ಚಿಕ್ಕಮಗಳೂರು: ಭದ್ರ ಉಪ ಕಣಿವೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ನವೆಂಬರ್ ತಿಂಗಳ ಅಂತ್ಯಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತೇವೆ. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಡಿ.ಕೆ. ಶಿವಕುಮಾರ್ ಸೇರಿದಂತೆ ವಿವಿಧ ಸಚಿವರು ಉಪಸ್ಥಿತರಿರಲಿದ್ದಾರೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈಶ್ವರ ಹಳ್ಳಿ ಹಾಗೂ ಕಳಸಾಪುರ ಕೆರೆಗೆ ಬಾಗಿನ ಅರ್ಪಣೆ ಮಾಡಿ ಮಾತನಾಡಿದ ಅವರು, ಇನ್ನು ಎರಡು ವ?ದ ಒಳಗಾಗಿ ರಣಘಟ್ಟ ಯೋಜನೆ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸುತ್ತೇವೆ. ಇದರೊಂದಿಗೆ ಭದ್ರ ಉಪಕರಣಗಳು ಯೋಜನೆಯ ಮೂರನೇ ಹಂತದ ಕಾಮಗಾರಿ ಪೂರ್ಣಗೊಂಡಲ್ಲಿ ಎಲ್ಲಾ ಕೆರೆಗಳನ್ನು ಪ್ರತಿ ವ? ತುಂಬಿಸಬಹುದು ಎಂದು ಅಭಿಪ್ರಾಯಪಟ್ಟರು.
ಗಾಳಿ, ನೀರು, ಭೂಮಿಯನ್ನು ತಾಯಿಗೆ ಹೋಲಿಸಿ ಪೂಜೆ ಮಾಡುವುದು ಭಾರತದಲ್ಲಿ ಮಾತ್ರ. ಹಿಂದಿನಿಂದಲೂ ನಮ್ಮ ಹಿರಿಯರು ಈ ಸಂಸ್ಕಾರ ಬೆಳೆಸಿಕೊಂಡು ಬಂದಿದ್ದಾರೆ. ಹೀಗಾಗಿಯೇ ಇಂದು ನಾವು ತುಂಬಿದ ಕೆರೆಗಳಿಗೆ ಬಾಗಿನ ಅರ್ಪಣೆ ಮಾಡುತ್ತಿದ್ದೇವೆ. ಇಡೀ ಪ್ರಪಂಚದಲ್ಲಿ ಕೃಷಿಯನ್ನೇ ಅವಲಂಬಿಸಿರುವ ದೇಶ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕೃಷಿ ಎಂದರೆ ರೈತ. ರೈತ ಎಂದರೆ ಕೃಷಿ. ರೈತನೇ ನಮ್ಮ ದೇಶದ ಬೆನ್ನೆಲುಬು. ಹೀಗಾಗಿ ರೈತರ ಶ್ರೇಯೋಭಿವೃದ್ಧಿಗಾಗಿ ಪ್ರತಿಯೊಬ್ಬ ಜನ ಪ್ರತಿನಿಧಿಗಳು ಶ್ರಮಿಸಬೇಕು ಎಂದು ಹೇಳಿದರು.
ಮಳೆ ಬಂದ ಸಂದರ್ಭದಲ್ಲಿ ಕರಗಡ ಯೋಜನೆ ಮೂಲಕ ಈಶ್ವರಹಳ್ಳಿ ಹಾಗೂ ಕಳಸಾಪುರ ಭಾಗದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಈ ಯೋಜನೆಗಾಗಿ ಮಲ್ಲಿಕಾರ್ಜುನ ಧರ್ಮೇಗೌಡ, ಸಿ.ಟಿ.ರವಿ, ಗಾಯತ್ರಿ ಶಾಂತೇಗೌಡ ಅವರ ಕೊಡುಗೆ ದೊಡ್ಡ ಮಟ್ಟದಲ್ಲಿ ಇದೆ. ಕರಗಡ ಯೋಜನೆಯಿಂದ ಕೇವಲ ೩ ಕೆರೆಗಳನ್ನು ಮಾತ್ರ ತುಂಬಿಸಲು ಸಾಧ್ಯ. ಆದರೆ ಎತ್ತಿನಹೊಳೆ ಯೋಜನೆಯಿಂದಾಗಿ ದೇವನೂರು ಹಾಗೂ ಬೆಳವಡಿ ಭಾಗದ ಕೆರೆಗಳು ಭರ್ತಿಯಾಗಿವೆ. ರಣಘಟ್ಟ ಹಾಗೂ ಭದ್ರ ಉಪಕಣಿವೆ ಯೋಜನೆಗಳು ಪೂರ್ಣಗೊಂಡಲ್ಲಿ ಈ ಭಾಗದಲ್ಲಿ ಬರಗಾಲದ ಪ್ರಶ್ನೆಯೇ ಬರುವುದಿಲ್ಲ ಎಂದರು.
ದೇವಿ ಕೆರೆಯ ನಾಲೆ ಸರಿಯಾಗಿ ಇಲ್ಲದಿರುವ ಕಾರಣದಿಂದಾಗಿ ಕೆರೆ ಭರ್ತಿಯಾಗುತ್ತಿಲ್ಲ. ಹೀಗಾಗಿ ಕಟ್ಟಿನ ಹೊಳೆಯಿಂದ ದೇವಿಕೆರೆ ವರೆಗೆ ನೀರು ಹರಿಸಲು ನೂತನ ಕಾಲುವೆ ನಿರ್ಮಾಣಕ್ಕಾಗಿ ಸರ್ಕಾರ ೯.೯ ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ದೇವಿಕೆರೆಯು ಭರ್ತಿಯಾಗಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ಅಭಿವೃದ್ಧಿ ರಥದ ಜೊತೆ ಜೊತೆಗೆ ರೈತರ ಬಾಳನ್ನು ಹಸನು ಮಾಡುವ ರಥವನ್ನು ಎಳೆಯುತ್ತಿದೆ. ನಾನೂ ಸಹ ನೀರಾವರಿ ಯೋಜನೆಗಳು ಶಾಶ್ವತವಾಗಿರಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಜನಪ್ರತಿನಿಧಿಗಳು ಯಾವಾಗಲೂ ರೈತರ ಪರವಾಗಿ ಕೆಲಸ ಮಾಡಬೇಕು. ನಾವು ಮಾಡಿದ ಪುಣ್ಯ ನಮ್ಮ ಖಾತೆಗೆ ಸೇರುತ್ತದೆ ಎಂಬುದನ್ನು ಮನಗಾಣಬೇಕು ಎಂದು ತಿಳಿಸಿದರು.
ವಿಧಾನ ಪರಿ?ತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಪ್ರಕೃತಿಗೆ ನಮಿಸುವುದು ಹಾಗೂ ಸ್ಮರಿಸುವುದು ಭಾರತೀಯ ಸನಾತನ ಸಂಸ್ಕೃತಿಯ ಒಂದು ಭಾಗ. ಕರಗಡ ಏತ ನೀರಾವರಿ ಯೋಜನೆಯಿಂದ ಕೆರೆ ತುಂಬಿಸುವ ಯೋಜನೆ ಜಾರಿ ಮಾಡಿದ್ದೇವೆ. ಈ ಯೋಜನೆಯನ್ನು ಸರಿಯಾಗಿ ನಿರ್ವಹಣೆ ಮಾಡಿ ನೀರು ಹರಿಸಿದರೆ ಕೇವಲ ೩೫ ದಿನಗಳಲ್ಲಿ ಈ ಕೆರೆಗಳು ಭರ್ತಿಯಾಗುತ್ತಿದ್ದವು. ಆದರೆ ಸರಿಯಾಗಿ ನಿರ್ವಹಣೆ ಮಾಡದ ಕಾರಣದಿಂದಾಗಿ ಅಕ್ಟೋಬರ್ ತಿಂಗಳ ಕೊನೆಗೆ ಕೆರೆ ತುಂಬಿದೆ. ಅದು ಮಳೆಯ ಕಾರಣದಿಂದಾಗಿ. ಒಂದು ವೇಳೆ ಮಳೆ ಬಾರದೆ ಇದ್ದಿದ್ದಲ್ಲಿ ಇಂದು ಕೆರೆಗೆ ಬಾಗಿನ ಅರ್ಪಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈಶ್ವರ ಹಳ್ಳಿ ಹಾಗೂ ಕಳಸಾಪುರ ಭಾಗಗಳಿಗೆ ೨೦೧೮ ರಿಂದ ೨೩ರ ವರೆಗೆ ೬೫ ಕೋಟಿ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿ ಮಾಡಿದ್ದೇವೆ. ಮಾಗಡಿ-ಜಾವಗಲ್ ರಸ್ತೆಯನ್ನು ೨೫ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
೧೨೮೧ ಕೋಟಿ ರೂ. ವೆಚ್ಚದಲ್ಲಿ ಭದ್ರಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಭದ್ರಾ ಉಪಕಣಿವೆ ಯೋಜನೆ ಆರಂಭಿಸಲಾಗಿದೆ. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಇದೀಗ ಮೂರನೇ ಹಂತದ ಕಾಮಗಾರಿಗೆ ಟೆಂಡರ್ ಅಂತಿಮಗೊಂಡಿದೆ. ಇನ್ನು ರಣಘಟ್ಟ ಯೋಜನೆಯಲ್ಲಿ ೯೦೦ ಮೀಟರ್ ಟನಲ್ ಕಾಮಗಾರಿ ಬಾಕಿ ಇದೆ ಎಂದು ವಿವರಿಸಿದರು.
ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಬೆಳವಾಡಿ ರವೀಂದ್ರ, ಈಶ್ವರಹಳ್ಳಿ ಮಹೇಶ್, ಪ್ರಮುಖರಾದ ಶಂಕರನಾಯ್ಕ, ಕೆಂಗೇಗೌಡ, ಅಚ್ಚುತರಾಯರು, ಅಮೀರ್, ಮಧು, ಯೋಗೀಶ್, ಶಿವಮ್ಮ, ಚಂದ್ರಶೇಖರ್ ಮತ್ತಿತರರಿದ್ದರು.
Foundation stone laid for the third phase of Bhadra Upa Valley Project









