಮೇ.೯ ರಂದು ನಡೆಯಲಿರುವ ಸಚಿವಸಂಪುಟ ಸಭೆಯಲ್ಲಿ ಚರ್ಚಿಸಿ ಸಂಬಂಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆಸಿ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಖಜಾಂಚಿ ವಿವೇಕ್, ಮುಖಂಡರಾದ ಸತೀಶ್, ಸುನಿಲ್, ಭರತ್, ರಾಜು, ರಮೇಶ್, ಮೂರ್ತಿ, ಕೃಷ್ಣ ಸೇರಿದಂತೆ ಎಲ್ಲಾ ನೌಕರರು ಉಪಸ್ಥಿತರಿದ್ದರು.
Appeal to MLAs demanding permanent employment of outsourced employees
