Category: ಜಿಲ್ಲಾ ಸುದ್ದಿ

  • ಸರ್ಕಾರ ನೀಡುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳನೇಕು

    ಸರ್ಕಾರ ನೀಡುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳನೇಕು

    ಚಿಕ್ಕಮಗಳೂರು- ಸರ್ಕಾರ ನೀಡುವ ಸಲಕರಣೆಗಳನ್ನು ಸದುಪಯೋಗಪಡಿಸಿಕೊಂಡು ಮೀನುಗಾರರು ಆರ್ಥಿಕ ಸದೃಢರಾಗಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು.

    ಅವರು ಭಾನುವಾರ ಮೀನುಗಾರಿಕೆ ಇಲಾಖೆ ವತಿಯಿಂದ ನೀಡಲಾಗುವ ವಿವಿಧ ಸಲಕರಣೆಗಳನ್ನು ಮೀನುಗಾರ ಫಲಾನುಭವಿಗಳಿಗೆ ವಿತರಿಸಿ ನಂತರ ಮಾತನಾಡಿ ರೈತರಂತೆಯೇ ಮೀನುಗಾರರು ಜನತೆಗೆ ಆಹಾರವನ್ನು ಪೂರೈಕೆ ಮಾಡುವ ಕೆಲಸ ಮಾಡುತ್ತಾರೆ ಅವರ ಜೀವ ರಕ್ಷಣೆಗೂ ಸರ್ಕಾರ ಕ್ರಮ ವಹಿಸಬೇಕಾಗಿರುವುದು ಸರ್ಕಾರದ ಹೊಣೆಯಾಗಿರುತ್ತದೆ.

    ಈ ಹಿನ್ನೆಲೆಯಲ್ಲಿ ತಾವೇ ಮೊದಲು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದ ನಂತರ ರಾಜ್ಯದಾದ್ಯಂತ ಎಲ್ಲಾ ಮೀನುಗಾರರಿಗೆ ಜೀವರಕ್ಷಕ ಜಾಕೆಟ್‌ಗಳನ್ನು ವಿತರಿಸುವ ಕಾರ್ಯ ಆರಂಭವಾಯಿತು ಎಂದರು.

    ತೆಪ್ಪ, ದೋಣಿ, ಬಲೆ ಮತ್ತು ಲೈಫ್ ಜಾಕೆಟ್‌ಗಳನ್ನು ವಿತರಿಸಲಾಗುತ್ತಿದೆ. ಇದನ್ನು ಪಡೆದ ಮೀನುಗಾರರು ಅದರಲ್ಲಿ ಬರುವ ಆದಾಯದಲ್ಲಿ ಉತ್ತಮ ರೀತಿ ಕುಟುಂಬ ಸಾಗಿಸುವಂತಾಗಬೇಕು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ಎಂದು ತಿಳಿಸಿದರು.

    ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸಿ.ಆರ್.ಕವನ ಮಾತನಾಡಿ, ರಾಜ್ಯ ವಲಯ ಯೋಜನೆಯಿಂದ ೧೦ ಮಂದಿ ಫಲಾನುಭವಿಗಳಿಗೆ ಸಲಕರಣೆ ವಿತರಿಸಲಾಗಿದೆ. ಜಿಲ್ಲಾ ವಲಯ ಯೋಜನೆಯಿಂದ ಮತ್ತೊಮ್ಮೆ ಇತರೆ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು.

    ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ರಾಜಾ ಸಾಹೇಬ್, ಗ್ರಾ.ಪಂ.ಸದಸ್ಯ ಮಧು ಇತರರು ಹಾಜರಿದ್ದರು.

    Take advantage of the facilities provided by the government.

  • Dr. Belawadi Manjunath’s:`ಸತ್ಯವಿಠಲ ಅವರ ಕಾವ್ಯಗಳ ಸಮಗ್ರ ಅಧ್ಯಯನ’ದ ಕೃತಿ ಬಿಡುಗಡೆ

    Dr. Belawadi Manjunath’s:`ಸತ್ಯವಿಠಲ ಅವರ ಕಾವ್ಯಗಳ ಸಮಗ್ರ ಅಧ್ಯಯನ’ದ ಕೃತಿ ಬಿಡುಗಡೆ

    ಚಿಕ್ಕಮಗಳೂರು: ಕೆಲವೇ ವ್ಯಕ್ತಿಗಳು ಭೌತಿಕವಾಗಿ ನಮ್ಮನ್ನಗಲಿದರೂ ಅವರ ವ್ಯಕ್ತಿತ್ವದ ನೆನಪುಗಳು ನಮ್ಮ ಮನದಂಗಳದಲ್ಲಿ ಸದಾ ಇರುತ್ತವೆ. ಹೀಗೆ ಆಗಾಗ ನೆನಪಿಗೆ ಬರುವ ವ್ಯಕ್ತಿತ್ವ ಹಿ.ನಾ.ತಿಪ್ಪೇಸ್ವಾಮಿ ಅವರದು ಎಂದು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಹೇಳಿದರು.

    ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಬೆಳವಾಡಿಯ ಹಿ.ನಾ.ತಿಪ್ಪೇಸ್ವಾಮಿ ಕುಟುಂಬ ಹಾಗೂ ಉದ್ಭವ ಪ್ರಕಾಶನ ಟ್ರಸ್ಟ್ ಏರ್ಪಡಿಸಿದ್ದ ತಿಪ್ಪೇಸ್ವಾಮಿ ಅವರ ನೂರರ ಸಂಸ್ಮರಣೆ ಮತ್ತು ಡಾ.ಬೆಳವಾಡಿ ಮಂಜುನಾಥ್ ಅವರ ಪಿಎಚ್.,ಡಿ ಪದವಿಯ ಸಂಶೋಧನಾ ಪ್ರಬಂಧ `ಸತ್ಯವಿಠಲ ಅವರ ಕಾವ್ಯಗಳ ಸಮಗ್ರ ಅಧ್ಯಯನ’ದ ಕೃತಿ ಬಿಡುಗಡೆ ಸಮಾರಂಭದಲ್ಲಿ ತಿಪ್ಪೇಸ್ವಾಮಿ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು. ಸಮಾಜಮುಖಿ ವ್ಯಕ್ತಿತ್ವದ ಚಟುವಟಿಕೆಗಳು, ಅವರ ಸ್ವಭಾವ, ಮಾತು ಪ್ರತಿಯೊಂದು ಸಹ ನೆನಪನ್ನು ಮೊಗೆದು ನೀಡುತ್ತದೆ. ಇಂಥ ವ್ಯಕ್ತಿಗಳ ಸಾಲಿಗೆ ಸೇರಿದವರು ತಿಪ್ಪೇಸ್ವಾಮಿ ಎಂದು ಅವರು ನುಡಿದರು.

    ತಿಪ್ಪೇಸ್ವಾಮಿ ಅನ್ಯಾಯಕ್ಕೆ ಎಂದೂ ತಲೆಬಾಗಿದವರಲ್ಲ. ಮನೆಯವರಿಂದಾಗಲಿ ಅಥವಾ ಹೊರಗಿನವರಿಂದಾಗಲಿ ಅನ್ಯಾಯವಾಗುವುದನ್ನು ಸಹಿಸದೆ ತೀವ್ರವಾಗಿ ವಿರೋಧಿಸುತ್ತಿದ್ದರು. ಅವರಿದ್ದ ರಾಜಕೀಯ ಪಕ್ಷದಲ್ಲೂ ಎಂದೂ ಸಹ ಅನ್ಯಾಯ ಮತ್ತು ಭ್ರಷ್ಟಾಚಾರದ ಪ್ರಸಂಗಗಳು ಎದುರಾದಲ್ಲಿ ನೇರವಾಗಿಯೇ ಪ್ರತಿಭಟಿಸುತ್ತಿದ್ದರು. ಅವರ ವ್ಯಕ್ತಿತ್ವವೇ `ವಜ್ರಾದಪಿ ಕಠೋರಾಣಿ ಮೃದುನಿಕುಸುಮಾದಪಿ’ ಎನ್ನುವಂತಿತ್ತು. ಮೃದುತ್ವ ಮತ್ತು ಕಾಠಿಣ್ಯ ಅವರ ವ್ಯಕ್ತಿತ್ವದ ಹಿರಿಮೆ. ತಿಪ್ಪೇಸ್ವಾಮಿಯವರದು ಕೊಡುವ ಕೈಯಾಗಿತ್ತೇ ಹೊರತು ಕೇಳುವ ಕೈ ಆಗಿರಲಿಲ್ಲ. ಕೆಲವೊಮ್ಮೆ ಅವರ ಕಠಿಣ ನಿರ್ಧಾರಗಳು ಮನೆಯವರನ್ನೂ ಮುಜುಗರಕ್ಕೆ ನೂಕುತ್ತಿತ್ತು. ಆದರೆ ಎಂದೂ ಸಹ ಅವರ ನಿರ್ಧಾರದಲ್ಲಿ ಬದಲಾವಣೆ ಆಗುತ್ತಿರಲಿಲ್ಲ. ಹಾಗೆಂದ ಮಾತ್ರಕ್ಕೆ ಕರುಣೆ ಇಲ್ಲದ ವ್ಯಕ್ತಿಯಲ್ಲ, ಸಹಾಯ ಬಯಸಿ ಬಂದವರ ನೆರವಿಗೂ ಧಾವಿಸುವ ಮೃದು ಸಹೃದಯಿ ಅವರು ಎಂದು ತಿಳಿಸಿದರು. 

    ಡಾ.ಬೆಳವಾಡಿ ಮಂಜುನಾಥ್ ವಿರಚಿತ ಸತ್ಯವಿಠಲ ಅವರ ಕಾವ್ಯಗಳ ಸಮಗ್ರ ಅಧ್ಯಯನ ಮಹಾಪ್ರಬಂಧ ಕುರಿತು ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ್ ಮಾತನಾಡಿ, ಇಂದು ಬರುತ್ತಿರುವ ಪಿಎಚ್.,ಡಿ ಮಹಾ ಪ್ರಬಂಧಗಳು ತಮ್ಮ ಪ್ರೌಢತೆಯನ್ನು ಕಳೆದುಕೊಳ್ಳುತ್ತಿವೆ. ಆದರೆ ಸತ್ಯವಿಠಲ ಅವರ ಸಮಗ್ರ ಕಾವ್ಯಗಳ ಕುರಿತ ಈ ಮಹಾಪ್ರಬಂಧ ಅತ್ಯಂತ ಆಳವಾದ ಅಧ್ಯಯನ ತೌಲನಿಕತೆಯಿಂದ ಕೂಡಿದೆ ಎಂದು ಹೇಳಿದರು.

    ಮಂಜುನಾಥ್ ಅವರ ಈ ಬೃಹತ್ಕೃತಿ ಅವರ ಮಹತ್ತರ ಸಾಧನೆಯ ದ್ಯೋತಕ. ಮಂಜುನಾಥ್ ಈಗಾಗಲೇ ಪ್ರೌಢ ಲೇಖಕರಾಗಿ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿದ್ದಾರೆ. ಅವರ ೩೮ ಸ್ವತಂತ್ರ ಕೃತಿಗಳು ಮತ್ತು ೩೭ ಸಂಪಾದನಾ ಗ್ರಂಥಗಳು ಹೊರ ಬಂದಿದ್ದು ಸಹೃದಯರ ಗಮನ ಸೆಳೆದಿವೆ. ಈ ಸಂಶೋಧನಾ ಗ್ರಂಥಕ್ಕೆ ಮಂಜುನಾಥ್ ಅವರ ಪ್ರತಿಭೆ ಹಾಗೂ ಶ್ರಮದ ಪಾಲು ಅತ್ಯಂತ ದೊಡ್ಡದು ಎಂದು ತಾವು ಭಾವಿಸುವುದಾಗಿ ಹೇಳಿದರು.

    ಈ ಕೃತಿಯನ್ನು ಓದುವಾಗ ನನ್ನನ್ನು ಸೆಳೆದ ಎರಡು ಪ್ರಮುಖ ಅಂಶಗಳೆಂದರೆ, ಒಂದು ಮಂಜುನಾಥ್ ಅವರ ಪರಿಶ್ರಮ ಮತ್ತು ಕಾವ್ಯ ಶ್ರದ್ಧೆ, ಮತ್ತೊಂದು ಸತ್ಯವಿಠಲ ಅವರು ಸ್ವತಃ ಶಾಸ್ತ್ರೀಯವಾಗಿ ಸಾಹಿತ್ಯ ಅಧ್ಯಯನ ಮಾಡದಿದ್ದರೂ ಅವರಿಂದಾಗಿರುವ ಕಾವ್ಯ ಸೃಷ್ಟಿ. ಅದರಲ್ಲಿ ನಮ್ಮ ಪ್ರಾಚೀನ ಕವಿಗಳ ಕಾವ್ಯ ಪ್ರಯೋಗಗಳನ್ನು ಮುಂದುವರಿಸಿರುವುದು ಹಾಗೂ ಆ ಸಾತತ್ಯವನ್ನು ಕಾಪಾಡಿಕೊಂಡಿರುವುದು ಅತ್ಯಂತ ಉಲ್ಲೇಖನೀಯ ಅಂಶ ಎಂದರು.

    ಈ ಕೃತಿಯಲ್ಲಿ ಮಂಜುನಾಥ್ ಆರಿಸಿಕೊಂಡಿರುವ ಭಾಮಿನಿ ಹಾಗೂ ಲಾವಣಿ ಕಾವ್ಯ ಪ್ರಕಾರಗಳ ವೈಶಿಷ್ಟ್ಯವನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ವಿಮರ್ಶಕರ ದೃಷ್ಟಿಯಿಂದ ಮರೆಯಾಗಿದ್ದ ಸತ್ಯವಿಠಲ ಅವರಂತಹ ಸಾಹಿತ್ಯ ಪ್ರತಿಭೆಯನ್ನು ಗುರುತಿಸಿ ತಮ್ಮ ಸಂಶೋಧನೆಗೆ ಕೈಗೆತ್ತಿಕೊಂಡಿರುವುದು ಅತ್ಯಂತ ಶ್ಲಾಘನೀಯ. ಮಂಜುನಾಥ್ ಕನ್ನಡ ಕಾವ್ಯ ಪರಂಪರೆಯಲ್ಲಿ ಆಗಿರುವ ಎಲ್ಲಾ ರೀತಿಯ ಪ್ರಯೋಗಗಳ ನಡುವೆ ಸತ್ಯವಿಠಲ ಅವರ ಕಾವ್ಯಗಳನ್ನು ಇಟ್ಟು ವಿಮರ್ಶಿಸಿರುವುದು ಅತ್ಯಂತ ವೈಶಿಷ್ಟ್ಯಪೂರ್ಣ ಎಂದರು ಸತ್ಯನಾರಾಯಣ ನುಡಿದರು.

    ನಾಡಿನ ಖ್ಯಾತ ಹೋಮಿಯೋಪತಿ ವೈದ್ಯ, ನಾಡೋಜ ಡಾ.ಬಿ.ಟಿ.ರುದ್ರೇಶ್ ತಮ್ಮ ತಂದೆಯ ಬಗ್ಗೆ ಮಾತನಾಡಿ, ಇಂದು ಕುಟುಂಬಗಳಲ್ಲೇ ಸಂಬಂಧಗಳು ಕ್ಷೀಣಿಸುತ್ತಾ ಬರುತ್ತಿವೆ ಎಂದು ಸೋದಾರಣವಾಗಿ ವಿವರಿಸಿ, ಅನೇಕ ಬಾರಿ ತಂದೆ, ಮಗನ ಸಂಬಂಧ ಸಹ ದುರ್ಬಲವಾಗುತ್ತಿದೆ. ತಂದೆ ಇರುವಾಗ ಗಟ್ಟಿಯಾಗಿರದ ಸಂಬಂಧ ಅವರ ಮರಣದ ನಂತರ ಆ ಹಿರಿಯರ ಮಾತುಗಳು ಇಂದು ಪ್ರಸ್ತುತವೆನಿಸುತ್ತದೆ. ನನ್ನ ತಂದೆ ನಾನು ಬೆಂಗಳೂರಿಗೆ ಹೊರಟಾಗ ಹೇಳಿದ್ದು ಮೂರು ಮಾತುಗಳನ್ನು. ನೀನು ಎಲ್ಲಿಗೇ ಹೋಗು, ನಿನ್ನ ಕೈ, ಬಾಯಿ, ಕಚ್ಚೆಯನ್ನು ಶುದ್ಧವಾಗಿಟ್ಟುಕೊಂಡರೆ ಮಾತ್ರ ಯಶಸ್ಸು ಸಾಧ್ಯ ಎಂದು. ಅದೀಗ ನಿಜವೆನಿಸುತ್ತ್ತಿದೆ ಎಂದು ಹೇಳಿದರು.

    ಅಭಿನಂದನೆ ಸ್ವೀಕರಿಸಿದ ಹಿರಿಯ ಚಿತ್ರನಟಿ ಡಾ.ಗಿರಿಜಾಲೋಕೇಶ್ ಮಾತನಾಡಿ, ತಿಪ್ಪೇಸ್ವಾಮಿಯವರ ವ್ಯಕ್ತಿತ್ವ ಅತ್ಯಂತ ಅನುಕರಣೀಯ. ಪ್ರಸ್ತುತ ಕಾಲಘಟ್ಟದಲ್ಲಿ ಈ ಬಗೆಯ ನಿಷ್ಠುರವಾದಿಗಳನ್ನು ಕಾಣುವುದೇ ಅಪರೂಪ. ಚಿಕ್ಕಮಗಳೂರು ಜಿಲ್ಲೆ ವಿವಿಧ ಕ್ಷೇತ್ರಗಳಲ್ಲಿ ಅಪರೂಪದ ಪ್ರತಿಭಾವಂತರನ್ನು ಹೊಂದಿರುವುದು ಹೆಮ್ಮೆಯ ವಿಷಯ. ಚಿಕ್ಕಮಗಳೂರು ಹಾಗೂ ತಮಗೂ ಒಂದು ಅವಿನಾಭಾವ ಸಂಬಂಧವಿದೆ. ತೇಜಸ್ವಿಯವರ `ಅಬಚೂರಿನ ಪೋಸ್ಟಾಫೀಸು’ ಚಲನಚಿತ್ರವಾದಾಗ ಅದರಲ್ಲಿ ತಮ್ಮ ನಟನೆಗೆ ರಾಷ್ಟ್ರಪ್ರಶಸ್ತಿ ಬಂದಿರುವುದನ್ನು ನೆನಪಿಸಿಕೊಂಡರು.

    ಬಹುಮುಖಿ ಆದರ್ಶ ವ್ಯಕ್ತಿತ್ವದ ತಿಪ್ಪೇಸ್ವಾಮಿ ಕಿರು ಹೊತ್ತಿಗೆಯನ್ನು ನಟ, ನಿರ್ದೇಶಕ ಚಿಂದೋಡಿ ಬಂಗಾರೇಶ್ ಬಿಡುಗಡೆಗೊಳಿಸಿದರು. ಅಧ್ಯಕ್ಷತೆ ವಹಿಸಿದ್ದ ಉದ್ಭವ ಪ್ರಕಾಶನದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿದರು. ಮಹಾಪ್ರಬಂಧ ಕೃತಿಕಾರ ಸಾಹಿತಿ ಡಾ.ಬೆಳವಾಡಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳವಾಡಿಯ ಶಿಕ್ಷಕಿ ರೂಪ ಮತ್ತು ಪತ್ರಿಕಾ ಛಾಯಾಗ್ರಾಹಕ ತಾರಾನಾಥ್ ಕಾಮತ್ ಮಾತನಾಡಿದರು.

    ನೃತ್ಯ ಕಲಾವಿದೆ ವಿದುಷಿ ಡಾ.ವಿದ್ಯಾಲಕ್ಷ್ಮೀ, ಮಹಾಚಂದ್ರ ಪ್ರತಿಷ್ಠಾನದ ರವಿಶಂಕರ್, ಮಾಡೆಲ್ ಇಂಗ್ಲೀಷ್ ಶಾಲೆಯ ಎಂ.ಎನ್.ಷಡಕ್ಷರಿ ಅವರನ್ನು ಸನ್ಮಾನಿಸಲಾಯಿತು. ಇಂಜಿನಿಯರ್ ಬಿ.ಟಿ.ವಿಶ್ವನಾಥ್ ಸ್ವಾಗತಿಸಿ, ವಂದಿಸಿದರು. ವಾಸಂತಿ ಪದ್ಮನಾಭ ನಿರೂಪಿಸಿದರು.

    Dr. Belawadi Manjunath’s Ph.D. research thesis
  • ತಾಯಿ ಭುವನೇಶ್ವರಿ ಪ್ರತಿಯೊಬ್ಬ ಕನ್ನಡಿಗನ ಸ್ವಾಭಿಮಾನದ ಪ್ರತೀಕ

    ತಾಯಿ ಭುವನೇಶ್ವರಿ ಪ್ರತಿಯೊಬ್ಬ ಕನ್ನಡಿಗನ ಸ್ವಾಭಿಮಾನದ ಪ್ರತೀಕ

    ಚಿಕ್ಕಮಗಳೂರು:  ಕರ್ನಾಟಕದ ಅದಿದೇವತೆ ತಾಯಿ ಭುವನೇಶ್ವರಿ ಪ್ರತಿಯೊಬ್ಬ ಕನ್ನಡಿಗನ ಸ್ವಾಭಿಮಾನದ ಪ್ರತೀಕ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ತಿಳಿಸಿದರು.

    ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ತಾಯಿ ಭುವನೇಶ್ವರಿಯ ಪುತ್ತಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು ಭಾರತೀಯರಿಗೆ ಮೂರ್ತಿಪ್ರತಿಷ್ಟಾಪನೆ , ಆರಾಧನೆ ಎಂಬುದಕ್ಕೆ ಭಾವನಾತ್ಮಕ ಸಂಬಂಧವಿದೆ ಆ ಹಿನ್ನೆಲೆಯಲ್ಲಿ ನಗರದ ಕನ್ನಡ ಭವನದಲ್ಲಿ ತಾಯಿ ಭುವನೇಶ್ವರಿಯ ಪುತ್ತಳಿ ಅನಾವರಣ ಮಾಡಿರುವುದು ಹೆಮ್ಮೆ ತಂದೆ ಎಂದು ಹೇಳಿದರು.

    ಕನ್ನಡದ ಮೊದಲ ಕದಂಬ ದೊರೆ ಮಯೂರವರ್ಮನ ಕಾಲದಿಂದಲೂ ತಾಯಿ ಭುವನೇಶ್ವರಿಯನ್ನು ಆರಾಧನೆಯನ್ನು ಮಾಡಲಾಗುತ್ತಿದೆ. ಅದರೊಂದಿಗೆ ವಿಜಯನಗರ ಸ್ಥಾಪನೆ ಮಾಡಲು ಸಂಕಲ್ಪಿಸಿದ ವಿದ್ಯಾರಣ್ಯರು ತಾಯಿ ಭುವನೇಶ್ವರಿಯ ಪೂಜೆಯೊಂದಿಗೆ ತಮ್ಮ ಕಾರ್ಯವನ್ನು ಆರಂಭಿಸಿದ್ದರು ಎಂದು ನೆನಪಿಸಿದರು.

    ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಮೇಲುಕೋಟೆಯಲ್ಲಿ ಭುವನೇಶ್ವರಿ ಮಂಟಪ ನಿರ್ಮಿಸಿದರೇ ಕೊನೆಯ ದೊರೆ ಜಯಚಾಮರಾಜೇಂದ್ರ ಒಡೆಯರ್ ತಮ್ಮ ಅರಮನೆಯಲ್ಲಿ ತಾಯಿ ಭುವನೇಶ್ವರಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ತಮ್ಮ ಜೀವನ ಪರ್ಯಂತ ಆರಾಧಿಸಿದ್ದರು ಎಂದು ಹೇಳಿದರು.
    ಪೂಜಾರಿಯ ಮಧ್ಯಸ್ಥಿಕೆ ಇಲ್ಲದೆ ಆರಾಧಿಸಬಹುದಾದ ಏಕೈಕ ದೈವ ತಾಯಿ ಭುವನೇಶ್ವರಿ ಇಂದು ಹೇಳಿದ ಅವರು ಕರ್ನಾಟಕ ಏಕೀಕರಣ ಹೋರಾಟಕ್ಕೆ ನಾಡ ದೇವತೆ ಭುವನೇಶ್ವರಿಯೇ ಸ್ಪೂರ್ತಿ ಎಂದು ಹೇಳಿದರು.

    ೮೯ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಂಘಟಿಸಲು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಕೋರಿರುವುದು ನ್ಯಾಯ ಸಮ್ಮತವಾಗಿದೆ ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿಯೊಬ್ಬರು ಕನ್ನಡಿಗರೇ ಆಗಿದ್ದಾರೆ. ಅದರೊಂದಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಂಘಟಿಸಲು ಅಗತ್ಯವಿರುವ ಕನ್ನಡದ ಕಟ್ಟಾಳುಗಳು ಸೌಲಭ್ಯಗಳು ಸಮರ್ಪಕವಾಗಿರುವುದರಿಂದ ಈ ಬಗ್ಗೆ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ಇಲ್ಲಿಯೇ ಸಮ್ಮೇಳನ ನಡೆಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

    ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಹಾಗೂ ಜಿಲ್ಲೆಯ ಹಿರಿಯ ಸಾಹಿತಿ ಗೊರೂರು ಚೆನ್ನಬಸಪ್ಪನವರು ಮಾತನಾಡಿ ಕರ್ನಾಟಕ ಏಕೀಕರಣಕ್ಕಾಗಿ ಜನ ಜಾಗೃತಿ ಮೂಡಿಸಿ ಹಗಲಿರುಳು ಶ್ರಮಿಸಿದರು ಹೋರಾಟಕ್ಕೆ ದೊರೆಯದಿದ್ದ ದಿನಗಳಲ್ಲಿ ಹೋರಾಟಕ್ಕೆ ಆಧ್ಯಾತ್ಮಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಕನ್ನಡದ ಕಟ್ಟಾಳು ಶಾಸಕರು ಆಗಿದ್ದ ಅಂದಾನಪ್ಪ ದೊಡ್ಡ ಮೇಟಿ ಯವರು ೧೯೫೩ರಲ್ಲಿ ಕಲಾವಿದರಿಂದ ಆಳೆತ್ತರದ ತಾಯಿ ಭುವನೇಶ್ವರಿಯ ಚಿತ್ರಪಟವನ್ನು ಚಿತ್ರಿಸಿ ಆ ಚಿತ್ರಣದ ಮೂಲಕ ಸ್ಪೂರ್ತಿಪಡೆದು ಹೋರಾಟವನ್ನು ಮುನ್ನಡೆಸಿದ್ದರು ಎಂದು ನೆನಪಿಸಿಕೊಂಡವರು.

    ತಾಯಿ ಭುವನೇಶ್ವರಿ ಎಂಬ ದೇವತೆ ರಾಜಕೀಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಶಕ್ತಿಯ ಪ್ರತೀಕ ಎಂದು ಹೇಳಿದರು. ಯಾರನ್ನು,ಯಾವುದನ್ನು ಕಣ್ಣಾರೆ ಕಾಣಲು ಆರಾಧಿಸಲು ಸಾಧ್ಯವಿಲ್ಲವೋ ಅವರನ್ನು ಪ್ರತಿಷ್ಠಾಪಿಸಿ ನಮಿಸುವುದು ಈ ದೇಶದ ಸಂಸ್ಕೃತಿ ಅದರಂತೆ ತಾಯಿ ಭುವನೇಶ್ವರಿಯನ್ನು ಪುತ್ಥಳಿ ರೂಪದಲ್ಲಿ ಪ್ರತಿಷ್ಟಾಪಿಸಲಾಗಿದೆಎಂದರು. ಸರಸ್ವತಿ ವಿದ್ಯೆಗೆ ಅಧಿಪತಿಯಾದರೆ ತಾಯಿ ಭುವನೇಶ್ವರಿ ಶಕ್ತಿ ಸ್ವರೂಪಿಣಿ ಎಂದರು.
    ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರದ ಖ್ಯಾತ ವೈದ್ಯ ಜೆ.ಪಿಕೃಷ್ಣೇಗೌಡ ಮಾತನಾಡಿ ಕನ್ನಡ ಸೇವೆ ಅತ್ಯುನ್ನತವಾದದ್ದು ಅಂತಹ ಮಹಾನ್ ಸೇವೆಯನ್ನು ಮಾಡುತ್ತಿರುವ ನಾವು ನೀವೆಲ್ಲರೂ ಪುಣ್ಯವಂತರು ಎಂದು ಹೇಳಿದರು

    ಇದೇ ಸಂದರ್ಭದಲ್ಲಿ ಪರಿಷತ್ತಿನ ಅಧ್ಯಕ್ಷಸೂರಿ ಶ್ರೀನಿವಾಸ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಕಚೇರಿಯಲ್ಲಿ ಹೊರತುಪಡಿಸಿದರೆ ತಾಯಿ ಭುವನೇಶ್ವರಿಯ ಪುತ್ತಳಿಯನ್ನು ಚಿಕ್ಕಮಗಳೂರು ಸಾಹಿತ್ಯ ಭವನದಲ್ಲಿ ಮಾತ್ರ ಪ್ರತಿಷ್ಠಾಪಿಸಿರುವುದು ಹೆಮ್ಮೆ ತಂದಿದೆ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಭುವನೇಶ್ವರಿಯ ಮೂರ್ತಿಯ ದಾನಿಗಳಾದ ಡಾ. ಜೆಪಿ ಕೃಷ್ಣೇಗೌಡ, ಪ್ರಭುಸೂರಿ, ಶ್ರೀವತ್ಸರವರಿಗೆ ಕನ್ನಡ ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅದೇ ವೇದಿಕೆಯಲ್ಲಿ ಹಾಗೂ ಪುತ್ಥಳಿ ನಿರ್ಮಾಣಕ್ಕೆ ಸಹಕಾರ ನೀಡಿದ ನಗರದ ಛಾಯಾಗ್ರಹಕ ಎ.ಎನ್ ಮೂರ್ತಿ ಹಾಗೂ ಕ.ಸಾ.ಪ ನಗರ ಅಧ್ಯಕ್ಷ ಸಚಿನ್ ರವರಿಗೆ ಸನ್ಮಾನಿಸಲಾಯಿತು.

    ಈ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾವಿದ್ಯಾಲಯದ ಉಪಕುಲಪತಿ, ಸಿ.ಕೆ ಸುಬ್ಬರಾಯ ಉಪಸ್ಥಿತರಿದ್ದರು ವಕೀಲ ವೆಂಕಟೇಶ್ ಸ್ವಾಗತಿಸಿ, ಮಹಾಲಕ್ಷ್ಮಿನಾಗರಾಜ್,ಸುನೀತಕಿರಣ್ ಪ್ರಾರ್ಥಿಸಿದರು.ರೂಪ ನಾಯಕ್ ನಿರೂಪಿಸಿದರು.

    Statue of Bhuvaneshwari unveiled at Kannada Sahitya Bhavan

  • ವ್ಯಕ್ತಿತ್ವ ವಿಕಸನದಲ್ಲಿ ಸಾಹಿತ್ಯಗಳ ಪಾತ್ರ ಅಪಾರವಾದುದು

    ವ್ಯಕ್ತಿತ್ವ ವಿಕಸನದಲ್ಲಿ ಸಾಹಿತ್ಯಗಳ ಪಾತ್ರ ಅಪಾರವಾದುದು

    ಚಿಕ್ಕಮಗಳೂರು: ಸಾಹಿತ್ಯವು ಭಾಷೆ ಸ್ವಾಧೀನವನ್ನು ಹೆಚ್ಚಿಸಿ, ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ವೈವಿಧ್ಯಮಯ ದೃಷ್ಟಿಕೋನಗಳನ್ನು ಅನ್ವೇಷಿಸುವುದು, ಸಹನುಭೂತಿಯನ್ನು ಉತ್ತೇಜಿಸುವುದು ಹಾಗೂ ಸಾಂಸ್ಕೃತಿಕ ತಿಳುವಳಿಕೆಯನ್ನು ಬೆಳೆಸುವುದರ ಜೊತೆಗೆ ವ್ಯಕ್ತಿತ್ವ ವಿಕಸನದಲ್ಲಿ ಸಾಹಿತ್ಯಗಳ ಪಾತ್ರ ಬಹುಮುಖ್ಯವಾದುದು ಎಂದು ಎ.ಐ.ಟಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತಾಧಿಕಾರಿ ಡಾ. ಸುಬ್ಬರಾಯ ಹೇಳಿದರು.

    ಅಮೃತೇಶ್ವರ ಪ್ರಕಾಶನ ಮೈಸೂರು, ನವೀನ್ ಪ್ರಕಾಶನ , ಪೂರ್ಣಿಮಾ ಪ್ರಕಾಶನ, ಬೊಂಗಾಳೆ ಪ್ರಕಾಶನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಮಗಳೂರು ಇವರ ವತಿಯಿಂದ ಇಂದು ನಗರದ ಎ.ಐ.ಟಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಲಕ್ಷ್ಮೀಶಾಮರಾವ್ ಮಾಳತ್ನರ್ ಮತ್ತು ಎಸ್. ಪೂರ್ಣಿಮಾ ಬಾಬು ಶಿರಾ ಅವರ ಕೃತಿಗಳ ಬಿಡುಗಡೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಲ್ಪನೆಯನ್ನು ಉತ್ತೇಜಿಸುವುದು, ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸುವುದು, ಮನರಂಜನೆಯನ್ನು ನೀಡುವುದು, ಮತ್ತು ಪ್ರೀತಿ, ನ್ಯಾಯ, ಬೋಧನೆ; ಇವೆಲ್ಲವನ್ನೂ ಸಾಹಿತ್ಯ ಕೃತಿಗಳನ್ನು ಓದುವ ಮೂಲಕ ಮತ್ತ? ಶೋಧಿಸಬಹುದು ಮತ್ತು ಆಳಗೊಳಿಸಬಹುದು ಎಂದರು

    ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಗಿರಿಜಾಶಂಕರ್ ಕೃತಿಗಳ ವಿಮರ್ಶಿಸಿ ಮಾತನಾಡಿ ಸಾಹಿತ್ಯಗಳು ಸಾಮಾಜಿಕ ತುಮುಲಗಳನ್ನು ಹೊರಹಾಕುತ್ತವೆ. ಅಪ್ರಬುದ್ಧತೆಯಿಂದ ಹೊರಬರಲು ಸಹಕರಿಸುತ್ತವೆ. ಕನ್ನಡ ಸಾಹಿತ್ಯವು ಕನ್ನಡ ಭಾಷೆಯಲ್ಲಿನ ವಿಶಾಲವಾದ ಲಿಖಿತ ಕೃತಿಗಳನ್ನು ಒಳಗೊಂಡಿದೆ, ಕಾವ್ಯ ಮತ್ತು ನಾಟಕಗಳಂತಹ ವೈವಿಧ್ಯಮಯ ಪ್ರಕಾರಗಳ ಮೂಲಕ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ, ಕವಿಗಳು, ತತ್ವಜ್ಞಾನಿಗಳು ಮತ್ತು ಸರ್ವಜ್ಞ ವಚನಕಾರು ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ.

    ವಚನಗಳು ಸಾಹಿತ್ಯ ಲೋಕದ ಮೂಲಗಳು. ಶಿವಶರಣರ ವಚನಗಳು ಸಾಮಾಜದಲ್ಲಿ ತಲೆದೂರಿದ್ದ ಅಸಮಾನತೆ, ಜಾತಿ ಪದ್ದತಿ, ವರ್ಣಪದ್ಧತಿಗಳಂತ ಅನೇಕ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವ ಕಾರ್ಯದಲ್ಲಿ ಮುಖ್ಯ ಪಾತ್ರ ವಹಿಸಿದ್ದವು. ಸಾಹಿತ್ಯದಲ್ಲಿ ಯಾವುದೇ ಮೇಲು ಕೀಳಿಲ್ಲ. ಅವುಗಳ ಅಧ್ಯಯನವು ಮನುಷ್ಯನನ್ನು ಅತ್ಯಂತ ಪ್ರಬುದ್ಧಗೊಳಿಸುತ್ತವೆ.

    ಕನ್ನಡ ಸಾಹಿತ್ಯ ಕನ್ನಡ ಭಾಷೆಯ? ಪ್ರಾಚೀನ. ಅ? ವೈಭವಯುತ. ಇಡೀ ಕನ್ನಡ ಸಾಹಿತ್ಯದಲ್ಲಿ ಕನ್ನಡ ನಾಡಿನ ಕಲೆ, ಸಂಸ್ಕೃತಿ, ಬದುಕು ಹೀಗೆ ಒಟ್ಟಾರೆ ಕನ್ನಡ ಸಾಂಸ್ಕೃತಿಕ ಜಗತ್ತೇ ಅಡಕಗೊಂಡಿದೆ. ಯುವ ತಲೆಮಾರಿನ ಆಕ?ಕ ಬರಹಗಾರರವರೆಗೂ ವಿಶಿ? ಪರಂಪರೆಯನ್ನೇ ನಿರ್ಮಿಸಿದೆ. ಅಂದಿನಿಂದ ಅನೇಕ ಮಜಲುಗಳನ್ನು ದಾಟಿಕೊಂಡು ಬಂದ ಕನ್ನಡ ಸಾಹಿತ್ಯ ಭಾ?, ಸಂಸ್ಕೃತಿ, ಬದಕುಕನ್ನು ಶ್ರೀಮಂತವಾಗಿಸುವ ಜೊತೆಗೆ ವರ್ತಮಾನದ ಆಗುಹೋಗುಗಳಿಗೆ ಸ್ಪಂದಿಸುತ್ತಾ, ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಭೂತಕ್ಕೂ ಭವಿ?ಕ್ಕೂ ಅವಶ್ಯಕ ಮಾರ್ಗವನ್ನು ರೂಪಿಸಿದೆ.

    ಅದರೇ ಇಂದಿನ ದಿನಮಾನಗಳಲ್ಲಿ ಕೆಲ ವಚನಗಳು ಸಂಕೀರ್ಣತೆಯನ್ನು ಕಳೆದುಕೊಂಡಿವೆ ಸಾಹಿತ್ಯಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕರಿಸುತ್ತವೆ ಇವುಗಳನ್ನು ಯುವ ಜನತೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯ ಎಂದ ಅವರು ಕನ್ನಡ ನಾಡು ನುಡಿ ಭಾಷೆಗಳನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಸಾಹಿತ್ಯದ ಪಾತ್ರ ಬಹು ಮುಖ್ಯವಾದುದು ಯುವ ಸಾಹಿತಿಗಳನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

    ಖ್ಯಾತ ಮಕ್ಕಳ ತಜ್ಷಾ ಹಾಗೂ ಸಂಸ್ಕೃತಿ ಚಿಂತಕರಾದ ಡಾ.ಜೆ.ಪಿ ಕೃಷ್ಣೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಹಿತ್ಯ ಮನು?ನ ಬದುಕಿನ ಅನುಭವ ಲೋಕದ ಸಂಕಥನ. ಸಾಹಿತ್ಯ ಪರಂಪರೆಗೆ ಅಸಾಧಾರಣ ಶಕ್ತಿಯಿದೆ. ಅತ್ಯಂತ ದುರ್ಬಲ ಪದಪುಂಜಗಳು, ವಾಕ್ಯ ಸಮುಚ್ಛಾಯಗಳು ಸಹಸ್ರಾರು ವ?ಗಳ ಹಿಂದೆ ಬದುಕಿದ್ದ ಕವಿಯ ಅತ್ಯಂತ ಕ್ಷಣಿಕ ಭಾವಸ್ಪಂದನವನ್ನು ಅಜರಾಮರವಾಗಿ ಉಳಿಸುತ್ತವೆ. ಇತರ ಶ್ರೀಮಂತ ಜೀವಂತ ಭಾ?ಗಳಂತೆ ಕನ್ನಡ ಭಾ?ಗೂ ಕಾಲ ದೇಶ ಪರಿಸರಕ್ಕನುಗುಣವಾಗಿ ರೂಪತಳೆದ ಸತ್ವಯುತ, ಶಕ್ತಿಯುತ ಸಾಹಿತ್ಯದ ಪರಂಪರೆಯಿದೆ ಇವುಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಇತರರಿಗೂ ಮಾದರಿಯಾಗಿರುವ ಯುವ ಸಾಹಿತಿಗಳನ್ನು ಗೌರವಿಸಿ ಪ್ರೋತ್ಸಾಹಿಸಬೇಕು ಎಂದರು

    ಡಾ. ಅವರೆಕಾಡು ವಿಜಯ ಕುಮಾರ್ ಮಾತನಾಡಿ ಕನ್ನಡ ಸಾಹಿತ್ಯವು ಕನ್ನಡ ಭಾ?ಯಲ್ಲಿ ರಚಿಸಲಾದ ವ್ಯಾಪಕವಾದ ಕೃತಿಗಳ ಸಮೂಹವನ್ನು ಉಲ್ಲೇಖಿಸುತ್ತದೆ, ಇದು ನಾಟಕಗಳು, ಕಾವ್ಯ ಮತ್ತು ಕಥೆ ಹೇಳುವಿಕೆಯಂತಹ ವೈವಿಧ್ಯಮಯ ಪ್ರಕಾರಗಳನ್ನು ಒಳಗೊಂಡಿದೆ. ಈ ಸಾಹಿತ್ಯವು ಕರ್ನಾಟಕದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ದಾಖಲಿಸುವುದಲ್ಲದೆ, ಇದು ವಿವಿಧ ಐತಿಹಾಸಿಕ ಯುಗಗಳ ಮೂಲಕ ವಿಕಸನಗೊಂಡಿದೆ ಮತ್ತು ಅನೇಕ ಕವಿಗಳು ಮತ್ತು ತತ್ವಜ್ಞಾನಿಗಳ ಕೊಡುಗೆಗಳನ್ನು ಒಳಗೊಂಡಿದೆ ಪ್ರಸ್ತುತ ಸಮಾಜಕ್ಕೆ ಸಾಹಿತ್ಯದ ಭೋಜನವನ್ನು ಉಣಬಡಿಸುವ ಅವಶ್ಯಕತೆಯಿದೆ. ಮೊಬೈಲ್ ಲೋಕದಲ್ಲಿ ಮುಳುಗಿರುವ ಯುವ ಜನತೆಗೆ ಸಾಹಿತ್ಯದ ಮಹತ್ವವನ್ನು ತಿಳಿಸುವುದು ನಮ್ಮೆಲ್ಲರ ಜವಬ್ದಾರಿ ಎಂದು ಕೃತಿಗಳ ಕುರಿತು ಮಾಹಿತಿ ನೀಡಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಕರ್, ಎ.ಐ.ಟಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಟಿ ಜಯದೇವ್, ಹಾಸನ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸುಂದ್ರೇಶ್, ಸಾಹಿತಿಗಳಾದ ಲಕ್ಷ್ಮೀಶಾಮರಾವ್ ಮಾಳತ್ನರ್ ಮತ್ತು ಎಸ್. ಪೂರ್ಣಿಮಾ ಬಾಬು ಶಿರಾ ಉಪಸ್ಥಿತರಿದ್ದರು. ಮಲೆನಾಡು ಕಣ್ಮಣಿ ಪ್ರಶಸ್ತಿಯನ್ನು ಟಿ.ರಾಜಶೇಖರ್, ಬಿ.ಎಂ ರಘು, ಎಂ.ಎಸ್ ಸುಧೀರ್, ಸುಮ ಪ್ರಸಾದ್, ಕೆ.ಎಂ ಜಯ ಪ್ರಕಾಶ್, ಡಾ. ಅವರೇಕಾಳು ವಿಜಯಕುಮಾರ್, ಆರ್. ನವೀನ್ ಕುಮಾರ್ ಅವರಿಗೆ ನೀಡಲಾಯಿತು,

    Book launch by Lakshmi Shamrao Malatnar and S. Purnima Babu Shira

  • ನೂತನ ಬಸ್ ಸಂಚಾರಕ್ಕೆ ಶಾಸಕರಿಂದ ಹಸಿರು ನಿಶಾನೆ

    ನೂತನ ಬಸ್ ಸಂಚಾರಕ್ಕೆ ಶಾಸಕರಿಂದ ಹಸಿರು ನಿಶಾನೆ

    ಚಿಕ್ಕಮಗಳೂರು: ಸಾರ್ವಜನಿಕರ ಬೇಡಿಕೆಗಳನ್ನು ಅರಿತು ಪೂರೈಸುವುದರ ಜೊತೆಗೆ ಅವರ ಉತ್ತಮ ಜೀವನ ನಿರ್ವಹಣೆಗೆ ಸಹಕರಿಸುವುದು ನಮ್ಮ ಜವಾಬ್ದಾರಿ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.

    ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಚಿಕ್ಕಮಗಳೂರಿನಿಂದ ಕಳಸಾಪುರ ಮಾರ್ಗವಾಗಿ ಬೆಂಗಳೂರಿಗೆ, ಹಾಗೂ ಸಗನೀಪುರದಿಂದ ಸಂಚರಿಸುವ ನೂತನ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ನಂತರ ಮಾತನಾಡಿದ ಅವರು ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿ ಮಹಿಳಾ ಸಬಲೀಕರಣಕ್ಕೆ ದಾಪುಗಾಲಿಟ್ಟಿದೆ ಎಂದರು.

    ಶಕ್ತಿ ಯೋಜನೆಯ ಮೂಲಕ ಉಚಿತ ಬಸ್ ಪ್ರಯಾಣವನ್ನು ನೀಡಿರುವುದು ಮಹಿಳೆಯರ ಆರ್ಥಿಕ ಉನ್ನತಿಗೂ ಕಾರಣವಾಗಿದೆ. ಸಗನೀಪುರ ಗ್ರಾಮದ ಅನೇಕರು ಕೃಷಿ ಅವಲಂಬಿತರಾಗಿದ್ದು ಇಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ನಗರದಲ್ಲಿನ ಶಾಲೆಗಳಿಗೆ ತೆರಳಿ ವಿದ್ಯಾಭ್ಯಾಸ ನಿರ್ವಹಿಸಲು ಆಗುತ್ತಿರುವ ಅಡಚಣೆಯನ್ನು ಗಮನಿಸಿ ಇಂದು ಈ ಗ್ರಾಮಕ್ಕೆ ವಿಶೇಷ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

    ಪೋಷಕರು ಮಕ್ಕಳ ಶಿಕ್ಷಣಕ್ಕೆ ಒತ್ತುನೀಡಬೇಕು. ಈ ಭಾಗದಲ್ಲಿ ಬಸ್ ನಿಲ್ದಾಣದ ಬೇಡಿಕೆ ಇದ್ದು ಮುಂದಿನ ದಿನಗಳಲ್ಲಿ ಬಸ್ ನಿರ್ಮಾಣ ಕಾಮಗಾರಿಯ ಕುರಿತು ಕ್ರಮ ವಹಿಸಲಾಗುವುದು. ಅಧಿಕಾರಿಗಳು ಸಮಯ ನಿಗಧಿ ಮಾಡಿ ಸಮಯದ ವೇಳಾಪಟ್ಟಿಯನ್ನು ನೀಡಿ ಬಸ್ ಸೂಕ್ತ ರೀತಿಯಲ್ಲಿ ಸಂಚರಿಸುವಂತೆ ಸೂಚಿಸಿದರು.

    ಜಗದೀಶ್ ಕುಮಾರ್ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ. ಸಾರ್ವಜನಿಕರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಚಿಕ್ಕಮಗಳೂರಿನಿಂದ ಕಳಸಾಪುರ, ಜಾವಗಲ್, ಬಾಣಾವರ, ತಿಪಟೂರು, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಕಾರ್ಯಚರಣೆಗೊಳ್ಳುವ ನೂತನ ಬಸ್‌ಗೆ ಇಂದು ಚಾಲನೆ ನೀಡಿದ್ದು ಪ್ರತಿಯೊಬ್ಬರು ಇದರ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಸ್ವಾಮಿ. ಎ.ಎನ್ ಮಹೇಶ್, ಜಯರಾಜು ಅರಸು, ಮೂರ್ತಿ, ಯತೀಶ್, ಸಿದ್ದರಾಮು, ಆನಂದರಾಜು, ನಾಗೇಶ್, ಹಂಪಾಪುರ ಮಂಜೇಗೌಡ ಉಪಸ್ಥಿತರಿದ್ದರು.

    MLA gives green signal for new bus service

  • ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ

    ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ

    ಚಿಕ್ಕಮಗಳೂರು: ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕ ಸಂಬಳ ೧೫ ಸಾವಿರ ರೂ. ನೀಡಬೇಕೆಂದು ಒತ್ತಾಯಿಸಿ ನಗರದಲ್ಲಿ ಶುಕ್ರವಾರ ಮಹಿಳೆಯರು ಅಕ್ಷರದಾಸೋಹ ಕಾರ್ಯಕರ್ತೆಯರ ಫೆಡರೇಷನ್ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

    ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ ಬಿಸಿಯೂಟ ಕಾರ್ಯಕರ್ತೆಯರು ಹಲವು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಧರಣಿ ನಡೆಸಿ, ಫೆಡರೇಷನ್ ಮುಖಂಡರ ನೇತೃತ್ವ ದಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಮೀನಾನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

    ಶಾಲಾಮಕ್ಕಳ ಬಿಸಿಯೂಟ ತಯಾರಿಕಾರ್ಯದಲ್ಲಿ ದುಡಿಯುತ್ತಿರುವ ಕಾರ್ಯಕರ್ತೆಯರಿಗೆ ಸರ್ಕಾರ ತಿಂಗಳಿಗೆ ಕೇವಲ ೩೬೦೦ ರೂ.ಗಳಿಂದ ೩೭೦೦ರೂ.ಗಳವರೆಗೆ ನೀಡುತ್ತಿದೆ.ಇಂದಿನ ಬೆಲೆ ಏರಿಕೆ ದಿನದಲ್ಲಿ ಜೀವನ ಸಾಗಿಸುವುದು ಕಷ್ಟವಾಗಿದೆ. ಮಕ್ಕಳು ವಿದ್ಯಾಭ್ಯಾಸ ಮತ್ತು ಸಂಸಾರ ಸಾಗಿಸಲು ಕಷ್ಟಕರವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ರಾಜ್ಯಸರ್ಕಾರ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ೬ನೇ ಗ್ಯಾರಂಟಿಯಾಗಿ ೬ಸಾವಿರ ರೂ. ಸಂಬಳ ನೀಡುವುದಾಗಿ ಘೋಷಣೆಮಾಡಲಾಗಿತ್ತು.ಇದುವರೆಗೆ ಸರ್ಕಾರ ಹೇಳಿದಂತೆ ನಡೆದುಕೊಳ್ಳದೆ ಮಹಿಳಾ ಶೋಷ ಣೆಗೆ ಕಾರಣವಾಗಿದೆ.ಕೇಂದ್ರ ಸರ್ಕಾರ ಕಳೆದ ೧೩ ವರ್ಷಗಳಿಂದ ತಾನು ನೀಡಬೇಕಾಗಿದ್ದ ಶೇ.೬೦ರಷ್ಟು ಸಂಬಳವನ್ನು ನೀಡದೆ ಕೇವಲ ೬೦೦ ರೂ.ಗಳನ್ನು ಮಾತ್ರ ನೀಡುತ್ತಿದೆ ಎಂದು ಫೆಡರೇಷನ್ ಮುಖಂಡ ಹೇಳಿದ್ದಾರೆ.

    ರಾಜ್ಯಾದ್ಯಂತ ಈವರೆಗೆ ಹಲವು ಮಂದಿ ಮೃತಪಟ್ಟಿದ್ದಾರೆ ಅವರುಗಳಿಗೆ ಸರ್ಕಾರ ಯಾವುದೇ ಸಹಾಯನೀಡಿಲ್ಲ. ಭವಿಷ್ಯನಿಧಿ, ಇಎಸ್‌ಐನಂತಹ ಸೌಲಭ್ಯಗಳಿರುವುದಿಲ್ಲ.ನಿವೃತ್ತಿವೇತನ ಹಾಗೂ ಇನ್ಯಾವುದೇ ಸವಲತ್ತುಗಳು ಇರುವುದಿಲ್ಲ, ವಾರವಿಡಿ ಮಕ್ಕಳಿಗೆ ಮೊಟ್ಟೆಸುಲಿದ ಹಣವನ್ನು ವರ್ಷಾನುಗಟ್ಟಲೆ ಕೊಟ್ಟಿರುವುದಿಲ್ಲ. ಹಲವು ಹೋರಾಟಗಳ ಬಳಿಕ ಸರ್ಕಾರ ೨೦೨೨ರ ಮಾರ್ಚ್ ೩೧ರನಂತರ ನಿವೃತ್ತಿಗೊಳ್ಳುವ ಕಾರ್ಯಕರ್ತೆಯರಿಗೆ ಅವರವರಸೇವೆಗೆ ಅನುಗುಣವಾಗಿ ೩೦ರಿಂದ ೪೦ಸಾವಿರ ನೀಡುವುದಾಗಿ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

    ದಿನಕ್ಕೆ ೭ ಗಂಟೆ ದುಡಿಯುತ್ತಿರುವ ಕಾಯಕರ್ತೆಯರಿಗೆ ಕನಿಷ್ಟ ೧೫ಸಾವಿರ ಮಾಸಿಕ ವೇತನನೀಡಲು ಬಜೆಟ್‌ನಲ್ಲಿ ಅಳವಡಿಸಿಕೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಇಂದು ಬಿಸಿಯೂಟವನ್ನು ಬಂದ್‌ಗೊಳಿಸಿ ಪ್ರತಿಭಟನೆ ಮುಂದಾಗಿರುವುದಾಗಿ ಹೇಳಿದ್ದಾರೆ.

    ಅಕ್ಷರದಾಸೋಹ ಕಾರ್ಯಕರ್ತೆಯರ ಫೆಡರೇಷನ್ ಜಿಲ್ಲಾಧ್ಯಕ್ಷ ಜಿ.ರಘು, ಜಿಲ್ಲಾ ಪ್ರಧಾನಕಾರ್ಯದರ್ಶಿ ಎಸ್.ವಿಜಯಕುಮಾರ್, ಉಪಾಧ್ಯಕ್ಷ ಕಳಸಪ್ಪ, ಸಿಪಿಐ ಜಿಲ್ಲಾಕಾರ್ಯದರ್ಶಿ ಎಸ್.ಎಲ್.ರಾಧಾಸುಂದರೇಶ್, ವಿವಿಧ ತಾಲೂಕು ಅಧ್ಯಕ್ಷರುಗಳಾದ ಬಗ್ಗವಳ್ಳಿ ಲತಾ, ಇಂದುಮತಿ, ನಾಗಮಣಿ ಗ್ರೇಸಿ, ಯಶೋಧ ಇದ್ದರು.

    Hot meal workers protest demanding fulfillment of various demands

  • ಶ್ರದ್ಧಾ ಭಕ್ತಿಯಿಂದ ತ್ಯಾಗರಾಜರ ಆರಾಧನಾ ಮಹೋತ್ಸವ

    ಶ್ರದ್ಧಾ ಭಕ್ತಿಯಿಂದ ತ್ಯಾಗರಾಜರ ಆರಾಧನಾ ಮಹೋತ್ಸವ

    ಚಿಕ್ಕಮಗಳೂರು: ಕರ್ನಾಟಕ ಸಂಗೀತದ ಪಿತಾಮಹ ಸಂತ ಶ್ರೀ ತ್ಯಾಗರಾಜರು ಮತ್ತು ದಾಸ ಶ್ರೇಷ್ಠ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.

    ಆರಾಧನೆ ಅಂಗವಾಗಿ ಶ್ರೀ ತ್ಯಾಗರಾಜರು ಮತ್ತು ಪುರಂದರ ದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಮಲೆನಾಡು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು. ಬೋಧಕ. ಬೋಧಕೇತರ ಸಿಬ್ಬಂದಿ. ಗಣ್ಯರು ಮತ್ತು ಅತಿಥಿಗಳು ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಿದರು.
    ಸ್ಥಳೀಯ ಸಂಗೀತಗಾರರಿಂದ ಶ್ರೀ ತ್ಯಾಗರಾಜ ಸ್ವಾಮಿಗಳ ಪಂಚರತ್ನ ಕೃತಿಗಳ ಗಾಯನ ಜರುಗಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಲೆನಾಡು ವಿದ್ಯಾ ಸಂಸ್ಥೆಯ ಅಧ್ಯಕ್ಷ ಎನ್. ಕೇಶವಮೂರ್ತಿ ಸಂತರು ಮತ್ತು ಮಹಾತ್ಮರ ಬದುಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸುವ ನಿಟ್ಟಿನಲ್ಲಿ ಕಳೆದ ೪೩ ವರ್ಷಗಳಿಂದ ನಿರಂತರವಾಗಿ ಶ್ರೀ ತ್ಯಾಗರಾಜರು ಮತ್ತು ಪುರಂದರ ದಾಸರ ಆರಾಧನೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

    ಖ್ಯಾತ ಯಕ್ಷಗಾನ ಕಲಾವಿದ. ವಿದ್ವಾಂಸ. ವಾಸುದೇವ ರಂಗಾಭಟ್ ಮಾತನಾಡಿ ಸಂತ ಶ್ರೀ ತ್ಯಾಗರಾಜರು ಅತ್ಯಂತ ಶ್ರೇಷ್ಠ ವಾಗ್ಗೇಯಕಾರರು. ಭಕ್ತಿಯ ಪ್ರತಿಪಾದಕರು ಅಖಂಡವಾದ ರಾಮ ಭಕ್ತಿ ಮತ್ತು ಆಚಲ ನಿಷ್ಠೆಗೆ ಹೆಸರಾದವರು ಎಂದರು.ತ್ಯಾಗರಾಜರು ಮತ್ತು ಪುರಂದರ ದಾಸರ ಕೃತಿಗಳು ಸರ್ವಮಾನ್ಯವಾಗಿವೆ. ಅವರಿಬ್ಬರೂ ಸಂಗೀತ ಕ್ಷೇತ್ರದ ಅಸಾಮಾನ್ಯ ಸಾಧಕರು. ದಾಸ ಪಂಥ ಬೆಳೆಯುವುದಕ್ಕೆ ಮಹತ್ತರವಾದ ಕೊಡುಗೆ ನೀಡಿದವರು ಪುರಂದರದಾಸರು ಎಂದು ಹೇಳಿದರು.

    ಶ್ರೀ ತ್ಯಾಗರಾಜರು ಮತ್ತು ಪುರಂದರ ದಾಸರ ಬದುಕು ಮತ್ತು ಅವರ ಕೃತಿಗಳ ಕುರಿತು ವಿವರಿಸಿದ ರಂಗಾಭಟ್ ಈ ಇಬ್ಬರೂ ಮಹಾತ್ಮರು ಭೌತಿಕವಾಗಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಕೃತಿಗಳ ಮೂಲಕ ಜೀವಂತವಾಗಿದ್ದಾರೆ ಎಂದು ತಿಳಿಸಿದರು. ಮಲೆನಾಡು ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ ಶ್ರೀ ತ್ಯಾಗರಾಜರು ಮತ್ತು ಪುರಂದರ ದಾಸರ ಆರಾಧನೆ ಕಾರ್ಯಕ್ರಮ ಉಳಿದ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

    ಸಂಸ್ಥೆಯ ಉಪಾಧ್ಯಕ್ಷೆ ರಾಧಾ ಸುಂದರೇಶ್ ಮಾತನಾಡಿ ಶ್ರೀ ತ್ಯಾಗರಾಜರು. ಪುರಂದರದಾಸರು ಮತ್ತು ಕನಕದಾಸರು ಸಮಾಜವನ್ನು ತಿದ್ದಿದವರು. ಸಮಾಜವನ್ನು ಸುಧಾರಿಸಿದವರು. ಅಂತಹ ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸಬಾರದು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಆರಾಧನಾ ಮಹೋತ್ಸವ ಸಮಿತಿಯ ಅಧ್ಯಕ್ಷ ಎಸ್. ಶಂಕರನಾರಾಯಣ ಭಟ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

    ಖ್ಯಾತ ಯಕ್ಷಗಾನ ಕಲಾವಿದ. ವಿದ್ವಾಂಸ. ವಾಸುದೇವ ರಂಗಾಭಟ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ. ಗೌರವಿಸಲಾಯಿತು.
    ಮಲೆನಾಡು ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಡಿ. ಎಲ್. ವಿಜಯ ಕುಮಾರ್. ನಿರ್ದೇಶಕಿ ಜಯಶ್ರೀ ಜೋಶಿ. ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಕೆ.ಎನ್. ಮಂಜುನಾಥ ಭಟ್. ಕಚೇರಿ ಕಾರ್ಯದರ್ಶಿ ಶ್ರೀ ಲಕ್ಷ್ಮಿ ಉಪಸ್ಥಿತರಿದ್ದರು.

    The festival of worshipping Tyagaraja with devotion

  • ತ್ರಿಪದಿಗಳ ಮೂಲಕ ಸಮಾಜಕ್ಕೆ ತನ್ನದೇ ಆದ ಕೊಡುಗೆ

    ತ್ರಿಪದಿಗಳ ಮೂಲಕ ಸಮಾಜಕ್ಕೆ ತನ್ನದೇ ಆದ ಕೊಡುಗೆ

    ಚಿಕ್ಕಮಗಳೂರು: ಸಮಾಜದ ಹುಳುಕುಗಳನ್ನು ಜನರ ಆಡು ಭಾಷೆಯಲ್ಲೇ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಸಮಾಜ ಸುಧಾರಕ ಸರ್ವಜ್ಞ ಎಂದು ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದ್ದಾರೆ.

    ಜಿಲ್ಲಾಡಳಿತದ ವತಿಯಿಂದ ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆ ನೀಡಿದ ಶ್ರೇಷ್ಠ ವಚನಕಾರರಾಗಿ ೧೬ನೇ ಶತಮಾನದಲ್ಲಿ ವಿಶ್ವ ಮಾನವ ಸಂದೇಶವನ್ನು ಸಾರಿದ ಸಂತರಾಗಿದ್ದರೆಂದರು

    ಯಾವುದೇ ಒಂದು ಜಾತಿಗೆ ಸೀಮಿತರಾಗದೆ ಸಮಾಜದಲ್ಲಿ ಎಲ್ಲ ವರ್ಗದ ಹಾಗೂ ಎಲ್ಲ ರಂಗಗಳಲ್ಲಿರುವ ಅಂಧಕಾರವನ್ನು ತೊಡೆದು ಹಾಕಲು ಶ್ರಮಿಸಿದ ಮಹಾನ್ ಚೇತನರಾಗಿದ್ದರು. ಅವರ ಆದರ್ಶಗಳು ಎಲ್ಲ ಕಾಲಕ್ಕೂ ಅನ್ವಯವಾಗಲಿದೆ ಎಂದರು.

    ಸಣ್ಣ ಸಣ್ಣ ಸಮುದಾಯಗಳು ಒಗ್ಗಟ್ಟಾಗಿ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಕುಂಬಾರ ಸಮಾಜ ತನ್ನ ವಂಶಪಾರಂಪರವಾಗಿ ಬಂದಿರುವ ಸಾಂಪ್ರದಾಯ ಕಲೆಗಳನ್ನು ಉಳಿಸಿ ಬಳಸಿಕೊಂಡು ಹೋಗಬೇಕು ಎಂದು ಹೇಳಿದರು.

    ಉಪತಹಸೀಲ್ದಾರ್ ರಾಮರಾವ್ ದೇಸಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸರ್ವಜ್ಞರ ಹೆಸರೇ ಸೂಚಿಸಿದಂತೆ ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಮೌಢ್ಯತೆಯನ್ನು ತೆಗೆದು ಹಾಕಲು ಹಾಗೂ ತ್ರಿಪದಿಗಳ ಮೂಲಕ ಜಾಗೃತಿ ಮೂಡಿಸಿದ್ದ ಮಹಾನ್ ಸಂತ, ಸರ್ವಜ್ಞನ ಕವಿಯಾಗಿ ಪ್ರಸಿದ್ಧಿ ಹೊಂದಿದ್ದರು ಎಂದರು.

    ವೇದಮೂರ್ತಿ ಅವರು ಸಂತ ಕವಿ ಸರ್ವಜ್ಞರ ಕುರಿತು ಉಪನ್ಯಾಸ ನೀಡಿದರು. ಕುಂಬಾರ ಸಮಾಜದ ಮುಖಂಡರುಗಳಾದ ಎಂ. ಬಿ. ಅಶೋಕ್ ಕುಮಾರ್, ಕೆ.ಎಂ. ಗಂಗಾಧರ್, ಪರಮೇಶ್, ಜಯ ಪ್ರಕಾಶ್, ಏಕಾಂತ್ ರಾಮು ಮತ್ತಿತರ ಮುಖಂಡರುಗಳು ಭಾಗವಹಿಸಿದ್ದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿ. ರಮೇಶ್ ಸ್ವಾಗತಿಸಿ, ವಂದಿಸಿದರು.

    Saint poet Sarvajna Jayanti program

     

  • ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಅವಶ್ಯಕ

    ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಅವಶ್ಯಕ

    ಚಿಕ್ಕಮಗಳೂರು: ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಅವಶ್ಯಕ. ಸಾಮಾಜಿಕ ನ್ಯಾಯವು ರಾಷ್ಟ್ರಗಳ ಒಳಗೆ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗೆ ಆಧಾರವಾಗಿರುವ ತತ್ವವಾಗಿದೆ. ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ. ಹನುಮಂತಪ್ಪ ಹೇಳಿದರು.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಶಾಂತಿನಗರ(ಪುರಿಭಟ್ಟಿ), ಓಂ ಶಕ್ತಿ ಸಮುದಾಯ ಭವನದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನದ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ವಿಶ್ವದಾದ್ಯಂತ ಲಿಂಗ, ವಯಸ್ಸು, ಜನಾಂಗೀಯ, ಧರ್ಮ, ಸಂಸ್ಕೃತಿ, ಬಡತನ, ನಿರುದ್ಯೊಗ, ಶಿಕ್ಷಣ, ವಲಸೆ, ಆರ್ಥಿಕ ಮುಂತಾದ ಸಾಮಾಜಿಕ ಸಮಸ್ಯೆಗಳು ಗಂಭೀರವಾಗಿವೆ. ಇಂಥ ಸಮಸ್ಯೆಗಳನ್ನು ತೊಡೆದು ಹಾಕುವ ಪ್ರಯತ್ನವಾಗಬೇಕಿದೆ. ಸಾಮಾಜಿಕ ಅಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅದನ್ನು ಸಂಪೂರ್ಣವಾಗಿ ತೊಡೆದು ಹಾಕುವ ಸಲುವಾಗಿ ಪ್ರತಿ ವರ್ಷ ಸಾಮಾಜಿಕ ನ್ಯಾಯ ದಿನ ಆಚರಿಸಲಾಗುತ್ತದೆ ಎಂದು ಹೇಳಿದರು.

    ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಜೀವನಕ್ಕೆ ಅವಶ್ಯವಾದ ಕಾನೂನುಗಳ ಅರಿವು ಪ್ರತಿಯೊಬ್ಬರಿಗೂ ಇರಬೇಕು ಎನ್ನುವ ಉದ್ದೇಶದಿಂದ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿಶ್ವದಲ್ಲೇ ಶ್ರೇಷ್ಠವಾದ ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದ್ದು,

    ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ ತಮಗಿರುವ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ಆಲೋಚನೆಗಳೊಂದಿಗೆ ದೇಶದ ಮಹಾನ್ ನಾಯಕರ ಹಾದಿಯನ್ನು ಅನುಸರಿಸಬೇಕು ಹಾಗೂ ಸಂವಿಧಾನದಲ್ಲಿ ನೀಡಲಾಗಿರುವ ಸಾಮಾಜಿಕ ನ್ಯಾಯದಿಂದಾಗಿ ಸಮಾಜದಲ್ಲಿ ಸಮಾನತೆಯಿದೆ. ವಿದ್ಯಾರ್ಥಿಗಳು ಕಾನೂನುಗಳ ಬಗ್ಗೆ ಅರಿತು ಇತರರಿಗೂ ಅರಿವು ಮೂಡಿಸಬೇಕು ಎಂದು ಹೇಳಿದರು.

    ವಕೀಲ ಆರ್ ರಮೇಶ್ ಕಾನೂನು ಸಾಕ್ಷರತ ಬಗ್ಗೆ ಉಪನ್ಯಾಸ ನೀಡಿ. ಜಗತ್ತಿನೆಲ್ಲೆಡೆ ಲಿಂಗ ತಾರತಮ್ಯ, ಜನಾಂಗೀಯ ಸಂಘರ್ಷ, ಧರ್ಮ, ಸಂಸ್ಕೃತಿ, ಬಡತನ, ನಿರುದ್ಯೋಗ, ಅನಕ್ಷರತೆ, ವಲಸೆಯಂತಹ ಸಾಮಾಜಿಕ ಸಮಸ್ಯೆಗಳು ಗಂಭೀರವಾಗಿವೆ. ಈ ಸಮಸ್ಯೆಗಳನ್ನು ತೊಡೆದು ಹಾಕುವ ಪ್ರಯತ್ನ ಮಾಡಬೇಕಿದೆ. ಸಾಮಾಜಿಕ ಅಸಮಾನತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು? ಜೊತೆಗೆ ಸಾಮಾಜಿಕ ನ್ಯಾಯವೆಂದರೆ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಿ ಹಿಂದುಳಿದವರು, ಬಡವರು, ದುರ್ಬಲರು, ಅಲ್ಪಸಂಖ್ಯಾತರು, ತುಳಿತಕ್ಕೆ ಮತ್ತು ಶೋಷಣೆಗೆ ಒಳಪಟ್ಟ ಅಸಹಾಯಕರನ್ನು ರಾಜಕೀಯವಾಗಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಪಡಿಸುವುದಾಗಿದೆ ಎಂದರು.

    ಲಿಂಗ, ವಯಸ್ಸು, ಜನಾಂಗ, ಜನಾಂಗೀಯತೆ, ಧರ್ಮ, ಸಂಸ್ಕೃತಿ ಅಥವಾ ಅಂಗವೈಕಲ್ಯ ಇತ್ಯಾದಿಗಳಿಗೆ ಜನರು ಎದುರಿಸುತ್ತಿದ್ದಾರೆ. ಮೂಲಭೂತ ಅಡೆತಡೆಗಳನ್ನು ತೆಗೆದುಹಾಕಲು ಸಾಮಾಜಿಕ ನ್ಯಾಯದ ತತ್ವಗಳನ್ನು ಎತ್ತಿಹಿಡಿಯುವುದು ಅವಶ್ಯಕ. ಸಾಮಾಜಿಕ ಅಭಿವೃದ್ಧಿಗಳು ಸಾಮಾಜಿಕ ನ್ಯಾಯ, ಒಗ್ಗಟ್ಟು, ಸಾಮರಸ್ಯ ಮತ್ತು ದೇಶಗಳ ಒಳಗೆ ಮತ್ತು ದೇಶಗಳ ನಡುವೆ ಸಮಾನತೆಯನ್ನು ಗುರಿಯಾಗಿರಿಸಿಕೊಂಡಿವೆ. ಸಾಮಾಜಿಕ ನ್ಯಾಯ, ಸಮಾನತೆಯು ಎಲ್ಲಾ ಸಮಾಜಗಳ ಮೂಲಭೂತ ಮೌಲ್ಯಗಳನ್ನು ರೂಪಿಸುತ್ತದೆ. ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಅನಿಲ್ ಕುಮಾರ್, ನಗರ ಸಭೆ ಉಪಾಧ್ಯಕ್ಷೆ ಅನುಮಧುಕರ್, ನಗರಸಭೆ ವ್ಯವಸ್ಥಾಪಕ ರವಿ, ನಗರಸಭೆ ನಾಮ ನಿರ್ದೇಶಿತ ಸದಸ್ಯ ತಬ್‌ರ್‍ಹೀಸ್ ಅಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.

    Legal literacy program as part of World Day of Social Justice

  • ಮಾ.೧ ರಿಂದ ಅಟಲ್‌ಬಿಹಾರಿ ಪಾಜಪೇಯಿ ಜನ್ಮ ಶತಮಾನೋತ್ಸವ

    ಮಾ.೧ ರಿಂದ ಅಟಲ್‌ಬಿಹಾರಿ ಪಾಜಪೇಯಿ ಜನ್ಮ ಶತಮಾನೋತ್ಸವ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಾ.೧ ರಿಂದ ಮಾಜಿ ಪ್ರಧಾನಮಂತ್ರಿ ಅಟಲ್‌ಬಿಹಾರಿ ಪಾಜಪೇಯಿ ಅವರ ಜನ್ಮ ಶತಮಾನೋತ್ಸವವನ್ನು ಯಶಸ್ವಿ ಹಾಗೂ ವಿಜೃಂಭಣೆಯಿಂದ ವರ್ಷ ಪೂರ್ತಿ ಆಚರಿಸಲು ಬಿಜೆಪಿ ನಿರ್ಧರಿಸಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ತಿಳಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ಎಲ್ಲ ಮಂಡಲಗಳಲ್ಲಿ ವಾಜಪೇಯಿ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಜಿಲ್ಲಾ ಮತ್ತು ಮಂಡಲ ಮಟ್ಟದಲ್ಲಿ ಸಮಿತಿ ರಚಿಸಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಚೈತ್ರಶ್ರೀ ಜಿಲ್ಲಾ ಸಂಚಾಲಕರಾಗಿದ್ದಾರೆ ಎಂದರು.

    ಫೆ.೨೮ ರೊಳಗಾಗಿ ಎಲ್ಲ ಮಂಡಲಗಳಲ್ಲಿ ಅಟಲ್‌ಜಿ ಅವರ ಕಾಲಘಟ್ಟದಲ್ಲಿ ಅವರೊಂದಿಗಿನ ಅನುಭವಗಳನ್ನು ಹೊಂದಿದ್ದವರನ್ನು ಭೇಟಿಮಾಡಿ ಅವರ ನೆನಪುಗಳನ್ನು ಮೆಲುಕು ಹಾಕುವುದು ಮತ್ತು ಅವರಿಗೆ ಸನ್ಮಾನ ಮಾಡಲಾಗುವುದು ಎಂದು ಹೇಳಿದರು.

    ಮಾ.೧ ರಿಂದ ೫ರವರೆಗೆ ಎಲ್ಲ ಮಂಡಲಗಳಲ್ಲಿ ಅಟಲ್‌ಜಿ ಬಗ್ಗೆ ವಿಚಾರ ಸಂಕಿರಣ, ಮಾ.೧೦ ರಿಂದ ೧೪ ರವರೆಗೆ ಭಾಷಣ, ಪ್ರಬಂಧ, ರಂಗೋಲಿ, ಚಿತ್ರಕಲೆ ಮತ್ತಿತರೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಾ.೧೫ ರಂದು ಜಿಲ್ಲಾಮಟ್ಟದ ಅಟಲ್ ಜೀ ವಿರಾಸತ್ ಸಮ್ಮೇಳನ ನಡೆಸಲಾಗುತ್ತದೆ. ಅಟಲ್‌ಜಿ ಸಾಧನೆ ಕುರಿತ ಚಿತ್ರ ಪ್ರದರ್ಶನ, ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಅಟಲ್‌ಜಿ ಅವರ ವ್ಯಕ್ತಿತ್ವದ ಬಗ್ಗೆ ವಿಷಯ ಮಂಡನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

    ಕಾಂಗ್ರೆಸ್ ಸರಕಾರ ಬಂದು ೨೧ ತಿಂಗಳು ಕಳೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಗೆಸ್ಟ್ ಅಪೀಯರೆನ್ಸ್ ಆಗಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅವರ ತೋಟಕ್ಕೆ ಮತ್ತು ರಾಷ್ಟ್ರಧ್ವಜ ಹಾರಿಸಲು ಮಾತ್ರ ಜಿಲ್ಲೆಗೆ ಬರುತ್ತಿದ್ದು, ಜಿಲ್ಲೆಯ ಜನತೆ ಬಗ್ಗೆ ಈ ಮಂತ್ರಿಗೆ ಕಾಳಜಿ ಇಲ್ಲ ಎಂದು ದೂರಿದರು.

    ಗ್ಯಾರಂಟಿ ಹಣ ಬಿಡುಗಡೆಯಾಗಿಲ್ಲ ಎಂದು ಜನ ಕೇಳುತ್ತಿದ್ದಾರೆ ಎಂದರೆ ನಾವು ಅವರಿಗೆ ಮಾಸಿಕ ವೇತನ ನೀಡುತ್ತಿಲ್ಲ ಎಂದು ಜಾರ್ಜ್ ಹೇಳುವ ಮೂಲಕ ರಾಜ್ಯದ ಜನರಿಗೆ ಅಪಮಾನ ಮಾಡಿದ್ದಾರೆ. ಗ್ಯಾರಂಟಿ ಕೊಡಿ ಎಂದು ಕೇಳಿದವರ್‍ಯಾರು? ಕೊಟ್ಟ ಮೇಲೆ ಸಮರ್ಪಕವಾಗಿ ನೀಡುವುದು ಅವರ ಹೊಣೆಯಲ್ಲವೇ ಎಂದು ಪ್ರಶ್ನಿಸಿದರು.

    ಜಿಲ್ಲೆಯ ಮುಳ್ಳಯ್ಯನಗಿರಿ ಭಾಗಕ್ಕೆ ಬೆಂಕಿ ಬಿದ್ದಿದ್ದು, ಇತರೆ ಕಡೆ ಬೆಂಕಿ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯ ರಸ್ತೆಗಳು ಗುಂಡಿಗೊಟರಿನಿಂದ ಸಂಪೂರ್ಣ ಹದಗೆಟ್ಟಿದ್ದು, ಅಭಿವೃದ್ಧಿಗೆ ಹಣವಿಲ್ಲ ಎಂದು ಶಾಸಕರೆ ಹೇಳಿಕೊಂಡಿದ್ದಾರೆ ಎಂದರು.

    ಮುಖಂಡ ವೆಂಕಟೇಶ್ ಮಾತನಾಡಿ, ಕಾಂಗ್ರೆಸ್ ಸರಕಾರದಲ್ಲಿ ಒಂದೇ ಒಂದು ವಸತಿ ಯೋಜನೆಯ ಮನೆ ಮಂಜೂರಾಗಿಲ್ಲ ಎಂದು ದೂರಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಚೈತ್ರಶ್ರೀ, ಪುಷ್ಪರಾಜ್, ದಿನೇಶ್, ಕನಕರಾಜ್ ಅರಸ್, ಹಿರೇಮಗಳೂರು ಪುಟ್ಟಸ್ವಾಮಿ ಮತ್ತಿತರರಿದ್ದರು.

    Birth centenary of Atal Bihari Pajpayee from March 1