Category: ಚಿಕ್ಕಮಗಳೂರು

  • ಸಮಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ಅಗತ್ಯ

    ಸಮಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ಅಗತ್ಯ

    ಮೈಸೂರು:  ಜಡ್ಡುಗಟ್ಟಿದ ಸಮಾಜದಲ್ಲಿ ಪರಿವರ್ತನೆಯಾಗಬೇಕಾದರೆ ಹೆಚ್ಚು ಜನರಿಗೆ ಬುದ್ಧ ಬಸವ, ಅಂಬೇಡ್ಕರ್ ಅವರ ತತ್ವ ಆದರ್ಶಗಳು ಪರಿಚಿತವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

    ಅವರು ಇಂದು ಕರ್ನಾಟಕ ರಾಜ್ಯ ಭಿಕ್ಷು ಸಂಘ, ಬೌದ್ಧ ಸಂಘ ಸಂಸ್ಥೆಗಳು ಹಾಗೂ ರಾಜ್ಯ ಅಂಬೇಡ್ಕರ್ ವಾದಿ ಸಂಘ ಸಂಸ್ಥೆಗಳು ಮತ್ತು ವಿಶ್ವಮೇತ್ರಿ ಬುದ್ಧ ವಿಹಾರ ಇವರ ಸಂಯುಕ್ತಶ್ರಯದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಬೌದ್ಧ ಮಹಾ ಸಮ್ಮೇಳನ ಮತ್ತು ಮಾನವ ಮೈತ್ರಿಯ ಪಯಣ 2025 ಅಂತರಾಷ್ಟ್ರೀಯ ಬೌದ್ಧ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಎಲ್ಲರಿಗೂ ಸಮಾನ ಅವಕಾಶಗಳು ಇಲ್ಲದ ಕಾರಣ ಅಸಮಾನತೆ ನಿರ್ಮಾಣವಾಗಿದೆ. ಪ್ರತಿಯೊಬ್ಬರೂ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಹೊಂದಿದರೆ ಮಾತ್ರ ಸಮಾನತೆ ಸಾಧ್ಯವಾಗುತ್ತದೆ ಎಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದರು. ಪರಧರ್ಮ ಸಹಿಷ್ಣುತೆ ಸಹಬಾಳ್ವೆಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಮಾತ್ರ ದೇಶದಲ್ಲಿ ಶಾಂತಿ, ಅಹಿಂಸೆ ಸತ್ಯ ನೆಲೆಗೊಳ್ಳಲು ಸಾಧ್ಯ ಎಂದು ಹೇಳಿದರು ಎಂದರು.

    ಎಸ್ ಸಿಎಸ್ ಪಿ /ಟಿಎಸ್ ಪಿ ಯೋಜನೆಗಾಗಿ 42 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಸಮಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ಬರಲೇಬೇಕು. ನಮ್ಮ ಸರ್ಕಾರ ಗುತ್ತಿಗೆಗಳಲ್ಲಿ ಮೀಸಲಾತಿಯನ್ನು ತಂದಿದೆ. ಬಡ್ತಿಯಲ್ಲಿ ಮೀಸಲಾತಿಯನ್ನು ಸರ್ವೋಚ್ಛ ನ್ಯಾಯಾಲಯ ಕೊಡದಿದ್ದರೂ ಸಮಿತಿ ರಚಿಸಿ, ಅದರ ವರದಿಯ ಆಧಾರದ ಮೇಲೆ ಬಡ್ತಿಯಲ್ಲಿ ಮೀಸಲಾತಿಯನ್ನು ಜಾರಿಗೆ ತರಲಾಯಿತು ಎಂದರು.

    ಸಮಾನತೆಯ ಜಾಗೃತಿಯ ಜೊತೆಗೆ ಪೂರಕ ಕಾರ್ಯಕ್ರಮಗಳಿದ್ದರೆ ಆರ್ಥಿಕ, ಸಾಮಾಜಿಕ ಶಕ್ತಿ ಬರುತ್ತದೆ. ಅಸಮಾನತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಭಾಗ್ಯಗಳು ಮತ್ತು ಗ್ಯಾರಂಟಿ ಯೋಜನೆಗಳನ್ನು ನಮ್ಮ ಅಧಿಕಾರದ ಅವಧಿಯಲ್ಲಿ ನೀಡಲಾಗಿದೆ ಎಂದು ಪ್ರತಿಪಾದಿಸಿದರು.

    ಶಕ್ತಿ ಯೋಜನೆಯಿಂದಾಗಿ ಒಂದು ದಿನದಲ್ಲಿ ಹಾಸನಾಂಬೆ ದರ್ಶನಕ್ಕೆ ಭೇಟಿ ನೀಡಿದ ಒಟ್ಟು 9 ಲಕ್ಷ ಜನರಲ್ಲಿ ಪೈಕಿ ಶೇ 70 ರಷ್ಟು ಮಹಿಳೆಯರೇ ಇದ್ದಾರೆ. ದೇವಸ್ಥಾನ, ಕೆಲಸದ ಸ್ಥಳಗಳಿಗೆ ಮಹಿಳೆಯರು ಓಡಾಡುವಂತಾಗಿ ಸ್ವಾವಲಂಬಿಗಳಾಗಿದ್ದಾರೆ ಎಂದರು. ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ 4 ರಿಂದ 5 ಸಾವಿರ ರೂ.ಗಳು ದೊರೆಯುತ್ತಿವೆ ಎಂದು ತಿಳಿಸಿದರು.

    ಸಮಾಜದ ಅಸಮಾನತೆ ತೊಲಗಿಸಲು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಶಕ್ತಿಯನ್ನು ಜನರಲ್ಲಿ ತುಂಬಬೇಕು. ಬುದ್ಧ , ಬಸವಣ್ಣ ಹಾಗೂ ಅಂಬೇಡ್ಕರ್ ರಂತಹ ಮಹಾನ್ ಚೇತನರು ಈ ನಿಟ್ಟಿನಲ್ಲಿ ಪ್ರಯತ್ನಿಸಿದರು. ಸಮಾಜದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಕೆಲವು ಮನುವಾದಿಗಳ ಸಂಚಿನಿಂದ ಇಂದಿಗೂ ಬದಲಾವಣೆ ಸಾಧ್ಯವಾಗಿಲ್ಲ. ಸಚಿವ ಪ್ರಿಯಾಂಕ ಖರ್ಗೆಯವರು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಕೋರಿ ಪತ್ರ ಬರೆದಿದ್ದರು. ತಮಿಳುನಾಡಿನಲ್ಲಿ ಈ ದಿಸೆಯಲ್ಲಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

    ಸಮಾಜದಲ್ಲಿ ಬದಲಾವಣೆ ತರುವ ನಮ್ಮ ಪ್ರಯತ್ನಕ್ಕೆ ಹಲವು ತೊಡಕು ಎದುರಾಗುತ್ತವೆ. ಮೌಢ್ಯಗಳು, ಕಂದಾಚಾರಗಳ ನಿಗ್ರಹಕ್ಕೆ ನಮ್ಮ ಸರ್ಕಾರ ಕಾನೂನು ರೂಪಿಸಿದೆ ಎಂದರು.

    ಅಂಬೇಡ್ಕರ್ ರವರು ಯಾವುದೇ ಜಾತಿಯ ಪರವಾಗಿಯೂ ನಿಂತವರಲ್ಲ. ಎಲ್ಲಾ ಜಾತಿವರ್ಗಗಳನ್ನು ಒಂದೇ ಎಂದು ಪರಿಗಣಿಸುವ ಸಮಾನತೆ ಹಾಗೂ ಸಮಸಮಾಜ ನಿರ್ಮಾಣವಾಗಬೇಕೆಂದು ಬಯಸಿದವರು. ಚಲನೆಯಿಲ್ಲದ ಸಮಾಜಕ್ಕೆ ಆರ್ಥಿಕ ಶಕ್ತಿ ತುಂಬುವ ಮೂಲಕ ಚಲನೆಯನ್ನು ನೀಡಬೇಕಾಗಿದೆ. ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮಂತ್ರವನ್ನು ಪಠಿಸಿದ್ದ ಅಂಬೇಡ್ಕರ್ ರವರು ಇದರ ಮೂಲಕ ಸಮಾಜದ ಬದಲಾವಣೆಯನ್ನು ಬಯಸಿದ್ದರು. ಈ ಹಿಂದೆ ಶೂದ್ರರಿಗೆ, ಮಹಿಳೆಯರನ್ನು ಶಿಕ್ಷಣದಿಂದ ದೂರವಿಡಲಾಗುತ್ತಿತ್ತು. ತನ್ನ ವಿದ್ಯಾರ್ಥಿದೆಸೆಯ ಘಟನೆಯನ್ನು ಸ್ಮರಿಸಿಕೊಂಡರು.
    ಸಮಾಜದಲ್ಲಿನ ಜಾತಿವ್ಯವಸ್ಥೆಯೂ ಸಹ, ಬದಲಾವಣೆಯ ಪ್ರಯತ್ನಗಳ ನಡುವೆಯೂ ಮತ್ತೆ ಮರುಕಳಿಸುತ್ತಿದೆ ಎಂದು ತಮ್ಮ ಅನುಭವವನ್ನು ಮುಖ್ಯಮಂತ್ರಿಗಳು ಹಂಚಿಕೊಂಡರು.

    ಎಸ್ ಸಿ ಪಿ/ ಟಿಎಸ್ ಪಿ ಕಾಯ್ದೆಯನ್ನು ಜಾರಿಗೆ ತಂದ ಹೆಗ್ಗಳಿಕೆ ಕಾಂಗ್ರೆಸ್ ಸರ್ಕಾರಕ್ಕಿದೆ. ಆಂಧ್ರ, ತೆಲಂಗಾಣ ಮತ್ತು ಕರ್ನಾಟಕವನ್ನು ಹೊರತುಪಡಿಸಿ, ಯಾವುದೇ ರಾಜ್ಯಗಳು ಈ ಕಾಯ್ದೆಯನ್ನು ಜಾರಿಗೆ ತಂದಿಲ್ಲ. ಪ್ರತಿ ಬಡವರಿಗೆ ಆರ್ಥಿಕ ಶಕ್ತಿಯನ್ನು ತುಂಬಬೇಕು.ನಮ್ಮಲ್ಲಿರುವ ಗುಲಾಮಗಿರಿಯ ಮನಸ್ಥಿತಿಯನ್ನು ಕಿತ್ತೊಗೆಯಬೇಕು, ತನ್ಮೂಲಕ ಎಲ್ಲರೂ ಮನುಷ್ಯರಾಗಬೇಕು. ಪ್ರೀತಿಯಿಂದ ದ್ವೇಷವನ್ನು ಗೆಲ್ಲಬೇಕು. ಬುದ್ಧ ಬಸವಣ್ಣನವರ ತತ್ವಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಬೇಕಿದೆ ಎಂದರು.

    Everyone needs economic power to build an equal society.

  • ಸ್ವಚ್ಚತೆ ಕಾಯಕ ಮಾಡುವ ಪೌರ ಕಾರ್ಮಿಕರು ಆರೋಗ್ಯಕ್ಕೆ ಆದ್ಯತೆ ನೀಡಬೇಕು

    ಸ್ವಚ್ಚತೆ ಕಾಯಕ ಮಾಡುವ ಪೌರ ಕಾರ್ಮಿಕರು ಆರೋಗ್ಯಕ್ಕೆ ಆದ್ಯತೆ ನೀಡಬೇಕು

    ಚಿಕ್ಕಮಗಳೂರು: ನಗರದ ನಾಗರಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿದಿನ ಸ್ವಚ್ಚತೆ ಕಾಯಕ ಮಾಡುವ ಪೌರ ಕಾರ್ಮಿಕರು ಮತ್ತು ಪೌರ ನೌಕರರ ಆರೋಗ್ಯ ಕಾಪಾಡಲು ರಾಜ್ಯಸರ್ಕಾರ ಕ್ರೀಡಾಕೂಟ ಆಯೋಜನೆ ಮಾಡಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

    ಅವರು ಇಂದು ಜಿಲ್ಲಾ ಆಟದ ಮೈದಾನದಲ್ಲಿ ನಗರಸಭೆ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಪೌರ ಕಾರ್ಮಿಕರು ತಮ್ಮ ಕುಟುಂಬವನ್ನು ಗಂಭೀರವಾಗಿ ಪರಿಗಣಿಸಿ ಆರೋಗ್ಯ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಸರ್ಕಾರ ಗ್ಲೌಸ್, ಶೂ, ಸಮವಸ್ತ್ರ ಮುಂತಾದ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದ್ದು, ಜೊತೆಗೆ ವಿಮಾ ಸೌಲಭ್ಯವನ್ನು ನೀಡಲಾಗಿದೆ ಎಂದರು.

    ವಾರ್ಷಿಕವಾಗಿ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಚಿಕಿತ್ಸೆ ನೀಡಲಾಗುತ್ತಿದೆ. ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು ಎಂದು ಹೇಳಿದರು. ಸ್ವಾರ್ಥವಿಲ್ಲದೆ ನಿಸ್ವಾರ್ಥವಾಗಿ ಬದುಕುವ ಸಂದರ್ಭದಲ್ಲಿ ತಮ್ಮ ಕುಟುಂಬಕ್ಕಾಗಿ ಪೌರ ಕಾರ್ಮಿಕರು ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಈ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮನಸ್ಸು ಹಗುರವಾಗುತ್ತದೆ, ಸದೃಢ ದೇಹ ಹೊಂದಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
    ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಮಾತನಾಡಿ, ಪೌರಕಾರ್ಮಿಕರು ಪ್ರತಿನಿತ್ಯ ಸ್ವಚ್ಚತೆ ಮಾಡಿ ನಗರದ ನಾಗರಿಕರ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡುವ ನೀವು ನಿಮ್ಮ ಅರೋಗ್ಯಕ್ಕೆ ಹೆಚ್ಚಿನ ಕಾಳಜಿ ಮತ್ತು ಆದ್ಯತೆ ನೀಡಬೇಕೆಂದು ವಿನಂತಿಸಿದರು.

    ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಅವರ ಕುಟುಂಬದವರಿಗಾಗಿ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮಗಳನ್ನು ಆಯೋಜಿಸಿ ಕುಟುಂಬದವರ ಅಭಿರುಚಿಗೆ ತಕ್ಕಂತೆ ಕಾರ್ಯಕ್ರಮ ನಡೆಸಬೇಕೆಂದು ಹೇಳಿದರು. ಇನ್ನು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ರಾಜ್ಯಸರ್ಕಾರ ಶೀಘ್ರವೇ ಕಾಯಂಗೊಳಿಸಬೇಕು ಹಾಗೂ ನಿವೃತ್ತಿ ವೇತನ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.

    ನಗರಸಭೆ ಪೌರ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಕೊಡಬೇಕು ಆ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ಸದೃಢ ಆರೋಗ್ಯಕ್ಕಾಗಿ ಪೌರ ಕಾರ್ಮಿಕರು ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯ ಎಂದು ಶುಭ ಕೋರಿದರು.

    ಪೌರಾಯುಕ್ತ ಬಿ.ಸಿ. ಬಸವರಾಜ್ ಸ್ವಾಗತಿಸಿ ಮಾತನಾಡಿ, ಪೌರಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕಳೆದ ೪ ವರ್ಷಗಳಿಂದ ಗುಂಪು ವಿಮೆಯನ್ನು ಮಾಡಿಸಿದ್ದೇವೆ ಎಂದ ಅವರು, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಪೌರಕಾರ್ಮಿಕರ ಅರೋಗ್ಯ ತಪಾಸಣೆ ನಡೆಸಿ ಅವರ ಆರೋಗ್ಯಕ್ಕಾಗಿ ಶೂ, ಗ್ಲೌಸ್, ಸಮವಸ್ತ್ರ ಮುಂತಾದ ಸೌಲಭ್ಯಗಳನ್ನು ನೀಡಿದ್ದೇವೆ ಎಂದರು.

    ಈ ಸಂದರ್ಭದಲ್ಲಿ ಉಪಾಧ್ಯಕ್ಷ ಲಲಿತಾನಾಯ್ಕ್, ಸದಸ್ಯರಾದ ವರಸಿದ್ದಿ ವೇಣುಗೋಪಾಲ್, ಗುರುಮಲ್ಲಪ್ಪ, ಗೋಪಿ, ರೂಪ ಕುಮಾರ್, ಜಾವಿದ್, ಎ.ಸಿ. ಕುಮಾರಗೌಡ, ಅಣ್ಣಯ್ಯ, ಶ್ರೀನಿವಾಸ್, ದಿನೇಶ್, ಪ್ರಕಾಶ್ ರೈ, ಉಪ ವಿಭಾಗಾಧಿಕಾರಿ ಸುದರ್ಶನ್, ಮ್ಯಾನೇಜರ್ ರವಿ, ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ಈಶ್ವರ್, ನಾಗಪ್ಪ, ರಂಗಪ್ಪ, ಚಂದ್ರಶೇಖರ್, ಮತ್ತಿತರರು ಉಪಸ್ಥಿತರಿದ್ದರು.

    Civic workers involved in sanitation work should prioritize health

  • ಗೋಹಂತಕರನ್ನು ಹದ್ದುಬಸ್ತಿನಲ್ಲಿಡುವ ಕೆಲಸವ ಹಿಂದೂ ಸಮಾಜ ಬರುತ್ತದೆ

    ಗೋಹಂತಕರನ್ನು ಹದ್ದುಬಸ್ತಿನಲ್ಲಿಡುವ ಕೆಲಸವ ಹಿಂದೂ ಸಮಾಜ ಬರುತ್ತದೆ

    ಚಿಕ್ಕಮಗಳೂರು: ಸಂಪೂರ್ಣ ಗೋಹತ್ಯೆ ಕಾಯ್ದೆ ಜಾರಿಯಲ್ಲಿದೆ. ಗೋಹಂತಕರನ್ನು ಪೊಲೀಸರು ಹದ್ದುಬಸ್ತಿನಲ್ಲಿಡುವ ಕೆಲಸವನ್ನು ಮಾಡದೇ ಇದ್ದರೆ ನಾವೇ ಆ ಕೆಲಸವನ್ನು ಮಾಡುತ್ತೇವೆ. ಹಿಂದೂ ಸಮಾಜಕ್ಕೆ ಆ ತಾಕತ್ತು ಇದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

    ಇತ್ತಿಚೆಗೆ ನಗರದಲ್ಲಿ ಗೋವಿನ ಬಾಲಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಘಟನೆ ಸೇರಿದಂತೆ ಗೋಹತ್ಯೆ, ಲವ್‌ಜಿಹಾದ್ ನಂತಹ ಪ್ರಕರಣಗಳನ್ನು ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಆಜಾದ್ ಪಾರ್ಕ್ ಸರ್ಕಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

    ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸಿದರೆ ಗೋರಕ್ಷಣೆಯಂತಹ ಕಾರ್ಯಕ್ಕೆ ಬಜರಂಗದಳದ ಕಾರ್ಯಕರ್ತರು ಮುಂದಾಗುವುದಿಲ್ಲ. ಗೋಹಂತಕರಿಂದ ಹಫ್ತಾ ವಸೂಲಿ ಮಾಡಿ ಸುಮ್ಮನಾದರೆ ನಿಮ್ಮ ಹೆಂಡತಿ, ಮಕ್ಕಳು ಸುಖವಾಗಿರಲು ಸಾಧ್ಯವಿಲ್ಲ ಎಂದರು.

    ಉಪ್ಪಳ್ಳಿ ಬಳಿ ಅಕ್ರಮವಾದ ಮಸೀದಿ ನಿರ್ಮಾಣವಾಗುತ್ತಿದೆ. ಇಂದಿಗೂ ನ್ಯಾಯಬದ್ಧವಾದ ಅನುಮತಿ ಪಡೆದಿಲ್ಲ. ಜಿಲ್ಲಾಡಳಿತ ನಿಲ್ಲಿಸದೇ ಇದಲ್ಲಿ ನಾವೇ ನಿಲ್ಲಿಸಬೇಕಾಗಬಹುದು. ಜಿಲ್ಲಾಡಳಿತ ಕಾನೂನು ಪಾಲಿಸುವಂತೆ ನೋಡಿಕೊಂಡರೆ ಕೋಮು ಗಲಭೆ ಆಗುವುದಿಲ್ಲ ಎಂದು ಹೇಳಿದರು.

    ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಗೋಹತ್ಯೆಯನ್ನು ನಿಷೇಧ ಮಾಡಿದ್ದರೂ, ಅಕ್ರಮ ಕಸಾಯಿಖಾನೆಗಳು ನಡೆಯುತ್ತಿವೆ ಎಂದರೆ ಅದು ಸಂವಿಧಾನ ವಿರೋಧಿ ಕೃತ್ಯ. ಅದನ್ನು ಮಾಡುತ್ತಿರುವವರಿಗೆ ಬುದ್ಧಿ ಕಲಿಸಬೇಕು ಎಂದು ಒತ್ತಾಯತಿಸುವುದು ಅಪರಾಧವೇ ಎಂದು ಪ್ರಶ್ನಿಸಿದರು.

    ನನ್ನದು ಬಸವ ಧರ್ಮ, ಅಂಬೇಡ್ಕರ್ ವಾದ, ಗಾಂಧಿ ಮಾರ್ಗ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಆದರೆ ಬಸವಣ್ಣನವರು ಕಳಬೇಡ, ಕೊಲಬೇಡ ಎಂದು ಹೇಳಿದ್ದಾರೆ. ಹಾಗಿದ್ದರೆ ಗೋಹತ್ಯೆಯನ್ನು ಮುಖ್ಯಮಂತ್ರಿ ಹೇಗೆ ಸಮರ್ಥನೆ ಮಾಡುತ್ತಾರೆ. ದಯೆ ಇರಬೇಕು ಸಕಲ ಜೀವಾತ್ಮರಿಗೂ ಎಂದು ಬಸವಣ್ಣ ಹೇಳಿದ್ದಾರೆ. ಆದರೆ ಬೆಂಗಳೂರಿನಲ್ಲಿ ಗೋವಿನ ಕೆಚ್ಚಲು ಕತ್ತರಿಸಿ ರಕ್ತ ಹರಿಸಿದರು ಆದರೆ ಬಸವ ಧರ್ಮ ಪಾಲಿಸುವ ಮುಖ್ಯಮಂತ್ರಿಗಳಿಗೆ ಕಣ್ಣೀರು ಬರಲಿಲ್ಲ ಎಂದರು.

    ಭಟ್ಕಳದಲ್ಲಿ ಗಬ್ಬದ ಹಸುವಿಗೆ ಚೂರಿ ಹಾಕಿ ಭ್ರೂಣವನ್ನು ಹೊರತೆಗೆದರು ಮುಖ್ಯಮಂತ್ರಿಗಳಿಗೆ ಸಂಕಟವಾಗಲಿಲ್ಲ. ಜಿಲ್ಲೆಯ ಕಡೂರಿನ ಕಲ್ಕೆರೆ, ಚೌಳಹಿರಿಯೂರು, ಕಳಸ, ಕೊಟ್ಟಿಗೆಹಾರ, ಶೃಂಗೇರಿ, ಚಿಕ್ಕಮಗಳೂರು, ಕಳಸಗಳಲ್ಲಿ ಅಕ್ರಮ ಗೋಸಾಗಣೆ, ಗೋಹತ್ಯೆ ನಿರಂತರವಾಗಿ ನಡೆಯುತ್ತಿದೆ. ಇದನ್ನೆಲ್ಲ ಮಾಡಿದ್ದು ಮುಖ್ಯಮಂತ್ರಿಗಳು ಶಾಂತಿಧೂತರು ಎಂದು ಕರೆದ ಜನರೇ ಆಗಿದ್ದಾರೆ ಎಂದರು.

    ಮುಖ್ಯಮಂತ್ರಿಗಳು ಹೇಳಿದ ಶಾಂತಿಧೂತರೇ ಗೋಹಂತಕರು, ಗೋವಿನ ಕೆಚ್ಚಲು ಕತ್ತರಿಸಿದವರು. ದಯೆ ಇಲ್ಲದವರನ್ನು ನೋಡಿಕೊಂಡು ಸುಮ್ಮನಿದ್ದು, ಅದನ್ನು ತಡೆದವರ ಮೇಲೆ ಕೇಸು ದಾಖಲಿಸಿದ್ದೀರಿ. ಇನ್ನೆರಡುವರೆ ವರ್ಷ ತಾಳಿಕೊಳ್ಳಿ ನೀವು ಹಾಕಿರುವ ಎಲ್ಲಾ ಕೇಸುಗಳನ್ನು ವಾಪಾಸ್ ತೆಗೆಸುತ್ತೇವೆ ಎಂದರು.

    ಮುಂದೆ ನಮ್ಮ ಸರ್ಕಾರ ಬಂದ ನಂತರ ಜಿಲ್ಲೆಗೊಂದು ಜೆಸಿಬಿ ಪಡೆ ತಯಾರು ಮಾಡುತ್ತೇವೆ. ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎನ್ನುವಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಕಲ್ಲು ಹೊಡೆದರೆ ಜೆಸಿಬಿ ಬರುತ್ತದೆ. ಇವರಾರು ಶಾಶ್ವತವಾಗಿ ಇರುವುದಿಲ್ಲ ಎಂದರು.

    ಜಿಲ್ಲಾಡಳಿತ ಅಕ್ರಮ ಕಸಾಯಿ ಕೇಂದ್ರಗಳನ್ನು ಬಂದ್ ಮಾಡಿಸಬೇಕು. ಇಲ್ಲವಾದಲ್ಲಿ ನೆಲದ ಕಾನೂನು, ನಮ್ಮ ಧರ್ಮ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹಿಂದೂ ಸಮಾಜ ಹಿಂದುಳಿಯುವುದಿಲ್ಲ. ನಮಗೆ ಖಾಜಿ ನ್ಯಾಯ ಬೇಡ, ಅಂಬೇಡ್ಕರ್ ಕೊಟ್ಟ ಸಂವಿಧಾನದ ಪ್ರಕಾರ ನ್ಯಾಯ ಕೊಡಿ ಎಂದು ಒತ್ತಾಯಿಸಿದರು.

    ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ತಾಯಿಯ ಸಮಾನವಾದ ಗೋಮಾತೆಯ ಮೇಲೆ ದಾಳಿಗಳು ನಡೆದಾಗ ಯಾವ ತ್ಯಾಗಕ್ಕಾದರೂ ಸಿದ್ಧರಿರಬೇಕು. ನಾವೂ ಸಹ ರಾಜೀನಾಮೆ ಕೊಟ್ಟು ಹೊರಬರಲು ಸಿದ್ಧರಿದ್ದೇವೆ ಎಂದರು.

    ರಾಷ್ಟ್ರೀಯ ಸ್ವಯಂ ಸೇವಕ ಸಂಘವು ನಮಗೆ ದೇಶಭಕ್ತಿಯನ್ನೇ ಹೇಳಿಕೊಟ್ಟಿದೆ. ನಮಗೆ ಹಿಂದುತ್ವ, ದೇಶ ಮೊದಲು ಮಿಕ್ಕೆಲ್ಲವೂ ಗೌಣ ಎಂದು ಹೇಳಿದರು.
    ಹಿಂದೂಗಳು ಸಂಘಟಿತರಾಗಿ ಪ್ರತಿ ಮನೆಯಿಂದ ಹೋರಾಟಗಳಲ್ಲಿ ಪಾಲ್ಗೊಳ್ಳಬೇಕು. ಇಲ್ಲವಾದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗಿ ಬೀದಿಗೆ ಬರಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಹಿಂದೆ ಔರಂಗಜೇಬನ ಆಡಳಿತದಲ್ಲಿ ತುಘಲಕ್ ದರ್ಬಾರ್ ಇತ್ತು ತಲೆಗಂದಾಯ ಕೊಟ್ಟರೆ ಮಾತ್ರ ಹಿಂದೂಗಳು ಬದುಕಲು ಅವಕಾಶವಿತ್ತು. ಅದೇ ರೀತಿ ಆಡಳಿತವನ್ನು ರಾಜ್ಯದಲ್ಲೂ ಮುಖ್ಯಮಂತ್ರಿಗಳು ತರಲು ಹೊರಟಿದ್ದಾರೆ. ಹಿಂದೂ ಎಂದು ಹೇಳಿಕೊಳ್ಳು ಆಗದ ಸ್ಥಿತಿ ಬಂದಿದೆ.

    ಗೋವಿಗೆ ಬೆಂಕಿ ಕೊಟ್ಟು ವಿಕೃತಿ ಮೆರೆದ ಕೃತ್ಯ ನಗರದಲ್ಲಿ ನಡೆದಿದೆ. ಅದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ಅಪ್ರಾಪ್ತನಿಂದ ಈ ಕೆಲಸ ನಡೆದಿದ್ದರೆ ಅದಕ್ಕೆ ಕುಮ್ಮಕ್ಕು ಕೊಟ್ಟವರನ್ನು ಯಾಕೆ ಬಂಧಿಸಿಲ್ಲ ಹಾಗಿದ್ದರೆ ಗೋವಿನ ಹಿಂಸೆಯನ್ನು ತಡೆದವರ ಮೇಲೆ ಏಕೆ ಕೇಸು ದಾಖಲಿಸಿದ್ದೀರಿ ಎಂದು ಪ್ರಶ್ನಿಸಿದರು.

    ನಗರದ ಕತ್ರಿಮಾರಮ್ಮ ದೇವಸ್ಥಾನದ ಬಳಿ ಗೋಪೂಜೆ ನೆರವೇರಿಸುವ ಮೂಲಕ ಪ್ರತಿಭಟನಾ ಮೆರವಣಿಗೆಗೆ ಸಿ.ಟಿ.ರವಿ ಚಾಲನೆ ನೀಡಿದರು. ಆಜಾದ್ ಪಾರ್ಕ್‌ವರೆಗೆ ಭಗವಾಧ್ವಜ ಹಿಡಿದು ಪ್ರತಿಭಟನೆ ನಡೆಸಲಾಯಿತು. ಗೋಹಂತಕರ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

    ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರಿಕಾಂತ್ ಪೈ, ಬಜರಂಗದಳದ ಶ್ಯಾಂ ವಿ.ಗೌಡ, ರಂಗನಾಥ್, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

    Hindu society is tasked with keeping cow killers in check.

  • ವಿದ್ಯೆ-ಪ್ರತಿಭೆ ಯಾರ ಅಪ್ಪನ ಮನೆ ಸ್ವತ್ತಲ್ಲ

    ವಿದ್ಯೆ-ಪ್ರತಿಭೆ ಯಾರ ಅಪ್ಪನ ಮನೆ ಸ್ವತ್ತಲ್ಲ

    ಬೆಂಗಳೂರು: ವಿದ್ಯೆ ಮತ್ತು ಪ್ರತಿಭೆ ಯಾರ ಅಪ್ಪನ ಮನೆ ಸ್ವತ್ತಲ್ಲ. ಅವಕಾಶ ಸಿಗಬೇಕು ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

    ನೃಪತುಂಗ ವಿಶ್ವ ವಿದ್ಯಾಲಯದಲ್ಲಿ ರೂಸಾ ಯೋಜನೆಯಡಿ ನಿರ್ಮಿಸಿರುವ ನೂತನ ಶೈಕ್ಷಣಿಕ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ರಾಮಾಯಣ ಬರಡದ ವಾಲ್ಮೀಕಿ ಬೇಡರ ಜಾತಿಯವರಾದರೆ, ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು. ಹೀಗಾಗಿ ವಿದ್ಯೆ, ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅವಕಾಶಗಳು ಬೇಕು ಅಷ್ಟೆ. ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಂಡರೆ ನಿಮ್ಮ‌ ಹಾಗೂ ಸಮಾಜದ ಪ್ರಗತಿ ಸಾಧ್ಯ. ಈ ದಿಕ್ಕಿನಲ್ಲಿ ವಿಜ್ಞಾನದ ವಿದ್ಯಾರ್ಥಿಗಳು ಸಮಾಜವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.

    ವಿಜ್ಞಾನದ ಓದು ಮತ್ತು ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿರುವುದು ಅಪಾಯದ ಸಂಗತಿ‌. ವೈಜ್ಞಾನಿಕ ಮನೋಭಾವ ಮತ್ತು ವಿಜ್ಞಾನದ ಶಿಕ್ಷಣ ಸಮಾಜದ ಮತ್ತು ದೇಶದ ಪ್ರಗತಿಗೆ ಅತ್ಯಗತ್ಯ ಎಂದರು. ವಿಜ್ಞಾನ ಓದಿದವರೂ ಮೂಢನಂಬಿಕೆ ಮತ್ತು ಕಂದಾಚಾರಕ್ಕೆ ಗಂಟು ಬೀಳುವುದು ಶಿಕ್ಷಣ ಕಲಿಕೆಯಲ್ಲಿನ ಕೊರತೆಯಾಗಿದೆ‌ ಎಂದರು.

    ಬಹಳ ಹಿಂದೆಯೇ ಬಸವಾದಿ ಶರಣರು ಮೌಡ್ಯ , ಕಂದಾಚಾರಗಳ ವಿರುದ್ಧ ಕರೆ ನೀಡಿದರು. ಆದರೆ, ಇವತ್ತಿಗೂ ಮೌಡ್ಯ ಹೋಗಿಲ್ಲ. ಏಕೆಂದರೆ ನಮ್ಮದು ಜಾತಿ ತಾರತಮ್ಯದ ಸಮಾಜ ಆಗಿರುವುದರಿಂದ ಇದಕ್ಕೆ ಚಲನೆ ಇಲ್ಲ. ಪಟ್ಟಭದ್ರರು ತಾರತಮ್ಯವನ್ನು ಗಟ್ಟಿಗೊಳಿಸುವ ಸಲುವಾಗಿಯೇ ಮೌಡ್ಯವನ್ನು ಬಿತ್ತುತ್ತಾರೆ ಎಂದರು.

    ನಾನು ಮೊದಲ ಬಾರಿ ಮುಖ್ಯಮಂತ್ರಿ ಆದಾಗ “ಮೌಡ್ಯ ನಿಷೇಧ ಕಾಯ್ದೆ” ಜಾರಿಗೆ ತರಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಅಷ್ಟರಮಟ್ಟಿಗೆ ಮೌಡ್ಯ ಮತ್ತು ಮೌಡ್ಯ ಹಂಚುವ ಪಟ್ಟಭದ್ರರು ಆಳವಾಗಿ ಬೇರು ಬಿಟ್ಟಿದ್ದಾರೆ ಎಂದರು. ವಿಜ್ಞಾನ ಓದಿದವರಿಗೆಲ್ಲಾ ವೈಜ್ಞಾನಿಕ‌ ಮನೋಭಾವ ಇಲ್ಲದಿರುವುದು ದುರಂತ. ವಿಜ್ಞಾನ ಓದಿಯೂ ಹಣೆಬರಹ ಮತ್ತು ಕರ್ಮ ಸಿದ್ದಾಂತ, ಗ್ರಹಚಾರಗಳನ್ನೆಲ್ಲಾ ನಂಬುತ್ತಾರೆ ಎಂದರೆ ಇವರು ವಿಜ್ಞಾನ ಓದಿದ್ದೇ ದಂಡ ತಾನೇ ಎಂದು ಪ್ರಶ್ನಿಸಿದರು.

    ದೇಶದ ಪ್ರಧಾನಿ ಆಗಿದ್ದ ಜವಾಹರಲಾಲ್ ನೆಹರೂ ಅವರು ದೇಶದ ಯುವ ಜನತೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲಿ ಎನ್ನುವ ದೂರದೃಷ್ಟಿ ಹೊಂದಿದ್ದರು. ಇದಕ್ಕೆ ಅಗತ್ಯವಾದ ಶೈಕ್ಷಣಿಕ ಸಾಧನೆಗಳಿಗೆ ಕಾರಣರಾಗಿದ್ದರು ಎಂದು ವಿವರಿಸಿದರು. 52 ಕೋಟಿ ಅಂದಾಜಿನಲ್ಲಿ 7 ಅಂತಸ್ತಿನ ನೂತನ ಕಟ್ಟಡ ಉದ್ಘಾಟಿಸಲಾಗಿದೆ. ಎಂಟನೇ ಅಂತಸ್ತನ್ನು ನಿರ್ಮಿಸಲು 8 ಕೋಟಿ ರೂಪಾಯಿಗೆ ಬೇಡಿಕೆ ಸಲ್ಲಿಸಿದ್ದಾರೆ. ಸರ್ಕಾರ ಈ ಕೊಡಲು ಸಿದ್ದವಿದೆ ಎಂದು ಘೋಷಿಸಿದರು.

    ಉನ್ನತ ಶಿಕ್ಷಣ ಸಚಿವರಾದ ಎಂ.ಸಿ.ಸುಧಾಕರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

    Education and talent are not the property of anyone’s father’s house.

  • ಶ್ರೀ ದೇವೀರಮ್ಮನವರ ಜಾತ್ರಾ ಮಹೋತ್ಸವಕ್ಕೆ ಸಂಪೂರ್ಣ ಸಿದ್ದತೆ

    ಶ್ರೀ ದೇವೀರಮ್ಮನವರ ಜಾತ್ರಾ ಮಹೋತ್ಸವಕ್ಕೆ ಸಂಪೂರ್ಣ ಸಿದ್ದತೆ

    ಚಿಕ್ಕಮಗಳೂರು: ತಾಲ್ಲೂಕಿನ ಬಿಂಡಿಗ ಶ್ರೀ ದೇವೀರಮ್ಮನವರ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಅಕ್ಟೋಬರ್ ೧೯ ರಿಂದ ೨೩ ರವರೆಗೆ ನಡೆಯಲಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಸಂಪೂರ್ಣ ಸಿದ್ದತೆ ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ ತಿಳಿಸಿದರು.

    ಅವರು ಇಂದು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಎರಡು ದಿನಗಳ ಕಾಲ ಬೆಟ್ಟ ಹತ್ತಲು ಅವಕಾಶ ನೀಡಲಾಗಿದೆ ಎಂದು ಹೇಳಿ ದೀಪಾವಳಿಯ ಮೊದಲ ದಿನ ಅಕ್ಟೋಬರ್ ೧೯ ರಂದು ನರಕ ಚತುರ್ದಶಿ ಅಂಗವಾಗಿ ಬೆಳಗ್ಗೆ ೯ ಗಂಟೆಯಿಂದ ಸಂಜೆ ೫ ರವರೆಗೆ ಭಕ್ತರು ಬೆಟ್ಟ ಹತ್ತಿ ದೇವಿಯ ದರ್ಶನ ಪಡೆಯಬಹುದು, ಮರುದಿನ ಅಕ್ಟೋಬರ್ ೨೦ ರಂದು ಬೆಳಗ್ಗೆ ೮ ರಿಂದ ಸಂಜೆ ೩ ರವರೆಗೆ ಬೆಟ್ಟ ಹತ್ತಲು ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದೆ ಎಂದು ತಿಳಿಸಿದರು.

    ಅ.೧೮ ಮತ್ತು ೧೯ ರಂದು ಅತೀ ಹೆಚ್ಚು ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಬೆಟ್ಟ ಹತ್ತುವ ಭಕ್ತಾಧಿಗಳಿಗೆ ದಾರಿಯಲ್ಲಿ ಯಾವುದೇ ಅಡಚಣೆಯಾಗದಂತೆ ಜೊತೆಗೆ ಭೂಮಿ ಜರುಗುವ ಭಾಗದಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
    ಜನದಟ್ಟಣೆ ನಿಯಂತ್ರಣ ಮಾಡುವ ಸಲುವಾಗಿ ದೇವಸ್ಥಾನ ಸಮಿತಿ ನೀಡಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಭಕ್ತಾಧಿಗಳಿಗೆ ಸೂಚನೆ ನೀಡುವ ಫಲಕಗಳನ್ನು ಬೆಟ್ಟದಲ್ಲಿ ಅಳವಡಿಸಲಾಗಿದ್ದು, ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿರುವುದು ಡ್ರೋನ್ ಸರ್ವೆ ಮತ್ತು ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

    ಈ ಬಾರಿ ರಾತ್ರಿ ವೇಳೆ ಬೆಟ್ಟ ಹತ್ತಲು ಅವಕಾಶವಿರುವುದಿಲ್ಲ ಎಂದ ಅವರು, ಗಿರಿ ಪ್ರದೇಶದಲ್ಲಿ ತುಂಬಾ ಮಲೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಾರಿಕೆ ಇದೆ. ರಾತ್ರಿ ವೇಳೆ ಬೆಟ್ಟ ಹತ್ತುವುದು ಅಪಾಯಕಾರಿಯಾಗಿದೆ. ಅದರಲ್ಲೂ ಮಹಿಳೆಯರಿಗೆ ಹೆಚ್ಚು ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ರಾತ್ರಿ ಬೆಟ್ಟ ಹತ್ತಲು ಅವಕಾಶ ಇರುವುದಿಲ್ಲ ಎಂದರು.

    ೧೫ ವರ್ಷದ ಒಳಗಿನ ಮಕ್ಕಳು, ೬೦ ವರ್ಷ ಮೇಲ್ಪಟ್ಟವರು ಮತ್ತು ಆರೋಗ್ಯದ ಸಮಸ್ಯೆ ಇರುವವರು ಬೆಟ್ಟ ಹತ್ತುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಮಾಲೋಚಿಸಿ ತೀರ್ಮಾನಕ್ಕೆ ಬರಲಾಗಿದೆ ಇದೆಲ್ಲಾ ಕ್ರಮಗಳು ಭಕ್ತರ ಹಿತದೃಷ್ಠಿಯಿಂದ ಜಾರಿಗೆ ತರಲಾಗುತ್ತಿದೆ.
    ಭಕ್ತರ ನೂಕು ನುಗ್ಗಲು ತಪ್ಪಿಸಿ ಎಲ್ಲರಿಗೂ ದೇವಿ ದರ್ಶನ ಸುಗಮವಾಗಲಿ ಎನ್ನುವ ಕಾರಣಕ್ಕೆ ಎರಡು ದಿನಗಳ ಕಾಲ ಬೆಟ್ಟ ಹತ್ತಲು ಅವಕಾಶ ನೀಡಲಾಗತ್ತಿದೆ. ಈ ಕಾರಣಕ್ಕೆ ಭಕ್ತರು ರಾತ್ರಿ ವೇಳೆ ಬೆಟ್ಟ ಹತ್ತದೆ ದೇವಸ್ಥಾನ ಸಮತಿ ಮತ್ತು ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಪ್ರತಿ ವರ್ಷದಂತೆ ಈ ಬಾರಿಯೂ ನರಕ ಚತುರ್ದಶಿಯ ದಿನ ಸಂಜೆ ೭ ಗಂಟೆಗೆ ಬೆಟ್ಟದಲ್ಲಿ ದೀಪೋತ್ಸವ ಜರುಗಲಿದೆ. ನಂತರ ಬೆಟ್ಟದ ತಪ್ಪಿಲಿನ ದೇವೀರಮ್ಮನವರ ದೇವಸ್ಥಾನದಲ್ಲಿ ಯಥಾ ಪ್ರಕಾರ ಮರುದಿನ ದೇವಿಯವರಿಗೆ ಉಡುಗೆ ಪೂಜೆ ಜೊತೆಗೆ ಸಂಜೆ ಎಣ್ಣೆ ಬಟ್ಟೆ ಸುಡುವ ಕಾರ್ಯಕ್ರಮ ಇರುತ್ತದೆ. ೨೨ ರಂದು ಕೆಂಡಾರ್ಚನೆ ಮತ್ತು ಜಾತ್ರಾ ಮಹೋತ್ಸವ ನಡೆಯಲಿದೆ.

    ಅಪಾಯದ ಜಾಗದಲ್ಲಿ ಹೋಗುವಹಾಗಿಲ್ಲ, ಸೆಲ್ಫಿ ತೆಗೆಯಲು ಅವಕಾಶವಿಲ್ಲ, ಬೆಟ್ಟದ ದಾರಿ ಹೊರತುಪಡಿಸಿ ಬೇರೆಲ್ಲೂ ಹೋಗಬಾರದು. ಉಪವಾಸದಿಂದ ಆಗಮಿಸುವ ಭಕ್ತರು ಓಆರ್‌ಎಸ್, ಚಾಕಲೇಟ್, ಗ್ಲೂಕೋಸ್-ಡಿ ಮುಂತಾದವುಗಳನ್ನು ಇಟ್ಟುಕೊಳ್ಳುವಂತೆ ಸೂಚನೆ ನೀಡಿದರು.

    ಕಳೆದ ಬಾರಿಯಂತೆ ಆರ್‌ಜಿ ರಸ್ತೆ, ಐಜಿ ರಸ್ತೆ, ಎಂಜಿ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಖಾಸಗಿ ವಾಹನಗಳಲ್ಲಿ ಹೋಗುವ ಭಕ್ತರಿಗೆ ಮಲ್ಲೇನಹಳ್ಳಿ ಸರ್ಕಾರಿ ಕಾಲೇಜು ಬಳಿ ವಾಹನ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ತರೀಕೆರೆ ಭಾಗದಿಂದ ಆಗಮಿಸುವ ಭಕ್ತರಿಗೆ ಕುಮಾರಗಿರಿ ಸಮೀಪ ಪಾರ್ಕಿಂಗ್ ಮಾಡಬೇಕು, ರಸ್ತೆ ಇಕ್ಕೆಲಗಳಲ್ಲಿ ಪಾರ್ಕಿಂಗ್ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

    ಕೆಎಸ್‌ಆರ್‌ಟಿ ಬಸ್ ನಿಲ್ದಾಣದಿಂದ ಸುಮಾರು ೫೦ ಕ್ಕೂ ಹೆಚ್ಚು ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ೧೯ ರಂದು ಬೆಳಗ್ಗೆ ೭ ಗಂಟೆ ಹಾಗೂ ೨೦ ರಂದು ಬೆಳಗ್ಗೆ ೬.೩೦ ಕ್ಕೆ ಬಸ್‌ಗಳು ನಗರದ ಬಸ್ ನಿಲ್ದಾಣದಿಂದ ಹೊರಡಲಿದೆ ಎಂದು ವಿವರಿಸಿದರು.

    ಅಕ್ಟೋಬರ್ ಮತ್ತು ೨೦ ಹೊರತು ಪಡಿಸಿ ಉಳಿದೆಲ್ಲಾ ದಿನವೂ ನಿರಂತರವಾಗಿ ಭಕ್ತರಿಗೆ ಅನ್ನದಾನ ಮಾಡಲಾಗುತ್ತದೆ. ಬೆಟ್ಟದ ಮೇಲೆ ದೇವಿಗೆ ತೆಂಗಿನ ಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ. ಪಾದರಕ್ಷೆ ಧರಿಸದೆ ಬರಿಗಾಲಿನಲ್ಲಿ ಭಕ್ತರು ಬೆಟ್ಟ ಹತ್ತಬೇಕು. ಬೆಟ್ಟ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯ ಎಸೆಯುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಉಪಸ್ಥಿತರಿದ್ದರು.

    Complete preparations for Sri Deviramma’s festival

  • ಮಹಿಳಾ – ಮಕ್ಕಳ ಅಭಿವೃದ್ದಿ ನಿಗಮಕ್ಕೆ ಸರ್ಕಾರದಿಂದ 32 ಕೋಟಿ ರೂ.

    ಮಹಿಳಾ – ಮಕ್ಕಳ ಅಭಿವೃದ್ದಿ ನಿಗಮಕ್ಕೆ ಸರ್ಕಾರದಿಂದ 32 ಕೋಟಿ ರೂ.

    ಚಿಕ್ಕಮಗಳೂರು: ರಾಜ್ಯ ಸರ್ಕಾರ ಈ ಬಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ನಿಗಮಕ್ಕೆ ೩೨ ಕೋಟಿ ರೂ. ಅನುದಾನವನ್ನು ಒದಗಿಸಿದ್ದು, ಇದರಲ್ಲಿ ೧೫ ಕೋಟಿ ಅನುದಾನ ಉದ್ಯೋಗಕ್ಕಾಗಿ ಮೀಸಲಿಡಲಾಗಿದೆ ಎಂದು ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ತಿಳಿಸಿದರು.

    ಇಂದು ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಮಾಜಿ ದೇವದಾಸಿಯರಿಗೆ ೨೦೦೦ ರೂ. ಮಾಸಾಶನ ನೀಡಲಾಗುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ೩೦ ಸಾವಿರ ಸಹಾಯ ಧನ, ಆಸಿಡ್ ದಾಳಿಗೆ ತುತ್ತಾದವರಿಗೆ ಜೀವನಾಧಾರಕ್ಕೆ ೧೦ ಸಾವಿರ ರೂ.ಗಳನ್ನು ಮಾಸಾಶನ ಹಾಗೂ ನಿಗಮದಿಂದ ೫ ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ ಎಂದು ಹೇಳಿದರು.

    ಐದು ಯೋಜನೆ ಹೊಂದಿರುವ ಈ ಪುಟ್ಟ ನಿಗಮವು ಇದುವರೆವಿಗೂ ಸಾಕಷ್ಟು ಸಾಧನೆಗಳನ್ನು ಮಾಡಿಕೊಂಡು ಬರುತ್ತಿದೆ. ಕೆಳ ವರ್ಗ ಮತ್ತು ಮಧ್ಯಮ ವರ್ಗದ ಜನರಿಗೆ ಸಂಬಂಧಿಸಿದ ಉದ್ಯೋಗಿನಿ ಯೋಜನೆಯು ನಗರ ವ್ಯಾಪ್ತಿಯಲ್ಲಿ ಶೇ.೨೫ ಕೂಡ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಕೆಲವೊಂದು ತೊಡಕುಗಳಿದ್ದು, ಕಾರಣಾಂತರಗಳಿಂದ ಲೀಡ್ ಬ್ಯಾಂಕ್‌ಗಳಿಂದ ಸಕಾರ ದೊರಕುತ್ತಿಲ. ಆದರೂ ಜಿಲ್ಲೆಯಲ್ಲಿ ಶೇ.೭೫ ರಷ್ಟು ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು.

    ಸರ್ಕಾರಿ ಕೆಲಸ ನಮಗೆ ಉಸಿರಿರುವರೆಗೂ ಅನ್ನ ನೀಡುವ ಕೆಲಸವಾಗಿರುವುದರಿಂದ ಅಧಿಕಾರಿಗಳು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು. ಇಚ್ಛಾಶಕ್ತಿಯಿಂದ ಸ್ಪಂದಿಸಿ ಸಹಕರಿಸಿ ಜನರು ಜೀವನ ರೂಪಿಸಿಕೊಳ್ಳುವಂತಹ ಅವಕಾಶ ಕಲ್ಪ್ಪಿಸಿಕೊಡಬೇಕು. ಸಾರ್ವಜನಿಕರು ಇಲಾಖೆಯ ಕಚೇರಿಗೆ ಬಂದಾಗ ಸರ್ಕಾರದ ಸವಲತ್ತುಗಳನ್ನು ಅವರಿಗೆ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವಿರುವುದಿಲ್ಲ. ಅಂಥವರಿಗೆ ಅರಿವು ಮೂಡಿಸಿ ಸೌಲಭ್ಯ ಪಡೆದುಕೊಳ್ಳುವಂತೆ ಮಾಡಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸರ್ಕಾರ ಮತ್ತು ಸಾರ್ವಜನಿಕರ ಸೇತುವೆಯಾಗಿ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು.

    ರಾಜ್ಯದಲ್ಲಿ ಎಷ್ಟು ಮಂದಿ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ ಎಂಬುದನ್ನು ಅರಿಯಲು ಮೊದಲ ಬಾರಿಗೆ ಈ ಸಮೀಕ್ಷೆಯನ್ನು ನಡೆಸಲು ಕ್ರಮ ಕೈಗೊಳ್ಳಲಾಗಿದ್ದು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಈ ಸಮೀಕ್ಷೆಯ ಉದ್ದೇಶವಾಗಿದೆ. ಪ್ರತಿ ಜಿಲ್ಲೆಯಲ್ಲಿ ಸಮೀಕ್ಷೆ ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ತಿಳಿಯಲು ಖುದ್ದಾಗಿ ಜಿಲ್ಲೆಗಳಿಗೆ ತೆರಳಿ ಪರಿಶೀಲನೆ ಮಾಡುತ್ತಿರುವುದಾಗಿ ತಿಳಿಸಿದರು.

    ಜಿಲ್ಲೆಯಲ್ಲಿ ೧೩೬ ತೃತೀಯ ಲಿಂಗಿಗಳಿದ್ದಾರೆ. ಸಮೀಕ್ಷೆಗೆ ಒಳಪಟ್ಟಲ್ಲಿ ಮನೆಯವರ ವಿಶ್ವಾಸ ಕಳೆದುಕೊಂಡು ಮನೆಯಿಂದ ದೂರ ಉಳಿಯಬೇಕಾಗುತ್ತದೆ ಎಂಬ ಕಾರಣದಿಂದ ಮಿಕ್ಕ ೨೨ ಜನರು ಸಮೀಕ್ಷೆಗೆ ಸಹಕರಿಸುತ್ತಿಲ್ಲ. ಅಂಥವರ ಮನವೊಲಿಸಿ ಸಮೀಕ್ಷೆಗೆ ಒಳಪಡಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

    ನಿಗಮದ ಜಂಟಿ ನಿರ್ದೇಶಕಿ ಅಕ್ಕಮಹಾದೇವಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ ಸಹಿತ ವಸತಿ ಕಲ್ಪಿಸಲು ಪ್ರಸತ್ತ ಸಾಲಿನಲ್ಲಿ ವಿಶೇ? ವರ್ಗದ ವಸತಿ ಯೋಜನೆಯಡಿಯಲ್ಲಿ ನಗರಾಭಿವೃದ್ಧಿ ಕೋಶ, ಪುರಸಭೆ, ನಗರಸಭೆಗಳಿಗೆ ಒಟ್ಟು ೨೩ ಅರ್ಜಿಗಳನ್ನು ಕಳುಹಿಸಿ ಮಂಜೂರಾತಿಗೆ ಕ್ರಮ ವಹಿಸಲಾಗಿದೆ. ಎರಡು ಅರ್ಜಿಗಳು ಮಂಜೂರಾತಿ ಹಂತದಲ್ಲಿವೆ.

    ೬ ಜನರಿಗೆ ನಗರಸಭೆಯ ಜಿ+೨ ಮನೆಗಳು ಮಂಜೂರಾತಿ ಹಂತದಲ್ಲಿವೆ. ಜಿಲ್ಲೆಯಲ್ಲಿ ಈಗಾಗಲೇ ೨೮ ಲಿಂಗತ್ವ ಅಲ್ಪಸಂಖ್ಯಾತರು ಟಿ.ಜಿ. ಕಾರ್ಡ್ ಹೊಂದಿದ್ದಾರೆ. ೨೪ ಜನ ಲಿಂಗತ್ವ ಅಲ್ಪಸಂಖ್ಯಾತರು ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆದಿದ್ದಾರೆ. ಜಿಲ್ಲೆಯಲ್ಲಿನ ೭ ಆಸಿಡ್ ದಾಳಿ ಪ್ರಕರಣಗಳಲ್ಲಿ ನಾಲ್ವರು ಪಲಾನುಭವಿಗಳಿಗೆ ನಿಗಮದ ಗೆಳತಿ ಯೋಜನೆಯಡಿ ತಲಾ ೫ ಲಕ್ಷ ರೂ. ಸಾಲ ಮತ್ತು ಸಹಾಯಧನ ಮಂಜೂರಾಗಿದೆ. ಮೂವರಿಗೆ ದಾಖಲಾತಿಗಳು ಲಭ್ಯವಿಲ್ಲದ ಕಾರಣ ಮಂಜೂರಾಗಿಲ್ಲ ಎಂದರು.

    ಉದ್ಯೋಗಿನಿ ಯೋಜನೆಯಡಿ ಶಾಸಕರ ಆಯ್ಕೆ ಸಮಿತಿಯ ಭೌತಿಕ ಗುರಿ ೧೮. ಜಿಲ್ಲಾಧಿಕಾರಿಗಳ ಆಯ್ಕೆ ಸಮಿತಿ ಭೌತಿಕ ಗುರಿ ೯. ಗುರಿಯನುಸಾರ ಆಯ್ಕೆಯಾದ ಅರ್ಜಿಗಳನ್ನು ಸಂಬಂಧಿಸಿದ ಬ್ಯಾಂಕುಗಳಿಗೆ ಕಳುಹಿಸಿದ್ದು ಒಟ್ಟು ೨೦ ಅರ್ಜಿಗಳಿಗೆ ಇದುವರೆಗೆ ಸಾಲ ಮಂಜೂರಾತಿ ದೊರಕಿದೆ. ಸಹಾಯಧನ ಬಿಡುಗಡೆ ಸಲುವಾಗಿ ೧೭ ಅರ್ಜಿಗಳನ್ನು ನಿಗಮಕ್ಕೆ ಸಲ್ಲಿಸಲಾಗಿದೆ. ಉಳಿದ ೭ ಅರ್ಜಿಗಳಿಗೆ ಸಾಲ ಮಂಜೂರಾತಿಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

    ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ವೈ.ಆಲದಾರ್ತಿ, ಜಿಲ್ಲಾ ನಿರೂಪಣಾಧಿಕಾರಿ ಡಿ.ಸಂತೋಷ್. ಎಲ್ಲಾ ತಾಲ್ಲೂಕುಗಳ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು

    The government has allocated Rs. 32 crore to the Women and Child Development Corporation.

  • ಪ್ರಾಧಿಕಾರದ ಸವಲತ್ತು ಮನೆ ಮನಗಳಿಗೆ ಮುಟ್ಟಿಸುವ ಜವಾಬ್ದಾರಿ ಸದಸ್ಯರ ಮೇಲಿದೆ

    ಪ್ರಾಧಿಕಾರದ ಸವಲತ್ತು ಮನೆ ಮನಗಳಿಗೆ ಮುಟ್ಟಿಸುವ ಜವಾಬ್ದಾರಿ ಸದಸ್ಯರ ಮೇಲಿದೆ

    ಚಿಕ್ಕಮಗಳೂರು: ರಾಜ್ಯ ಸರ್ಕಾರದ ಜನಪ್ರಿಯ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಭದ್ರಾ ಕಾಡಾ ಪ್ರಾಧಿಕಾರದ ಸವಲತ್ತುಗಳನ್ನು ಮನೆ ಮನಗಳಿಗೆ ಮುಟ್ಟಿಸುವ ಜವಾಬ್ದಾರಿ ಸದಸ್ಯರ ಮೇಲಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಪಿ.ಅಂಶುಮಂತ್ ತಿಳಿಸಿದರು.

    ಶಿವಮೊಗ್ಗ ಜಿಲ್ಲೆಯ ಭದ್ರಾ ಕಾಡಾ ಪ್ರಾಧಿಕಾರದ ಸಭಾಂಗಣದಲ್ಲಿ ಸೋಮವಾರ ನಡೆದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಪಂಚ ಗ್ಯಾರಂಟಿ ಪ್ರಾಧಿಕಾರದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

    ಭದ್ರಾ ಕಾಡಾ ಪ್ರಾಧಿಕಾರದಿಂದ ರೈತರಿಗೆ ಅನೇಕ ಮಾರ್ಗಸೂಚಿಗಳನ್ನು ನೀಡಲಾಗಿದೆ. ಹೆಚ್ಚು ನೀರು ಬಳಕೆಯಿಂದ ಭೂಮಿ ಹದಗೆಡುವ ಸಾಧ್ಯತೆಯಿದ್ದು, ಆದ್ದರಿಂದ ನಿಯಮಿತ ನೀರು ಬಳಸಿಕೊಂಡು ಭೂಮಿ ಫಲವವತ್ತೆ ಕಾಪಾಡಿಕೊಳ್ಳಬೇಕು ಎಂದರು.

    ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಿದ್ದು, ಮುಂದಿನ ದಿನಗಳಲ್ಲಿ ಹೊಸದಾಗಿ ಆಹಾರದ ಕಿಟ್‌ಗಳನ್ನು ವಿತರಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.

    ದೇಶದ ಬೆನ್ನಲುಬಾಗಿರುವ ರೈತರಿಗೆ ನೀರಿನ ಸಮರ್ಪಕ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಪ್ರಾಧಿಕಾರ ನಿರಂತರವಾಗಿ ಮಾಡುತ್ತಿದೆ ಎಂದರು.

    ಚಿಕ್ಕಮಗಳೂರು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ‘ಪಂಚ ನದಿಗಳ ಉಗಮ ಸ್ಥಾನವಾದ ಜಿಲ್ಲೆಗೆ ವಿಶೇಷ ಗೌರವವಿದೆ. ಅಲ್ಲದೇ ಜಿಲ್ಲೆಯಿಂದ ಹರಿಯುವ ನೀರು ಶಿವಮೊಗ್ಗದತ್ತ ಸಾಗಿ ಲಕ್ಷಾಂತರ ಜನರಿಗೆ ಕುಡಿಯಲು ಬಳಕೆ ಆಗುತ್ತಿದೆ’ ಎಂದರು.

    ಗ್ಯಾರಂಟಿ ಯೋಜನೆ ಹಾಗೂ ಸಮರ್ಪಕ ನೀರು ಬಳಸುವ ಸಂಬಂಧ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು. ಶಿವಮೊಗ್ಗದಲ್ಲೂ ಈ ರೀತಿಯ ಕಾರ್ಯ ಚಟುವಟಿಕೆಗಳನ್ನು ಕೈಗೊಂಡರೆ ಉಪಯೋಗಿಯಾಗಲಿದೆ. ಜನರಿಂದ ತೆರಿಗೆ ಪಡೆದು ಜನರಿಗಾಗಿ ವ್ಯಯಿಸುವ ಕೆಲಸವನ್ನು ಗ್ಯಾರಂಟಿ ಯೋಜನೆ ಮೂಲಕ ಸರ್ಕಾರ ಮಾಡುತ್ತಿದೆ ಎಂದರು.

    ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್ ಮಾತನಾಡಿ, ‘ಪಂಚ ಗ್ಯಾರಂಟಿ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಗೊಂಡು ಶೇ 98.5 ರಷ್ಟು ಪ್ರಗತಿ ಸಾಧಿಸಿದೆ. ಉದ್ಯೋಗ ಮೇಳ ನಡೆಸಿ ಶೇ 90ರಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದೆ ಎಂದು ಮಾಹಿತಿ ನೀಡಿದರು.

    ಸಭೆಯಲ್ಲಿ ಭದ್ರಾ ಕಾಡಾ ಪ್ರಾಧಿಕಾರದ ಆಡಳಿತಾಧಿಕಾರಿ ಆರ್.ಸತೀಶ, ಭೂ ಅಭಿವೃದ್ದಿ ಬ್ಯಾಂಕ್ ಅಧಿಕಾರಿ ತಾಂತ್ರಿಕ್, ಪ್ರಭಾರ ಕೃಷಿ ಅಧಿಕಾರಿ ಕೆ.ಪ್ರಶಾಂತ್, ಭೂ ಅಭಿವೃದ್ದಿ ಅಧಿಕಾರಿ ನಾಗೇಶ್ ಡೊಂಗ್ರೆ, ಚಿಕ್ಕಮಗಳೂರು-ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

    The responsibility of bringing the benefits of the authority to the homes of the members lies with them.

  • ಅ.19 ರಿಂದ 23 ರವರೆಗೆ ದೇವೀರಮ್ಮ ದೀಪೋತ್ಸವ

    ಅ.19 ರಿಂದ 23 ರವರೆಗೆ ದೇವೀರಮ್ಮ ದೀಪೋತ್ಸವ

    ಚಿಕ್ಕಮಗಳೂರು: ತಾಲ್ಲೂಕು ಮಲ್ಲೇನಹಳ್ಳಿ ಬಿಂಡಿಗ ಆದಿಶಕ್ತ್ಯಾತ್ಮಕ ಶ್ರೀ ದೇವೀರಮ್ಮನವರ ದೀಪೋತ್ಸವ ಅ.೧೯ ರಿಂದ ೨೩ ರವರೆಗೆ ನಡೆಯಲಿದ್ದು, ಬೆಟ್ಟ ಹತ್ತಲು ರಾತ್ರಿ ಹೊರತುಪಡಿಸಿ ೨ ದಿನ ಅವಕಾಶ ಕಲ್ಪಿಸಲಾಗಿದೆ ಎಂದು ದೇವೀರಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಕುಲಶೇಖರ್ ತಿಳಿಸಿದರು.

    ಅವರು ಇಂದು ದೇವಸ್ಥಾನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಅ.೧೯ ರಂದು ಬೆಳಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಹಾಗೂ ಅ.೨೦ ರಂದು ಬೆಳಗ್ಗೆ ೭ ಗಂಟೆಯಿಂದ ಬೆಟ್ಟ ಹತ್ತಲು ಭಕ್ತರಿಗೆ ಅವಕಾಶ ನೀಡಲಾಗಿದ್ದು, ಗಿರಿಪ್ರದೇಶದಲ್ಲಿ ಈ ಬಾರಿ ಅತಿ ಹೆಚ್ಚು ಮಳೆಯಾಗುತ್ತಿರುವ ಕಾರಣ ರಾತ್ರಿ ಬೆಟ್ಟ ಹತ್ತಲು ನಿಷೇಧಿಸಲಾಗಿದೆ ಎಂದರು.

    ಅ.೧೯ ರಂದು ಬೆಳಗ್ಗೆ ೭ ಗಂಟೆಗೆ ಬೆಟ್ಟದಲ್ಲಿ ಅಭಿಷೇಕ, ಪೂಜಾ ಕಾರ್ಯಕ್ರಮಗಳು ಜರುಗಿದ ಬಳಿಕ ೯ ರಿಂದ ೫ ಗಂಟೆಯವರೆಗೆ ದೇವೀರಮ್ಮ ದೇವಿಯವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ೨೦ ರಂದು ೩ ಗಂಟೆಯವರೆಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶವಿದ್ದು, ಸಂಜೆ ೭ ಗಂಟೆಗೆ ದೀಪೋತ್ಸವ ನಡೆಯಲಿದೆ ಎಂದರು.

    ೨೧ ರಂದು ದೇವೀರಮ್ಮ ದೇವಸ್ಥಾನದಲ್ಲಿ ದೇವಿಯವರಿಗೆ ಉಡುಗೆ ಪೂಜೆ, ಸಂಜೆ ೬.೩೦ ಕ್ಕೆ ಬೆಣ್ಣೆಬಟ್ಟೆ ಸುಡುವುದು ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ೨೨ ರಂದು ಮಹಾಗಣಪತಿ ಪೂಜೆ, ಕುಂಕುಮಾರ್ಚನೆ ಇತ್ಯಾದಿ. ೨೩ ರಂದು ಮಹಾಮಂಗಳಾರತಿ, ಹರಕೆ ಒಪ್ಪಿಸುವುದು, ತೀರ್ಥಪ್ರಸಾದ ವಿನಿಯೋಗ.

    ಶ್ರೀ ಕ್ಷೇತ್ರದಲ್ಲಿ ನಡೆಯುವ ಪ್ರಸಾದ ವಿನಿಯೋಗಕ್ಕೆ ಅಕ್ಕಿ, ಬೇಳೆ, ಎಣ್ಣೆ ಹಾಗೂ ಧನಸಹಾಯ ಮಾಡುವವರು ಕ್ಷೇತ್ರಕ್ಕೆ ತಂದು ಒಪ್ಪಿಸಬಹುದಾಗಿದೆ. ಬೆಟ್ಟದ ಮೇಲೆ ತೆಂಗಿನಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.

    ದೇವಿಯ ದರ್ಶನವಾದ ಬಳಿಕ ಬೆಟ್ಟದ ಮೇಲೆ ಕುಳಿತುಕೊಳ್ಳದೆ ಕೆಳಗೆ ಇಳಿಯಬೇಕು, ಬೆಟ್ಟದ ಹಾಗೂ ದೇವಸ್ಥಾನದ ಸುತ್ತಮುತ್ತ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯ ವಸ್ತುಗಳನ್ನು ಎಸೆಯಬಾರದು, ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ತರೀಕೆರೆ, ಬೀರೂರು, ಕಡೂರು, ಚಿಕ್ಕಮಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.

    ಬೆಟ್ಟದಲ್ಲಿ ಪಟಾಕಿ ಒಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಭಕ್ತರು ಸ್ವಚ್ಚತೆ ಕಾಪಾಡುವ ಜೊತೆಗೆ ಪರಿಸರದ ಕಾಳಜಿಯನ್ನು ಹೊಂದಬೇಕು ಎಂದು ಹೇಳಿದರು.

    Deviramma Deepotsava from 19th to 23rd October

  • ಗಾಲ್ಪ್ ಕ್ರೀಡೆ ಶ್ರೀಮಂತರ ಆಟವೆಂಬುದು ತಪ್ಪುಕಲ್ಪನೆ

    ಗಾಲ್ಪ್ ಕ್ರೀಡೆ ಶ್ರೀಮಂತರ ಆಟವೆಂಬುದು ತಪ್ಪುಕಲ್ಪನೆ

    ಚಿಕ್ಕಮಗಳೂರು:  ಗಾಲ್ಪ್ ಕ್ರೀಡೆ ಶ್ರೀಮಂತರ ಆಟವೆಂಬುದು ತಪ್ಪುಕಲ್ಪನೆ. ಆಸಕ್ತಿ ಯುಳ್ಳ ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸುವ ಜೊತೆಗೆ ಕ್ರೀಡಾಪಟುಗಳಿಗೆ ಉತ್ಸಾಹ ತುಂಬಲು ಸದಾಬದ್ಧ ವಾಗಿದ್ದೇವೆ ಎಂದು ಗಾಲ್ಪ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಸಂಜಯ್ ನಾಡಗೌಡ ಹೇಳಿದರು.

    ತಾಲ್ಲೂಕಿನ ಅಲ್ಲಂಪುರ ಸಮೀಪದ ಗಾಲ್ಪ್ ಕ್ಲಬ್‌ನಲ್ಲಿ ರಾಜ್ಯ ಗಾಲ್ಪ್ ಅಸೋಸಿಯೇಷನ್ ಹಾಗೂ ಮೈ ಸೂರು ಸ್ಯಾಂಡಲ್ ಸೋಪ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ಧ ರಾಜ್ಯಮಟ್ಟದ ಗಾಲ್ಪ್ ಕ್ರೀಡಾ ಸ್ಪರ್ಧೆ ಯ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಸಂಜೆ ಭಾಗವಹಿಸಿ ಅವರು ಮಾತನಾಡಿದರು.

    ಗಾಲ್ಪ್ ಅಂತರಾಷ್ಟ್ರೀಯ ಕ್ರೀಡೆಯಾಗಿದೆ. ಹೀಗಾಗಿ ಸ್ಥಳೀಯವಾಗಿ ಯುವಜನತೆಗೆ ಕ್ರೀಡೆಯ ಪರಿಚ ಯಿಸಲು ಸಲುವಾಗಿ ವರ್ಷಕ್ಕೊಮ್ಮೆ ರಾಜ್ಯಮಟ್ಟದ ಸ್ಪರ್ಧೆಯನ್ನು ಆಯೋಜಿಸಿ ಕ್ರೀಡೆಗೆ ಪ್ರೋತ್ಸಾಹಿಸಲಾಗು ತ್ತಿದೆ. ಅಲ್ಲದೇ ಬಡವರ್ಗದ ಕ್ರೀಡಾಸಕ್ತ ಯುವಕರಿಗೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಹಕರಿಸಲಾಗುತ್ತಿದೆ ಎಂದು ತಿಳಿಸಿದರು.

    ಪ್ರಸ್ತುತ ರಾಜ್ಯದಲ್ಲಿ ಸುಮಾರು ೧೬ ಜಿಲ್ಲೆಗಳಲ್ಲಿ ಗಾಲ್ಪ್ ಸಂಸ್ಥೆ ಅಸ್ಥಿತ್ವದಲ್ಲಿದೆ. ಅನೇಕ ಯುವಕರು, ಶಾ ಲಾ ವಿದ್ಯಾರ್ಥಿಗಳಿಗೆ ಗಾಲ್ಪ್ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಲಾಗುತ್ತಿದೆ. ಭಾರತದಲ್ಲಿ ಅತಿಹೆಚ್ಚು ಗಾಲ್ಪ್ ಆಟ ಗಾರರಿದ್ದು ಈ ಕ್ರೀಡಾಪಟುಗಳು ಒಲಂಪಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜಯ ಸಾಧಿಸುವುದೇ ಅಸೋಸಿ ಯೇಷನ್ ಗುರಿಯಾಗಿದೆ ಎಂದರು.

    ಭಾರತದಲ್ಲಿ ಕರ್ನಾಟಕ ಗಾಲ್ಪ್ ಕ್ರೀಡೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಗಾಲ್ಪ್ ಕ್ರೀಡೆಯಲ್ಲಿ ಕಠಿಣ ಪರಿಶ್ರಮದಿಂದ ತೊಡಗಿಸಿಕೊಳ್ಳುವ ಆಸಕ್ತಿ ಕ್ರೀಡಾಪಟುಗಳಿಗೆ ಸಮಗ್ರ ತರಬೇತಿಗಾಗಿ ಅಸೋಸಿಯೇ ಷನ್ ಕೋಟ್ಯಾಂತರ ಹಣವನ್ನು ಇರಿಸಿದ್ದು ಒಟ್ಟಾರೆ ಗಾಲ್ಪ್ ಕ್ರೀಡೆಯನ್ನು ದೇಶದಲ್ಲಿ ಮುಂಚೂಣಿಗೆ ತರು ವುದೇ ಮೂಲಧ್ಯೇಯ ಎಂದು ತಿಳಿಸಿದರು.

    ಗಾಲ್ಪ್ ಕ್ರೀಡಾ ಸ್ಪರ್ಧೆಯಲ್ಲಿ ಮೂರು ವಿಭಾಗಗಳಾಗಿ ವಿಂಗಡಿಸಿದ್ದು ಓಪನ್ ತಂಡದಲ್ಲಿ ಬೆಂಗಳೂರು ಗ್ಲಾಲ್ಪ್ ಕ್ಲಬ್ ಎ ತಂಡ ಪ್ರಥಮ, ಬಿ ತಂಡ ದ್ವೀತಿಯ. ಗಾಲ್ಪ್ ಹ್ಯಾಂಡಿಕ್ರಾಫ್ಟ್ ತಂಡದಲ್ಲಿ ಎಂಇಜಿ ಆರ್ಮಿ ತಂಡ ಪ್ರಥಮ, ಕೆಜಿಎಫ್ ಜಿಮ್‌ಖಾನಾ ದ್ವೀತಿಯ ಹಾಗೂ ಸಿಂಗಲ್ ಸ್ಪರ್ಧೆಯಲ್ಲಿ ಮೈಸೂರು ಶ್ರೀಧರ್ ಸಿಂಗ್ ಪ್ರಥಮ. ಬೆಂಗಳೂರು ಆಯಾನ್‌ಜಂಗ್ ದ್ವೀತಿಯ ಪಡೆದುಕೊಂಡರು.

    ಗಾಲ್ಪ್ ಕ್ಲಬ್ ಸಂಸ್ಥಾಪಕ ಸುದರ್ಶನ್ ಮಾತನಾಡಿ ಗಾಲ್ಪ್ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡುವ ಸಲುವಾ ಗಿ ವಿಶಾಲವಾದ ಆಟದ ಮೈದಾನವನ್ನು ನಿರ್ಮಿಸಿ, ಸ್ಪರ್ಧಾಳುಗಳಿಗೆ ಪ್ರೋತ್ಸಾಹಿಸುತ್ತಿದೆ. ಇಂದು ರಾಜ್ಯಾದ್ಯ ಂತ ವಿವಿಧ ಜಿಲ್ಲೆಗಳಿಂದ ಕ್ರೀಡಾಸಕ್ತರು ಜಿಲ್ಲೆಗಾಗಮಿಸಿ ಸ್ಫರ್ಧೆಯಲ್ಲಿ ಭಾಗವಹಿಸಿರುವುದು ಅತ್ಯಂತ ಹೆಮ್ಮೆ ಯ ಸಂಗತಿ ಎಂದರು.

    ಈ ಸಂದರ್ಭದಲ್ಲಿ ರಾಜ್ಯ ಗಾಲ್ಪ್ ಅಸೋಸಿಯೇಷನ್ ಕಾರ್ಯದರ್ಶಿ ರಾಮ್‌ನಾಗಪ್ಪ, ಚಿಕ್ಕಮಗಳೂ ರು ಗಾಲ್ಪ್ ಕ್ಲಬ್ ನಾಯಕ ರವಿಶಂಕರ್, ಸ್ಪರ್ಧೆ ಆಯೋಜಕರಾದ ಹೆಚ್.ಡಿ.ವಿನಯ್‌ರಾಜ್, ರವಿಮುತ್ತಪ್ಪ, ಹೇಮಂತ್, ಶಿವಪ್ರಕಾಶ್, ಸಿ.ಜೆ.ಗೌತಮ್, ಹೆಚ್.ಕೆ.ಕೃತಿ, ಸ್ಪರ್ಧಾಳುಗಳು ಮತ್ತಿತರರು ಉಪಸ್ಥಿತರಿದ್ದರು.

    It is a misconception that golf is a rich man’s sport

  • ಬಹುಜನರೇ ಭಾರತದ ದೇಶದ ಅತಿದೊಡ್ಡ ಆಸ್ತಿ

    ಬಹುಜನರೇ ಭಾರತದ ದೇಶದ ಅತಿದೊಡ್ಡ ಆಸ್ತಿ

    ಚಿಕ್ಕಮಗಳೂರು:  ಬಹುಜನರು ದೇಶದ ಆಸ್ತಿ. ಭಾರತದ ಬಹುಜನರೇ ದೊಡ್ಡ ಸ ಮುದಾಯವಾಗಿದ್ದು ಎಲ್ಲರೂ ಒಗ್ಗೂಡಿಸಿ ದೇಶದ ಆಡಳಿತ ನಡೆಸುವ ರಾಜಕೀಯ ಪ್ರಜ್ಞೆ ಹೆಚ್ಚಿಸಿದವರು ದಾ ದಾ ಸಾಹೇಬ್ ಕಾನ್ಷಿರಾಮ್‌ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಹೇಳಿದರು.

    ನರಗದ ಜಿಲ್ಲಾ ಬಿಎಸ್ಪಿ ಕಚೇರಿಯಲ್ಲಿ ಜಿಲ್ಲಾ ಸಹೋದರತ್ವ ಸಮಿತಿ ಮಾಸಿಕ ಸಭೆ ಹಾಗೂ ದಾದಾ ಸಾ ಹೇಬ್ ಕಾನ್ಷಿರಾಮ್ ಅವರ ಪರಿನಿರ್ವಾಣ ದಿನದ ಅಂಗವಾಗಿ ಶನಿವಾರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿ ಬಹುಜನರಿಗೆ ರಾಜಕೀಯ ಪ್ರಜ್ಷೆ ಹೆಚ್ಚಿಸಿದ ಕಾನ್ಷಿರಾಮ್ ಪಾತ್ರ ಸ್ಮರಣೀಯ. ದೇಶಾಡಳಿತ ನಡೆಸುವ ಮಾರ್ಗ ತೋರಿದ ರಾಜಕೀಯ ದಾರ್ಶನಿಕ ಕಾನ್ಷಿರಾಮ್ ಅವರನ್ನು ಮರೆಯಲಾಗದು. ಮನುವಾದಿಗಳು ದೇಶವನ್ನು ಆಳುತ್ತಾ ಬಹುಜನರನ್ನು ತುಳಿಯುತ್ತಿದ್ದಾರೆ. ಹೀಗಾಗಿ ಬಹುಜನರ ಕೈಗೆ ಅಧಿಕಾರದ ಚುಕ್ಕಾಣಿ ಸಿಗಬೇಕಿದೆ ಎಂದು ಪ್ರತಿಪಾದಿಸಿದವರು ಎಂದರು.

    ಅಸೃಷ್ಟ್ಯರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರನ್ನು ಆಳುವ ವರ್ಗದವರನ್ನಾಗಿ ಮಾಡಿದ ಶ್ರೇ ಯಸ್ಸು ಕಾನ್ಷಿರಾಮ್ ಅವರಿಗೆ ಸಲ್ಲುತ್ತದೆ. ಅಲ್ಲದೇ ಮಾಯಾವತಿ ಅವರನ್ನು ಮೂರು ಭಾರಿ ಮುಖ್ಯಮಂತ್ರಿ ಯನ್ನಾಗಿ ಮಾಡಿ, ಉತ್ತರ ಪ್ರದೇಶದಲ್ಲಿ ಬಡವರಿಗೆ ಭೂಮಿ, ಸಾಲಸೌಲಭ್ಯ ಕಲ್ಪಿಸಿದವರು ಎಂದು ಹೇಳಿ ದರು.

    ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ ಭಾರತೀಯರ ಬದುಕಿನಲ್ಲಿ ಭದ್ರವಾಗಿ ಬೆಸೆದು ಕೊಂಡಿರುವ ಪುರೋಹಿತಶಾಹಿಯನ್ನು ವಿರುದ್ಧ ಬುಡ ಸಹಿತ ನಾಶಗೊಳಿಸಿ, ಬಹುಜನ ಸಮಾಜವನ್ನು ಆಳುವ ಸಮಾಜವನ್ನಾಗಿಸುವುದು ಕಾನ್ಷಿರಾಮ್ ಗುರಿಯಾಗಿತ್ತು. ಶೋಷಿತ ಸಮಾಜವು ಆಳುವ ಸಮಾಜ ವಾಗುವುದರಿಂದ ಮಾತ್ರ ಜಾತಿರಹಿತ ಸಮಾಜವನ್ನು ಸೃಷ್ಟಿ ಮಾಡಬಹುದು ಎಂದು ಸಾರಿದವರು ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್ ಮಾತನಾಡಿ ಕಾನ್ಷಿರಾಮ್ ರವರು ಬಿಎಸ್ಪಿಯನ್ನು ಮೂರನೇ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿಸಿದರು. ತಮಗೆ ಒಲಿದು ಹಲವಾರು ಹುದ್ದೆಗಳನ್ನು ಬದಿಗಿಸಿದವರು. ಅಲ್ಲದೇ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಬಹುದಾದ ಸದಾವಕಾಶ ವನ್ನು ತಳ್ಳಿಹಾಕಿ ಮಯಾವತಿ ಅವರನ್ನು ನಾಯಕಿಯನ್ನಾಗಿ ಸೃಷ್ಟಿಸಿದವರು ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾ ಸಹೋದರತ್ವ ಸಮಿತಿಯ ಕಾರ್ಯದರ್ಶಿ ಕೆ.ಎಸ್.ಮಂಜುಳಾ, ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿಗಳಾದ ಆರ್.ವಸಂತ್, ಸಿದ್ದಯ್ಯ, ಖಜಾಂಚಿ ಟಿ.ಹೆಚ್.ರತ್ನ, ಅಸ್ಮ ಪರ್ವೀನ್, ಕಲಾ ವತಿ, ಲಕ್ಷ್ಮಣ್ ಉಪಸ್ಥಿತರಿದ್ದರು.

    People are the biggest asset of India