May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಮಹಿಳಾ – ಮಕ್ಕಳ ಅಭಿವೃದ್ದಿ ನಿಗಮಕ್ಕೆ ಸರ್ಕಾರದಿಂದ 32 ಕೋಟಿ ರೂ.

ಚಿಕ್ಕಮಗಳೂರು: ರಾಜ್ಯ ಸರ್ಕಾರ ಈ ಬಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ನಿಗಮಕ್ಕೆ ೩೨ ಕೋಟಿ ರೂ. ಅನುದಾನವನ್ನು ಒದಗಿಸಿದ್ದು, ಇದರಲ್ಲಿ ೧೫ ಕೋಟಿ ಅನುದಾನ ಉದ್ಯೋಗಕ್ಕಾಗಿ ಮೀಸಲಿಡಲಾಗಿದೆ ಎಂದು ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ತಿಳಿಸಿದರು.

ಇಂದು ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಮಾಜಿ ದೇವದಾಸಿಯರಿಗೆ ೨೦೦೦ ರೂ. ಮಾಸಾಶನ ನೀಡಲಾಗುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ೩೦ ಸಾವಿರ ಸಹಾಯ ಧನ, ಆಸಿಡ್ ದಾಳಿಗೆ ತುತ್ತಾದವರಿಗೆ ಜೀವನಾಧಾರಕ್ಕೆ ೧೦ ಸಾವಿರ ರೂ.ಗಳನ್ನು ಮಾಸಾಶನ ಹಾಗೂ ನಿಗಮದಿಂದ ೫ ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ ಎಂದು ಹೇಳಿದರು.

ಐದು ಯೋಜನೆ ಹೊಂದಿರುವ ಈ ಪುಟ್ಟ ನಿಗಮವು ಇದುವರೆವಿಗೂ ಸಾಕಷ್ಟು ಸಾಧನೆಗಳನ್ನು ಮಾಡಿಕೊಂಡು ಬರುತ್ತಿದೆ. ಕೆಳ ವರ್ಗ ಮತ್ತು ಮಧ್ಯಮ ವರ್ಗದ ಜನರಿಗೆ ಸಂಬಂಧಿಸಿದ ಉದ್ಯೋಗಿನಿ ಯೋಜನೆಯು ನಗರ ವ್ಯಾಪ್ತಿಯಲ್ಲಿ ಶೇ.೨೫ ಕೂಡ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಕೆಲವೊಂದು ತೊಡಕುಗಳಿದ್ದು, ಕಾರಣಾಂತರಗಳಿಂದ ಲೀಡ್ ಬ್ಯಾಂಕ್‌ಗಳಿಂದ ಸಕಾರ ದೊರಕುತ್ತಿಲ. ಆದರೂ ಜಿಲ್ಲೆಯಲ್ಲಿ ಶೇ.೭೫ ರಷ್ಟು ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಕೆಲಸ ನಮಗೆ ಉಸಿರಿರುವರೆಗೂ ಅನ್ನ ನೀಡುವ ಕೆಲಸವಾಗಿರುವುದರಿಂದ ಅಧಿಕಾರಿಗಳು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು. ಇಚ್ಛಾಶಕ್ತಿಯಿಂದ ಸ್ಪಂದಿಸಿ ಸಹಕರಿಸಿ ಜನರು ಜೀವನ ರೂಪಿಸಿಕೊಳ್ಳುವಂತಹ ಅವಕಾಶ ಕಲ್ಪ್ಪಿಸಿಕೊಡಬೇಕು. ಸಾರ್ವಜನಿಕರು ಇಲಾಖೆಯ ಕಚೇರಿಗೆ ಬಂದಾಗ ಸರ್ಕಾರದ ಸವಲತ್ತುಗಳನ್ನು ಅವರಿಗೆ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವಿರುವುದಿಲ್ಲ. ಅಂಥವರಿಗೆ ಅರಿವು ಮೂಡಿಸಿ ಸೌಲಭ್ಯ ಪಡೆದುಕೊಳ್ಳುವಂತೆ ಮಾಡಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸರ್ಕಾರ ಮತ್ತು ಸಾರ್ವಜನಿಕರ ಸೇತುವೆಯಾಗಿ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು.

ರಾಜ್ಯದಲ್ಲಿ ಎಷ್ಟು ಮಂದಿ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ ಎಂಬುದನ್ನು ಅರಿಯಲು ಮೊದಲ ಬಾರಿಗೆ ಈ ಸಮೀಕ್ಷೆಯನ್ನು ನಡೆಸಲು ಕ್ರಮ ಕೈಗೊಳ್ಳಲಾಗಿದ್ದು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಈ ಸಮೀಕ್ಷೆಯ ಉದ್ದೇಶವಾಗಿದೆ. ಪ್ರತಿ ಜಿಲ್ಲೆಯಲ್ಲಿ ಸಮೀಕ್ಷೆ ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ತಿಳಿಯಲು ಖುದ್ದಾಗಿ ಜಿಲ್ಲೆಗಳಿಗೆ ತೆರಳಿ ಪರಿಶೀಲನೆ ಮಾಡುತ್ತಿರುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ೧೩೬ ತೃತೀಯ ಲಿಂಗಿಗಳಿದ್ದಾರೆ. ಸಮೀಕ್ಷೆಗೆ ಒಳಪಟ್ಟಲ್ಲಿ ಮನೆಯವರ ವಿಶ್ವಾಸ ಕಳೆದುಕೊಂಡು ಮನೆಯಿಂದ ದೂರ ಉಳಿಯಬೇಕಾಗುತ್ತದೆ ಎಂಬ ಕಾರಣದಿಂದ ಮಿಕ್ಕ ೨೨ ಜನರು ಸಮೀಕ್ಷೆಗೆ ಸಹಕರಿಸುತ್ತಿಲ್ಲ. ಅಂಥವರ ಮನವೊಲಿಸಿ ಸಮೀಕ್ಷೆಗೆ ಒಳಪಡಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಿಗಮದ ಜಂಟಿ ನಿರ್ದೇಶಕಿ ಅಕ್ಕಮಹಾದೇವಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ ಸಹಿತ ವಸತಿ ಕಲ್ಪಿಸಲು ಪ್ರಸತ್ತ ಸಾಲಿನಲ್ಲಿ ವಿಶೇ? ವರ್ಗದ ವಸತಿ ಯೋಜನೆಯಡಿಯಲ್ಲಿ ನಗರಾಭಿವೃದ್ಧಿ ಕೋಶ, ಪುರಸಭೆ, ನಗರಸಭೆಗಳಿಗೆ ಒಟ್ಟು ೨೩ ಅರ್ಜಿಗಳನ್ನು ಕಳುಹಿಸಿ ಮಂಜೂರಾತಿಗೆ ಕ್ರಮ ವಹಿಸಲಾಗಿದೆ. ಎರಡು ಅರ್ಜಿಗಳು ಮಂಜೂರಾತಿ ಹಂತದಲ್ಲಿವೆ.

೬ ಜನರಿಗೆ ನಗರಸಭೆಯ ಜಿ+೨ ಮನೆಗಳು ಮಂಜೂರಾತಿ ಹಂತದಲ್ಲಿವೆ. ಜಿಲ್ಲೆಯಲ್ಲಿ ಈಗಾಗಲೇ ೨೮ ಲಿಂಗತ್ವ ಅಲ್ಪಸಂಖ್ಯಾತರು ಟಿ.ಜಿ. ಕಾರ್ಡ್ ಹೊಂದಿದ್ದಾರೆ. ೨೪ ಜನ ಲಿಂಗತ್ವ ಅಲ್ಪಸಂಖ್ಯಾತರು ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆದಿದ್ದಾರೆ. ಜಿಲ್ಲೆಯಲ್ಲಿನ ೭ ಆಸಿಡ್ ದಾಳಿ ಪ್ರಕರಣಗಳಲ್ಲಿ ನಾಲ್ವರು ಪಲಾನುಭವಿಗಳಿಗೆ ನಿಗಮದ ಗೆಳತಿ ಯೋಜನೆಯಡಿ ತಲಾ ೫ ಲಕ್ಷ ರೂ. ಸಾಲ ಮತ್ತು ಸಹಾಯಧನ ಮಂಜೂರಾಗಿದೆ. ಮೂವರಿಗೆ ದಾಖಲಾತಿಗಳು ಲಭ್ಯವಿಲ್ಲದ ಕಾರಣ ಮಂಜೂರಾಗಿಲ್ಲ ಎಂದರು.

ಉದ್ಯೋಗಿನಿ ಯೋಜನೆಯಡಿ ಶಾಸಕರ ಆಯ್ಕೆ ಸಮಿತಿಯ ಭೌತಿಕ ಗುರಿ ೧೮. ಜಿಲ್ಲಾಧಿಕಾರಿಗಳ ಆಯ್ಕೆ ಸಮಿತಿ ಭೌತಿಕ ಗುರಿ ೯. ಗುರಿಯನುಸಾರ ಆಯ್ಕೆಯಾದ ಅರ್ಜಿಗಳನ್ನು ಸಂಬಂಧಿಸಿದ ಬ್ಯಾಂಕುಗಳಿಗೆ ಕಳುಹಿಸಿದ್ದು ಒಟ್ಟು ೨೦ ಅರ್ಜಿಗಳಿಗೆ ಇದುವರೆಗೆ ಸಾಲ ಮಂಜೂರಾತಿ ದೊರಕಿದೆ. ಸಹಾಯಧನ ಬಿಡುಗಡೆ ಸಲುವಾಗಿ ೧೭ ಅರ್ಜಿಗಳನ್ನು ನಿಗಮಕ್ಕೆ ಸಲ್ಲಿಸಲಾಗಿದೆ. ಉಳಿದ ೭ ಅರ್ಜಿಗಳಿಗೆ ಸಾಲ ಮಂಜೂರಾತಿಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ವೈ.ಆಲದಾರ್ತಿ, ಜಿಲ್ಲಾ ನಿರೂಪಣಾಧಿಕಾರಿ ಡಿ.ಸಂತೋಷ್. ಎಲ್ಲಾ ತಾಲ್ಲೂಕುಗಳ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು

The government has allocated Rs. 32 crore to the Women and Child Development Corporation.

Related posts

Dr. Belawadi Manjunath’s:`ಸತ್ಯವಿಠಲ ಅವರ ಕಾವ್ಯಗಳ ಸಮಗ್ರ ಅಧ್ಯಯನ’ದ ಕೃತಿ ಬಿಡುಗಡೆ

Team Suddigara

ವಾಸವಿ ಜಯಂತಿ ಪ್ರಯುಕ್ತ ವಾಸವಿ ಯುವಜನ ಸಂಘದಿಂದ ಸಮಾಜ ಸೇವೆ

Team Suddigara

ಹಂಗರವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 3.20 ಲಕ್ಷ ರೂ ನಿವ್ವಳ ಲಾಭ

Team Suddigara

Leave a Comment