Category: ಚಿಕ್ಕಮಗಳೂರು ನಗರ

  • ಭದ್ರಉಪ ಕಣಿವೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ

    ಭದ್ರಉಪ ಕಣಿವೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ

    ಚಿಕ್ಕಮಗಳೂರು: ಭದ್ರ ಉಪ ಕಣಿವೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ನವೆಂಬರ್ ತಿಂಗಳ ಅಂತ್ಯಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತೇವೆ. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಡಿ.ಕೆ. ಶಿವಕುಮಾರ್ ಸೇರಿದಂತೆ ವಿವಿಧ ಸಚಿವರು ಉಪಸ್ಥಿತರಿರಲಿದ್ದಾರೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.

    ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈಶ್ವರ ಹಳ್ಳಿ ಹಾಗೂ ಕಳಸಾಪುರ ಕೆರೆಗೆ ಬಾಗಿನ ಅರ್ಪಣೆ ಮಾಡಿ ಮಾತನಾಡಿದ ಅವರು, ಇನ್ನು ಎರಡು ವ?ದ ಒಳಗಾಗಿ ರಣಘಟ್ಟ ಯೋಜನೆ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸುತ್ತೇವೆ. ಇದರೊಂದಿಗೆ ಭದ್ರ ಉಪಕರಣಗಳು ಯೋಜನೆಯ ಮೂರನೇ ಹಂತದ ಕಾಮಗಾರಿ ಪೂರ್ಣಗೊಂಡಲ್ಲಿ ಎಲ್ಲಾ ಕೆರೆಗಳನ್ನು ಪ್ರತಿ ವ? ತುಂಬಿಸಬಹುದು ಎಂದು ಅಭಿಪ್ರಾಯಪಟ್ಟರು.

    ಗಾಳಿ, ನೀರು, ಭೂಮಿಯನ್ನು ತಾಯಿಗೆ ಹೋಲಿಸಿ ಪೂಜೆ ಮಾಡುವುದು ಭಾರತದಲ್ಲಿ ಮಾತ್ರ. ಹಿಂದಿನಿಂದಲೂ ನಮ್ಮ ಹಿರಿಯರು ಈ ಸಂಸ್ಕಾರ ಬೆಳೆಸಿಕೊಂಡು ಬಂದಿದ್ದಾರೆ. ಹೀಗಾಗಿಯೇ ಇಂದು ನಾವು ತುಂಬಿದ ಕೆರೆಗಳಿಗೆ ಬಾಗಿನ ಅರ್ಪಣೆ ಮಾಡುತ್ತಿದ್ದೇವೆ. ಇಡೀ ಪ್ರಪಂಚದಲ್ಲಿ ಕೃಷಿಯನ್ನೇ ಅವಲಂಬಿಸಿರುವ ದೇಶ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕೃಷಿ ಎಂದರೆ ರೈತ. ರೈತ ಎಂದರೆ ಕೃಷಿ. ರೈತನೇ ನಮ್ಮ ದೇಶದ ಬೆನ್ನೆಲುಬು. ಹೀಗಾಗಿ ರೈತರ ಶ್ರೇಯೋಭಿವೃದ್ಧಿಗಾಗಿ ಪ್ರತಿಯೊಬ್ಬ ಜನ ಪ್ರತಿನಿಧಿಗಳು ಶ್ರಮಿಸಬೇಕು ಎಂದು ಹೇಳಿದರು.

    ಮಳೆ ಬಂದ ಸಂದರ್ಭದಲ್ಲಿ ಕರಗಡ ಯೋಜನೆ ಮೂಲಕ ಈಶ್ವರಹಳ್ಳಿ ಹಾಗೂ ಕಳಸಾಪುರ ಭಾಗದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಈ ಯೋಜನೆಗಾಗಿ ಮಲ್ಲಿಕಾರ್ಜುನ ಧರ್ಮೇಗೌಡ, ಸಿ.ಟಿ.ರವಿ, ಗಾಯತ್ರಿ ಶಾಂತೇಗೌಡ ಅವರ ಕೊಡುಗೆ ದೊಡ್ಡ ಮಟ್ಟದಲ್ಲಿ ಇದೆ. ಕರಗಡ ಯೋಜನೆಯಿಂದ ಕೇವಲ ೩ ಕೆರೆಗಳನ್ನು ಮಾತ್ರ ತುಂಬಿಸಲು ಸಾಧ್ಯ. ಆದರೆ ಎತ್ತಿನಹೊಳೆ ಯೋಜನೆಯಿಂದಾಗಿ ದೇವನೂರು ಹಾಗೂ ಬೆಳವಡಿ ಭಾಗದ ಕೆರೆಗಳು ಭರ್ತಿಯಾಗಿವೆ. ರಣಘಟ್ಟ ಹಾಗೂ ಭದ್ರ ಉಪಕಣಿವೆ ಯೋಜನೆಗಳು ಪೂರ್ಣಗೊಂಡಲ್ಲಿ ಈ ಭಾಗದಲ್ಲಿ ಬರಗಾಲದ ಪ್ರಶ್ನೆಯೇ ಬರುವುದಿಲ್ಲ ಎಂದರು.

    ದೇವಿ ಕೆರೆಯ ನಾಲೆ ಸರಿಯಾಗಿ ಇಲ್ಲದಿರುವ ಕಾರಣದಿಂದಾಗಿ ಕೆರೆ ಭರ್ತಿಯಾಗುತ್ತಿಲ್ಲ. ಹೀಗಾಗಿ ಕಟ್ಟಿನ ಹೊಳೆಯಿಂದ ದೇವಿಕೆರೆ ವರೆಗೆ ನೀರು ಹರಿಸಲು ನೂತನ ಕಾಲುವೆ ನಿರ್ಮಾಣಕ್ಕಾಗಿ ಸರ್ಕಾರ ೯.೯ ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ದೇವಿಕೆರೆಯು ಭರ್ತಿಯಾಗಲಿದೆ ಎಂದು ಮಾಹಿತಿ ನೀಡಿದರು.

    ರಾಜ್ಯ ಸರ್ಕಾರ ಅಭಿವೃದ್ಧಿ ರಥದ ಜೊತೆ ಜೊತೆಗೆ ರೈತರ ಬಾಳನ್ನು ಹಸನು ಮಾಡುವ ರಥವನ್ನು ಎಳೆಯುತ್ತಿದೆ. ನಾನೂ ಸಹ ನೀರಾವರಿ ಯೋಜನೆಗಳು ಶಾಶ್ವತವಾಗಿರಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಜನಪ್ರತಿನಿಧಿಗಳು ಯಾವಾಗಲೂ ರೈತರ ಪರವಾಗಿ ಕೆಲಸ ಮಾಡಬೇಕು. ನಾವು ಮಾಡಿದ ಪುಣ್ಯ ನಮ್ಮ ಖಾತೆಗೆ ಸೇರುತ್ತದೆ ಎಂಬುದನ್ನು ಮನಗಾಣಬೇಕು ಎಂದು ತಿಳಿಸಿದರು.

    ವಿಧಾನ ಪರಿ?ತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಪ್ರಕೃತಿಗೆ ನಮಿಸುವುದು ಹಾಗೂ ಸ್ಮರಿಸುವುದು ಭಾರತೀಯ ಸನಾತನ ಸಂಸ್ಕೃತಿಯ ಒಂದು ಭಾಗ. ಕರಗಡ ಏತ ನೀರಾವರಿ ಯೋಜನೆಯಿಂದ ಕೆರೆ ತುಂಬಿಸುವ ಯೋಜನೆ ಜಾರಿ ಮಾಡಿದ್ದೇವೆ. ಈ ಯೋಜನೆಯನ್ನು ಸರಿಯಾಗಿ ನಿರ್ವಹಣೆ ಮಾಡಿ ನೀರು ಹರಿಸಿದರೆ ಕೇವಲ ೩೫ ದಿನಗಳಲ್ಲಿ ಈ ಕೆರೆಗಳು ಭರ್ತಿಯಾಗುತ್ತಿದ್ದವು. ಆದರೆ ಸರಿಯಾಗಿ ನಿರ್ವಹಣೆ ಮಾಡದ ಕಾರಣದಿಂದಾಗಿ ಅಕ್ಟೋಬರ್ ತಿಂಗಳ ಕೊನೆಗೆ ಕೆರೆ ತುಂಬಿದೆ. ಅದು ಮಳೆಯ ಕಾರಣದಿಂದಾಗಿ. ಒಂದು ವೇಳೆ ಮಳೆ ಬಾರದೆ ಇದ್ದಿದ್ದಲ್ಲಿ ಇಂದು ಕೆರೆಗೆ ಬಾಗಿನ ಅರ್ಪಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಈಶ್ವರ ಹಳ್ಳಿ ಹಾಗೂ ಕಳಸಾಪುರ ಭಾಗಗಳಿಗೆ ೨೦೧೮ ರಿಂದ ೨೩ರ ವರೆಗೆ ೬೫ ಕೋಟಿ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿ ಮಾಡಿದ್ದೇವೆ. ಮಾಗಡಿ-ಜಾವಗಲ್ ರಸ್ತೆಯನ್ನು ೨೫ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

    ೧೨೮೧ ಕೋಟಿ ರೂ. ವೆಚ್ಚದಲ್ಲಿ ಭದ್ರಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಭದ್ರಾ ಉಪಕಣಿವೆ ಯೋಜನೆ ಆರಂಭಿಸಲಾಗಿದೆ. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಇದೀಗ ಮೂರನೇ ಹಂತದ ಕಾಮಗಾರಿಗೆ ಟೆಂಡರ್ ಅಂತಿಮಗೊಂಡಿದೆ. ಇನ್ನು ರಣಘಟ್ಟ ಯೋಜನೆಯಲ್ಲಿ ೯೦೦ ಮೀಟರ್ ಟನಲ್ ಕಾಮಗಾರಿ ಬಾಕಿ ಇದೆ ಎಂದು ವಿವರಿಸಿದರು.

    ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಬೆಳವಾಡಿ ರವೀಂದ್ರ, ಈಶ್ವರಹಳ್ಳಿ ಮಹೇಶ್, ಪ್ರಮುಖರಾದ ಶಂಕರನಾಯ್ಕ, ಕೆಂಗೇಗೌಡ, ಅಚ್ಚುತರಾಯರು, ಅಮೀರ್, ಮಧು, ಯೋಗೀಶ್, ಶಿವಮ್ಮ, ಚಂದ್ರಶೇಖರ್ ಮತ್ತಿತರರಿದ್ದರು.

    Foundation stone laid for the third phase of Bhadra Upa Valley Project

  • ಭಾರತೀಯರನ್ನು ಪರಸ್ಪರ ಎತ್ತಿಕಟ್ಟಿ ಬ್ರಿಟೀಷರು ಭಾರತವನ್ನು ವಶಕ್ಕೆ ಪಡೆದರು

    ಭಾರತೀಯರನ್ನು ಪರಸ್ಪರ ಎತ್ತಿಕಟ್ಟಿ ಬ್ರಿಟೀಷರು ಭಾರತವನ್ನು ವಶಕ್ಕೆ ಪಡೆದರು

    ಬೆಳಗಾವಿ: ವ್ಯಾಪಾರಕ್ಕೆಂದು ಬಂದ ಬ್ರಿಟೀಷರು ಭಾರತೀಯರನ್ನು ಪರಸ್ಪರ ಎತ್ತಿಕಟ್ಟಿ ಭಾರತವನ್ನು ವಶಕ್ಕೆ ಪಡೆದರು.
    ಈಗಲೂ ಜಾತಿ-ಧರ್ಮದ ಹೆಸರಲ್ಲಿ ಭಾತೀಯರನ್ನು ಎತ್ತಿ ಕಟ್ಟುವವರು ಇದ್ದಾರೆ. ಇವರ ಬಗ್ಗೆ ಎಚ್ಚರವಿರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

    ಜಿಲ್ಲಾಡಳಿತ ಮತ್ತು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ 201ನೇ ವರ್ಷದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ 1857ರ ಸಿಪಾಯಿ ದಂಗೆಗೂ 33 ವರ್ಷಗಳ ಮೊದಲೇ ಬ್ರಿಟೀಷರನ್ನು ಕಿತ್ತೂರು ಚನ್ನಮ್ಮ ಸೋಲಿಸಿದರು.
    ಬ್ರಿಟೀಷರನ್ನು ಸೋಲಿಸಿ ಕಿತ್ತೂರಿನ ಸ್ವಾಭಿಮಾನವನ್ನು ಗೆಲ್ಲಿಸಿದ ದಿನವೇ ಕಿತ್ತೂರು ಉತ್ಸವ. 2017 ರಲ್ಲಿ ಕಿತ್ತೂರು ರಾಣಿ ಉತ್ಸವವನ್ನು ಮೊದಲ ಬಾರಿಗೆ ಆರಂಭಿಸಿದ್ದು ನಮ್ಮ ಸರ್ಕಾರ ಎಂದು ನೆನಪಿಸಿದರು.

    ವ್ಯಾಪಾರ ಮಾಡಲು ಬಂದ ಬ್ರಿಟೀಷರು ಭಾರತೀಯರನ್ನು ಪರಸ್ಪರ ಎತ್ತಿಕಟ್ಟಿ ಇಡೀ ದೇಶವನ್ನು ವಶಕ್ಕೆ ಪಡೆದುಕೊಂಡರು. ಬ್ರಿಟೀಷರಿಗೆ ನಮ್ಮವರೇ ಬೆಂಬಲ ಕೊಡುತ್ತಿದ್ದರು. ಚನ್ನಮ್ಮ ಮತ್ತು ರಾಯಣ್ಣನವರ ವಿರುದ್ಧ ಪಿತೂರಿ ಮಾಡಿದ್ದರು. ಈಗಲೂ ಭಾರತೀಯರನ್ನು ಜಾತಿ, ಧರ್ಮದ ಹೆಸರಿನಲ್ಲಿ ಪರಸ್ಪರ ಎತ್ತಿ ಕಟ್ಟಿ ಕಚ್ಚಾಡಿಸುವವರು ನಮ್ಮ ನಡುವೆಯೇ ಇದ್ದಾರೆ. ಇವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಕರೆ ನೀಡಿದರು.

    ಸ್ವಾಭಿಮಾನಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತು ಬಾಳಪ್ಪ ಅವರು ಒಟ್ಟಾಗಿ ಶೌರ್ಯದಿಂದ ಬ್ರಿಟೀಷರನ್ನು ಹಿಮ್ಮೆಟ್ಟಿಸಿದರು. ಬಾಬಾ ಸಾಹೇಬ್ ಪಾಟೀಲರು ಶಾಸಕರಾದ ಬಳಿಕ ಕಿತ್ತೂರು ಉತ್ಸವ ಅತ್ಯಂತ ಸಂಭ್ರಮ ಮತ್ತು ಅರ್ಥಪೂರ್ಣವಾಗಿ ನಡೆಸುತ್ತಿದ್ದಾರೆ. ಇದಕ್ಕಾಗಿ ಶಾಸಕರು ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಟಿಪ್ಪು, ಹೈದರಾಲಿ ಇಬ್ಬರೂ ಬ್ರಿಟೀಷರ ನಿದ್ದೆ ಗೆಡಿಸಿದ್ದರು. ನಾಲ್ಕು ಮೈಸೂರು ಯುದ್ಧಗಳನ್ನು ನಡೆಸಿದ್ದರು. ಟಿಪ್ಪು, ಹೈದರಾಲಿ ಇಬ್ಬರೂ ಬ್ರಿಟೀಷರ ವಿರುದ್ಧ ವಿರೋಚಿತವಾಗಿ ಹೋರಾಡಿದ ಅಪ್ಪಟ ವೀರರು. ದೇಶಪ್ರೇಮಿಗಳು. ಈ ಇತಿಹಾಸವನ್ನು ಹೇಳಿದ ಕೂಡಲೇ ಸಿದ್ದರಾಮಯ್ಯ ಓಲೈಕೆ ರಾಜಕಾರಣ ಮಾಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಾರೆ. ಅಂಬೇಡ್ಕರ್ ಅವರ ಮಾತನ್ನು ನಾವು ನೆನಪಿಡಬೇಕು. “ಇತಿಹಾಸ ಅರಿಯದವರು ಭವಿಷ್ಯ ರೂಪಿಸಲಾರರು” ಎನ್ನುವ ಅಂಬೇಡ್ಕರ್ ಅವರ ಮಾತು ಮರೆಯಬಾರದು ಎಂದರು.

    ರಾಣಿ ಚನ್ನಮ್ಮನವರ ಐಕ್ಯ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ನಮ್ಮ ಸರ್ಕಾರ. ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರ ರಾಣಿ ಚನ್ನಮ್ಮ ಅವರ ಹೆಸರಿಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಕೇಂದ್ರ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.

    The British took control of India by pitting Indians against each other.

  • ನ.26 ರಿಂದ ಡಿ.4 ರವರೆಗೆ ದತ್ತಜಯಂತಿ ಆಚರಣೆ

    ನ.26 ರಿಂದ ಡಿ.4 ರವರೆಗೆ ದತ್ತಜಯಂತಿ ಆಚರಣೆ

    ಚಿಕ್ಕಮಗಳೂರು: : ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿ ದತ್ತಮಾಲೆ ಹಾಗೂ ದತ್ತಜಯಂತಿಯು ನ.೨೬ ರಿಂದ ಡಿ.೪ ರವರೆಗೆ ಶ್ರದ್ಧಾಭಕ್ತಿಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಪ್ರಾಂತ ಸಂಯೋಜಕ ಎಸ್.ಆರ್ ಪ್ರಭಂಜನ್ ತಿಳಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದತ್ತಜಯಂತಿ ನಾಡ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುವುದು. ಸಾಧು-ಸಂತರು, ಮಾತೆಯರು, ದತ್ತಮಾಲಾಧಾರಿಗಳು, ದತ್ತಭಕ್ತರು ಸೇರಿದಂತೆ ರಾಜ್ಯಾದ್ಯಂತ ಸುಮಾರು ೨೫ ಸಾವಿರ ದತ್ತಮಾಲಾಧಾರಿಗಳು ಆಗಮಿಸಲಿದ್ದಾರೆಂದು ಹೇಳಿದರು.

    ದತ್ತಪೀಠದಲ್ಲಿ ಹೈಕೋರ್ಟ್ ನಿರ್ದೇಶನದ ಅನುಸಾರ ಹೋಮ ಹವನ ಪೂಜೆ ನಡೆಯಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದತ್ತಜಯಂತಿ ಉತ್ಸವ ನಡೆಯಲಿದೆ. ಡಿ.೩ ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಾಗೂ ಆಜಾದ್ ಪಾರ್ಕ್ ವೃತ್ತದಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಅಖಿಲ ಭಾರತೀಯ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ ಭಾಗವಹಿಸಲಿದ್ದಾರೆಂದರು.

    ಡಿ.೨ ರಂದು ಅನುಸೂಯದೇವಿ ಪೂಜೆಯ ಅಂಗವಾಗಿ ನಗರದ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಧಾರ್ಮಿಕ ಸಭೆಯ ನಂತರ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ಬೆಳಗ್ಗೆ ೯.೩೦ ಕ್ಕೆ ನಡೆಯಲಿದೆ. ಇದೇ ದಿನ ದತ್ತಪೀಠದಲ್ಲಿ ಬೆಳಗ್ಗೆ ಗಣಪತಿ ಪೂಜೆ, ಪುಣ್ಯಹವಾಚನ, ಪಂಚಗವ್ಯ ಶುದ್ಧಿ, ಋತ್ವಗ್ವರ್ಣ, ಗಣಪತಿ ಹೋಮ, ಚಂಡಿಕಾ ಪಾರಾಯಣ, ದುರ್ಗಾಹೋಮ, ಕಲಶಾಭಿಷೇಕ ಹಾಗೂ ಮಹಾಪೂಜೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

    ದತ್ತಪೀಠದಲ್ಲಿ ಸಂಜೆ ಪಾದುಕಾ ಶುದ್ಧಿ, ಪ್ರಕಾರ ಶುದ್ಧಿ, ವಾಸ್ತುರಾಕ್ಷೆಜ್ಞ ಹೋಮ, ಸುದರ್ಶನ ಹೋಮ, ದುರ್ಗಾದೀಪ ನಮಸ್ಕಾರ, ಕಲಶಾಭಿಷೇಕ ಹಾಗೂ ಮಹಾಪೂಜೆ ನಡೆಯಲಿದೆ ಎಂದು ಹೇಳಿದರು. ಡಿ.೩ ರಂದು ದತ್ತಪೀಠದಲ್ಲಿ ನವಕಲಶ ಕಲಾವಾಹನಂ, ಕಲಾತತ್ವಾದಿ ವಾಸ ಪೂಜೆ, ಕಲಾಹೋಮ, ಕಲಶಾಭಿಷೇಕ ಮಹಾಪೂಜೆ ನಡೆಯಲಿದೆ. ಇದೇ ದಿನ ಮಧ್ಯಾಹ್ನ ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ ಎಂದು ತಿಳಿಸಿದರು.

    ಡಿ.೪ ರಂದು ದತ್ತಪೀಠದಲ್ಲಿ ದತ್ತಾತ್ರೇಯ ಜಯಂತಿ ಅಂಗವಾಗಿ ದಶಸಹಸ್ರ ಸಂಖ್ಯೆಯಲ್ಲಿ ರುದ್ರಾಹೋಮ, ಶ್ರೀ ದತ್ತಾತ್ರೇಯ ಮಹಾಮಂತ್ರ, ಮಹಾಯಾಗ, ಕಲಶಾಭಿಷೇಕ, ಮಹಾಪೂಜೆ, ತಂತ್ರಿಗಳಿಂದ ಆಶೀರ್ವಚನ, ಪ್ರಸಾದ ವಿನಿಯೋಗ ಹಾಗೂ ದತ್ತಜಯಂತಿ ಆಚರಣೆ ಬಹಳ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದರು.

    ಈ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ದತ್ತಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ ಅವರು, ದತ್ತಜಯಂತಿ ಆಚರಣೆಗೆ ಜಿಲ್ಲಾಡಳಿತ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ವಿನಂತಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಜಿಲ್ಲಾ ಕಾರ್ಯದರ್ಶಿ ರಂಗನಾಥ್, ಮುಖಂಡರಾದ ಮಹಿಪಾಲ್, ಆರ್.ಡಿ ಮಹೇಂದ್ರ, ಯೋಗೀಶ್ ರಾಜ್ ಅರಸ್, ಶ್ಯಾಮ್ ವಿ ಗೌಡ ಉಪಸ್ಥಿತರಿದ್ದರು.

    Datta Jayanti celebrations from Nov. 26 to Dec. 4

  • ಚಿಕ್ಕಮಗಳೂರು ಮೆಡಿಕಲ್ ಕಾಲಾಜು-ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಹತ್ತಾರು ಕುಂದುಕೊರತೆ

    ಚಿಕ್ಕಮಗಳೂರು ಮೆಡಿಕಲ್ ಕಾಲಾಜು-ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಹತ್ತಾರು ಕುಂದುಕೊರತೆ

    ಚಿಕ್ಕಮಗಳೂರು:  ಚಿಕ್ಕಮಗಳೂರು ಮೆಡಿಕಲ್ ಕಾಲಾಜು ಮತ್ತು ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಹತ್ತಾರು ಕುಂದುಕೊರತೆಗಳಿದ್ದು, ಈ ಬಗ್ಗೆ ಸರ್ಕಾರಕ್ಕೆ ಒತ್ತಡ ತಂದು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

    ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದ್ದಲ್ಲದೆ, ವಿದ್ಯಾರ್ಥಿಗಳಿಂದ ಅಹವಾಲು ಆಲಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿ ಮೊನ್ನೆ ದೇವೀರಮ್ಮನವರ ಬೆಟ್ಟ ಹತ್ತುವಾಗ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಕೆಲವು ಪೋಷಕರು ನಮ್ಮನ್ನು ಭೇಟಿಯಾಗಿದ್ದರು ಆ ವೇಳೆ ಕಾಲೇಜು ಹಾಸ್ಟೆಲ್‌ನಲ್ಲಿ ಸಮಸ್ಯೆ ಇದೆ ಎಂದು ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜು ಮತ್ತು ಹಾಸ್ಟೆಲ್‌ಗೆ ಭೇಟಿ ನೀಡಿದ್ದೇನೆ ಎಂದು ತಿಳಿಸಿದರು

    ಕಾಲೇಜಿನಲ್ಲಿ ಶೌಚಾಲಯದಲ್ಲಿ ನೀರಿನ ವ್ಯವಸ್ಥೆಯಿಲ್ಲ. ಬಕೆಟ್‌ನಲ್ಲಿ ನೀರು ಹಿಡಿದು ಹೋಗಬೇಕಾದ ಸ್ಥಿತಿ ಇದೆ. ಯಾವುದೇ ಸಿಂಕ್‌ಗಳಲ್ಲೂ ನೀರು ಬರುತ್ತಿಲ್ಲ. ಕೆಟ್ಟ ವಾಸನೆ ಬರುತ್ತಿದೆ. ಇದೆಲ್ಲವೂ ಮೆಡಿಕಲ್ ಕಾಲೇಜಿಗೆ ಗೌರವ ತರುವಂತಹದ್ದಲ್ಲ. ಅಲ್ಲದೆ ಎಲ್ಲ ವಿಷಯಗಳಿಗೂ ಉಪನ್ಯಾಸಕರುಗಳಿಲ್ಲ, ಸರಿಯಾದ ಸಿಬ್ಬಂದಿ ಇಲ್ಲ ಎನ್ನುವ ದೂರುಗಳನ್ನು ವಿದ್ಯಾರ್ಥಿಗಳು ಹೇಳಿದ್ದಾರೆ ಎಂದರು.

    ಹಾಸ್ಟೆಲ್‌ನಲ್ಲಿ ಪ್ರಮುಖವಾಗಿ ವಿದ್ಯುತ್ ಸಮಸ್ಯೆ ಇದೆ. ಆಗಾಗ ವಿದ್ಯುತ್ ಕಡಿತ ಆಗುತ್ತಿರುತ್ತದೆ. ವೋಲ್ಟೇಜ್ ಸಮಸ್ಯೆ ಇದೆ. ಜನರೇಟರ್ ಆಟೋಮ್ಯಾಟಿಕ್ ಚಾಲನೆ ಆಗುವುದಿಲ್ಲ. ಕೆಲವೊಮ್ಮೆ ಇಡೀ ದಿನ ವಿದ್ಯುತ್ ಇರುವುದಿಲ್ಲ ಇದೆಲ್ಲವೂ ಅಮಾನವೀಯ ಎಂದರಲ್ಲದೆ, ಹೈಸ್ಪೀಡ್ ಇಂಟರ್‌ನೆಟ್ ಸಮಸ್ಯೆ ಇದೆ ಎನ್ನುವ ದೂರುಗಳಿವೆ ಎಂದರು.

    ಕಸದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಹಾಸ್ಟೆಲ್ ಊಟ-ತಿಂಡಿ ಗುಣಮಟ್ಟ ಮತ್ತು ಅಗತ್ಯದಷ್ಟು ಪೂರೈಕೆಯಲ್ಲಿ ಕೊರತೆ ಇದೆ. ಶುಚಿತ್ವದ ಕೊರತೆ ಇದೆ. ಜೇನು ಹುಳುಗಳ ಕೊರತೆ ಇದೆ. ಕರ್ಟನ್ ರಾಡ್ ಒದಗಿಸಿಲ್ಲ. ಏರ್ ಕಂಡೀಷನ್ ವಿದ್ಯುತ್ ಸಮಸ್ಯೆಯಿಂದಾಗಿ ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವ ದೂರುಗಳಿವೆ ಎಂದು ತಿಳಿಸಿದರು.

    ಕುಡಿಯುವ ನೀರಿನ ಸಮಸ್ಯೆ ಇದೆ ಹಿಂದೆ ಅಮೃತ್ ಯೋಜನೆಯಲ್ಲಿ ಮೆಡಿಕಲ್ ಕಾಲೇಜಿಗೂ ನೀರು ಒದಗಿಸಬೇಕೆಂದು ಯೋಜನೆಯಲ್ಲಿ ಸೇರಿಸಲಾಗಿತ್ತು. ಅದು ಕಾರ್ಯಗತಕ್ಕೆ ಬಂದಿಲ್ಲ ಎಂದರು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಸಾರಿಗೆ ವ್ಯವಸ್ಥೆಯು ಸಮರ್ಪಕವಾಗಿಲ್ಲದೆ ತೊಂದರೆ ಆಗಿದೆ. ತಕ್ಷಣಕ್ಕೆ ಊಟ, ಉಪಹಾರ ಬೇಕೆಂದರೆ ಅಗತ್ಯ ಕಾಂಡಿಮೆಂಟ್ಸ್ ನಂತರ ವ್ಯವಸ್ಥೆ ಇಲ್ಲ. ಇದೆಲ್ಲವನ್ನೂ ದಾಖಲಿಸಿಕೊಂಡಿದ್ದೇವೆ ಎಂದರು.

    ನಿಯಮಗಳ ಪ್ರಕಾರ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಇಷ್ಟರವೇಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಅದಕ್ಕೆ ಸಮಸ್ಯೆ ಏನು ಎನ್ನುವುದನ್ನು ಪರಿಶೀಲಿಸಿ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು. ೬೩೮ ಕೋಟಿ ಖರ್ಚು ಮಾಡಿ ಕೇಂದ್ರ ಮತ್ತು ರಾಜ್ಯದ ಸಹಯೋಗದಲ್ಲಿ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣವಾಗುತ್ತಿದೆ. ೨೦೧೨ರಲ್ಲಿ ನಾವು ಮಂತ್ರಿಯಾಗಿದ್ದಾಗಲೇ ಇದಕ್ಕೆ ಮಂಜೂರಾತಿ ಕೊಡಿಸಿದ್ದೆ. ಸರ್ಕಾರ ಬದಲಾದ ನಂತರ ಅದನ್ನು ರದ್ದು ಪಡಿಸಲಾಗಿತ್ತು.

    ನಂತರ ಮತ್ತೆ ನಮ್ಮ ಸರ್ಕಾರ ಬಂದಾಗ ಕೇಂದ್ರ ಹಾಗೂ ರಾಜ್ಯದ ಸಹಯೋಗದೊಂದಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದ್ದೇವೆ. ವರ್ಷಕ್ಕೆ ೧೫೦ ಮಂದಿ ಪ್ರವೇಶ ಪಡೆಯುತ್ತಿದ್ದಾರೆ. ಅವರು ಕನಸು ಕಟ್ಟಿಕೊಂಡು ಬಂದಿರುತ್ತಾರೆ. ಅವರಿಗೆ ಐಶಾರಾಮಿ ಸೌಲಭ್ಯ ಇಲ್ಲವಾದರೂ ಅವರ ವಿದ್ಯಾಭ್ಯಾಸಕ್ಕೆ ಒಳ್ಳೆಯ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ ಇದೆ.

    ಕ್ರೀಡಾ ವ್ಯವಸ್ಥೆ ಇಲ್ಲ ಎನ್ನುವ ದೂರು ಸಹ ವಿದ್ಯಾರ್ಥಿಗಳಿಂದ ಬಂದಿದೆ. ಜಾಗವನ್ನು ಮೀಸಲಿಡಲಾಗಿದೆ. ಹಾಸ್ಟೆಲ್ ನಿರ್ಮಾಣದ ವೇಳೆಯೇ ಅದರ ಕಡೆಗೂ ಗಮನ ಕೊಡಬೇಕಿತ್ತು. ಉಳಿದಂತೆ ಎಂಯುಎಸ್‌ಎಸ್‌ಆರ್ ಸ್ಟೇಷನ್‌ಗೆ ಜಾಗ ಮಂಜೂರಾಗಿದೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರೆ ಇಂಧನ ಸಚಿವರಿದ್ದಾರೆ. ಅವರಿಗೆ ತಕ್ಷಣ ಇಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಿದರೆ ಕಾಲೇಜಿಗೂ ಅನುಕೂಲ. ಜೊತೆಗೆ ಪಕ್ಕದಲ್ಲಿರುವ ಕೈಗಾರಿಕಾ ಕೇಂದ್ರ ಮತ್ತು ಗ್ರಾಮಗಳಿಗೂ ಅನುಕೂಲವಾಗುತದೆ ಈ ಬಗ್ಗೆ ಸಚಿವರಲ್ಲಿ ಆಗ್ರಹವನ್ನು ಮಾಡುತ್ತೇನೆ ಎಂದರು.

    ಇದಲ್ಲದೆ ಯೂರಾಲಜಿ, ಕಾರ್ಡಿಯಾಲಜಿ ಬೋಧನೆಗೆ ಎಂಎಸ್ ಆಗಿರುವ ಸಿಬ್ಬಂದಿ ಬೇಕು ಅದನ್ನು ಒದಗಿಸಬೇಕು. ಹಾಸ್ಟೆಲ್ ಬ್ಲಾಕ್‌ನಲ್ಲಿ ಮಿನಿ ಗ್ರಂಥಾಲಯ ತೆರೆಯಬೇಕು. ಸ್ವಚ್ಛತೆಗೆ ಇನ್ನಷ್ಟು ಗಮನ ಕೊಡಬೇಕು ಎನ್ನುವ ಆಗ್ರಹ ವಿದ್ಯಾರ್ಥಿಗಳದ್ದಾಗಿದೆ ಎಂದರು. ಎರಡು ಬಾರಿ ವೈದ್ಯಕೀಯ ಶಿಕ್ಷಣ ಸಚಿವರು ಇಲ್ಲಗೆ ಭೇಟಿ ನೀಡಿದರೂ ಸಮಸ್ಯೆಗಳು ಹಾಗೇ ಉಳಿದಿವೆ ಇದರ ಬಗ್ಗೆ ಗಮನಹರಿಸಬೇಕು ಎಂದು ಸರ್ಕಾರದ ಗಮನ ಸೆಳೆಯುತ್ತೇವೆ ಎಂದರು.

    ಈ ವೇಳೆ ನಗರಸಭೆ ಉಪಾಧ್ಯಕ್ಷೆ ಲಲಿತಾ ರಾಜಾನಾಯ್ಕ್, ಮುಖಂಡರುಗಳಾದ ಜಸಂತ ಅನಿಲ್ ಕುಮಾರ್, ಚೈತ್ರಗೌಡ, ಈಶ್ವರಳ್ಳಿ ಮಹೇಶ್, ಪುಷ್ಪರಾಜ್, ಜೀವನ್ ರಂಗನಾಥ್, ಕುಮಾರ್ ಇತರರು ಇದ್ದರು.

    Dozens of grievances at Chikmagalur Medical College-Student Hostel

  • ಸಹಕಾರ ಚಳವಳಿ ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಅಗತ್ಯ

    ಸಹಕಾರ ಚಳವಳಿ ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಅಗತ್ಯ

    ಬೆಂಗಳೂರು: ಸಹಕಾರ ಚಳವಳಿ ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಅಗತ್ಯವಿದ್ದು, ಜವಾಹರಲಾಲ್ ನೆಹರೂ ಅವರ ಜಯಂತಿ ದಿನವೇ 72ನೇ ಸಹಕಾರಿ ಸಪ್ತಾಹದ ಉದ್ಘಾಟನೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

    ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಡೆದ 72ನೇ ಸಹಕಾರ ಸಪ್ತಾಹ ಆಚರಣೆಯ ಸಿದ್ಧತಾ ಸಭೆಯ ಅಧ್ಯಕ್ಷ ಕತೆ ವಹಿಸಿ, ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ  ರಾಜ್ಯ ಮಟ್ಟದ 72 ನೇ ಸಪ್ತಾಹದ ಉದ್ಘಾಟನೆಯನ್ನು ನೆಹರೂ ಜಯಂತಿಯಂದೇ ದಿನಾಂಕ ನವೆಂಬರ್ 14ರಂದು ಮಾಡಲು ನಿರ್ಧರಿಸಿದ್ದೇವೆ.

    ಅರಮನೆ ಮೈದಾನದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಸಪ್ತಾಹ ನಡೆಯಲಿದ್ದು ಇದರ ಉದ್ಘಾಟನೆಯನ್ನು ನಾನು ನೆರವೇರಿಸಲಿದ್ದೇನೆ. ಮಂಗಳೂರು, ರಾಯಚೂರು, ಹಾವೇರಿ, ಹೊಸಪೇಟೆ, ಕೊಪ್ಪಳದಲ್ಲಿ ಸಪ್ತಾಹ ನಡೆಯಲಿದ್ದು ಸಮಾರೋಪ ಸಮಾರಂಭ ನವೆಂಬರ್ 20 ರಂದು ಚಾಮರಾಜನಗರದಲ್ಲಿ ನಡೆಯಲಿದೆ. ನಾನು ಸಪ್ತಾಹದ ಉದ್ಘಾಟನೆಯನ್ನೂ ನೆರವೇರಿಸಿ, ಸಮಾರೋಪದಲ್ಲೂ ಭಾಗವಹಿಸುತ್ತೇನೆ ಎಂದರು.

    “ಸಹಕಾರ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭವೂ ಸಪ್ತಾಹದ ಉದ್ಘಾಟನೆಯ ದಿನವೇ ನಡೆಯಲಿದೆ. ರಾಜ್ಯದ ಎಲ್ಲಾ ಸಹಕಾರಿ ಧುರೀಣರು ನನಗೇ ಜವಾಬ್ದಾರಿ ಕೊಟ್ಟಿದ್ದು ನಾನೇ “ಸಹಕಾರ ರತ್ನ” ಪ್ರಶಸ್ತಿಗೆ ಹೆಸರು ಸೂಚಿಸಲು ಕೋರಿದ್ದಾರೆ. ಸಹಕಾರ ಮಹಾ ಮಂಡಳದ ಅಧ್ಯಕ್ಷರ ಜೊತೆ ಚರ್ಚಿಸಿ ಪ್ರಶಸ್ತಿಗೆ ಉತ್ತಮ ಸಹಕಾರಿಯನ್ನು ಆಯ್ಕೆ ಮಾಡಲಾಗುವುದು ಎಂದರು.

    ಹಾಲಿನ ಡೈರಿಗಳನ್ನು ಹಾಲಿನ ಒಕ್ಕೂಟಗಳ ಅಧೀನದಲ್ಲಿ ಮೊದಲ ಬಾರಿಗೆ ತಂದಿದ್ದು ನಾನೇ. ಹೀಗೆ ತರುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟೆ ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

    ಸಹಕಾರ ರಾಜ್ಯದ ವ್ಯಾಪ್ತಿಗೆ ಬರುವ ವಿಚಾರ. ಕೇಂದ್ರದ ವ್ಯಾಪ್ತಿಗೆ ಬರುವ ವಿಚಾರ ಅಲ್ಲ ಎಂದು ಅಭಿಪ್ರಾಯಪಟ್ಟರು.

    The need to advance the cooperative movement more effectively

  • 5 ಕೋಟಿ ರೂ ವೆಚ್ಚದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣ

    5 ಕೋಟಿ ರೂ ವೆಚ್ಚದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣ

    ಚಿಕ್ಕಮಗಳೂರು: ಉಪ್ಪಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲಾ ಕಟ್ಟಡ ಪೂರ್ಣಗೊಂಡ ನಂತರ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿ ವರೆಗೆ ಉಚಿತ ಶಿಕ್ಷಣ, ಬಿಸಿಯೂಟ ನೀಡಲು ಸರ್ಕಾರದ ಮಟ್ಟದಲ್ಲಿ ಜಾರಿಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹೆಚ್.ಡಿ. ತಮ್ಮಯ್ಯ ಭರವಸೆ ನೀಡಿದರು.

    ಅವರು ಇಂದು ಉಪ್ಪಳ್ಳಿಯ ಹಿರೇಕೊಳಲೆ ರಸ್ತೆ ಎಬಿ ವಾಜಪೇಯಿ ವಸತಿ ಬಡಾವಣೆಯಲ್ಲಿ ಜಿಲ್ಲಾಡಳಿತ, ಜಿ.ಪಂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸುಮಾರು ೫ ಕೋಟಿ ರೂ ವೆಚ್ಚದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

    ದೇಶಭಕ್ತರಾಗಿ ಸಂಸ್ಕಾರಯುತ ಜೀವನ ನಡೆಸಲು ಉತ್ತಮ ಶಿಕ್ಷಣ ಅಗತ್ಯ, ಈ ನಿಟ್ಟಿನಲ್ಲಿ ಎಲ್ಲಾ ವರ್ಗದ ಬಡವರು, ಶೋಷಿತರನ್ನು ಸಮಾಜದ ಮುನ್ನಲೆಗೆ ತರಲು ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು.

    ಅಲ್ಪಸಂಖ್ಯಾತರ ಮಕ್ಕಳು ಶಾಲೆ ತೊರೆದ ಸಂದರ್ಭದಲ್ಲಿ ಮರಳಿ ಬಾ ಶಾಲೆಗೆ ಯೋಜನೆಯನ್ನು ಜಾರಿಗೆ ತಂದು ಶಿಕ್ಷಣ ಕೊಡಬೇಕೆಂಬ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿಂತನೆ ನಡೆಸಿದ್ದರು ಎಂದು ತಿಳಿಸಿದರು.

    ೬ನೇ ತರಗತಿಯಿಂದ ೧೦ನೇ ತರಗತಿವರೆಗೆ ಆಂಗ್ಲ ಮಾದ್ಯಮ ಶಾಲೆಯಲ್ಲಿ ಸುಮಾರು ೩೦೦ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದು ೨೦೦ ಶಾಲೆಗಳಿಗೆ ಮಂಜೂರಾತಿ ನೀಡಿದ್ದು, ಇದರ ಭಾಗವಾಗಿ ನಗರದ ಬಸವನಹಳ್ಳಿಯಲ್ಲಿ ಶಾಲೆ ನಡೆಸಲಾಗುತ್ತಿದೆ ಎಂದರು.

    ಈ ದೇಶದಲ್ಲಿ ಜನಿಸಿದ ಮುಸ್ಲಿಂ, ಕ್ರೈಸ್ತ, ಬೌದ್ಧ, ಪಾದ್ರಿ, ಜೈನ, ಸಿಖ್ ಮುಂತಾದ ಈ ಸಮುದಾಯದವರೆಲ್ಲ ಅಲ್ಪಸಂಖ್ಯಾತರೇ ಆಗಿದ್ದು, ಇವರ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಸರ್ಕಾರ ತೆಗೆದುಕೊಂಡ ಮಹತ್ವದ ನಿರ್ಧಾರ ಇದು ಎಂದು ತಿಳಿಸಿದರು.

    ಈ ಶಾಲಾ ಕಟ್ಟಡಕ್ಕೆ ನಿವೇಶನ ಗುರ್ತಿಸುವ ಸಂದರ್ಭದಲ್ಲಿ ಇಂದಾವರ ಗ್ರಾಮದಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶದಲ್ಲಿ ಈ ಶಾಲಾ ಕಟ್ಟಡ ನಿರ್ಮಾಣ ಮಾಡಬೇಕೆಂದು ನಿರ್ಧರಿಸಲಾಗಿತ್ತು ಎಂದರು.

    ಮಳೆಗಾಲ ಮುಗಿದ ಬಳಿಕ ಉಪ್ಪಳ್ಳಿಯಿಂದ ಒಡೆಯರಪುರದವರೆಗೂ ರಸ್ತೆಯನ್ನು ಡಾಂಬರೀಕರಣಗೊಳಿಸಿ ಪಕ್ಕದ ಬಾಕ್ಸ್ ಚರಂಡಿಯನ್ನು ನಿರ್ಮಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಅಧಿಕಾರ ಸ್ವೀಕರಿಸಿದಂದಿನಿಂದ ಈವರೆಗೆ ಜನಪರ ಆಡಳಿತ ನೀಡುತ್ತಿದ್ದಾರೆ. ಅವರನ್ನು ಅಭಿನಂದಿಸುವುದಾಗಿ ಹೇಳಿದ ಅವರು, ಈ ಶಾಲಾ ಕಟ್ಟಡ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ವಿನಂತಿಸಿದರು.

    ಸದಸ್ಯ ಮುನೀರ್ ಅಹಮದ್ ಮಾತನಾಡಿ, ಈ ಭಾಗದಲ್ಲಿ ‘ನಮ್ಮ ಕ್ಲಿನಿಕ್’ ಉದ್ಘಾಟಿಸಿದ ಶಾಸಕ ತಮ್ಮಯ್ಯ ಅವರು, ಜನರ ಆರೋಗ್ಯಕ್ಕೆ ಪೂರಕವಾದ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ ಅವರು, ಈ ಶಾಲೆ ೬ ರಿಂದ ೧೦ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡುವ ಯೋಜನೆಯನ್ನು ತಂದ ಶಾಸಕರನ್ನು ಅಭಿನಂದಿಸಿದರು.

    ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಲಲಿತಾ ನಾಯ್ಕ್, ಸಿಡಿಎ ಅಧ್ಯಕ್ಷ ನಯಾಜ್ ಅಹಮದ್, ಖಲಂದರ್, ಮಾರ್ಕಂಡಯ್ಯ, ಜಾವಿದ್, ಅನ್ಸರ್, ಸುದೀಪ್, ಗುಣಾವತಿ, ತನೂಜ್ ನಾಯ್ಡ್, ಕುಸುಮ, ಖಲೀಲ್, ರಾಜು, ಸಂಪತ್ ಮತ್ತಿತರರು ಇದ್ದರು.ಮೊದಲಿಗೆ ಯುವರಾಣಿ ಸ್ವಾಗತಿಸಿದರು.

    Maulana Azad Model School constructed at a cost of Rs 5 crore

  • 27.5 ಕೋಟಿ ರೂ.ವೆಚ್ಚದಲ್ಲಿ ನಗರದ ರಸ್ತೆಗಳ ಅಭಿವೃದ್ಧಿ

    27.5 ಕೋಟಿ ರೂ.ವೆಚ್ಚದಲ್ಲಿ ನಗರದ ರಸ್ತೆಗಳ ಅಭಿವೃದ್ಧಿ

    ಚಿಕ್ಕಮಗಳೂರು: ಮಳೆಯಿಂದಾಗಿ ಹದಗೆಟ್ಟಿರುವ ನಗರದ ರಸ್ತೆಗಳ ಅಭಿವೃದ್ಧಿಗೆ ೨೭.೫ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರದಿಂದ ಒದಗಿಸಲಾಗಿದ್ದು, ಮಳೆ ನಿಂತ ಕೂಡಲೇ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.

    ನಗರದ ಇಂಡಿಯನ್ ಐಸ್‌ಕ್ರೀಂ ಪಾರ್ಲರ್, ಮಲ್ಲಂದೂರು ರಸ್ತೆ, ವಿಜಯಪುರ ಹಾಗೂ ಹನುಮಂತಪ್ಪ ವೃತ್ತದಲ್ಲಿ ಇಂದು ಬೆಳಿಗ್ಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಹಾಗೂ ಈ ವರ್ಷ ಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ ರಸ್ತೆಗಳು ಹೆಚ್ಚಾಗಿ ಗುಂಡಿ ಬಿದ್ದಿವೆ. ಜೊತೆಗೆ ಯು.ಜಿ.ಡಿ. ಹಾಗೂ ಅಮೃತ್ ಯೋಜನೆಯ ಕಾಮಗಾರಿಗಳಿಂದ ಕೂಡ ರಸ್ತೆಗಳು ಹಾನಿಗೊಳಗಾಗಿವೆ ಎಂಬ ದೂರುಗಳೂ ಕೇಳಿ ಬಂದಿವೆ ಎಂದರು.

    ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಸಚಿವರು ಹಾಗೂ ಪೌರಾಡಳಿತ ಸಚಿವರನ್ನು ತಾವು ಭೇಟಿ ಮಾಡಿ ಕೋರಿಕೆ ಸಲ್ಲಿಸಿದ ಮೇರೆಗೆ ನಗರಸಭೆಗೆ ವಿಶೇಷ ಅನುದಾನವನ್ನು ಒದಗಿಸಿದ್ದಾರೆ. ಎಸ್‌ಎಫ್‌ಸಿ ಯೋಜನೆಯಡಿ ೧೦ ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿ ನಿರ್ವಹಿಸಲು ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ವಿಶೇಷ ಅನುದಾನದಲ್ಲಿ ಸಹ ೧೨.೫ ಕೋಟಿ ರೂ.ಗಳನ್ನು ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಅಲ್ಪಸಂಖ್ಯಾತರ ಇಲಾಖೆಯಿಂದ ೫ ಕೋಟಿ ರೂ.ಗಳನ್ನು ಒದಗಿಸಿದ್ದು, ಒಟ್ಟು ೨೭.೫ ಕೋಟಿ ರೂ. ಲಭ್ಯವಿದ್ದು, ಈ ಮೊತ್ತವನ್ನು ವಿನಿಯೋಗಿಸಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಸತತ ಮಳೆಯಿಂದಾಗಿ ರಸ್ತೆಗಳ ಹಾನಿ ಮತ್ತು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ ಅವರು, ಇದೇ ರೀತಿ ಪ್ರತೀ ತಿಂಗಳಿಗೊಮ್ಮೆ ಬಡಾವಣೆಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

    ಪಂಚ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿರುವ ಬಗ್ಗೆ ಗಮನ ಹರಿಸಲು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದಿಂದ ಸ್ಪಂದಿಸುವ ಕಾರ್ಯವೂ ಇದರ ಜೊತೆಯಲ್ಲಿ ನಡೆಯಲಿದೆ. ಇದರ ಜೊತೆಗೆ ಪರಿಸರದ ಬಗ್ಗೆ ಹಾಗೂ ಸ್ವಚ್ಛತೆ ಬಗ್ಗೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ರೂಪಿಸಬೇಕೆಂಬ ಬಗ್ಗೆ ಅರಿವು ಮೂಡಿಸಲು ಸೈಕಲ್‌ನಲ್ಲಿ ನಗರ ಪ್ರದಕ್ಷಿಣೆ ಕೈಗೊಂಡಿರುವುದಾಗಿ ತಿಳಿಸಿದರು.

    ನಗರದ ಇಂಡಿಯನ್ ಐಸ್‌ಕ್ರೀಂ ಪಾರ್ಲರ್ ಬಳಿ ಸೈಕಲ್‌ನಲ್ಲಿ ನಗರ ಪ್ರದಕ್ಷಿಣೆ ಕೈಗೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪರಿಸರವಾದಿ ಸ.ಗಿರಿಜಾಶಂಕರ ಮಾತನಾಡಿ, `ಸೈಕಲ್ ತುಳಿ, ಪರಿಸರ ತಿಳಿ’ ಕಾರ್ಯಕ್ರಮದಿಂದ ಗುಂಡಿಮಯ ರಸ್ತೆಗಳು, ಚರಂಡಿಗಳು ಸೇರಿದಂತೆ ವಿವಿಧ ಸಮಸ್ಯೆಗಳು ಗೋಚರವಾಗುತ್ತವೆ. ಈ ಪರಿಕಲ್ಪನೆ ಉತ್ತಮವಾಗಿದೆ ಎಂದು ಶ್ಲಾಘಿಸಿದರು.

    ಮಧುವನ ಬಡಾವಣೆಯಲ್ಲಿ ಎರಡು ಉದ್ಯಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯಬೇಕಿದೆ. ಈಗಾಗಲೇ ಸೌರ ದೀಪಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಪ್ರತೀ ವರ್ಷ ಕಳೆ ಕೀಳುವ ಕೆಲಸ ಬಡಾವಣೆಯ ನಿವಾಸಿಗಳಿಂದಲೇ ನಡೆಯುತ್ತಿದೆ. ಇಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ದೊಡ್ಡ ಕಾಲುವೆಯಿಂದ ಕಳೆಯನ್ನು ತೆರವುಗೊಳಿಸದೆ ಅದರಿಂದಾಗಿಯೇ ಬಹಳಷ್ಟು ಕಾಯಿಲೆಗಳಿಗೆ, ಸೊಳ್ಳೆ ಕಾಟಕ್ಕೆ ಕಾರಣವಾಗುತ್ತಿದೆ. ಕಸ ಎಸೆಯಲು ಕೂಡ ಬಳಕೆಯಾಗುತ್ತಿದೆ.

    ಸಣ್ಣ ನೀರಾವರಿ ಇಲಾಖೆ ಈ ಕಾಲುವೆಯನ್ನು ಸುವ್ಯವಸ್ಥಿತಗೊಳಿಸಲು ಕ್ರಮ ಕೈಗೊಳ್ಳಬೇಕಿದೆ. ಈ ಬಡಾವಣೆಯಲ್ಲಿ ಆಗಿಂದಾಗ್ಗೆ ವಿದ್ಯುತ್ ನಿಲುಗಡೆಯಾಗುತ್ತಿದೆ. ಮೆಸ್ಕಾಂ ಕಚೇರಿಗೆ ಕರೆ ಮಾಡಿದರೆ ಅವರು ಕಾರಣವನ್ನೇ ನೀಡುತ್ತಿಲ್ಲ. ಮೆಸ್ಕಾಂನವರು ವರ್ಷಕ್ಕೆ ಎರಡು ಬಾರಿಯಾದರೂ ಗ್ರಾಹಕರೊಂದಿಗೆ ಮುಖಾಮುಖಿ ಕಾರ್ಯಕ್ರಮ ನಡೆಸುವುದು ಸೂಕ್ತ. ಆಗ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಮೆಸ್ಕಾಂ ಗ್ರಾಹಕ ಸ್ನೇಹಿಯಾಗಿ ಸ್ಪಂದಿಸುತ್ತಿಲ್ಲ. ಬಿಲ್ ಪಾವತಿಸದಿದ್ದರೆ ಸಂಪರ್ಕ ಸ್ಥಗಿತಗೊಳಿಸಲು ಮಾತ್ರ ಬರುತ್ತಿದ್ದಾರೆ ಎಂದು ಆರೋಪಿಸಿದರು.

    ಸಾರ್ವಜನಿಕ ಇಲಾಖೆಗಳಲ್ಲಿ ಜನರಿಗೆ ಸ್ಪಂದಿಸುವ ಕಾರ್ಯ ನಡೆಯಬೇಕಿದೆ. ನಗರಸಭೆಯಿಂದ ವಾರಕ್ಕೆರಡು ಬಾರಿಯಾದರೂ ಕಸ ಗುಡಿಸುವ ಕಾರ್ಯ ನಡೆಯಬೇಕು. ಚರಂಡಿಗಳನ್ನು ಸುಸ್ಥಿತಿಗೊಳಿಸುವ ಕೆಲಸ ಮಾಡಬೇಕಿದೆ. ಪೊಲೀಸ್ ಗಸ್ತು ವ್ಯವಸ್ಥೆ ಕಲ್ಪಿಸಬೇಕು ಎಂದು ಗಮನ ಸೆಳೆದರು.

    ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಮಧುವನ ಬಡಾವಣೆಯಲ್ಲಿ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಚರಂಡಿಗಳನ್ನು ಸುಸ್ಥಿತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಗರಸಭೆ ಉಪಾಧ್ಯಕ್ಷೆ ಲಲಿತಾ ರವಿ ನಾಯ್ಕ, ನಗರಸಭೆ ಮಾಜಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸದಸ್ಯರಾದ ಶಾದಾಬ್ ಆಲಂಖಾನ್, ಲಕ್ಷ್ಮಣ್, ಸಿಡಿಎ ಅಧ್ಯಕ್ಷ ನಯಾಜ್ ಅಹಮ್ಮದ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ತಾಲೂಕು ಸಮಿತಿ ಅಧ್ಯಕ್ಷ ಮಲ್ಲೇಶ್‌ಸ್ವಾಮಿ, ಸಿಡಿಎ ಆಯುಕ್ತೆ ನಾಗರತ್ನ, ತಹಸೀಲ್ದಾರ್ ರೇಷ್ಮಾಶೆಟ್ಟಿ, ಪೌರಾಯುಕ್ತ ಬಿ.ಸಿ.ಬಸವರಾಜು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

    Development of city roads at a cost of Rs. 27.5 crore

  • ಅ.29ಕ್ಕೆ ಮನೆ ಮನಗಳಲ್ಲಿ ಕನ್ನಡ ಅಭಿಯಾನ

    ಅ.29ಕ್ಕೆ ಮನೆ ಮನಗಳಲ್ಲಿ ಕನ್ನಡ ಅಭಿಯಾನ

    ಚಿಕ್ಕಮಗಳೂರು: ರಾಜ್ಯದಲ್ಲಿ ಪ್ರಪ್ರಥಮ ಭಾರಿಗೆ ಮನೆ ಮನಗಳಲ್ಲಿ ಕನ್ನಡ ಅಭಿಯಾನವನ್ನು ಅ.೨೯ ರಂದು ಬುಧವಾರ ಚಿಕ್ಕಮಗಳೂರು ನಗರದಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ಐಸಿರಿ ಫೌಂಡೇಶನ್ ಅಧ್ಯಕ್ಷ ಹಾಗೂ ಕ.ಸಾ.ಪ ತಾಲ್ಲೂಕು ಯುವಘಟಕದ ಅಧ್ಯಕ್ಷ ರೋಹನ್ ಭಾರ್ಗವಪುರಿ ತಿಳಿಸಿದರು.

    ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಐಸಿರಿ ಫೌಂಡೇಶನ್ ಮತ್ತು ಕ.ಸಾ.ಪ ತಾಲ್ಲೂಕು ಯುವ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ೬೯ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮನೆ ಮನಗಳಲ್ಲಿ ಕನ್ನಡ ಅಭಿಯಾನ ಚಾಲನೆಗೊಳ್ಳಲಿದೆ ಎಂದರು.

    ನಟ ಪುನೀತ್ ರಾಜ್ ಕುಮಾರವರ ಪುಣ್ಯಸ್ಮರಣೆಯ ದಿನದಂದು ಅಭಿಯಾನಕ್ಕೆ ಚಾಲನೆ ನೀಡಲಾಗುವುದು ನಗರದ ನಾಗರೀಕರು ತಮ್ಮ ಕನ್ನಡಾಭಿಮಾನವನ್ನು ತಮ್ಮ ಮನೆಮನೆಗಳಲ್ಲಿ ಕುಟುಂಬ ಸಮೇತರಾಗಿ ಕನ್ನಡ ಧ್ವಜ ಹಾರಿಸಿ ಫೋಟೋ ಅಥವಾ ವೀಡೀಯೋವನ್ನು ಐಸಿರಿ ಕಛೇರಿಯ ವಾಟ್ಸಪ್ ಸಂಖ್ಯೆ:೭೯೭೫೪೦೮೧೬೨ ಕ್ಕೆ ಸ್ವ-ವಿವರ ಹಾಗೂ ಸ್ಥಳದೊಂದಿಗೆ ಕಳಿಸಿಕೊಡುವಂತೆ ಮನವಿ ಮಾಡಿದರು .

    ಐಸಿರಿ ಫೌಂಡೇಶನ್ ಸಂಸ್ಥೆಯು ಭರವಸೆ ಮತ್ತು ಸುಧಾರಣೆ ಕಾರ್ಯದ ಜವಾಬ್ದಾರಿಯನ್ನು ತನ್ನ ಹೆಗಲಿಗೇರಿಸಿಕೊಂಡಿದ್ದು ವಿವಿಧ ಆಯಾಮಗಳಲ್ಲಿ ಈಗಾಗಲೆ ಸಮಾಜಮುಖಿ ಕಾರ್ಯಗಳಲ್ಲಿ ದಿಟ್ಟ ಹೆಜ್ಜೆಗಳನಿಟ್ಟು ಯೋಜನೆಯತ್ತ ಮುನ್ನೆಡೆಸುತ್ತಿದೆ ಐಸಿರಿ ಪರ್ಸ್ಪೆಕ್ಟಿವ್ ಎಂಬ ಆಯಾಮದಡಿಯಲ್ಲಿ ಜ್ಞಾನ ಶಿಬಿರ ನಡೆಸಿಕೊಂಡು ಬರುತ್ತಿದೆ ಎಂದರು.

    ಐಸಿರಿ ಸಸ್ಟೇನೆಬಿಲಿಟಿ ಎಂಬ ಆಯಾಮದಡಿಯಲ್ಲಿ ಹಸಿರು ಸಮರ್ಥನೆಯ ಭವಿಷ್ಯಕ್ಕೆ ಮತ್ತು ಐಸಿರಿ ಇಂಡಿಯಾ ಆಯಾಮದಡಿಯಲ್ಲಿ ನಾಗರೀಕ ನಿರ್ಮಾಣ ಎಂಬ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.

    ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಸುತ್ತಿರುವ ಮನೆಮನಗಳಲ್ಲಿ ಕನ್ನಡ ಅಭಿಯಾನ ಕಾರ್ಯಕ್ರಮವನ್ನು ಸರ್ವರೂ ಆಚರಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕ.ಸಾ.ಪ ತಾಲ್ಲೂಕು ಯುವಘಟಕದ ಮುಖಂಡರುಗಳಾದ ವೀಣಾ ಮಲ್ಲಿಕಾರ್ಜುನ್ , ವಿಜಯಲಕ್ಷ್ಮೀ, ರೂಪ ನಾಯಕ್ , ಸಚಿನ್ ಸಿಂಗ್ ಉಪಸ್ಥಿತರಿದ್ದರು.

    Kannada campaign in homes on October 29th

  • ಬ್ಯಾಂಕ್‌ನಿಂದ ಸೇವಾ ನ್ಯೂನತೆಗೆ ಬಡ್ಡಿ ಸಹಿತ ಹಣ ನೀಡಲು ಆದೇಶ

    ಬ್ಯಾಂಕ್‌ನಿಂದ ಸೇವಾ ನ್ಯೂನತೆಗೆ ಬಡ್ಡಿ ಸಹಿತ ಹಣ ನೀಡಲು ಆದೇಶ

    ಚಿಕ್ಕಮಗಳೂರು:  ಗ್ರಾಹಕನ ಖಾತೆಯಿಂದ ಟಿಡಿಎಸ್ ಹಣ ಕಡಿತಗೊಳಿಸಿದ ವ್ಯವಹಾರದಲ್ಲಿ ಸೇವಾ ನ್ಯೂನತೆ ಎಸಗಿದ ಆರೋಪದಲ್ಲಿ ಬ್ಯಾಂಕ್ ವಿರುದ್ಧ ತೀರ್ಪು ನೀಡಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕಡಿತಗೊಳಿಸಿದ ಮೊತ್ತವನ್ನು ಬಡ್ಡಿ ಸಹಿತ ಹಿಂತಿರುಗಿಸುವಂತೆ ಹಾಗೂ ಪರಿಹಾರ, ಖರ್ಚು-ವೆಚ್ಚವನ್ನು ನೀಡುವಂತೆ ಆದೇಶ ನೀಡಿದೆ.

    ನಗರದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಕಲ್ಯಾಣನಗರದ ವಿವೇಕಾನಂದ ಕಾಮತ್ ನಗರದ ಬ್ಯಾಂಕ್ ಆಫ್ ಬರೋಡದಲ್ಲಿ ಓ.ಡಿ. ಖಾತೆ ಹಾಗೂ ಉಳಿತಾಯ ಖಾತೆ ಹೊಂದಿದ್ದಾರೆ. ೨೦೨೦ರ ಆಗಸ್ಟ್‌ನಲ್ಲಿ ಟಿಡಿಎಸ್ ಹಣವೆಂದು ವಿವೇಕಾನಂದ ಕಾಮತ್ ಅವರ ಓ.ಡಿ.ಖಾತೆಯಿಂದ ಒಮ್ಮೆ ರೂ. ೩೦,೦೦೦, ಮತ್ತೊಮ್ಮೆ ೨೦,೦೦೦ ಒಟ್ಟು ೫೦,೦೦೦ ಹಾಗೂ ಉಳಿತಾಯ ಖಾತೆಯಿಂದ ರೂ.೭,೫೦೦ ಅನ್ನು ಕಡಿತಗೊಳಿಸಿದ್ದು, ಈ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಿಲ್ಲವೆನ್ನಲಾಗಿದೆ.

    ಅಲ್ಲದೆ, ಕಡಿತಗೊಳಿಸಿರುವ ಆದಾಯ ತೆರಿಗೆಯನ್ನು ಮರಳಿ ಪಡೆಯಲು ಅನುಕೂಲವಾಗುವಂತೆ ಆದಾಯ ತೆರಿಗೆ ಕಾಯ್ದೆ ಕಲಂ ೧೬(ಎ) ನಮೂನೆಯನ್ನು ಕೂಡ ನೀಡಿಲ್ಲವೆಂದು ಹೇಳಲಾಗಿದೆ. ಈ ಬಗ್ಗೆ ವಿಚಾರಿಸಿದಾಗ ಸೂಕ್ತ ಉತ್ತರವನ್ನು ನೀಡಿರಲಿಲ್ಲ. ಈ ಬಗ್ಗೆ ವಿವೇಕಾನಂದ ಕಾಮತ್ ೨೦೨೪ರ ನವೆಂಬರ್ ೨೧ ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ, ಸೇವಾ ನ್ಯೂನತೆ ಎಸಗಿರುವುದಾಗಿ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಆರೋಪಿಸಿದ್ದರು.

    ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ಇತ್ತೀಚೆಗೆ ತೀರ್ಪು ನೀಡಿದ್ದು, ಟಿಡಿಎಸ್ ಹೆಸರಿನಲ್ಲಿ ಕಡಿತಗೊಳಿಸಿದ ಮೊತ್ತವಾದ ರೂ.೬೮,೮೦೦ ಅನ್ನು ಶೇ.೯ರ ಬಡ್ಡಿ ದರದಲ್ಲಿ ೨೦೨೦ರ ಆಗಸ್ಟ್ ೨೯ ರಿಂದ ಕಾಮತ್ ಅವರಿಗೆ ಪಾವತಿಸುವಂತೆ ಹಾಗೂ ಪರಿಹಾರವಾಗಿ ರೂ.೧೦,೦೦೦ ಹಾಗೂ ಪ್ರಕರಣದ ಖರ್ಚು-ವೆಚ್ಚಕ್ಕಾಗಿ ರೂ.೫೦೦೦ಗಳನ್ನು ನೀಡುವಂತೆ ಆದೇಶ ನೀಡಿದೆ.

    ಅಧ್ಯಕ್ಷರಾದ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ ಮತ್ತು ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಇವರನ್ನು ಒಳಗೊಂಡ ಆಯೋಗವು ಪ್ರಕರಣದ ವಿಚಾರಣೆ ನಡೆಸಿ ಈ ತೀರ್ಪು ನೀಡಿದ್ದು, ಬ್ಯಾಂಕ್‌ನ ಸೇವಾ ನ್ಯೂನತೆಯನ್ನು ಎತ್ತಿ ಹಿಡಿದಿದ್ದಾರೆ. ದೂರುದಾರರ ಪರವಾಗಿ ವಕೀಲರಾದ ಎನ್.ದೇವೇಂದ್ರಕುಮಾರ್ ಜೈನ್ ವಾದ ಮಂಡಿಸಿದ್ದರು.

    Bank ordered to pay money with interest for service deficiency

  • ವಿದ್ಯಾವಂತರು ಹೆಚ್ಚಾಗುತ್ತಿದ್ದರೂ ಸಹಿಷ್ಣುತೆ ಕಡಿಮೆ

    ವಿದ್ಯಾವಂತರು ಹೆಚ್ಚಾಗುತ್ತಿದ್ದರೂ ಸಹಿಷ್ಣುತೆ ಕಡಿಮೆ

    ಚಿಕ್ಕಮಗಳೂರು: ಇಂದಿನ ದಿನಮಾನಗಳಲ್ಲಿ ಜನರ ಮನಸ್ಥಿತಿ ಬದಲಾಗಿದ್ದು, ಸಾಮಾಜಿಕ ಜಾಲತಾಣ ಹೆಚ್ಚು ಹೆಚ್ಚು ಪ್ರಭಾವ ಬೀರುತ್ತಿವೆ. ಸಮಾಜದಲ್ಲಿ ವಿದ್ಯಾವಂತರು ಹೆಚ್ಚಾಗುತ್ತಿದ್ದರೂ ಜನರಲ್ಲಿ ಸಹಿಷ್ಣುತೆ ಕಡಿಮೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ವಿಷಾದ ವ್ಯಕ್ತಪಡಿಸಿದರು

    ನಗರದ ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಹುತಾತ್ಮರ ಸ್ಮಾರಕದ ಆವರಣದಲ್ಲಿ ಇಂದು ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳ ಪ್ರಭಾವದ ನಡುವೆ ಸ್ವಯಂ ತೀರ್ಮಾನಕ್ಕೆ ಬರುವ ಜನರು ಕೇವಲ ೨೦ ಸೆಕೆಂಡ್‌ಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮನೋಭಾವದಿಂದ ಜನರು ಹೊರ ಬರಬೇಕು ಎಂದು ಹೇಳಿದರು.

    ಪ್ರತಿವರ್ಷ ಹುತಾತ್ಮರ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಇದು ಅತ್ಯಂತ ವಿಷಾದದ ಸಂಗತಿ. ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯ ನಿರ್ವಹಣೆಯೇ ವಿಭಿನ್ನವಾಗಿದ್ದು, ಅತ್ಯಂತ ಒತ್ತಡದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ಕಳೆದ ಎರಡೂವರೆ ತಿಂಗಳಲ್ಲಿ ನಡೆದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಬ್ಬಾಚರಣೆಗಳು, ಹಾಗೆಯೇ ದೇವೀರಮ್ಮ ಜಾತ್ರಾ ಮಹೋತ್ಸವದ ಕಳೆದ ಎರಡು ಮೂರು ದಿನಗಳೂ ಸೇರಿದಂತೆ ಸುಮಾರು ೭೫ ದಿನಗಳಲ್ಲಿ ಒಂದು ದಿನವೂ ರಜೆ ಇಲ್ಲದೆ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದರು.

    ದೇವೀರಮ್ಮ ಜಾತ್ರೋತ್ಸವದ ಸಲುವಾಗಿ ಸುಮಾರು ೭೫ ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಬೆಟ್ಟವೇರಿ ಸುರಕ್ಷಿತವಾಗಿ ಅವರ ಮನೆಗಳಿಗೆ ಹಿಂದಿರುಗಿದ್ದಾರೆ. ಅದಕ್ಕೆಲ್ಲ ಸಕಾರಾತ್ಮಕವಾಗಿ ಸ್ಪಂದಿಸಿ ಪೊಲೀಸರು ಕಾರ್ಯ ನಿರ್ವಹಿಸಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ತುಕಡಿ ಅತ್ಯಂತ ಸಮರ್ಪಕವಾಗಿ ಕಾರ್ಯ ನಿರ್ವಹಿಸಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಮಾತನಾಡಿ, ೧೯೫೯ ರ ಅಕ್ಟೋಬರ್ ೨೧ ರಂದು ಗಡಿಯಲ್ಲಿರುವ ಲಡಾಖ್‌ನಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಚೀನಾ ಸೈನಿಕರು ಗಡಿ ಪ್ರವೇಶ ಮಾಡುವ ಪ್ರಯತ್ನದಲ್ಲಿದ್ದಾಗ ಕಡಿಮೆ ಶಸ್ತ್ರಾಸ್ತ್ರ ಹಾಗೂ ಕಡಿಮೆ ಸಂಖ್ಯೆಯಲ್ಲಿದ್ದ ಭಾರತದ ಧೀರ ಪೊಲೀಸರು ಅತ್ಯಂತ ದಿಟ್ಟತನದಿಂದ ಹೋರಾಡಿ ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ಅಂಥವರ ತ್ಯಾಗವನ್ನು ಸ್ಮರಿಸುವ ನಿಟ್ಟಿನಲ್ಲಿ ೧೯೬೦ರ ಅಕ್ಟೋಬರ್ ೨೧ ರಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಅಂದಿನಿಂದ ದೇಶಾದ್ಯಂತ ಪ್ರತೀ ವರ್ಷ ಅಕ್ಟೋಬರ್ ೨೧ ರಂದು ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರತೀ ವರ್ಷ ಹುತಾತ್ಮರಾದ ಪೊಲೀಸರ ಹೆಸರುಗಳನ್ನು ಪ್ರಸ್ತಾಪಿಸಿ ಸ್ಮರಿಸುವುದು ರೂಢಿಯಾಗಿದೆ ಎಂದು ತಿಳಿಸಿದರು.

    ಕಳೆದ ಒಂದು ವರ್ಷದಲ್ಲಿ ದೇಶದ ವಿವಿಧ ರಾಜ್ಯಗಳ ಹಾಗೂ ಕೇಂದ್ರ ಪೊಲೀಸ್ ದಳದ ಒಟ್ಟು ೧೯೧ ಪೊಲೀಸರು ಸೇವೆಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇವರಲ್ಲಿ ಕರ್ನಾಟಕದ ೮ ಧೀರ ಪೊಲೀಸರು ಸೇರಿದ್ದು, ಪೊಲೀಸರ ತ್ಯಾಗ, ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ. ಪೊಲೀಸರು ತಮ್ಮ ಕರ್ತವ್ಯದಲ್ಲಿ ತೊಡಗಿ ಕಾನೂನು ಸುವ್ಯವಸ್ಥೆ, ನಾಗರಿಕ ಆಸ್ತಿ ಪಾಸ್ತಿ ರಕ್ಷಣೆ ಅಪರಾಧ ತಡೆ ಹಾಗೂ ಪತ್ತೆ, ಆಂತರಿಕ ಭದ್ರತೆ ಹೀಗೆ ಹಲವು ಕರ್ತವ್ಯ ಪಾಲನೆಯ ಹಾದಿಯಲ್ಲಿ ಸದಾ ನಿರತರಾಗಿರುತ್ತಾರೆ. ಸಮಾಜದ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವ ಪೊಲೀಸ್ ಹುತಾತ್ಮರನ್ನು ಈ ಸಂದರ್ಭದಲ್ಲಿ ಸ್ಮರಿಸಿ ಅವರ ಕುಟುಂಬಕ್ಕೆ ಧೈರ್ಯ ತುಂಬುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

    ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿಯುತ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ಸಾರ್ವಜನಿಕರ ಆಸ್ತಿ-ಪಾಸ್ತಿ ರಕ್ಷಣೆ ಮಾಡಲು ಅದೇ ಸಾರ್ವಜನಿಕರ ಸಹಕಾರ ಸಹ ಇಲಾಖೆಗೆ ಅತ್ಯಗತ್ಯ. ಪ್ರತಿಯೊಂದು ಹಬ್ಬ-ಹರಿದಿನಗಳಲ್ಲಿ ಸಾರ್ವಜನಿಕರು ಯಾವ ರೀತಿ ಸಂಭ್ರಮದಿಂದ ಹಬ್ಬಾಚರಣೆ ಮಾಡಬೇಕೆಂದು ಯೋಜನೆ ಹಾಕುತ್ತಿದ್ದರೆ, ಪೊಲೀಸರು ಮಾತ್ರ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುತ್ತಾರೆ. ಈ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಯನ್ನು ಹತ್ತಿಕ್ಕುವ ಸಂದರ್ಭದಲ್ಲಿ ಸಹ ಪೊಲೀಸರು ತ್ಯಾಗ ಬಲಿದಾನ ಮಾಡಿರುವುದನ್ನು ಮರೆಯುವಂತಿಲ್ಲ ಎಂದು ಹೇಳಿದರು.

    ಇದೇ ವೇಳೆ ಈ ವರ್ಷ ಕರ್ತವ್ಯದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿ-ಸಿಬ್ಬಂದಿಯ ಪಟ್ಟಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಓದಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಮುಖಂಡರಾದ ಕೆ.ಟಿ.ರಾಧಕೃಷ್ಣ, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸಿ.ಟಿ.ಜಯಕುಮಾರ್, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

    Although the number of educated people is increasing tolerance is decreasing.