Category: ಜಿಲ್ಲಾ ಸುದ್ದಿ

  • ಅಂತಿಮ ಕ್ಷಣದಲ್ಲಿ ಮೋಸ್ಟ್ ವಾಂಟೆಡ್ ನಕ್ಸಲರ ಶರಣಾಗತಿ ಬೆಂಗಳೂರಿಗೆ ಸ್ಥಳಾಂತರ

    ಅಂತಿಮ ಕ್ಷಣದಲ್ಲಿ ಮೋಸ್ಟ್ ವಾಂಟೆಡ್ ನಕ್ಸಲರ ಶರಣಾಗತಿ ಬೆಂಗಳೂರಿಗೆ ಸ್ಥಳಾಂತರ

    ಚಿಕ್ಕಮಗಳೂರು: ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ನಕ್ಸಲರು ಜಿಲ್ಲಾ ಆಡಳಿತದ ಮುಂದೆ ನಿಗದಿಯಾಗಿದ್ದ ೬ ಜನ ನಕ್ಸಲರ ಶರಣಾಗತಿ ಪ್ರಕ್ರಿಯೆ ಅಂತಿಮ ಕ್ಷಣದಲ್ಲಿ ಸ್ಥಳ ಬದಲಾಗುವ ಮೂಲಕ ಅನಗತ್ಯ ಗೊಂದಲ ಸೃಷ್ಟಿಯಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗಲು ತೆರಳಿದರು

    ಬುಧವಾರ ಬೆಳಿಗ್ಗೆ ೧೦ ರಿಂದ ೧೨ ಗಂಟೆಯೊಳಗೆ ಆರು ಜನ ನಕ್ಸಲರು ಜಿಲ್ಲಾಡಳಿತದ ಮುಂದೆ ಶರಣಾಗುವ ಬಗ್ಗೆ ಸಮಯ ನಿಗದಿ ಆಗಿತ್ತು.
    ಸರ್ಕಾರಿ ನೇತೃತ್ವದ ಶರಣಾಗತಿ ಸಮಿತಿ ಸದಸ್ಯರಾದ ಶ್ರೀಪಾಲ್, ಬಂಜಗೆರೆ ಜಯಪ್ರಕಾಶ್, ಪಾರ್ವತೀಶ್ ಜಯಪುರ ಸಮೀಪ ವಾಸ್ತವ್ಯ ಹೂಡಿದ್ದು ಇಂದು ಬೆಳಿಗ್ಗೆ ೮ ರ ಬಳಿಕ ನಕ್ಸಲರೊಂದಿಗೆ ಚಿಕ್ಕಮಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದರು.

    ಇವರಿಗೆ ಜನದನಿ ಸಂಘಟನೆಯ ನೂರ್ ಶ್ರೀಧರ್, ಶ್ರೀಧರ್, ಹಾಗಲಗಂಜಿ ವೆಂಕಟೇಶ್ , ಕೌಳಿ ರಾಮು, ವಳಲೆ ಸರೋಜಾ, ಹಾಗಲಗಂಜಿ ಭಾಗ್ಯ ಸಾತ್ ನೀಡಿದ್ದರು. ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ ಅಮಟೆ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸೇರಿದಂತೆ ಪೊಲೀಸರ ಭಾರಿ ಬಿಗಿ ಬಂದೋಬಸ್ಥಿನಲ್ಲಿ ಶರಣಾಗತಿ ಆಗಲಿದ್ದ ನಕ್ಸಲರು ಜಿಲ್ಲಾ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ದರು

    ಚಿಕ್ಕಮಗಳೂರು ಸಮೀಪದ ಕಡಬಗೆರೆ ಬಳಿ ಬರುತ್ತಿದ್ದಂತೆ ಮುಖ್ಯಮಂತ್ರಿಗಳ ಕಚೇರಿಯಿಂದ ಬಂದ ದೂರವಾಣಿ ಕರೆ ಪೋಲಿಸ್ ಅಧಿಕಾರಿಗಳನ್ನು ಕ್ಷಣ ಕಾಲ ಇಕ್ಕಟ್ಟಿಗೆ ಸಿಲುಕಿಸಿತು. ಶರಣಾಗತಿ ಪ್ರಕ್ರಿಯೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆಯಬೇಕು, ಎಲ್ಲರನ್ನೂ ಅಲ್ಲಿಗೆ ಕರೆತನ್ನಿ? ಎನ್ನುವ ಸಂದೇಶ ಜಿಲ್ಲಾ ಕೇಂದ್ರಕ್ಕೆ ಬರುತ್ತಿದ್ದವರಿಗೆ ಬ್ರೇಕ್ ಹಾಕಿತು. ಸರಿಸುಮಾರು ಅರ್ಧಗಂಟೆಗಳ ಕಾಲ ದಾರಿಯಲ್ಲೇ ನಿಂತು ಚರ್ಚಿಸಿ ಪ್ರಯಾಣ ಮುಂದುವರಿಸಿದ್ದು ಆಲ್ದೂರು ಸಮೀಪ ಬರುತ್ತಿದ್ದಂತೆ ?ಶರಣಾಗತಿ ಬೆಂಗಳೂರಿನಲ್ಲಿ? ಎನ್ನುವುದು ಸ್ಪಷ್ಟವಾಗಿತ್ತು.

    ಇತ್ತ ಚಿಕ್ಕಮಗಳೂರು ಪ್ರವಾಸಿ ಕೇಂದ್ರದಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ, ಜನದನಿ ಸಂಘಟನೆ ಮುಖಂಡರು, ಕಾರ್ಯಕರ್ತರು, ಶರಣಾಗಲಿದ್ದ ನಕ್ಸಲಿಗರ ಬಂಧುಗಳು ಸಮಾವೇಶಗೊಂಡಿದ್ದು ಬರುವಿಕೆಗೆ ಕಾದು ನಿಂತಿದ್ದರು. ಪೊಲೀಸರು ಪ್ರವೇಶ ದ್ವಾರಗಳನ್ನು ಮುಚ್ಚಿ ನಿರ್ದಿಷ್ಟ ಪಡಿಸಿದ ಜನರಿಗಷ್ಟೇ ಒಳ ಬಿಡುತ್ತಿದ್ದು ಇದು ಕೂಡ ಅಸಮಾಧಾನಕ್ಕೆ ಕಾರಣವಾಗಿತ್ತು.

    ಬೆಂಗಳೂರು, ಶಿವಮೊಗ್ಗ ಹಾಸನ ಇನ್ನಿತರ ಕಡೆಗಳಿಂದ ಮಾಧ್ಯಮ ಪ್ರತಿನಿಧಿಗಳು ಆಗಮಿಸಿದ್ದು ನಕ್ಸಲರ ಬರುವಿಕೆಗಾಗಿ ತುದಿಗಾಲಲ್ಲಿ ನಿಂತಿದ್ದರು.
    ಈಗ ಬರುತ್ತಾರೆ ಇನ್ನೇನು ಬರುತ್ತಾರೆ ಎಂದು ಕಾದು ನಿಂತಿದ್ದವರಿಗೆ ಮಧ್ಯಾಹ್ನ ೧೨ ಗಂಟೆ ನಂತರ ಇದ್ದಕ್ಕಿದ್ದಂತೆ ಸ್ಥಳಬದಲಾವಣೆ ಸುದ್ದಿ ಮುಟ್ಟಿದ್ದು, ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.

    ಶರಣಾಗತಿ ಆಗಲಿರುವ ನಕ್ಸಲೀಯರ ತಂದೆ, ತಾಯಿ, ಸಹೋದರ, ಸಹೋದರಿಯರು ಚಿಕ್ಕಮಗಳೂರಿಗೆ ಆಗಮಿಸಿದ್ದರು. ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ಕಾದು ಕುಳಿತಿದ್ದರು. ಅಂತಿಮ ಕ್ಷಣದಲ್ಲಿ ಸ್ಥಳ ಬದಲಾವಣೆಗೆ ಇರುವ ಕಾರಣಗಳು ಏನು ಎನ್ನುವ ಪ್ರಶ್ನೆಯೂ ಎದುರಾಗಿ ಹಲವು ಶಂಕೆ/ ವ್ಯಾಖ್ಯಾನಗಳಿಗೂ ದಾರಿ ನಿರ್ಮಿಸಿತು.

    ಗೊಂದಲಕ್ಕೆ ಕಾರಣ ಯಾರು / ಏನು ಎನ್ನುವ ಪ್ರಶ್ನೆಗೆ ಯಾರಲ್ಲೂ ಸ್ಪಷ್ಟ ಉತ್ತರ ಇರಲಿಲ್ಲ. ಸಂಘಟಕರಿಗೆ ಉತ್ತರಿಸಲಾಗದ ಪರಿಸ್ಥಿತಿ ಎದುರಾಯಿತು. ಮಾಧ್ಯಮಗಳ ಪ್ರತಿನಿಧಿಗಳ ನಿರಂತರ ಪ್ರಶ್ನೆ ಹಿನ್ನೆಲೆಯಲ್ಲಿ ? ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸ್ಥಳ ಬದಲಾವಣೆ ಆಗಿದೆ? ಎಂದಷ್ಟೇ ಕಾರ್ಯಕ್ರಮ ಆಯೋಜಕರು ಉತ್ತರಿಸಬೇಕಾಯಿತು.

    ಬಂದ ದಾರಿಗೆ ಸುಂಕ ಇಲ್ಲ ಎಂದು ಕೆಲವರು ಗೊಣಗುತ್ತಾ ತೆರಳಿದರೆ, ಸಂಬಂಧಿಕರು ಹಾಗೂ ಸಂಘಟಕರನ್ನು ಮೂರು ಪೋಲಿಸ್ ವಾಹನದಲ್ಲಿ ಬೆಂಗಳೂರಿಗೆ ಕಳುಹಿಸಲಾಯಿತು. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಬೇಕಾಗಿದ್ದ ಪ್ರವಾಸಿ ಮಂದಿರ ಆವರಣದಲ್ಲಿ ಕ್ಷಣಮಾತ್ರಕ್ಕೆ ಮೌನ ಆವರಿಸಿ ಬಿಕೋ ಎನ್ನ ತೊಡಗಿತು. ಬೆಳಗಿನಿಂದ ಕಾದಿದ್ದ ಪೊಲೀಸರು ನಿಟ್ಟುಸಿರು ಬಿಟ್ಟು ತೆರಳಿದರು.

    Most wanted Naxal surrenders at the last minute shifted to Bengaluru

  • ಭೀಮ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಬೃಹತ್ ಮೆರವಣಿಗೆ

    ಭೀಮ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಬೃಹತ್ ಮೆರವಣಿಗೆ

    ಚಿಕ್ಕಮಗಳೂರು: ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ನಗರದಲ್ಲಿ ಆಯೋಜಿಸಲಾಗಿದ್ದ ೨೦೭ನೇ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಜರುಗಿತು.

    ನಗರದ ಕೆಇಬಿ ವೃತ್ತದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೀಲಿಯ ಶಾಲು, ನೀಲಿ ಬಾವುಟಗಳು ರಾರಾಜಿಸಿ ಮೆರವಣಿಗೆ ಸಂಪೂರ್ಣ ನೀಲಿಮಯವಾಗಿತ್ತು. ಪುಷ್ಪಾಲಂಕೃತ ವಾಹನಗಳಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಗಳು ಹಾಗೂ ಭೀಮ ಕೋರೆಗಾವ್ ಯುದ್ಧದ ನೇತೃತ್ವವಹಿಸಿದ್ದ ಜಯಸಿದ್ಧ ನಾಯಕರ ಭಾವಚಿತ್ರಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಭೀಮ ಕೋರೆಗಾವ್ ಯುದ್ಧದ ನೆನಪಿನ ಸ್ಮಾರಕ ಸ್ತಂಭದ ಸ್ಥಬ್ದಚಿತ್ರ ಗಮನ ಸೆಳೆಯಿತು.

    ಡ್ರಮ್ಸ್ ಹಾಗೂ ಡಿಜೆ ಮಾದಕ ಹಿಮ್ಮೇಳಕ್ಕೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು. ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅವರಿಗೆ ಜಯವಾಗಲಿ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಮೆರವಣಿಗೆ ಸಾಗುವ ರಸ್ತೆಯ ಇಕ್ಕಿಲಗಳಲ್ಲಿ ವಿವಿಧ ಸಂಘಟನೆಗಳವರು ಸಾರ್ವಜನಿಕರಿಗೆ ಪಾನಕ ವಿತರಿಸಿದರು.

    ಮೆರವಣಿಗೆ ಹನುಮಂತಪ್ಪ ವೃತ್ತಕ್ಕೆ ಬರುತ್ತಿದ್ದಂತೆ ಸಾವಿರಾರು ಸಂಖ್ಯೆಯ ಜನರು ಭವ್ಯ ಮೆರವಣಿಗೆಯನ್ನು ವೀಕ್ಷಿಸಿದರು ಸಂಘಟಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ಕಾರ್ಯಕ್ರಮದ ಮುಂಚೂಣಿಯಲ್ಲಿ ಬಿಎಸ್ಪಿ ಮುಖಂಡರಾದ ಕೆ ಟಿ ರಾಧಾಕೃಷ್ಣ, ಕೆಟಿ ರಾಧಾಕೃಷ್ಣ, ವಕೀಲ ಅನಿಲ್ ಕುಮಾರ್,ಭೀಮ್ ಆರ್ಮಿಯ ಗೌರವಾಧ್ಯಕ್ಷಹೊನ್ನೇಶ್,ಭೀಮಯ್ಯ ,ಹರೀಶ್, ಮತ್ತಿಕೆರೆ ಧರ್ಮರಾಜು, ರಘು ಹುಣಸೇಮಕಿ ಲಕ್ಷ್ಮಣ್ ಸೇರಿದಂತೆ ಹಲವರು ಮುಂಚೂಣಿಯಲ್ಲಿದ್ದರು.

    A grand procession as part of the Bhima Koregaon victory celebrations

  • ಇಂದು ಭೂಗತರಾಗಿದ್ದ ಆರು ನಕ್ಸಲರ ಶರಣಾಗತಿ

    ಇಂದು ಭೂಗತರಾಗಿದ್ದ ಆರು ನಕ್ಸಲರ ಶರಣಾಗತಿ

    ಚಿಕ್ಕಮಗಳೂರು: ದಶಕಗಳ ಕಾಲ ಭೂಗತರಾಗಿದ್ದ ಆರು ನಕ್ಸಲರ ಶರಣಾಗತಿಗೆ ವೇದಿಕೆ ಸಿದ್ಧವಾಗಿದೆ, ಶಾಂತಿಗಾಗಿ ನಾಗರಿಕ ವೇದಿಕೆ ರಾಜ್ಯ ಸರ್ಕಾರದೊಂದಿಗೆ ನಡೆಸಿದ ಸುಧೀರ್ಘ ಮಾತುಕತೆ ಫಲಪ್ರದವಾಗಿದ್ದು ನಾಳೆ ಆರು ಜನ ನಕ್ಸಲರು ಮುಖ್ಯ ವಾಹಿನಿಗೆ ಬರಲಿದ್ದಾರೆ ಎಂದು ಶಾಂತಿಗಾಗಿ ನಾಗರಿಕ ವೇದಿಕೆ ಪ್ರಮುಖ ಮುಖಂಡ ಕೆ.ಎಲ್.ಅಶೋಕ್ ತಿಳಿಸಿದರು

    ಅವರು ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿ ಪ್ರಮುಖವಾಗಿ ಮುಂಡಗಾರು ಲತಾ, ಸುಂದರಿ ಕುಟ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ ಕೆ ವಸಂತ, ಟಿ ಎನ್ ಜೀಶ್ ಅಲಿಯಾಸ್ ಜಯಣ್ಣ ನಾಳೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದು ಈ ಬಗ್ಗೆ
    ರಾಜ್ಯ ಸರಕಾರ ನಕ್ಸಲರ ಪ್ರಮುಖ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ ಎಂದರು

    ಪ್ರಮುಖವಾಗಿ ಮಲೆನಾಡಿನ ಅರಣ್ಯ ಇಲಾಖೆ ಕಿರುಕುಳ, ಗಿರಿಜನರಿಗಾಗಿ ಭೂಮಿ, ದಲಿತರಿಗಾಗಿ ವಸತಿ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಶರಣಾಗಲಿರುವ ನಕ್ಸಲರು ಮುಂದೆ ಇಟ್ಟಿದ್ದಾರೆ ಎಂದು ಕೆಎಲ್ ಅಶೋಕ್ ತಿಳಿಸಿದರು. ಇವುಗಳ ಜೊತೆಗೆ ರಾಜ್ಯ ಸರ್ಕಾರ ಶರಣಾಗುವ ನಕ್ಸಲರನ್ನು ಘನತೆ ಗೌರವದಿಂದ ನಡೆಸಿಕೊಳ್ಳಬೇಕು ಎಂಬ ಶರತ್ತನ್ನು ಇಟ್ಟಿದ್ದೇವೆ ಎಂದರು.

    ಆರು ಜನ ನಕ್ಸಲರು ಶರಣಾಗತಿ ಆಗುತ್ತಿಲ್ಲ, ಬದಲಾಗಿ ಸಮಾಜದ ಮುಖ್ಯ ವಾಹಿನಿಗೆ ಬರುತ್ತಿದ್ದಾರೆ. ಇನ್ನು ಮುಂದೆ ಅವರ ಹೋರಾಟದ ಸ್ವರೂಪ ಮತ್ತು ದಿಕ್ಕು ಬದಲಾಗಲಿದ್ದು ಇಷ್ಟು ದಿನ ಭೂಗತರಾಗಿ ನಡೆಸಿದ ಹೋರಾಟ ಇನ್ನು ಮುಂದೆ ನಾಗರಿಕ ಸಮಾಜದ ನಡುವೆ ಚಳುವಳಿ ರೂಪದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

    ಈ ಹಿಂದೆ ಶರಣಾಗತಿ ಆಗಿದ್ದ ನಕ್ಸಲರನ್ನು ರಾಜ್ಯ ಸರ್ಕಾರ ನಡೆಸಿಕೊಂಡ ರೀತಿ ಹಾಗೂ ಅವರಿಗೆ ಸೌಲಭ್ಯ ಕಲ್ಪಿಸದೇ ಇದ್ದುದರ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಈ ಬಾರಿ ಆ ರೀತಿ ಆಗುವುದಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಬಾರಿ ಲಿಖಿತ ರೂಪದಲ್ಲಿ ರಾಜ್ಯ ಸರ್ಕಾರ ಭರವಸೆ ನೀಡುತ್ತಿದೆ ಎಂದು ತಿಳಿಸಿದರು.

    Six Naxalites who were underground surrendered today

  • ಕೊನೆಯ ಉಸಿರಿರುವ ತನಕ ಜನರಿಗಾಗಿ ಹೋರಾಟ

    ಕೊನೆಯ ಉಸಿರಿರುವ ತನಕ ಜನರಿಗಾಗಿ ಹೋರಾಟ

    ಚಿಕ್ಕಮಗಳೂರು: ಜಿಲ್ಲಾಡಳಿತದ ಮುಂದೆ ಬುಧವಾರ ಶರಣಾಗತಿ ಆಗಲಿರುವ ಪ್ರಮುಖ ನಕ್ಸಲ್ ನಾಯಕಿ ಮುಂಡಗಾರು ಲತಾ ಮಾತನಾಡಿರುವ ವಿಡಿಯೋ ಬಿಡುಗಡೆಯಾಗಿದ್ದು ತಮ್ಮ ಬೇಡಿಕೆ ಸರ್ಕಾರದ ಮುಂದೆ ಒಟ್ಟಿದ್ದಾರೆ.

    ಚಿಕ್ಕಮಗಳೂರಿಗೆ ಆಗಮಿಸುವ ಮುನ್ನಾ ಕಾಡಿನಲ್ಲಿ ಎಲ್ಲಾ ಆರುಜನ ನಕ್ಸಲರು ಸಭೆ ನಡೆಸಿ ನಂತರ ಮಾತನಾಡಿರುವ ಲತಾ, ತಮ್ಮ ಅಭಿಪ್ರಾಯ ಹೇಳಿದ್ದಾರೆ, ಯಾರೆಲ್ಲ ಪ್ರಜಾ ತಾಂತ್ರಿಕ ಸಂವಿಧಾನ ಪರ ಹೋರಾಟ ಬಯಸುತ್ತಿದ್ದಾರೋ ಅದೇ ರೀತಿ ಜನರ ಪರ ಹೋರಾಟ ನಾವು ಮಾಡ್ತೇವೆ ಎಂದಿರುವ ಅವರು ಜನರಪರ ಕೊನೆಯ ಉಸಿರಿರುವ ತನಕ ಜನರಿಗಾಗಿ ಹೋರಾಟ ಮಾಡ್ತೇವೆ ಎಂದಿದ್ದಾರೆ.

    ಕರ್ನಾಟಕ, ಕೇರಳ, ತಮಿಳುನಾಡಿನ ಅರು ಜನ ನಕ್ಸಲರು ನಿಧಾರ ಮಾಡಿ ಚರ್ಚೆ ಮಾಡಿದ್ದೇವೆ, ಅಲ್ಲಿನ ಸ್ಥಿತಿಗಳ ಬಗ್ಗೆ ಸಂಘಟಕರು ಮನವರಿಕೆ ಮಾಡಿಸಿದ್ದಾರೆ ಎನ್ನುವ ಮೂಲಕ ಸರ್ಕಾರದ ಜೊತೆ ಸಂಧಾನಕ್ಕೆ ಯತ್ನಿಸಿದವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಎಲ್ಲಾ ಸಂಗಾತಿಗಳನ್ನು ನಾವು ಮುಂದೆ ನಡೆಯುವ ಹೋರಾಟಕ್ಕೆ ಸ್ವಾಗತಿಸುತ್ತೇವೆ

    ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತೇ ಅನ್ನೋ ಭರವಸೆಯೊಂದಿಗೆ ಬರ್ತಿದ್ದೇವೆ ಎಂದಿರುವ ಲತಾ ನಮ್ಮ ಶರಣಾಗತಿ ಪ್ರಕ್ರಿಯೆಗೆ ಎಲ್ಲಾ ಪ್ರಮುಖ ಸಂಘಟಕರೆಲ್ಲರ ಶ್ರಮ ಹಾಕಿದ್ದಾರೆ ಎಂದು ಹೇಳಿದ್ದಾರೆ.

    Fight for the people until your last breath

     

  • :ಪರೋಪಕಾರಿ ಗುಣದಿಂದ ಮನುಷ್ಯ ದೊಡ್ಡವರಾಗಲು ಸಾಧ್ಯ

    :ಪರೋಪಕಾರಿ ಗುಣದಿಂದ ಮನುಷ್ಯ ದೊಡ್ಡವರಾಗಲು ಸಾಧ್ಯ

    ಚಿಕ್ಕಮಗಳೂರು: ಬಲಾಡ್ಯ ಜಾತಿಗಳಲ್ಲಿ ಜನಿಸಿದರೆ ಮಾತ್ರ ಸ್ವರ್ಗ ದೊರಕದು. ಪರೋ ಪಕಾರಿ ಗುಣ ಇರುವವರಿಗೆ ಪುಣ್ಯ, ಪರಪಿಡುಕನಿಗೆ ನರಕ ಎಂಬುದು ಸನಾತನ ಧರ್ಮದಲ್ಲಿದೆ. ಸನ್ನಡತೆ, ಸದ್ವಿಚಾರಗಳಿಂದ ಕೂಡಿರುವ ಮನುಷ್ಯ ದೊಡ್ಡ ವ್ಯಕ್ತಿಯಾಗಲು ಸಾಧ್ಯ, ಜಾತಿಗಳಿಂದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

    ನಗರದ ಕುವೆಂಪು ಕಲಾಮಂದಿರದಲ್ಲಿ ಸವಿತಾ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ಧ ೨೫ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ಭಾಗವಹಿಸಿ ಅವರು ಮಾತನಾಡಿ ಪ್ರತಿಯೊಬ್ಬ ಮನುಷ್ಯನ ಆತ್ಮದಲ್ಲಿ ದೇವರು ನೆಲೆಸಿರುತ್ತಾನೆ. ನಮ್ಮೊಳಗೆ ಎಂದಿಗೂ ಕೀಳರಿಮೆ ಇರಕೂ ಡದು. ಒಂದು ಕಾಲದಲ್ಲಿ ರಾಜಮಹಾರಾಜರಿಗೆ ದೊರಕದ ದೇವರ ದರ್ಶನ, ಬೇಡರ ಕಣ್ಣಪ ಭಕ್ತಿಗೆ ಒಲಿ ದು ಪರಮಶಿವ ಪ್ರತ್ಯಕ್ಷನಾದನು. ಶ್ರೀ ರಾಮನು ಶಬರಿ ಭಕ್ತಿಗೆ ಮೆಚ್ಚಿ ಎಂಜಲು ತಿಂದರೆ ಹೊರತು ಜಾತಿಯಿಂ ದಲ್ಲ ಎನ್ನುವ ಸತ್ಯ ಅರಿಯಬೇಕು ಎಂದು ತಿಳಿಸಿದರು.

    ಜಗದ ಒಳಿತಿಗಾಗಿ ಶ್ರಮಿಸಿದ ಸವಿತಾ ಮಹರ್ಷಿ ಗುರುಗಳು, ಬಿ.ಆರ್.ಅಂಬೇಡ್ಕರ್, ವಿವೇಕಾನಂದ ರು ಉತ್ತಮ ವಿಚಾರಧಾರೆಗಳಿಂದ ಇಂದಿಗೂ ನೆನೆಸುವಂಥ ಕೆಲಸ ಮಾಡಲಾಗುತ್ತಿದೆ ಹೊರತು ಅಧಿಕಾರ ಅಥವಾ ಅಂತಸ್ತಿನಿಂದಲ್ಲ. ಮನುಷ್ಯನು ಅರ್ಜಿ ಸಲ್ಲಿಸಿ ಜನಿಸಲು ಸಾಧ್ಯವಿಲ್ಲ. ಹುಟ್ಟಿದ ನಂತರ ಬೆಳವಣಿಗೆ ಯತ್ತ ಸಾಗಬೇಕು ಹೊರತು ಜಾತಿಯಿಂದ ಗುರುತಿಸಬಾರದು ಎಂದರು.

    ಅನಾದಿಕಾಲದಲ್ಲಿ ಋಷಿಮುನಿಗಳ ಮುಂದೆ ರಾಜರು ತಲೆಬಾಗುತ್ತಿದ್ದರು. ಇಂದು ಮನುಷ್ಯ ಬದುಕಿ ನಲ್ಲಿ ಸುಂದರವಾಗಿ ಕಾಣಲು ಕ್ಷೌರಿಕ ಅಂಗಡಿಗಳಲ್ಲಿ ತಲೆಬಾಗುತ್ತಾನೆ. ಸಮಾಜದಲ್ಲಿ ಪ್ರತಿಯೊಂದು ಜನಾಂ ಗಕ್ಕೂ ಬದುಕುವ ಹಕ್ಕಿದೆ. ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಆ ನಿಟ್ಟಿನಲ್ಲಿ ಅಂಬೇಡ್ಕರ್ ಸಂವಿಧಾನ ದಡಿ ನಾವುಗಳು ಒಂದು ಎಂಬುದು ಸಾಬೀತುಪಡಿಸಬೇಕು ಎಂದರು.

    ತಿರುಪತಿ ತಿರುಮಲ ದೇವಸ್ಥಾನದ ಮಂಡಳಿ ಸದಸ್ಯ ನರೇಶ್‌ಕುಮಾರ್ ಮಾತನಾಡಿ ಸವಿತಾ ಬಂಧು ಗಳು ಸರ್ಕಾರಗಳ ಸೌಲಭ್ಯಗಳಿಂದ ವಂಚಿತರಾಗುತ್ತಿವೆ. ಹೀಗಾಗಿ ಪ್ರತಿ ಅಂಗಡಿಗಳಲ್ಲಿ ಸೌಲಭ್ಯದ ಕರಪತ್ರಗ ಳು ಹಾಕಿ ಜನಾಂಗಕ್ಕೆ ತಿಳಿಹೇಳುವ ಮೂಲಕ ಸವಿತಾ ಸಮಾಜಕ್ಕೆ ಮೀಸಲಿರಿಸಿರುವ ಸೌಲಭ್ಯಗಳ ಪ್ರಯೋ ಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

    ವಿಶೇಷವಾಗಿ ಸಮಾಜದ ಮಹಿಳೆಯರಿಗೆ ಸ್ವಾವಲಂಬಿ ಜೀವನ ಕೈಗೊಳ್ಳಲು ಸವಲತ್ತುಗಳಿದ್ದು. ಈ ಉ ಪಯೋಗವನ್ನು ಬೆರಳಣಿಕೆಯಷ್ಟು ಮಂದಿ ಬಳಸಿಕೊಂಡಿದೆ. ಹೀಗಾಗಿ ಜನಾಂಗಕ್ಕೆ ಮೀಸಲಿರಿಸಿರುವ ನೂರಾರು ಕೋಟಿ ನಿಗಮಗಳಲ್ಲಿದೆ. ಸಮರ್ಪಕವಾಗಿ ಬಳಸಿಕೊಳ್ಳುವುದು ಅತಿಮುಖ್ಯ. ಎಲ್ಲಾ ಜನಾಂಗಗಳು ಒಂದು, ಬಂಧುಗಳೆಂದು ಭಾವಿಸಿದಾಗ ಮಾತ್ರ ಹಿಂದುತ್ವ ಕಾಪಾಡಲು ಸಾಧ್ಯ ಎಂದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಿಎಸ್ಪಿ ಕೆ.ಟಿ.ರಾಧಾಕೃಷ್ಣ ಇತ್ತೀಚೆಗೆ ಕ್ಷೌರಿಕ ವೃತ್ತಿಯಲ್ಲಿರುವ ಜ ನಾಂಗವನ್ನು ಅಸೃಶ್ಯರೆಂದು ಭಾವಿಸಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿ ಏಳೂವರೆ ದಶಕಗಳು ಕಳೆದ ರೂ ಅಸೃಶ್ಯರಿಗೆ ನೈತಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಇಂದಿಗೂ ಕೆಲವು ಬಡಾವಣೆಗಲ್ಲಿ ದಲಿತ ಸಮುದಾಯಕ್ಕೆ ಬಾ ಡಿಗೆಗೆ ಮನೆಗಳನ್ನು ಕೊಡುವ ಪದ್ಧತಿ ನಿಷೇದಿಸಿರುವುದು ಶೋಚನೀಯ ಎಂದರು.

    ಪ್ರಪಂಚದಲ್ಲಿ ಗಂಡು-ಹೆಣ್ಣು ಎಂಬ ಎರಡೇ ಜಾತಿಗಳಿವೆ. ಆದರೆ ಬಲಾಡ್ಯರ ಜನಾಂಗ ನೋಡುವುದೇ ಬೇರೆಯಾಗಿದೆ. ಹಣವಂತನ, ಜಾತಿ, ಧರ್ಮ ಅಥವಾ ಶುಚಿತ್ವದಿಂದ ಕೂಡಿರುವನೇ ಎಂದು ಅಳಿಯಲಾ ಗುತ್ತಿದೆ. ಅತ್ಯಂತ ಸಣ್ಣ ಇರುವೆಗಳಿಗಿರುವ ಹೊಂದಾಣಿಕೆ, ಪ್ರೀತಿ ನರಮಾನವನ ಬಳಿಯಿಲ್ಲ. ಅಂರ್ತಜಾತಿ ವಿವಾಹದಲ್ಲಿ ಹೆಣ್ಣು, ಗಂಡಿಗೆ ತಾರತಮ್ಯವೆಸಗುತ್ತಿದೆ ಎಂದರು.

    ನಾವೆಲ್ಲರೂ ಒಂದೇ ಎನ್ನುವ ಬಲಾಡ್ಯ ಜನಾಂಗ ಅಥವಾ ರಾಜಕೀಯ ಪಕ್ಷಗಳಿಗೆ ಹಸಿವು, ನಗುವಿನಲ್ಲಿ ಜಾತಿ ಕಾಣುವುದಿಲ್ಲ ಎಂದ ಅವರು ಆಡಳಿತ ಸಮಾಜದಲ್ಲಿ ಮಾತ್ರ ಜಾತಿ ಕಾಣಿಸುತ್ತಿದೆ. ಕೇವಲ ಅಂಬೇ ಡ್ಕರ್ ರಚಿಸಿರುವ ಸಂವಿಧಾನದಲ್ಲಿ ಮಾತ್ರ ಸಮಾನರಾಗಿದ್ದೇವೆ. ಸಾಮಾಜಿಕ ಪಿಡುಗುಗಳಿಗೆ ಜೋತು ಬಿದ್ಧು ಕ್ಷೌರಿಕ ವೃತ್ತಿಯಲ್ಲಿ ಪರಿಶಿಷ್ಟರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯ ಕಿಶೋರ್‌ಕುಮಾರ್ ಬೊಟ್ಯಾಡಿ ಮಾತನಾಡಿ ನದಿಗಳ ನೀರು ಎಲ್ಲೆಡೆ ಹರಿ ದು ಕೊನೆಗೆ ಸಮುದ್ರಕ್ಕೆ ಸೇರಿದಂತೆ, ಎಲ್ಲಾ ಹಿಂದುಳಿದ ವರ್ಗಗಳು ಫಲವತ್ತತೆ ಹೊಂದಿ ಕೊನೆಗೆ ಹಿಂದೂ ಮಹಾಸಾಗರಕ್ಕೆ ಸೇರ್ಪಡೆಗೊಂಡು ಗಟ್ಟಿತನ ಮೆರೆಯಬೇಕು. ಎಲ್ಲಾ ಹಿಂದೂಗಳು ಒಂದೇ ಎಂಬ ಸಂಕಲ್ಪ ಹೊಂದಿದರೆ ಮಾತ್ರ ದೇಶ ಸದೃಢವಾಗಲು ಸಾಧ್ಯ ಎಂದರು.

    ಕಾರ್ಯಕ್ರಮದಲ್ಲಿ ಕನ್ನಡಪೂಜಾರಿ ಹಿರೇಮಗಳೂರು ಕಣ್ಣ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ದರು. ಇದೇವೇಳೆ ಸವಿತಾ ಸಮಾಜದ ಹಿರಿಯ ಸದಸ್ಯರಾದ ಐದು ಮಂದಿಗೆ ಬಾಲಾಜಿ ವಿಗ್ರಹ ನೀಡುವ ಮೂಲಕ ಗೌರವಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಸಿ.ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ರಾಜ್ಯ ತಜ್ಞಮೌಲ್ಯ ನಿರ್ಧರಣಾ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್, ತಾಲ್ಲೂಕು ಸವಿತಾ ಸಮಾಜ ಅಧ್ಯಕ್ಷ ಸಿ.ಎಂ.ಯೋಗೀಶ್, ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಕೆ.ಕೇಶವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

    Savita Samaj 25th Year Silver Jubilee Celebration Program

  • ಪ್ರತಿಯೊಬ್ಬರ ಆರೋಗ್ಯಕರ ಬದುಕಿಗೆ ಸರ್ಕಾರ ಸಿರಿಧಾನ್ಯಗಳಿಗೆ ಉತ್ತೇಜನ

    ಪ್ರತಿಯೊಬ್ಬರ ಆರೋಗ್ಯಕರ ಬದುಕಿಗೆ ಸರ್ಕಾರ ಸಿರಿಧಾನ್ಯಗಳಿಗೆ ಉತ್ತೇಜನ

    ಚಿಕ್ಕಮಗಳೂರು: ಕೃಷಿ ಕ್ಷೇತ್ರವನ್ನು ಲಾಭದ ದೃಷ್ಟಿಯಿಂದ ನೋಡುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರ ಆರೋಗ್ಯಕರ ಬದುಕಿಗೆ ಆಹಾರ ಪದ್ದತಿಗಳ ಬದಲಾವಣೆಗಾಗಿ ಸಾವಯವ ಕೃಷಿಗೆ ಹಾಗೂ ಸಿರಿಧಾನ್ಯಗಳಿಗೆ ಉತ್ತೇಜನ ನೀಡಲು ಸರ್ಕಾರ ಹೆಚ್ಚು ಒತ್ತು ನೀಡಿದೆ ಎಂದು ಕಡೂರು ಕ್ಷೇತ್ರದ ಶಾಸಕ ಕೆ.ಎಸ್ ಆನಂದ್ ತಿಳಿಸಿದರು.

    ಆಹಾರ ಸಂಸ್ಕರಣಾ ಮಂತ್ರಾಲಯ, ಭಾರತ ಸರ್ಕಾರ, ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಏಂPPಇಅ), ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಚಿಕ್ಕಮಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಸಾವಯವ ಮತ್ತು ಸಿರಿಧಾನ್ಯ ಹಬ್ಬ ೨೦೨೪-೨೫ ನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಆರೋಗ್ಯದ ಸಮಸ್ಯೆ ನಿವಾರಣೆಗೆ ಸಿರಿಧಾನ್ಯ ಬಹಳ ಮಹತ್ವ ಪಡೆಯುತ್ತಿದೆ. ಹಿಂದಿನ ಬಡವರ ಆಹಾರ ರಾಗಿ, ಜೋಳ, ನವಣೆ, ಸಜ್ಜೆ ಮುಂತಾದ ಸಿರಿಧಾನ್ಯಗಳು ಇಂದಿನ ಶ್ರೀಮಂತರ ಆಹಾರಗಳಾಗಿ ಬದಲಾಗಿ ಮಹತ್ವ ಪಡೆದುಕೊಂಡಿವೆ ಎಂದು ಹೇಳಿದರು.

    ಜನ ಸಾಮಾನ್ಯರು ಮತ್ತು ಯುವಜನಾಂಗಕ್ಕೆ ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಮಹತ್ವ ಕುರಿತು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದ ಅವರು, ಹಿಂದಿನ ಕೃಷಿ ಪದ್ದತಿಯನ್ನು ತಿಳಿಸುವ ದೃಷ್ಟಿಯಿಂದ ರಾಜ್ಯಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಜೊತೆಗೆ ಈ ರೀತಿ ಸಿರಿಧಾನ್ಯಗಳ ಹಬ್ಬ ಆಚರಣೆ ಮಾಡುತ್ತಿದೆ ಎಂದರು.

    ಇಲ್ಲಿ ಹಾಕಲಾಗಿರುವ ಮಳಿಗೆಗಳಲ್ಲಿ ಹಳೆಯ ಕೃಷಿ ಪರಿಕರಗಳಾದ ಕುಂಟೆ, ನೇಗಿಲು, ಎಡೆಗುಂಟೆ, ಕೂರಿಗೆ, ನೆರಕೋಲು ಸೇರಿದಂತೆ ಎಲ್ಲವನ್ನೂ ನೋಡಿದ ಮೇಲೆ ಸಂತೋಷವಾಯಿತು. ಮತ್ತೊಮ್ಮೆ ಇವುಗಳನ್ನು ನೆನಪಿಸಿದ್ದಕ್ಕೆ ಆಯೋಜಕರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು. ರೈತರ ಸಾಂಪ್ರದಾಯಿಕ ಹಬ್ಬ ಕಾರ ಹಬ್ಬದ ಸಂದರ್ಭದಲ್ಲಿ ಮಾತ್ರ ಈ ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸಿ ಕೃಷಿ ಆರಂಭಿಸುತ್ತಿದ್ದರು. ಆದರೆ ಇವೆಲ್ಲಾ ಆಧುನಿಕತೆಯ ಭರಾಟೆಯಲ್ಲಿ ಮರೀಚಿಕೆಯಾಗಿದೆ ಎಂದು ವಿಷಾಧಿಸಿದರು.

    ಪ್ರಸ್ತುತ ಯುವಪೀಳಿಗೆಗೆ ಹಳೇ ಸಾಂಪ್ರದಾಯಿಕ ಕೃಷಿಪದ್ದತಿ, ಸಾವಯವ ಕೃಷಿ ಮತ್ತು ಸಿರಿಧಾನ್ಯದ ಮಹತ್ವ ತಿಳಿಸುವುದು ಅನಿವಾರ್ಯವಾಗಿದೆ. ಅದಕ್ಕಾಗಿ ರಾಸಯನಿಕ ಮುಕ್ತ ಸಂಪೂರ್ಣ ಆರೋಗ್ಯ ಪೂರ್ಣವಾದ ಆಹಾರ ಬೆಳೆಯಲು ಮುಂದಾಗಬೇಕೆಂದು ಕರೆ ನೀಡಿದರು.

    ಹಿಂದೆ ಜಮೀನಿನಲ್ಲಿ ಕೆಲಸ ಮಾಡುವಾಗ ಊಟಕ್ಕೆ ಕುಳಿತರೆ ಎರೆಹುಳುಗಳು ತಂಡೋಪ ತಂಡವಾಗಿ ಬರುತ್ತಿದ್ದವು. ಉಜ್ವಲ ಬೆಳೆ ಬಂದು ರೈತರ ಬದುಕು ಇದರಿಂದ ಹಸನಾಗುತ್ತಿತ್ತು. ಇಂದು ಯಾವುದೇ ತೋಟ, ಜಮೀನುಗಳಿಗೆ ಹೋದರೆ ಮುಖ್ಯವಾಗಿ ಭೂಮಿಯಲ್ಲಿ ಎರೆಹುಳುಗಳನ್ನು ಕಳೆದುಕೊಂಡಿದ್ದೇವೆ. ರಾಸಾಯನಿಕಗಳಾದ ಕಳೆನಾಶಕ ಸಿಂಪರಣೆ, ಕೀಟನಾಶಕ ಔಷಧಿಗಳ ಬಳಕೆಯಿಂದಾಗಿ ಇವೆಲ್ಲಾ ನಾಶವಾಗಿವೆ ಎಂದರು.

    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಎದುರಾಗುತ್ತಿರುವ ರೋಗರುಜಿನಗಳ ಮುಕ್ತಿಗೆ ಸಿರಿಧಾನ್ಯ ಬಳಕೆ ಉಪಯುಕ್ತ ಆಹಾರ. ಶಕ್ತಿಯುತ ಆಹಾರದ ಕೊರತೆಯನ್ನು ಇಂದು ಕಾಣುತ್ತಿದ್ದೇವೆ. ಅದರ ನಿವಾರಣೆಗೆ ಪೌಷ್ಟಿಕಾಂಶವುಳ್ಳ ಸಿರಿಧಾನ್ಯಗಳ ಬಳಕೆಯಿಂದ ದೇಹಕ್ಕೆ ಬೇಕಾದ ಕಬ್ಬಿಣ, ಲವಣಾಂಶ ಹೆಚ್ಚು ಲಾಭವಾಗುತ್ತಿದೆ, ಈ ನಿಟ್ಟಿನಲ್ಲಿ ಸಿರಿಧಾನ್ಯ ಬಳಕೆ ಹಾಗೂ ಬೆಳೆಯಲು ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.

    ಆಹಾರ ಮಳಿಗೆಗಳಲ್ಲಿ ಸಿರಿಧಾನ್ಯಗಳಿಂದ ಕೇಕ್, ಚಕ್ಕುಲಿ, ನಿಪ್ಪಟ್ಟು, ಸಿಹಿ ತಿನಿಸುಗಳು ಏನೆಲ್ಲಾ ಆಹಾರ ಪದಾರ್ಥ ತಯಾರಿಸಬಹುದೋ ಅವುಗಳನ್ನೆಲ್ಲಾ ಇಲ್ಲಿ ಕಾಣುವುದರ ಜೊತೆಗೆ ಇವು ಹಳೆಯ ಆರೋಗ್ಯ ಪೂರ್ಣ ಆಹಾರ ಎಂಬುದನ್ನು ಸಾಭೀತುಪಡಿಸಿವೆ. ಮನೆಗಳಲ್ಲಿ ಹೆಚ್ಚಾಗಿ ಸಿರಿಧಾನ್ಯದ ಉಪಯೋಗದ ಬಗ್ಗೆ ಅರಿವು ಮೂಡಿಸಿ ಬಳಸುವಂತಾಗಬೇಕು ಆಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಈ ಸಿರಿಧಾನ್ಯ ಹಬ್ಬಕ್ಕೆ ಸಹಕರಿಸಿದ ಶಾಸಕರು, ಪ್ರಗತಿಪರ ರೈತರು ಹಾಗು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

    ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಬಸವಾನಂದ ಮಹಾಸ್ವಾಮೀಜಿ ಮಾತನಾಡಿ, ರಾಗಿ ಉಂಬುವವನು ನಿರೋಗಿ, ಅಕ್ಕಿ ಉಂಬುವವನು ಹಕ್ಕಿಯಂತಾಗುವನು, ಸಿಕ್ಕು ರೋಗದಲಿ ವೈದ್ಯನಿಗೆ ರೊಕ್ಕವನ್ನು ಇಕ್ಕುತ್ತಲಿರುವನು ಎಂಬ ಸರ್ವಜ್ಞನ ನುಡಿಯನ್ನು ಪ್ರಸ್ತಾಪಿಸಿದರು.

    ಅಕ್ಕಿಯನ್ನು ಹೆಚ್ಚು ಉಪಯೋಗಿಸಿದರೆ ಮೂಳೆಗಳು ದುರ್ಬಲವಾಗುತ್ತವೆ. ಗರ್ಭಕೋಶ ಗಟ್ಟಿಯಾಗಿಲ್ಲದ ಪರಿಣಾಮ ಹೆಣ್ಣುಮಕ್ಕಳಿಗೆ ಚಿಕ್ಕಂದಿನಿಂದಲೇ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದೆ. ಅಲ್ಯೂಮಿನಿಯಂ ಪಾತ್ರೆ, ಕುಕ್ಕರ್‌ಗಳಿಂದ ಆಹಾರ ತಯಾರಿಸುತ್ತಿರುವುದರಿಂದ ರೋಗರುಜಿನಗಳಿಗೆ ತುತ್ತಾಗುತ್ತಿದ್ದೇವೆ. ಜೊತೆಗೆ ಆಹಾರ ಪದ್ದತಿಯಲ್ಲಿ ಬಹಳ ದೋಷ ಮಾಡಿಕೊಂಡಿರುವುದರಿಂದ ಇವೆಲ್ಲವಕ್ಕೂ ಕಾರಣ. ಹಿಂದೆ ಮಣ್ಣಿನ ಮಡಿಕೆಯಿಂದ ಆಹಾರ ತಯಾರು ಮಾಡುತ್ತಿದ್ದರು ಎಂದು ಹೇಳಿದರು.

    ಭಾರತದಲ್ಲಿ ಇಡೀ ಆಹಾರದಲ್ಲಿ ಅನ್ನ ಎಂದು ಹೇಳುತ್ತಿದ್ದರು. ಭತ್ತ ತೆಗೆದು ಅಕ್ಕಿ ಮಾಡುತ್ತೇವೆ. ಇಂದು ಅಕ್ಕಿಯನ್ನು ಅಭಿವೃದ್ಧಿಪಡಿಸಿ ಸಾವಿರಾರು ತಳಿಗಳನ್ನು ಸಂಶೋಧಿಸಿದ್ದೇವೆ ಅದರೆ ಹಿಂದಿನ ಕುಟ್ಟಿ ತೆಗೆದ ಅಕ್ಕಿಯ ರುಚಿ ಈಗ ಬರುವುದಿಲ್ಲ ಎಂದು ವಿಷಾಧಿಸಿದರು.

    ಮೂರೊತ್ತು ಅಕ್ಕಿ ತಿನ್ನುವುದನ್ನು ಬಿಟ್ಟು ಪಾಲೀಶ್ ಆಗದ ಅನ್ನದ ಗಂಜಿ ಮಾಡಿ ಊಟ ಮಾಡಿದರೆ ಆಹಾರ ಸರಿಯಾದ ಕ್ರಮದಲ್ಲಿ ಜೀರ್ಣವಾಗಿ ಸಕ್ಕರೆಯನ್ನು ದೇಹಕ್ಕೆ ನೀಡಿ ಶಕ್ತಿ ನೀಡುತ್ತದೆ ಎಂದು ತಿಳಿಸಿದರು.

    ವೇದಿಕೆಯಲ್ಲಿ ಶಿವಮೊಗ್ಗ ವಿ.ವಿ ಉಪಕುಲಪತಿ ಜಗದೀಶ್, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಸಂತೃಪ್ತ ಸಿರಿಧಾನ್ಯಗಳ ಉದ್ಯಮಿ ಮಂಜುನಾಥ್, ಮಾಜಿ ಜಿ.ಪಂ ಸದಸ್ಯೆ ಹೇಮಾವತಿ, ಆನಂದ್ ಗುರೂಜಿ, ಚಂದ್ರಶೇಖರ್ ನಾರಾಯಣಪುರ, ಶಂಕರ್ ನಾಯಕ್, ರವಿ, ಈಶ್ವರಪ್ಪ, ಕೆಂಗೇಗೌಡ, ಚಿದಾನಂದಮೂರ್ತಿ, ರಜಿತ್, ಸಂತೋಷ್ ಉಪಸ್ಥಿತರಿದ್ದರು.

    ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊದಲಿಗೆ ಹಂಸವೇಣಿ ಸ್ವಾಗತಿಸಿದರು.

    District Level Organic and Cereal Festival 2024-25

  • ಪತ್ರಕರ್ತರು ಪ್ರಾಮಾಣಿಕವಾಗಿ ಕೆಲಸಮಾಡಿದಾಗ ಗೌರವ

    ಪತ್ರಕರ್ತರು ಪ್ರಾಮಾಣಿಕವಾಗಿ ಕೆಲಸಮಾಡಿದಾಗ ಗೌರವ

    ಶೃಂಗೇರಿ: ಪತ್ರಕರ್ತರು ಸಮಾಜದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಅವರಿಗೆ ಗೌರವ ಸಿಗುತ್ತಿದೆ.ಹಿರಿಯ ಪತ್ರಕರ್ತರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಸಮಸ್ಯೆಗಳನ್ನು ತೆರೆದಿಡುವ ಯತ್ನಕ್ಕೆ ನಾವು ಸ್ಪಂದಿಸಬೇಕು ಎಂದು ನವದೆಹಲಿ ಇಂಡಿಯನ್ ಫೆಡರೇಷನ್ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ಜಿ.ವಿಜಯ್ ತಿಳಿಸಿದರು.

    ಅವರು ಪ್ರವಾಸಿಮಂದಿರದಲ್ಲಿ ಸೋಮವಾರ ತಾಲೂಕು ಪತ್ರಕರ್ತರ ಸಂಘ ಆಯೋಜಿಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ಸಣ್ಣಪತ್ರಿಕೆಯ ಸಂಘಗಳು ರಾಷ್ಟ್ರವ್ಯಾಪ್ತಿಯಾಗಿ ಬಹಳಷ್ಟು ಸಂಖ್ಯೆಗಳಲ್ಲಿ ಇವೆ.ಆದರೆ ಸಂಘಗಳು ಸಕ್ರಿಯವಾಗಿದ್ದರೆ ಮಾತ್ರ ಸಮುದಾಯ ಗುರುತಿಸುತ್ತದೆ.ಗ್ರಾಮಾಂತರ ಪ್ರದೇಶಗಳಲ್ಲಿ ಸಣ್ಣಪತ್ರಿಕೆ ಸಂಪಾದಕರ ಸ್ಥಿತಿ ಏಕಪಾತ್ರಭಿನಯವಾಗಿದ್ದು ಅವರ ಜೀವನ ನಿರ್ವಹಣೆ ಬಲು ಕಷ್ಟಕರ ಎಂದ ಅವರು ಪತ್ರಕರ್ತರಲ್ಲಿ ಏಕತೆ,ಒಗ್ಗಟ್ಟು ಇದ್ದಾಗ ಮಾತ್ರ ಸಂಘದ ಜೊತೆ ಪರ್ತಕರ್ತರಿಗೂ ಮಾನ್ಯತೆ ದೊರಕುತ್ತದೆ ಎಂದರು.

    ಸಂಘದ ನೂತನ ರಾಜ್ಯಾಧ್ಯಕ್ಷ ಜಿ.ಎಂ.ರಾಜಶೇಖರ್ ಅವರು ಮಾತನಾಡಿ”ಪತ್ರಕರ್ತರ ಆರೋಗ್ಯ ರಕ್ಷಣೆ ಹಾಗೂ ಕುಟುಂಬ ನಿರ್ವಹಣೆಗೆ ಅವರು ಅರ್ಥಿಕವಾಗಿ ಸಬಲತೆ ಪಡೆದಿರುವ ಕಾರಣ ಮುಂಬರುವ ದಿನಗಳಲ್ಲಿ ಪತ್ರಕರ್ತರ ಸಂಘದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲಾಗುವುದು.

    ಪತ್ರಕರ್ತರಿಗೆ ಸಮಸ್ಯೆಗಳು ಎದುರಾದಾಗ ಎಲ್ಲರೂ ಮಾನವೀಯತೆಯಿಂದ ಪರಿಶ್ರಮಿಸಬೇಕಿದೆ ಎಂದ ಅವರು ಜಿಲ್ಲೆಯ ಅಜ್ಜಂಪುರ ಹಾಗೂ ಶೃಂಗೇರಿಯಲ್ಲಿ ಪತ್ರಿಕಾಭವನ ನಿರ್ಮಾಣಕ್ಕೆ ಆದ್ಯತೆ ನೀಡಿ ಕೂಡಲೇ ಕಾರ್ಯಪ್ರವೃತ್ತರಾಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

    ಶೃಂಗೇರಿಯ ನರಸಿಂಹವನದ ಗುರುನಿವಾಸದಲ್ಲಿ  ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರು ರಾಷ್ಟ್ರಾಧ್ಯಕ್ಷ ವಿಜಯ್ ಹಾಗೂ ರಾಜ್ಯಾಧ್ಯಕ್ಷ ಜಿ.ಎಂ.ರಾಜಶೇಖರ್ ಅವರನ್ನು ಅನುಗ್ರಹಿಸಿದರು.ಸುಗುಣ,ದಿನೇಶ್ ಅಂಗುರ್ಡಿ,ಶೋಭಾ,ಸಸಿಮನೆಶಿವಶಂಕರ್,ಪ್ರಶಾಂತ್ ಕಡೂರು ಇದ್ದರು.

    ಸಭೆಯಲ್ಲಿ ಸಂಘದ ಕಾನೂನು ಸಲಹೆಗಾರ ಅಮೃತೇಶ್ವರ,ತಾ|ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಆಗುಂಬೆ ಗಣೇಶ್ ಹೆಗಡೆ,ರಂಜಿತ್,ಸದಸ್ಯರಾದ ರಾಘವೇಂದ್ರ.ಕೆ.ಎನ್,ಗೋಪಾಲಕೃಷ್ಣ,ಅಭಿನವ್,ರಂಜಿತ್,ಸುಬ್ರಮಣ್ಯ ಆಚಾರ್ಯ,ಗಿರಿಜಾ ಪ್ರಸಾದ್ ಹಾಜರಿದ್ದರು.

    Respect when journalists work honestly

  • ಒಗ್ಗಟ್ಟಿನಿಂದ ಬಲಿಷ್ಟವಾದಲ್ಲಿ ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ

    ಒಗ್ಗಟ್ಟಿನಿಂದ ಬಲಿಷ್ಟವಾದಲ್ಲಿ ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ

    ಚಿಕ್ಕಮಗಳೂರು: ಪತ್ರಕರ್ತರ ನಡುವೆ ಇರುವ ಗುಂಪುಗಾರಿಕೆ, ಭಿನ್ನಾಭಿಪ್ರಾಯಗಳಿಂದಾಗಿ ಪತ್ರಕರ್ತರ ಯಾವ ಸಮಸ್ಯೆಗಳಿಗೂ ಪರಿಹಾರ ಸಿಗದಂತಾಗಿದೆ. ಪತ್ರಕರ್ತರು ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಬಲಿಷ್ಟವಾದಲ್ಲಿ ಮಾತ್ರ ಪತ್ರಕರ್ತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿ.ಜಿ.ವಿಜಯ್ ಹೇಳಿದ್ದಾರೆ.

    ತಾಲೂಕಿನ ಬಿಂಡಿಗ ಗ್ರಾಮದಲ್ಲಿರುವ ಬಿಂಡಿಗ ಗ್ರಾಮದಲ್ಲಿ ನಡೆದ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶಾದ್ಯಂತ ಇರುವ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಪ್ರಸಕ್ತ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಈ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಮಾಲಕರು, ಪತ್ರಕರ್ತರಲ್ಲಿನ ಅಭಿಪ್ರಾಯ ಬೇಧ, ಗುಂಪುಗಾರಿಕೆ ಕಾರಣ. ಇದರಿಂದಾಗಿ ಈ ವರ್ಗದ ಪತ್ರಕರ್ತರ ಧ್ವನಿ ಯಾರಿಗೂ ಕೇಳದಂತಾಗಿದೆ ಎಂದರು.

    ರಾಷ್ಟ್ರೀಯ ಒಕ್ಕೂಟದ ಸದಸ್ಯ ಹಾಗೂ ಒಕ್ಕೂಟದ ನಿಕಟಪೂರ್ವ ರಾಜ್ಯಾಧ್ಯಕ್ಷ ಜಿ.ರಮೇಶ್ ಮಾತನಾಡಿ, ೧೯೮೫ರಲ್ಲಿ ಸ್ಥಾಪನೆಯಾದ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟಕ್ಕೆ ದೇಶದ ೧೬ ರಾಜ್ಯಗಳ ಬೆಂಬಲವಿದೆ. ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಎದುರಿಸುತ್ತಿರುವ ಆರ್‌ಎನ್‌ಐ, ಅಕ್ರಿಡೇಶನ್ ಸಮಸ್ಯೆ ಸೇರಿದಂತೆ ಈ ಪತ್ರಿಕೆಗಳಿಗೆ ಸಿಗುವ ಸರಕಾರಿ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ ಎಂದರು.

    ರಾಷ್ಟ್ರೀಯ ಒಕ್ಕೂಟದ ಮುಖಂಡ ಹ್ಯಾರಿ ಡಿಸೋಜ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪತ್ರಕರ್ತರ ಹಲವಾರು ಸಂಘಟನೆಗಳಿದ್ದರೂ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು, ಪತ್ರಕರ್ತರ ಸಮಸ್ಯೆಗಳಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಈ ಪತ್ರಿಕೆಗಳಿಗೆ ವಾರ್ತಾ ಇಲಾಖೆಯಿಂದಲೂ ಮಾನ್ಯತೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ ಎಂದರು.

    ಅಧಿಕಾರ ಸ್ವೀಕರಿಸಿ ಮಾತನಾಡಿದ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ನಿಯೋಜಿತ ರಾಜ್ಯಾಧ್ಯಕ್ಷ ಜಿ.ಎಂ.ರಾಜಶೇಖರ್ ಮಾತನಾಡಿ, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳೂ ಸೇರಿದಂತೆ ಗ್ರಾಮೀಣ ಭಾಗದ ಪತ್ರಕರ್ತರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಪತ್ರಕರ್ತರ ಸಂಘಟನೆಗಳು ಈ ಪತ್ರಕರ್ತರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸದಿರುವುದು ಪತ್ರಕರ್ತರು ಸಂಘಟಿತರಾಗದಿರಲು ಪ್ರಮುಖ ಕಾರಣವಾಗಿದೆ ಎಂದರು.

    ಒಕ್ಕೂಟದ ಕಾನೂನು ಸಲಹೆಗಾರ ಹಾಗೂ ಹೈಕೋರ್ಟ್ ವಕೀಲ ಅಮೃತೇಶ್ ಮಾತನಾಡಿದರು. ಒಕ್ಕೂಟದ ಪದಾಧಿಕಾರಿಗಳು ಹಾಗೂ ವಿವಿಧ ಜಿಲ್ಲೆಗಳ ಪತ್ರಕರ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.

    Solutions to journalists’ problems if they are strengthened by unity

     

     

  • ಜ.26 ರಿಂದ ಜಿಲ್ಲಾ ಆಟದ ಮೈದಾನದಲ್ಲಿ ಫಲಪುಷ್ಪ ಪ್ರದರ್ಶನ

    ಜ.26 ರಿಂದ ಜಿಲ್ಲಾ ಆಟದ ಮೈದಾನದಲ್ಲಿ ಫಲಪುಷ್ಪ ಪ್ರದರ್ಶನ

    ಚಿಕ್ಕಮಗಳೂರು:  ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ಫಲ-ಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಜ.೨೬ ರಿಂದ ೨೮ ರವರೆಗೆ ೩ ದಿನಗಳ ಕಾಲ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಹೆಸ್ ಕೀರ್ತನ ತಿಳಿಸಿದರು.

    ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಸಂಭಾಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ.೨೬ ರಂದು ಬೆಳಗ್ಗೆ ೧೦.೩೦ ಕ್ಕೆ ಫಲ-ಪುಷ್ಪ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಹಾಗೂ ಜನಪ್ರತಿನಿಧಿಗಳು ಉದ್ಘಾಟಿಸುವರು ಎಂದು ಹೇಳಿದರು.

    ಈ ಫಲ-ಪುಷ್ಪ ಪ್ರದರ್ಶನದಲ್ಲಿ ಮೈಸೂರು ದಸರಾ ಉತ್ಸವದಲ್ಲಿ ಪ್ರಶಸ್ತಿ ಪಡೆದ ಮುಖ್ಯ ಆಕರ್ಷಣೆಯಾಗಿದ್ದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರಿಗೆ ಸಂಬಂಧಪಟ್ಟ ಪೂರ್ಣಚಂದ್ರ ತೇಜಸ್ವಿ ವಿಸ್ಮಯ ಪ್ರಪಂಚ ಪುಷ್ಪ ಕಲಾಕೃತಿಗಳ ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆಯಾಗಲಿದೆ ಎಂದರು.

    ವಿವಿಧ ಅಲಂಕಾರಿಕ ಕುಂಡಗಳ ಜೋಡಣೆ, ತರಕಾರಿ ಕೆತ್ತನೆಯ ಪ್ರದರ್ಶಿಕೆಗಳು, ಇಕೇಬಾನ ಪ್ರದರ್ಶನ ಹಾಗೂ ಇತರೆ ಹೂವುಗಳ ಕಲಾಕೃತಿಗಳ ಪ್ರದರ್ಶನ ಜನರ ಮನಸೂರೆಗೊಳ್ಳಲಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ರೈತರು ಬೆಳೆದ ಹಣ್ಣು-ತರಕಾರಿಗಳನ್ನು ಪ್ರದರ್ಶಿಸಲಾಗುವುದು ಎಂದ ಅವರು ತಾಂತ್ರಿಕ ತೋಟಗಾರಿಕಾ ಕೈಪಿಡಿಯಲ್ಲಿ ಜಾಹೀರಾತು ನೀಡಲು ಜ.೧೩ ರವರೆಗೆ ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.

    ಜಿಲ್ಲೆಯ ಎಸ್ಟೇಟ್ ಮತ್ತು ನಗರ ವಾಸಿಗಳಿಗೆ ಉತ್ತೇಜನ ನೀಡಲು ಉತ್ತಮ ಉದ್ಯಾನವನ ನಿರ್ವಹಣೆಗಾಗಿ ಸ್ಪರ್ಧೆ ಏರ್ಪಡಿಸಲಾಗಿದೆ. ಇದರಲ್ಲಿ ಎಸ್ಟೇಟ್ ಮಾಲೀಕರು, ನಗರವಾಸಿಗಳು ಭಾಗವಹಿಸಬಹುದಾಗಿದ್ದು, ಸಾರ್ವಜನಿಕರು ತಮ್ಮಲ್ಲಿರುವ ಬೋನ್ಸಾಯ್ ಸಸಿಗಳು, ವಿಶೇಷವಾದ ಅಲಂಕಾರಿಕ ಮತ್ತು ಹೂವಿನ ಕುಂಡಗಳಿದ್ದಲ್ಲಿ ಈ ಫಲಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲು ಸ್ಥಳಾವಕಾಶ ನೀಡಲಾಗುವುದು ಎಂದರು.

    ಜ.೨೭ ರಂದು ಪಶುಸಂಗೋಪನೆ ಇಲಾಖೆಯಿಂದ ಶ್ವಾನ ಪ್ರದರ್ಶನ, ಜ.೨೮ ರಂದು ಸಾರ್ವಜನಿಕರಿಗಾಗಿ ಹಣ್ಣುಗಳಿಂದ ತಯಾರಿಸಿದ ಖಾದ್ಯಗಳ ಫಲಪಾಕ ಸ್ಪರ್ಧೆ ಏರ್ಪಡಿಸಲಾಗಿದೆ. ಕೃಷಿ ಇಲಾಖೆಯಿಂದ ಸಿರಿಧಾನ್ಯ ರಾಶಿ, ಸಿರಿಧಾನ್ಯದಿಂದ ರಂಗೋಲಿ ಪ್ರದರ್ಶನ, ಆರೋಗ್ಯ ಇಲಾಖೆಯಿಂದ ತಾಯಿಮಗು ಪರಿಕಲ್ಪನೆಯ ಹೂವಿನ ಕಲಾಕೃತಿ, ಮೀನುಗಾರಿಕೆ ಇಲಾಖೆಯಿಂದ ಅಕ್ವೇರಿಯಂ ಮತ್ತು ಅಲಂಕಾರಿಕ ಮೀನುಗಳ ಪ್ರದರ್ಶನ ಮತ್ತು ಮಾರಾಟ, ರೇಷ್ಮೆ ಇಲಾಖೆಯಿಂದ ರೇಷ್ಮೆ ಹುಳುವಿನ ಜೀವನ ಚಕ್ರದ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿದೆ ಎಂದು ವಿವರಿಸಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೀಟ ಸಂಗ್ರಹಾಲಯದ ಪ್ರದರ್ಶನ, ನಾಣ್ಯಗಳು ಹಾಗೂ ಮ್ಯೂಸಿಯಂ ವಸ್ತುಗಳ ಪ್ರದರ್ಶನ, ಪೂರ್ಣಚಂದ್ರ ತೇಜಸ್ವಿ ಬರೆದಿರುವ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ, ಪ್ರವಾಸೋದ್ಯಮ ಇಲಾಖೆಯಿಂದ ಮೂರು ದಿನಗಳ ಹಾಟ್ ಏರ್ ಬಲೂನ್ ರೈಡಿಂಗ್ ಅವಕಾಶವಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಿಂದ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

    ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ರೈತಬಾಂಧವರು, ವಿದ್ಯಾರ್ಥಿಗಳು, ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಫಲಪುಷ್ಪ ಪ್ರದರ್ಶನವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.
    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಮೀನಾನಾಗರಾಜ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.

    Flower exhibition at the district playground from January 26

  • ಮತದಾರರ ಸಂಕ್ಷಿಪ್ತ ಪರಿಷ್ಕರಣೆ ಬಳಿಕ ಜಿಲ್ಲೆಯಲ್ಲಿ ಒಟ್ಟು ೯೭೩೨೯೫ ಮತದಾರರು

    ಮತದಾರರ ಸಂಕ್ಷಿಪ್ತ ಪರಿಷ್ಕರಣೆ ಬಳಿಕ ಜಿಲ್ಲೆಯಲ್ಲಿ ಒಟ್ಟು ೯೭೩೨೯೫ ಮತದಾರರು

    ಚಿಕ್ಕಮಗಳೂರು: ಮತದಾರರ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಅತಿಮ ಪಟ್ಟಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು ೯೭೩೨೯೫ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶೃಂಗೇರಿ ಕ್ಷೇತ್ರದಲ್ಲಿ ೮೨೧೨೨ ಪುರುಷರು, ೮೬೭೫೯ ಮಹಿಳೆಯರು ಸೇರಿ ಒಟ್ಟು ೧೬೮೮೮೨ ಮತದಾರರಿದ್ದಾರೆ. ೨೦೨೪ ರಲ್ಲಿ ಒಟ್ಟು ೧೬೮೬೫೩ ಮತದಾರರಿದ್ದರು. ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ೮೩೦೦೪ ಪುರುಷರು, ೮೭೯೪೧ ಮಹಿಳೆಯರು ಸೇರಿ ೧೭೦೯೪೭ ಮತದಾರರಿದ್ದಾರೆ. ೨೦೨೪ ರಲ್ಲಿ ಒಟ್ಟು ೧೭೧ ೨೨೮ ಮತದಾರರಿದ್ದರು.

    ಚಿಕ್ಕಮಗಳೂರು ಕ್ಷೇತ್ರದಲ್ಲಿ ೧೧೩೧೫೯ ಪುರುಷರು, ೧೧೭೬೭೩ ಮಹಿಳೆಯರು ಸೇರಿ ೨೩೦೮೫೧ ಮತದಾರರಿದ್ದಾರೆ. ಕಳೆದ ವರ್ಷ ಒಟ್ಟು ೨೩೧೨೬೪ ಮತದಾರರಿದ್ದರು. ತರೀಕೆರೆ ಕ್ಷೇತ್ರದಲ್ಲಿ ೯೫೪೬೧ ಪುರುಷರು, ೯೮೭೧೬ ಮಹಿಳೆಯರು ಸೇರಿ ಒಟ್ಟು ೧೯೪೧೭೯ ಮತದಾರರಿದ್ದಾರೆ. ೨೦೨೪ ರಲ್ಲಿ ಒಟ್ಟು ೧೯೪೦೫೫ ಮತದಾರರಿದ್ದರು. ಕಡೂರು ಕ್ಷೇತ್ರದಲ್ಲಿ ೧೦೩೬೫೬ ಪುರುಷರು, ೧೦೪೭೭೬ ಮಹಿಳೆಯರು ಸೇರಿ ೨೦೮೪೪೩೬ ಮತದಾರರಿದ್ದಾರೆ. ೨೦೨೪ ರಲ್ಲಿ ಒಟ್ಟು ೨೦೮೭೧೩ ಮತದಾರರಿದ್ದರು.

    ೨೦೨೪ ಅಕ್ಟೋಬರ್ ೨೯ ರ ಹಿಂದಿನ ಪಟ್ಟಿಗೆ ಹೋಲಿಸಿದಲ್ಲಿ ವಿಶೇಷ ಪರಿಷ್ಕರಣೆ ನಂತರ ಜಿಲ್ಲೆಯಲ್ಲಿ ಒಟ್ಟು ೬೧೮ ಮತದಾರರ ಸಂಖ್ಯೆ ಕಡಿಮೆ ಆಗಿದೆ. ಇದಕ್ಕೆ ನಿಧನ ಹೊಂದಿದವರನ್ನು ಕೈಬಿಟ್ಟಿರುವುದು ಸೇರಿದಂತೆ ವರ್ಗಾವಣೆ ಇನ್ನಿತರೆ ವಿಷಯಗಳು ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಪಟ್ಟಿ ಪರಿಷ್ಕರಣೆ ನಂತರವೂ ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ. ಒಟ್ಟು ೪೭೭೪೦೨ ಪುರುಷ ಮತದಾರರಿದ್ದರೆ, ೪೯೫೮೬೫ ಮಹಿಳಾ ಮತದಾರರಿದ್ದಾರೆ. ಪುರುಷರಿಗಿಂತ ಒಟ್ಟು ೧೮೪೬೩ ಮಹಿಳಾ ಮತದಾರರು ಹೆಚ್ಚಿದ್ದಾರೆ. ಜಿಲ್ಲೆಯ ಐದೂ ವಿಧಾನ ಸಭಾ ಕ್ಷೇತ್ರಗಳಲ್ಲೂ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ.ಚಿಕ್ಕಮಗಳೂರು ಕ್ಷೇತ್ರದಲ್ಲಿ ೧೯, ಶೃಂಗೇರಿ-೧, ಮೂಡಿಗೆರೆ-೨, ತರೀಕೆರೆ-೨ ಹಾಗೂ ಕಡೂರು ಕ್ಷೇತ್ರದಲ್ಲಿ ೪ ಮಂದಿ ಸೇರಿ ಒಟ್ಟು ೨೮ ಮಂದಿ ಇತರೆ ಮತದಾರರಿದ್ದಾರೆ.

    ಸೇನೆ ಸೇರಿದಂತೆ ವಿವಿಧ ಸೇವೆಗಳಲ್ಲಿ ಮತಕ್ಷೇತ್ರದಿಂದ ಹೊರಗಿರುವ ಮತದಾರರ ಸಂಖ್ಯೆ ಜಿಲ್ಲೆಯಲ್ಲಿ ಒಟ್ಟು ೪೨೨ ಇದ್ದು, ಇದರಲ್ಲಿ ೪೩೦ ಪುರುಷರು, ೧೨ ಮಂದಿ ಮಹಿಳೆಯರಿದ್ದಾರೆ. ಕಳೆದವರ್ಷ ಇದರ ಸಂಖ್ಯೆ ೪೪೯ ಇತ್ತು. ಜಿಲ್ಲೆಯಲ್ಲಿ ೧೮ ರಿಂದ ೨೧ ವರ್ಷದೊಳಗಿನ ೧೦೨೮೬ ಯುವ ಮತದಾರರಿದ್ದಾರೆ. ಇದರಲ್ಲಿ ೫೩೫೩ ಪುರುಷರು ಹಾಗೂ ೪೯೩೩ ಮಹಿಳೆಯರಿದ್ದಾರೆ.

    ಮತದಾರರ ಪಟ್ಟಿ ಮಾರ್ಪಾಡು ವೇಳೆ ಜಿಲ್ಲೆಯಲ್ಲಿ ಒಟ್ಟು ಹೊಸದಾಗಿ ೩೮೫೫ ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದರೆ, ೪೪೭೩ ಮತದಾರರನ್ನು ಕೈಬಿಡಲಾಗಿದೆ. ಒಟ್ಟು ೩೮೮೦ ಮಾರ್ಪಾಡುಗಳು ಆಗಿವೆ. ಶೃಂಗೇರಿ ಕ್ಷೇತ್ರದಲ್ಲಿ ೮೧೦ ಸೇರ್ಪಡೆ, ೫೮೧ ತೆರವು, ಮೂಡಿಗೆರೆಯಲ್ಲಿ ೩೮೯ ಸೇರ್ಪಡೆ, ೧೧೧೯ ತೆರವು, ಚಿಕ್ಕಮಗಳೂರಿನಲ್ಲಿ ೮೧೫ ಸೇರ್ಪಡೆ, ೧೨೨೮ ತೆರವು, ತರೀಕೆರೆಯಲ್ಲಿ ೭೬೮ ಸೇರ್ಪಡೆ, ೯೦೧ ತೆರವು ಹಾಗೂ ಕಡೂರು ಕ್ಷೇತ್ರದಲ್ಲಿ ೬೨೪ ಸೇರ್ಪಡೆ ಹಾಗೂ ೯೦೧ ಮತದಾರರ ಹೆಸರನ್ನು ತೆರವು ಮಾಡಲಾಗಿದೆ ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸಿಇಓ ಎಚ್.ಎಸ್.ಕೀರ್ತನಾ ಇದ್ದರು.

    After a brief revision of voters a total of 973295 voters were registered in the district.