Category: ಚಿಕ್ಕಮಗಳೂರು

  • ಮಳೆಗಾಲದಲ್ಲಿ ಅನಾಹುತ ತಡೆಯಲು ಅಧಿಕಾರಿಗಳ-ಸಿಬ್ಬಂದಿ ಒಳಗೊಂಡ ತಂಡ ರಚನೆ

    ಮಳೆಗಾಲದಲ್ಲಿ ಅನಾಹುತ ತಡೆಯಲು ಅಧಿಕಾರಿಗಳ-ಸಿಬ್ಬಂದಿ ಒಳಗೊಂಡ ತಂಡ ರಚನೆ

    ಚಿಕ್ಕಮಗಳೂರು: ಮಳೆಗಾಲದಲ್ಲಿ ಅನಾಹುತಗಳನ್ನು ತಡೆಗಟ್ಟಿ ಮಜಾಗ್ರತಾ ಕ್ರಮ ಕೈಗೊಳ್ಳಲು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡಗನ್ನು ಸಚಿಸಲಾಗಿದ ಎಂದು ಜಿಲ್ಲಾ ಉಸ್ತುವಾರಿಯನ್ನೂ ಹೊಂದಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

    ಮಳೆಗಾಲ ಆರಂಭವಾಗಿರುವ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಳೆ ಸೇರಿದಂತೆ ಪ್ರಕೃತಿ ವಿಕೋಪಳನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದರು.

    ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಈ ಬಾರಿ ಅವಧಿಗೂ ಮುನ್ನ ಮಳೆ ಆರಂಭವಾಗಿದ್ದು, ಮಳೆ ಹಾಗೂ ಗಾಳಿಗೆ ಹಲವೆಡೆ ಅನಾಹುತ ಸಂಭವಿಸಿದೆ. ಗಾಳಿ ಮಳೆಗೆ ಜಿಲ್ಲೆಯಲ್ಲಿ ಮೃತಪಟ್ಟ ಜಿಲ್ಲೆಯ ಇಬ್ಬರು ವ್ಯಕ್ತಿಗಳ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ ಎಂದರು.

    ವಾಡಿಕೆಯ ಪ್ರಕಾರ ಜೂನ್‌ 5 ರಂದು ಮಳೆ ಆರಂಭವಾಗಬೇಕಾಗಿತ್ತು. ಆದರೆ, ಮೇ ತಿಂಗಳ ಮೊದಲ ವಾರದಿಂದಲೇ ಮಳೆ ಆರಂಭವಾಗಿದೆ. ಮಳೆ ಬಂದಿದ್ದರಿಂದ ಎಲ್ಲರಿಗೂ ಒಳ್ಳೆಯದಾಗಿದೆ. ಜತೆಗೆ ಅನಾಹುತವೂ ಸಂಭವಿಸಿದೆ. ಭಾರೀ ಮಳೆ ಆಗುವ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಒಳಗೊಂಡ ವಿಶೇಷ ತಂಡಗಳನ್ನು ರಚನೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

    ತಾವು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಈ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ತೆಗೆದುಕೊಳ್ಳಲಾಗಿದೆ. ಅತಿವೃಷ್ಠಿ ಎದುರಿಸಲು ಸಿಬ್ಬಂದಿಗಳ ಜತೆಗೆ ಬೇಕಾದ ಸಲಕರಣೆಗಳನ್ನು ಇಟ್ಟುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಓ ಉಸ್ತುವಾರಿ ನೋಡಿಕೊಲ್ಳುತ್ತಿದ್ದಾರೆ ಎಂದರು.

    ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಆಗಬಾರದೆಂಬ ಉದ್ದೇಶದಿಂದ ಲೈನ್‌ಮೆನ್‌ಗಳ ಜತೆಗೆ 110 ಮಂದಿ ಗ್ಯಾಂಗ್‌ ಮೆನ್‌ಗಳನ್ನು ಕೊಡಲಾಗಿದೆ. ಅವರಿಗೆ ಅಗತ್ಯ ವಾಹನಗಳನ್ನು ಸಹ ನೀಡಲಾಗಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನೋಡಲ್‌ ಅಧಿಕಾರಿಗಳ್ನು ನೇಮಿಸಿಕೊಳ್ಳಲಾಗಿದ್ದು, ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ ಎಂದರು.

    ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಭೂ ಕುಸಿತ ಉಂಟಾಗುತ್ತಿದೆ. ಕೆಲವೆಡೆ ಮರಗಳನ್ನು ತೆಗೆಯಲು ಅರಣ್ಯ ಇಲಾಖೆಯವರು ಅನುಮತಿ ನೀಡುತ್ತಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಯಲ್ಲಿ ಹೇಳಿದ್ದರು. ಹೀಗಾಗಿ ಕೆಲವು ಸಂದರ್ಭದಲ್ಲಿ ನಿಯಮಗಳನ್ನು ಸರಳಗೊಳಿಸಬೇಕೆಂದು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

    ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಸಚಿವ ಕೆ.ಜೆ. ಜಾರ್ಜ್ ಅವರು, ಮಳೆಗಾಲ ಮುಗಿಯುವವರೆಗೆ ಅಧಿಕಾರಿಗಳು ಹೆಚ್ಚು ಎಚ್ಚರಿಕೆ ಮತ್ತು ಜವಾಬ್ದಾರಿಯಿಂದಕೆಲಸ ಮಾಡಬೇಕು ಎಂದು ಸೂಚಿಸಿದರು.

    Formation of a team comprising officers and staff to prevent disasters during the rainy season

  • ಜಿಲ್ಲಾ ಉಸ್ತುವಾರಿ ಸಚಿವರಿಂದ 5 ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಣೆ

    ಜಿಲ್ಲಾ ಉಸ್ತುವಾರಿ ಸಚಿವರಿಂದ 5 ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಣೆ

    ಚಿಕ್ಕಮಗಳೂರು: ಮಳೆಯಿಂದ ಮರ ಬಿದ್ದು ಸಾವಿಗೀಡಾದ ಎನ್.ಆರ್.ಪುರ ತಾಲ್ಲೂಕಿನ ಇಬ್ಬರ ಮನೆಗಳಿಗೆ ಇಂದು ತೆರಳಿದ ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸಾಂತ್ವನ ಹೇಳಿದರಲ್ಲದೆ, ತಲಾ ೫ ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ವಿತರಿಸಿದರು.

    ಖಾಂಡ್ಯ ಹೋಬಳಿ ಬಿಳುಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯ ಸಂದರ್ಭದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಮರ ಬಿದ್ದು ಮೃತಪಟ್ಟ ಅನಿಲ್ ಪಾಯಸ್ ಅವರ ಮನೆಗೆ ತೆರಳಿ ಪರಿಹಾರದ ಚೆಕ್ ವಿತರಿಸಿದರು. ಅನಂತರ ಅದೇ ತಾಲ್ಲೂಕಿನ ಕೊಗ್ರೆ ಬಳಿ ಆಟೋ ರಿಕ್ಷಾದ ಮೇಲೆ ಮರ ಬಿದ್ದು ಮೃತಪಟ್ಟ ಚಾಲಕ ರತ್ನಾಕರ ಅವರ ಮನೆಗೂ ತೆರಳಿ ಮೃತನ ಸಹೋದರನಿಗೆ ಪರಿಹಾರದ ಚೆಕ್ ವಿತರಿಸಿದರು.

    ಅನಂತರ ಮಾತನಾಡಿದ ಅವರು, ಪರಿಹಾರ ನೀಡುವುದರಿಂದ ಹೋದ ಜೀವ ಮರಳಿ ಬರುವುದಿಲ್ಲ. ಆದರೂ ಅವರ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲಿ ಎನ್ನುವ ಕಾರಣಕ್ಕಾಗಿ ಪರಿಹಾರ ನೀಡಲಾಗುತ್ತಿದೆ. ಸಂತ್ರಸ್ತರ ಮನೆ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿಲ್ಲ. ಅದನ್ನು ಶಾಸಕ ಟಿ.ಡಿ.ರಾಜೇಗೌಡ ಅವರು ಪೂರ್ಣಗೊಳಿಸಿಕೊಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಮೃತನ ಪುತ್ರಿಯ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿಯೂ ತಿಳಿಸಿದರು.

    ಎಲ್ಲೆಲ್ಲಿ ಅಪಾಯಕಾರಿ ಮರಗಳಿವೆ ಅವುಗಳನ್ನು ಹಾಗೂ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಸೂಚಿಸುವುದಾಗಿ ತಿಳಿಸಿದ ಸಚಿವರು, ಜೊತೆಗೆ ಒಣಗಿದ ಮರಗಳಿವೆ ಅವುಗಳನ್ನು ಕೂಡ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸಹ ಅರಣ್ಯ ಇಲಾಖೆಗೆ ನಿರ್ದೇಶನ ನೀಡುವುದಾಗಿ ತಿಳಿಸಿದ ಸಚಿವರು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡುವುದಾಗಿ ಹೇಳಿದರು.

    ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

    District in-charge minister distributes compensation cheque of Rs. 5 lakh

  • ಯೋಗದ ಕಡೆ ಅನ್ಯಧರ್ಮದ ಒಲವು ಸಂಸ್ಕೃತಿಗೆ ಹೆಮ್ಮೆ

    ಯೋಗದ ಕಡೆ ಅನ್ಯಧರ್ಮದ ಒಲವು ಸಂಸ್ಕೃತಿಗೆ ಹೆಮ್ಮೆ

    ಚಿಕ್ಕಮಗಳೂರು: ಸಾವಿರಾರು ವರ್ಷಗಳ ಪರಂಪರೆ ಇರುವ ನಮ್ಮ ಯೋಗ ಶಿಕ್ಷಣದ ಕಡೆಗೆ ವಿದೇಶದ ಅನ್ಯ ಧರ್ಮೀಯರೂ ಸಹ ಒಲವು ಹೊಂದಿರುವುದು ನಮ್ಮ ದೇಶದ ಸಂಸ್ಕೃತಿಗೆ ಹೆಮ್ಮೆಯ ಸಂಗತಿ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತ ಸೇವಾದಳ, ಎನ್.ಎಸ್.ಎಸ್. ಘಟಕ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಮೇರಾ ಯುವ ಭಾರತ್ ಮತ್ತಿತರ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಇಂದು ಬೆಳಿಗ್ಗೆ ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ೧೧ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯೋಗದ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬ ಅಂಶವನ್ನು ನಮ್ಮ ದೇಶದ ಸೈನಿಕರಿಗೂ ಈಗ ಹೇಳಿಕೊಡಲಾಗುತ್ತಿದೆ ಎಂದರು.

    ಶಿಕ್ಷಣ ಕಲಿಯದಿದ್ದರೆ, ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ, ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳದಿದ್ದರೆ ನಾವು ಹುಟ್ಟಿದ್ದಕ್ಕೂ ಸಾರ್ಥಕವೆನಿಸುವುದಿಲ್ಲ. ಶಿಕ್ಷಣ ಮತ್ತು ಆರೋಗ್ಯ ನಮ್ಮ ಬದುಕಿನ ಅವಿಭಾಜ್ಯ ಅಂಗ. ಬೇರೆ ಬೇರೆ ದೇಶಗಳಿಗೆ ಹೋಗಿ ಬರಬಹುದು. ಆದರೆ ಅದು ಪ್ರವಾಸ ಮಾತ್ರ. ಆದರೆ ವಾಸಕ್ಕೆ ಯೋಗ್ಯವಾಗಿರುವುದು ನಮ್ಮ ಸಂಸ್ಕಾರವಂತ ದೇಶ ಭಾರತ ಮಾತ್ರ ಎಂದು ಹೇಳಿದರು.

    ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಯೋಗ ಬದುಕಿನ ಭಾಗವಾದಾಗ ನಾವು ನಿರೋಗಿಗಳಾಗಿ ನಮ್ಮ ಆಯುಷ್ಯವನ್ನು ಪೂರ್ಣಗೊಳಿಸಬಹುದು. ಆದರೆ ನಮ್ಮ ಪರಿಸ್ಥಿತಿ ತನ್ನೊಳಗೇ ಹುದುಗಿರುವ ಸುಗಂಧವನ್ನು ಅರಸುವ ಕಸ್ತೂರಿ ಮೃಗದಂತಾಗಿದೆ. ನಮ್ಮ ಋಷಿ ಮುನಿಗಳು ಕಂಡುಕೊಂಡ ಯೋಗವಿದ್ಯೆಯನ್ನು ಪತಂಜಲಿ ಮಹರ್ಷಿಗಳು ಕ್ರೋಢೀಕರಿಸಿ, ಯೋಗ ಭಾಷ್ಯದ ಮೂಲಕ, ಯೋಗ ಸೂತ್ರದ ಮೂಲಕ ಜಗತ್ತಿನ ಎಲ್ಲ ಮಾನವರೂ ನಿರೋಗಿಗಳಾಗಬೇಕು ಎನ್ನುವ ಹಿನ್ನೆಲೆಯಲ್ಲಿ ನಮಗೆ ಯೋಗ ಪ್ರದಾನ ಮಾಡಿದ್ದಾರೆ. ದುರ್ದೈವವೆಂದರೆ ನಾವು ಅದನ್ನು ಮರೆತು ಆರೋಗ್ಯವನ್ನು ಇನ್ನೆಲ್ಲೋ ಹುಡುಕಾಡುತ್ತಿದ್ದೇವೆ. ಆದರೆ ಯಾರು ಯೋಗವನ್ನು ಬದುಕಿನ ಭಾಗವನ್ನಾಗಿ ಮಾಡಿಕೊಂಡಿದ್ದಾರೋ ಅವರು ಇದರ ಮಹತ್ವವನ್ನು ಕಂಡುಕೊಂಡಿದ್ದಾರೆ ಎಂದು ಹೇಳಿದರು.

    ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಸ್.ಗೀತಾ ಸ್ವಾಗತಿಸಿದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಭಾಗ್ಯಕ್ಕ, ಪ್ರಬೋಧಿನಿ ಯೋಗ ಶಿಕ್ಷಣ ಟ್ರಸ್ಟ್‌ನ ಸುರೇಂದ್ರ, ಭಾರತ್ ಸ್ವಾಭಿಮಾನ್ ಯೋಗ ಶಿಕ್ಷಣ ಸಮಿತಿಯ ಜನಕರಾಜ್, ಅನುವ್ರತ್ ಸಮಿತಿಯ ಅಧ್ಯಕ್ಷೆ ಮಂಜು ಬನ್ಸಾಲಿ, ಮೇರಾ ಯುವ ಭಾರತ್‌ನ ಜಿಲ್ಲಾ ಸಮನ್ವಯಾಧಿಕಾರಿ ಅಭಿಷೇಕ್, ಎಸ್‌ಪಿವೈಎಸ್‌ಎಸ್ ಜಿಲ್ಲಾ ಸಂಚಾಲಕಿ ಶಾರದಾ ರವಿ, ಡಾ.ಗೌರಿ ವರುಣ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಮಂಜುಳಾ ಹುಲ್ಲಹಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥ್ ಬಾಬು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಭರತ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಮಂಜುನಾಥ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಶಶಿಕಲಾ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ಪುಟ್ಟರಾಜು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಪಾಲಾಕ್ಷಪ್ಪ, ಸ್ಕೌಟ್ಸ್ ಅಂಡ್ ಗೈಡ್ಸ್‌ನ ಕಿರಣ್, ಭಾರತ್ ಸೇವಾದಳದ ಸಂಘಟಕ ಡಾ,ಚಂದ್ರಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಯೋಗ ಪಟುಗಳಿಂದ ಯೋಗ ಪ್ರದರ್ಶನ ನಡೆಯಿತು.

    The pagan inclination towards yoga is a source of pride for the culture.

  • ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಮಾಡಿದ ತೃಪ್ತಿ ತಮಗಿದೆ

    ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಮಾಡಿದ ತೃಪ್ತಿ ತಮಗಿದೆ

    ಕಡೂರು: ಬಹಳಷ್ಟು ವರ್ಷದಿಂದ ನೆನಗುದಿಗೆ ಬಿದ್ದಿದ್ದ ಹಿಂದಿನ ಎಲ್ಲ ರಾಜಕಾರಣಿಗಳು ಮರೆತಿದ್ದ ಹಳ್ಳಿಗಾಡಿನ ಪ್ರದೇಶದ ಅಭಿವೃದ್ಧಿಯನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ತೃಪ್ತಿ ತಮಗಿದೆ ಎಂದು ಶಾಸಕ ಕೆ.ಎಸ್. ಆನಂದ್ ಹ? ವ್ಯಕ್ತಪಡಿಸಿದರು.

    ಕಡೂರಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಕೆಆರ್‌ಐಡಿಎಲ್‌ನ ನೂತನ ಕಛೇರಿಯ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ, ಸುಂದರವಾದ ಕಟ್ಟಡ ನಿರ್ಮಾಣ ಈ ಸಂಸ್ಥೆ ಮಾಡಿದೆ ಎಂದು ಶ್ಲಾಘಿಸಿದರು.

    ಕೆಆರ್‌ಐಡಿಎಲ್ ಸಂಸ್ಥೆಗೆ ಜಾಗ ನೀಡುವಲ್ಲಿ ಇದ್ದ ಸಮಸ್ಯೆಯನ್ನು ಪರಿಹರಿಸಿ ಈ ಜಾಗ ನೀಡಿದ ಕಡೂರುಹಳ್ಳಿ ಗ್ರಾಮ ಪಂಚಾಯಿತಿಯ ಮತ್ತು ಸುತ್ತಮುತ್ತಲಿನ ಗ್ರಾಮದವರಿಗೆ ಅಭಿನಂದನೆ ಸಲ್ಲಿಸಿದರು.

    ಕೆಆರ್‌ಐಡಿಎಲ್ ಸಂಸ್ಥೆ ಸುಮಾರು ೫೦ ಕೋಟಿ ರೂ.ಗಳ ಕಾಮಗಾರಿ ನಡೆಸಿದೆ. ೬ ಕೋಟಿ ಮುಜರಾಯಿ ಇಲಾಖೆಗೆ, ೬ ಕೋಟಿ ಸಮುದಾಯ ಭವನ ನಿರ್ಮಾಣಕ್ಕೆ, ೧೨ ಕೋಟಿ ಗ್ರಾಮೀಣ ರಸ್ತೆಯ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ರೈತ ಸಂಪರ್ಕ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಇದಲ್ಲದೆ ಜಯರಾಮ ರಮೇಶ್ ಮತ್ತು ಶ್ರೇಯಸ್ ಪಟೇಲ್ ಅವರ ವಿಶೇ? ಅನುದಾನದಿಂದ ಹಲವಾರು ವಿಶೇ? ಕಾಮಗಾರಿ ಮಾಡಲಾಗಿದೆ. ಕೆಆರ್‌ಐಡಿಎಲ್ ಸಂಸ್ಥೆ ತಮಗೆ ನೀಡಿರುವ ೨೨೦ ಕ್ಕೂ ಹೆಚ್ಚಿನ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳದೆ ಮಾಡಿದೆ ಎಂದರು.

    ಹಿಂದಿನ ಜನಪ್ರತಿನಿಧಿಗಳು, ಸರ್ಕಾರ ಮಾಡಲಾಗದ ಕೆಲಸವನ್ನು ತಾವು ತಮ್ಮ ಸರ್ಕಾರ ಮಾಡುತ್ತಿದೆ ಎಂಬ ಹೆಮ್ಮ ತಮ್ಮದು ಎಂದ ಅವರು, ನಗದಿಯಾತ್ ಕಾವಲಿನ ಕೈಗಾರಿಕಾ ಪ್ರದೇಶದಲ್ಲಿ ಮುಂದಿನ ಮೂರು ವ?ಗಳಲ್ಲಿ ಕನಿ? ಐದು ಸಾವಿರ ಜನರಿಗೆ ಕೆಲಸ ಸಿಗಲಿದೆ, ಕ್ಷೇತ್ರದ ನೀರಿನ ಬವಣೆ ನೀಗಿಸುವ ಸಲುವಾಗಿ ಭದ್ರ ಉಪಕಣಿವೆ ಮೂರನೇ ಹಂತದ ಕಾಮಗಾರಿಯ ಕಾರ್ಯ ಭರದಿಂದ ಸಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ತಾವು ಮತ್ತು ತಮ್ಮಯ್ಯ ಅವರು ಜತೆಗೂಡಿ ಕೆಲಸ ಮಾಡುವ ಭರವಸೆ ನೀಡಿದರು.

    ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ತಮ್ಮ ರಾಜಕೀಯ ಅವಧಿಯಲ್ಲಿ ಉದ್ಘಾಟಿಸಿದ ಅತ್ಯಂತ ಸುಸಜ್ಜಿತ ಮತ್ತು ಉತ್ತಮ ಗುಣಮಟ್ಟದ ಕಛೇರಿ ಇದಾಗಿದೆ. ನಿಮ್ಮ ಇಲಾಖೆಯಿಂದ ನಿರ್ಮಾಣ ಮಾಡುವ ಇತರ ಕಟ್ಟಡ, ರಸ್ತೆಯ ಕಾಮಗಾರಿಯನ್ನೂ ಇದೇ ರೀತಿ ಮಾಡುವ ಭರವಸೆ ಇದೆ. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವುದನ್ನು ನಿಜವಾಗಿಸಲು ಶಾಸಕಾಂಗದೊಂದಿಗೆ ಕಾರ್ಯಾಂಗ ಸಹಕರಿಸಬೇಕು ಎಂದರು.

    ಜಿಲ್ಲೆಗೆ ಎರಡು ಜವಳಿ ಪಾರ್ಕ್ ತರುವಲ್ಲಿ ತಾವು ಮತ್ತು ಆನಂದ್ ಯಶಸ್ವಿ ಆಗಿದ್ದೇವೆ, ಭದ್ರಾ ಉಪಕಣಿವೆ ಯೋಜನೆಯ ಉಳಿದ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ರೈತರ ಜಮೀನಿಗೆ ನೀರು ಸಿಗಲಿದೆ. ತಾವು ಮತ್ತು ಆನಂದ್ ಅವರು ಒಟ್ಟಾಗಿ ಎರಡೂ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುವುದಾಗಿ ಹೇಳಿದರು.

    ಹಿಂದಿನ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸುವುದರೊಂದಿಗೆ ಹೊಸ ಕಾಮಗಾರಿಗಳನ್ನೂ ಮಾಡುತ್ತಾ ಐದು ಗ್ಯಾರಂಟಿಗಳನ್ನು ನೀಡಿ ಉತ್ತಮ ಕಾರ್ಯ ಮಾಡುತ್ತಿರುವ ಸರ್ಕಾರದ ಭಾಗವಾಗಿರುವುದು ನಮ್ಮ ಹೆಮ್ಮೆ ಎಂದರು.

    ಗ್ರಾಮ ಪಂಚಾಯತಿ ಅಧ್ಯಕ್ಷ ಗೀತಾ ಶಿವಕುಮಾರ್, ಕಡೂರು ತಹಸಿಲ್ದಾರ್ ಪೂರ್ಣಿಮಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಕೆಆರ್‌ಐಡಿಎಲ್ ಮುಖ್ಯ ಇಂಜಿನಿಯರ್ ಗೋಪಾಲ್, ಕಾರ್ಯಪಾಲಕ ಅಭಿಯಂತ ಅಶ್ವಿನಿ, ತಂಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್, ಕೆಆರ್‌ಐಡಿಯಲ್ ಅಭಿಯಂತರ ವಿನಯ್, ಮುರುಳಿ ಹಾಗೂ ಕಡೂರಳ್ಳಿ ತಂಗಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು ಮತ್ತು ಗುತ್ತಿಗೆದಾರರಾದ ಗಿರೀಶ್ ಮತ್ತು ಸಾರ್ವಜನಿಕರು ಇದ್ದರು.

    They are satisfied with the development they have achieved in rural areas.

  • ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ

    ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ

    ಬೆಂಗಳೂರು: ಸುಸ್ಥಿರ ಇಂಧನ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗಿರುವ ಕರ್ನಾಟಕವು ವಿಶ್ವದ ಗಮನ ಸೆಳೆದಿದೆ. ಸುಸ್ಥಿರ ಮತ್ತು ಹಸಿರು ಇಂಧನ ಕ್ಷೇತ್ರದಲ್ಲಿ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿದ್ದು, ಹಸಿರು ಇಂಧನದ ಭವಿಷ್ಯಕ್ಕೆ ಸ್ಪಷ್ಟ ಗುರಿ ಹೊಂದಿದೆ ಎಂದು ಕ್ರೆಡಲ್ ಅಧ್ಯಕ್ಷರೂ ಆಗಿರುವ ಶಾಸಕ ಟಿ.ಡಿ.ರಾಜೇಗೌಡ ಹೇಳಿದ್ದಾರೆ.

    ಬೆಂಗಳೂರು ಅಂತಾರಾಷ್ಟೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ’ಇಂಡಿಯಾ ಗ್ರೀನ್ ಎನರ್ಜಿ ಎಕ್ಸ್ಪೋ-2025’ರ ಐದನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುವಾರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, “ರಾಜ್ಯದಲ್ಲಿ ಸುಸ್ಥಿರ ಇಂಧನ ನೀತಿ ಇರುವುದರಿಂದಲೇ ನಮ್ಮ ಹಸಿರು ಇಂಧನದ ಭವಿಷ್ಯಕ್ಕೆ ಸ್ಪಷ್ಟ ಗುರಿ ಇದೆ,” ಎಂದರು.

    “ನವೀಕರಿಸಬಹುದಾದ ಇಂಧನ ನೀತಿ 2022-27 ಸ್ಪಷ್ಟ ಗುರಿಯನ್ನು ನಮ್ಮ ಮುಂದಿರಿಸಿದೆ. ನಮ್ಮ ನೀತಿ ಸಂಶೋಧನೆ, ಬಂಡವಾಳ ಹೂಡಿಕೆ ಮತ್ತು ಒಳಗೊಳ್ಳುವ ಆರ್ಥಿಕ ಅಭಿವೃದ್ಧಿಯನ್ನು ಒಳಗೊಂಡಿರುವುದು ವಿಶೇಷ. ಇತ್ತಿಚೆಗೆ ಯಶಸ್ವಿಯಾಗಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ನವೀಕರಿಸಬಹುದಾದದ ಇಂಧನ ವಲಯದಲ್ಲಿ 4 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಿಸಿರುವುದು ನಮ್ಮ ಸುಸ್ಥಿರ ಇಂಧನ ನೀತಿಯ ಫಲ,” ಎಂದು ತಿಳಿಸಿದರು.

    “ಸುಸ್ಥಿರ ಮತ್ತು ಹಸಿರು ಇಂಧನ ಕ್ಷೇತ್ರದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಸಾರಥಿಯಾಗಿ ಮುನ್ನಡೆಯುತ್ತಿದೆ. ನಮ್ಮ ನವೀಕರಿಸಬಹುದಾದದ ಇಂಧನ ನೀತಿಯು ಹಸಿರು ಇಂಧನ ಕ್ಷೇತ್ರದ ಸಾಮರ್ಥ್ಯ ವೃದ್ದಿ, ಸಂಶೋಧನೆ ಹಾಗೂ‌ ಪರಿಸರ ವ್ಯವಸ್ಥೆಗೆ ಪೂರಕವಾಗಿದ್ದು, ದೇಶಕ್ಕೆ ಮಾದರಿಯಾಗಿದೆ,” ಎಂದು ತಿಳಿಸಿದರು.

    “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಸಮರ್ಥ ಮಾರ್ಗದರ್ಶನದಲ್ಲಿ ಕ್ರೆಡಲ್ ಅತ್ಯುತ್ತಮ ಸಾಧನೆ ಮಾಡಿದೆ. ರಾಜ್ಯವು 2024-25ನೇ ಸಾಲಿನಲ್ಲಿ ಪವನ ವಿದ್ಯುತ್‌ ಕ್ಷೇತ್ರಕ್ಕೆ 1331.48 ಮೆ.ವ್ಯಾ. ಸೇರ್ಪಡೆಗೊಳಿಸುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ,”ಎಂದರು.

    “ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್‌ ಅವರು ಹಿಂದೆ ಇಂಧನ ಸಚಿವರಾಗಿದ್ದಾಗ, ಪಾವಗಡ ಸೋಲಾರ್‌ ಪಾರ್ಕ್‌ ಮಾಡಿದ್ದು ಇತಿಹಾಸ. ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ಎಂಬ ಹೆಗ್ಗಳಿಕೆ ಪಡೆದಿತ್ತು. ಈಗ ಈ ಸೋಲಾರ್ ಪಾರ್ಕ್‌ನ ವಿಸ್ತರಣೆ ಕಾರ್ಯ ನಮ್ಮ ಮುಂದಿದ್ದು, ಮತ್ತೆ ನಾವು ಮೊದಲ ಸ್ಥಾನಕ್ಕೆ ಏರುವ ಭರವಸೆ ನನಗಿದೆ,” ಎಂದರು.

    3 ದಿನಗಳ ಇಂಡಿಯಾ ಗ್ರೀನ್ ಎನರ್ಜಿ ಎಕ್ಸ್‌ಪೋವನ್ನು ರಾಮಕೃಷ್ಣ ಆಶ್ರಮದ ವೀರೇಶಾನಂದ ಶ್ರೀಗಳು, ಪರಮಾನಂದ ಶ್ರೀಗಳು ಉದ್ಘಾಟಿಸಿದರು. ಕರ್ನಾಟಕ ನವೀಕರಿಸಬಹುದಾದ ಇಂಧನ ಉಪಕರಣಗಳ ತಯಾರಕರ ಸಂಘದ ಸುರೇಂದ್ರ ಕುಮಾರ್, ಪ್ರೈಮ್ ಎನರ್ಜಿಯ ಉದ್ಯಮಿ ರಮೇಶ್ ಶಿವಣ್ಣ ಹಾಗೂ ಜೆಟ್ರೋ ಕಂಪನಿಯ ಜಪಾನ್ ಪ್ರತಿನಿಧಿ ತೊಷಿರೋ ಮಿಜುತಾನಿ ಉಪಸ್ಥಿತರಿದ್ದರು.

    ಎಕ್ಸ್‌ಪೋದಲ್ಲಿ ಸೋಲಾರ್ ವಿದ್ಯುತ್, ಗ್ರಿಡ್ ಉನ್ನತೀಕರಣ, ಹಸಿರು ಇಂಧನ ಅಳವಡಿಕೆ ಸಂಬಂಧಿಸಿದಂತೆ ವಿಚಾರಗೊಷ್ಠಿಗಳು ನಡೆಯಲಿವೆ.

    The state has a clear goal for its green energy future.

  • ಆಧುನಿಕ ವಚನಕಾರರ ಧ್ರುವತಾರೆ ಸಿದ್ಧಯ್ಯಪುರಾಣಿಕ್

    ಆಧುನಿಕ ವಚನಕಾರರ ಧ್ರುವತಾರೆ ಸಿದ್ಧಯ್ಯಪುರಾಣಿಕ್

    ಚಿಕ್ಕಮಗಳೂರು: ವಿಡಂಬನೆ, ಲೋಕ ಶಿಕ್ಷಣ, ನೈತಿಕ ಮೌಲ್ಯಗಳನ್ನು ನವಿರಾಗಿ ಕಟ್ಟಿಕೊಟ್ಟ ಸಿದ್ಧಯ್ಯಪುರಾಣಿಕ ಆಧುನಿಕ ವಚನಕಾರರ ಧ್ರುವತಾರೆ ಎಂದು ಸಾಹಿತಿ, ವಾಗ್ಮಿ ಚಟ್ನಳ್ಳಿಮಹೇಶ್ ನುಡಿದರು.

    ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಹಾಗೂ ಅಖಿಲ ಭಾರತೀಯ ಸಾಹಿತ್ಯಪರಿಷದ್ ಸಂಯುಕ್ತವಾಗಿ ನೈಟಿಂಗೇಲ್ ಸ್ಕೂಲ್ ಆಫ್ ನರ್ಸಿಂಗ್‌ನಲ್ಲಿ ‘ಡಾ.ಸಿದ್ಧಯ್ಯಪುರಾಣಿಕ’ ಜನ್ಮದಿನಾಚರಣೆ ಅಂಗವಾಗಿ ಇಂದು ಆಯೋಜಿಸಿದ್ದ ಕಾರ್‍ಯಕ್ರಮದಲ್ಲಿ ‘ಪುರಾಣಿಕರ ಸಾಹಿತ್ಯದಲ್ಲಿ ಸಾಮಾಜಿಕ ಮೌಲ್ಯ’ ಕುರಿತಂತೆ ಅವರು ಉಪನ್ಯಾಸ ನೀಡಿ ಸಂವಾದಿಸಿದರು.

    ನಾಡುಕಂಡ ದಕ್ಷ ಅಧಿಕಾರಿಗಳಲ್ಲಿ ಒಬ್ಬರಾದ ಡಾ.ಸಿದ್ಧಯ್ಯಪುರಾಣಿಕರು ‘ಸ್ವತಂತ್ರಧೀರ ಸಿದ್ಧೇಶ್ವರ’ ಅಂಕಿತದೊಂದಿಗೆ ಸುಮಾರು ೨೦೦೦ಕ್ಕೂ ಹೆಚ್ಚು ಆಧುನಿಕ ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ನವೀರಾದ ಹಾಸ್ಯ, ಮೊನಚಾದ ಟೀಕೆ, ಬದುಕಿನ ಮೌಲ್ಯಗಳು, ವಿಡಂಬನೆಗಳ ಮೂಲಕ ಗಮನ ಸೆಳೆದವರು.

    ಐಎಎಸ್ ಅಧಿಕಾರಿಗಳಾಗಿ ಕನ್ನಡದ ಸೇವೆ ಮಾಡಿದ ಡಾ.ಮಾಸ್ತಿವೆಂಕಟೇಶ ಅಯ್ಯಂಗಾರ, ಕೆ.ಎನ್.ನಾಗೇಗೌಡ ಮತ್ತಿತರರ ಸಾಲಿನಲ್ಲಿ ನಿಲ್ಲಬಹುದಾದ ಸಿದ್ಧಯ್ಯಪುರಾಣಿಕರು ಲೋಕ ನೆಮ್ಮದಿಗೆ ಪುಷ್ಠಿ ನೀಡುವ ಅಮೃತ ಘಳಿಗೆ ನಿರ್ಮಾಣಕ್ಕೆ ಪೂರಕವಾದ ವಚನಗಳನ್ನು ರಚಿಸಿದವರು. ಜೀವ ಸಂಕುಲದ ಹೊಂದಾಣಿಕೆಯ ಬಗ್ಗೆ ನಿಸರ್ಗಜ್ಞಾನ ಪೂರಕವಾದ ಅವರ ಅಭಿವ್ಯಕ್ತಿ ವಚನಗಳಾಗಿ ಗಮನಸೆಳೆದಿವೆ ಎಂದರು.

    ವಚನಗಳು ಸಾಹಿತ್ಯಕ್ಷೇತ್ರದ ವಿಶಿಷ್ಟ ಪ್ರಕಾರ. ಪದ್ಯವೂ ಹೌದು ಗದ್ಯವೂ ಹೌದು. ವಚನಗಳನ್ನು ಗಪದ್ಯವೆಂದೂ ಕರೆಯಲಾಗಿದೆ. ವಚನಗಳಿಗೆ ಅಂಕಿತವಿರುತ್ತದೆ. ಆಲೋಚನೆಗಳು ಶಬ್ದ-ಸಾಲುಗಳಾಗಿ ವಚನಗಳೆನಿಸಿಕೊಂಡಿವೆ. ಅಂಕಿತಕ್ಕೊಳಪಟ್ಟು ಸಾಹಿತ್ಯದ ಸಾಲು ನಿರ್ಮಾಣವಾದರೆ ಅದನ್ನು ವಚನವೆಂದು ಗುರುತಿಸಬಹುದು. ಮೊನಚು, ಸತ್ವ, ಬಂಧ, ಆತ್ಮಾವಲೋಕನಪ್ರಜ್ಞೆ ವಚನಗಳ ವಿಶೇಷ. ೧೨ನೆಯ ಶತಮಾನದ ವಚನಕಾರರು ಅನುಭಾವದ ನೆಲೆಯಲ್ಲಿ ವಚನಸಾಹಿತ್ಯ ಪ್ರಾರಂಭಿಸಿದರೆ ಕಳೆದ ಶತಮಾನದಿಂದೀಚೆಗೆ ಜಚನಿ, ಡಾ.ಸಿದ್ಧಯ್ಯಪುರಾಣಿಕ, ದೇಜಗೌ, ಮಹಾದೇವಬಣಕಾರ್, ಸಿಪಿಕೆ ಮತ್ತಿತರರು ಆಧುನಿಕ ವಚನಕಾರರೆಂದು ಗುರುತಿಸಲ್ಪಟ್ಟರು ಎಂದು ಚಟ್ನಳ್ಳಿಮಹೇಶ ವಿವರಿಸಿದರು.

    ಶರಣ ಸಂಕುಲ, ವಚನನಂದನ, ವಚನೋಧ್ಯಾನ ಮತ್ತಿತರ ವಚನ ಸಂಕಲನಗಳನ್ನು ರಚಿಸಿರುವ ಡಾ.ಸಿದ್ಧಯ್ಯಪುರಾಣಿಕ್, ವಚನ ಎಂದರೆ ಸತ್ವ ಎಂಬುದನ್ನು ಸಾಬೀತುಪಡಿಸಿದವರು. ಶೋಷಿತರ ಧ್ವನಿಯಾದವರು. ಅರಿವಿನ ಹರವನ್ನು ವಿಸ್ತರಿಸಿದವರು. ಚಿಂತನಾಭರಿತ ಹೂರಣ ನೀಡಿದವರೆಂದು ಬಣ್ಣಿಸಿದರು.

    ವಿದ್ಯೆ ಬಂದು ವಿನಯ ಹೋಯ್ತು, ಬುದ್ಧಿಬಂದು ವಿವೇಕ ಹೋಯ್ತು, ವಿಜ್ಞಾನ ಬಂದು ನೆಮ್ಮದಿ ಹೋಯ್ತು. ಸಂಪತ್ತು ಬಂದು ಸಂಸ್ಕೃತಿ ಹೋಯ್ತು, ಸ್ವತಂತ್ರ ಬಂದು ಸಂಮೃದ್ಧಿ ಹೋಯಿತು’, ಎಂಬ ವ್ಯತಿರಿಕ್ತ ಪರಿಣಾಮ ತೆರೆದಿಟ್ಟವರು ಡಾ.ಪುರಾಣಿಕ್. ‘ಏನಾದರೂ ಆಗು ಮೊದಲು ಮಾನವನಾಗು…’ ಎಂಬುದು ಅವರ ಮಹತ್ವದ ಸಂದೇಶ ಎಂದ ಚಟ್ನಳ್ಳಿಮಹೇಶ್, ‘ಅಯ್ಯೋ ಪಾಪ ಎಂಬುದೇ ಪುಣ್ಯ. ಅಯ್ಯೋ ಪಾಪಿ ಎಂಬುದೇ ಪಾಪ’ ಎಂದ ತೆರೆದ ಹೃದಯಿ.
    ‘ಸಿಪ್ಪೆ ತೆಗೆದು ಬಿತ್ತಿದ ಶೇಂಗಾ ಸಿಪ್ಪೆ ಧರಿಸಿಯೆ ಹುಟ್ಟುತ್ತದೆ. ನರ ಅರಿವಿನ ಜನ್ಮ ತಳಿದಿದ್ದು ಕೂಡಿ ಬಾಳಲೆಂದೋ ಕಚ್ಚಾಡಿ ಸಾಯಲೆಂದೋ…’ ಎಂಬ ವಚನದ ಮೂಲಕ ಸಾಮರಸ್ಯಕ್ಕೆ ಡಾ.ಪುರಾಣಿಕ ಅತ್ಯುತ್ತಮ ಮಾದರಿಯ ಸೂತ್ರ ನೀಡಿದ್ದಾರೆಂದ ಚಟ್ನಳ್ಳಿಮಹೇಶ್, ಕಲಹವಿಲ್ಲದೆ ಕೂಡಿ ಕದನವಿಲ್ಲದೆ ಬಾಳಿ ಹಂಚಿ ಉಣ್ಣುವ ಸಂಸ್ಕೃತಿ ಮಾನವನದಾಗಬೇಕೆಂಬ ಆಶಯದಂತೆ ಬಾಳಿದವರೆಂದರು.

    ಜಿಲ್ಲಾ ಕೈಗಾರಿಕಾ ಕೇಂದ್ರದ ವಿಶ್ರಾಂತ ಜಂಟಿ ನಿರ್ದೇಶಕ ಬಿ.ಪಿ.ಶಿವಮೂರ್ತಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಕಲೆ ಮತ್ತು ಸಾಹಿತ್ಯ ಅರಿವಿನ ಹರವನ್ನು ವಿಸ್ತರಿಸುತ್ತದೆ. ಜಿಲ್ಲೆಯ ಇತಿಹಾಸವನ್ನು ಅರಿವುದು ಎಲ್ಲರ ಕರ್ತವ್ಯ. ವಿದ್ಯಾರ್ಥಿ ಯುವಜನರು ನಮ್ಮ ನಡುವಿನ ಸಾಹಿತಿ ಕಲಾವಿದರನ್ನು ಪರಿಚಯಿಸಿಕೊಳ್ಳಬೇಕು. ಜ್ಞಾನ ಪಿಪಾಸುಗಳಾಗಿ ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಸಮಾಜದ ಆಗು-ಹೋಗುಗಳನ್ನು ಗಮನಿಸುವ ಮನಸ್ಥಿತಿ ಹೊಂದಬೇಕು. ಪುಸ್ತಕದಿಂದ ವಿಚಾರಗಳನ್ನು ಮಸ್ತಕಕ್ಕೆ ಇಳಿಸಲು ಇಂತಹ ಸಾಹಿತ್ಯ ಅವಲೋಕನ ಸಹಕಾರಿ ಎಂದ ಶಿವಮೂರ್ತಿ, ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.

    ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಕಲೆ ಮತ್ತು ಸಾಹಿತ್ಯದ ಆಶಯ ಮನರಂಜನೆಯಷ್ಟೇ ಅಲ್ಲ, ಮನೋವಿಕಾಸವೂ ಹೌದು. ವ್ಯಕ್ತಿನಿರ್ಮಾಣದ ಮೂಲಕ ಆರೋಗ್ಯಪೂರ್ಣ ಸಮಾಜನಿರ್ಮಾಣಕ್ಕೆ ಪೂರಕವಾದ ಸಾಹಿತಿಗಳು ಹಾಗೂ ಸಾಹಿತ್ಯವನ್ನು ಮೆಲುಕು ಹಾಕುವ ಪ್ರಯತ್ನ ಇದೆಂದರು.

    ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲ್ಲೂಕು ಅಧ್ಯಕ್ಷ ಎಚ್.ಎಸ್.ಸೋಮಶೇಖರಪ್ಪ ಶುಭಹಾರೈಸಿ ಮುಖ್ಯಅತಿಥಿಗಳನ್ನು ಗೌರವಿಸಿದರು. ಪ್ರಾಂಶುಪಾಲೆ ಕವಿತಾ ಸಮಾರಂಭವನ್ನು ಉದ್ಘಾಟಿಸಿದರು. ಪ್ರತಿಷ್ಠಾನದ ಸದಸ್ಯ ವಿಜಯಕುಮಾರ್, ಕಾರ್‍ಯದರ್ಶಿ ಶಶಿಕಲಾನಾಯಕ್, ವ್ಯವಸ್ಥಾಪಕಿ ಶೋಭಿತಾ, ಉಪನ್ಯಾಸಕರಾದ ವರ್ಷಿತಾ ಮತ್ತು ಮಹಾಲಕ್ಷ್ಮಿ ವೇದಿಕೆಯಲ್ಲಿದ್ದರು. ಅಭಾಸಾಪ ಜಿಲ್ಲಾಸಮಿತಿ ಸದಸ್ಯ ಎಸ್.ಎಸ್.ಸಾಗರ್ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಮೀನಾ ಪ್ರಾರ್ಥಿಸಿ, ತನುಜಾ ನಿರೂಪಿಸಿ ವಂದಿಸಿದರು.

    Siddaiah Puranik the pole star of modern orators

  • ಪಿಂಚಿಣಿದಾರ ಅನರ್ಹಗೊಳಿಸುವ ಮೂಲಕ ದುರ್ಬಲರ ಮೇಲೆ ಗಧಾಪ್ರಹಾರ

    ಪಿಂಚಿಣಿದಾರ ಅನರ್ಹಗೊಳಿಸುವ ಮೂಲಕ ದುರ್ಬಲರ ಮೇಲೆ ಗಧಾಪ್ರಹಾರ

    ಚಿಕ್ಕಮಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಿಂಚಿಣಿದಾರರನ್ನು ಅನರ್ಹಗೊಳಿಸುವ ಮೂಲಕ ಸಾಮಾನ್ಯ ಜನರು, ಬಡವರು, ದುರ್ಬಲರ ಮೇಲೆ ಗಧಾಪ್ರಹಾರ, ದೌರ್ಜನ್ಯ ಮಾಡಲು ಹೊರಟಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.

    ಗುರುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೂರ್‍ನಾಲ್ಕು ದಿನಗಳ ಹಿಂದೆ ಹೊಡಿಸಿರುವ ಸುತ್ತೋಲೆಯಲ್ಲಿ ೬೦-೬೫ ವರ್ಷ ಮೇಲ್ಪಟ್ಟ ೧೪ ಲಕ್ಷ ಮಂದಿ ಹಿರಿಯ ಸಂದ್ಯಾ ಸುರಕ್ಷಾ ಫಲಾನುಭವಿಗಳು ಮತ್ತು ೬೫ ವರ್ಷ ಮೇಲ್ಪಟ್ಟ ೯ ಲಕ್ಷ ಮಂದಿ ವೃದ್ಧಾಪ್ಯ ವೇತನ ಪಡೆಯುವ ಬಡ ಪಿಂಚಿಣಿದಾರರನ್ನು ಅನರ್ಹಗೊಳಿಸುವ ಹುನ್ನಾರ ನಡೆಸಿದೆ. ಇದಕ್ಕಾಗಿ ಪರಿಶೀಲನೆ ನಡೆಸಲು ಸೂಚನೆ ನೀಡಿದೆ ಎಂದು ದೂರಿದರು.

    ವೃದ್ಧರ ಜೀವಿತದ ಕೊನೆಯ ದಿನಗಳಲ್ಲಿ ಸಣ್ಣ ಪುಟ್ಟ ಆರೋಗ್ಯ ವ್ಯತ್ಯಾಸಗಳಾದಲ್ಲಿ, ಔಷಧಿ-ಮಾತ್ರೆ ಇನ್ನಿತರೆ ಖರ್ಚಿಗೆ ನೆರವಾಗಲು ಮತ್ತು ಜೀವಕ್ಕೊಂದು ಭದ್ರತೆಕೊಡುವ ದೃಷ್ಠಿಯಿಂದ ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೆ ತರಲಾಗಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಇದೀಗ ಪ್ರತಿ ಗ್ರಾ.ಪಂ.ಗಳಲ್ಲಿ ೧೫೦ ರಿಂದ ೨೫೦ ಮಂದಿ ಹಿರಿಯರ ಹೆಸರುಗಳನ್ನು ಗುರುತಿಸಿ ಪರಿಶೀಲನೆ ನಡೆಸಲು ಗ್ರಾಮ ಕಾರಣಿಕರು ಮತ್ತು ಕಂದಾಯ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿದೆ ಎಂದರು.

    ಅವರ ಆದಾಯದ ಮೊತ್ತ ೩೨ ಸಾವಿರಕ್ಕಿಂತ ಹೆಚ್ಚಾಗಿದೆ. ಅನ್ನುವ ಕಾರಣಕೊಟ್ಟು ಪಿಂಚಣಿ ರದ್ದು ಪಡಿಸಲು ಸರ್ಕಾರ ಹುನ್ನಾರ ನಡೆಸಿದೆ. ಇದರಿಂದ ಸಾವಿರಾರು ಕೋಟಿ ರೂ. ಬೊಕ್ಕಸಕ್ಕೆ ಉಳಿಯುತ್ತದೆ ಎನ್ನುವುದು ಅವರ ಆಲೋಚನೆಯಾಗಿದೆ. ಒಟ್ಟು ರಾಜ್ಯದಲ್ಲಿ ೫೫ ಲಕ್ಷ ಜನ ಪಿಂಚಣಿ ಪಡೆಯುತ್ತಿದ್ದರೆ, ಸಿದ್ದರಾಮಯ್ಯ ಸರ್ಕಾರ ಕೊಟ್ಟಿರುವ ಮಾಹಿತಿ ಪ್ರಕಾರ ಸುಮಾರು ೨೪ ಲಕ್ಷ ಜನರು ಅನರ್ಹರಾಗುವ ಅಪಾಯ ಕಂಡು ಬರುತ್ತಿದೆ. ಪ್ರತಿ ಗ್ರಾಮ ಲೆಕ್ಕಿಗರು ೨೫೦ ರಿಂದ ೩೦೦ ಜನರ ಪಟ್ಟಿಯನ್ನು ಹಿಡಿದು ಓಡಾಡುತ್ತಿದ್ದಾರೆ ಎಂದರು.

    ಬಡವರಿಗೆ ೨೦೦೦ ರೂ.ಕೊಡುತ್ತೇವೆ ಎನ್ನುವುದು ಒಂದೆಡೆಯಾದರೆ, ಅದೇ ಮನೆಯಲ್ಲಿ ಹಿರಿಯರ ಜೀವನ ಭದ್ರತೆಗೆ ಕೊಡುತ್ತಿರುವ ಹಣವನ್ನು ಕಿತ್ತುಕೊಳ್ಳಲಾಗುತ್ತಿದೆ. ಇದೊಂದು ಬಡವರ ಪಿಂಚಣಿ ಮೇಲೆ ಮಾಡಿರುವ ದುರಾಕ್ರಮಣ, ಬೇಜಾಬ್ದಾರಿ ಮತ್ತು ಬಡವರ ವಿರೋಧಿ ನೀತಿ ಎಂದರು.
    ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಮಾರು ೩೩೦ ಗ್ರಾ.ಪಂ.ಗಳಲ್ಲಿ ಜೂನ್ ೨೩ ರಂದು ಏಕ ಕಾಲದಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆಯಲಿದೆ. ಈ ಹೋರಾಟ ರಾಜ್ಯಾದ್ಯಂತ ವ್ಯಾಪಿಸಬೇಕಿದೆ ಎಂದರು.

    ನಾವು ಸಂವಿಧಾನದ ಆಶಯದಂತೆ ನಡೆದುಕೊಳ್ಳುವವರು ಎಂದು ರಾಜ್ಯ ಸರ್ಕಾರ ತನ್ನನ್ನು ಪ್ರಸಂಶಿಸಿಕೊಳ್ಳುತ್ತದೆ ಆದರೆ ಇಂದು ೯ ಮತ್ತು ೧೧ ಏಕ ವಿನ್ಯಾಸ ನಕ್ಷೆಗಳನ್ನು ನೀಡಲು ಗ್ರಾ.ಪಂ.ಗಿದ್ದ ಅಧಿಕಾರವನ್ನು ರಾಜ್ಯ ಸರ್ಕಾರ ಕಿತ್ತುಕೊಂಡು ಸ್ಥಳೀಯ ತಾಲ್ಲೂಕು ಮಟ್ಟ ಅಥವಾ ಜಿಲ್ಲಾ ಮಟ್ಟದ ಪ್ರಾಧಿಕಾರಗಳಿಗೆ ವರ್ಗಾವಣೆ ಮಾಡಿದೆ. ಒಂದೊಂದು ಗ್ರಾ.ಪಂ.ಗಳಲ್ಲಿ ೯ ಮತ್ತು ೧೧ ನಮೂನೆ ಪಡೆಯುತ್ತಿದ್ದವನು ಇಂದು ಪ್ರಾಧಿಕಾರಗಳನ್ನು ಸುತ್ತಬೇಕಿದೆ. ಅಲ್ಲಿ ಓರ್ವ ಸಿಬ್ಬಂದಿಯೂ ಇರುವುದಿಲ್ಲ. ಮತ್ತು ಹಣಕೊಟ್ಟವರಿಗೆ ಮಾತ್ರ ನಮೂನೆ ಎನ್ನುವ ಬ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.

    ಅಧಿಕಾರ ವಿಕೇಂದ್ರೀಕರಣದ ಮೂಲ ವ್ಯವಸ್ಥೆ ಇರುವ ಗ್ರಾ.ಪಂ. ಹಕ್ಕನ್ನು ಪ್ರಾಧಿಕಾರಕ್ಕೆ ಕೊಡುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ಸಿದ್ದರಾಮಯ್ಯ ಸರ್ಕಾರ ದೊಡ್ಡ ಪೆಟ್ಟು ನೀಡುತ್ತಿದೆ. ನಾಡಿದ್ದು ಅವಳಿ ಜಿಲ್ಲೆಗಳಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಇದೂ ಸಹ ಪ್ರಮುಖ ವಿಷಯವಾಗಲಿದೆ ಎಂದು ಹೇಳಿದರು.

    ಇದೇ ವೇಳೆ ಜನೌಷಧಿ ಕೇಂದ್ರಗಳನ್ನು ಮುಚ್ಚಿತ್ತಿರುವುದು ಸರ್ಕಾರದ ಮತ್ತೊಂದು ಬಡವರ ವಿರೋಧಿ ಕಾರ್ಯವಾಗಿದೆ. ಅತೀ ಕಡಿಮೆ ಬೆಲೆಯಲ್ಲಿ ಅಲ್ಲಿ ಔಷಧಿ, ಮಾತ್ರೆಗಳು ಸಿಗುತ್ತವೆ ಆದರೂ ಅವುಗಳನ್ನು ಮುಚ್ಚಿ ನಾವೇ ಎಲ್ಲದನ್ನೂ ಕೊಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಅವರೇ ಎಲ್ಲಾ ಚಿಕಿತ್ಸೆ ಕೊಡುವುದಾದರೂ ಜನೌಷಧ ಕೇಂದ್ರಗಳು ಅಲ್ಲಿದ್ದರೆ ಅವರಿಗೇನು ತೊಂದರೆ ಎಂದು ಪ್ರಶ್ನಿಸಿದ ಅವರು, ಒಟ್ಟಾರೆ ನರೇಂದ್ರ ಮೋದಿ ಅವರ ಭಾವಚಿತ್ರ ಇರುವ ಜನೌಷಧಿ ಕೇಂದ್ರಗಳು ಜನರ ಕಣ್ಣಿಗೆ ಬೀಳಬಾರದು ಎನ್ನುವುದು ಸರ್ಕಾರದ ಮೂಲ ದುರುದ್ದೇಶ ಎಂದು ದೂರಿದರು.

    ಕೇಂದ್ರದ ಯೋಜನೆಗಳು ಅನುಷ್ಠಾನಗೊಳ್ಳದಿರಲು ಏನೆಲ್ಲಾ ಬೇಕು ಅದೆಲ್ಲವನ್ನೂ ರಾಜ್ಯ ಸರ್ಕಾರ ಮಾಡುತ್ತದೆ ನಂತರ ಕೇಂದ್ರ ಸರ್ಕಾರ ನಮ್ಮ ಪಾಲನ್ನು ಕೊಟ್ಟಿಲ್ಲ ಎನ್ನುವ ತಗಾದೆ ಮಾಡುವ ಕೆಲಸವನ್ನೂ ಮಾಡುತ್ತಿದೆ ಎಂದು ಆರೋಪಿಸಿದರು.

    Bullying the weak by disqualifying pensioners

  • ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿ

    ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿ

    ಚಿಕ್ಕಮಗಳೂರು: ಉತ್ತಮ ಆರೋಗ್ಯ, ಉತ್ತಮ ಆಹಾರ, ಉತ್ತಮ ಯೋಗಾಭ್ಯಾಸ ಇವು ನಾಗರೀಕರ ಆರೋಗ್ಯ ಕಾಪಾಡುವಲ್ಲಿ ಸಹಕಾರಿ ಎಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಅಭಿಪ್ರಾಯಿಸಿದರು.

    ಅವರು ಇಂದು ೧೧ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಯೋಗ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಎಂಬ ಘೋಷವಾಕ್ಯದೊಂದಿಗೆ ಯೋಗನಡಿಗೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

    ಯೋಗಾಭ್ಯಾಸವನ್ನು ಪ್ರತಿನಿತ್ಯ ಪಾಲಿಸಿಕೊಂಡು ಬಂದಲ್ಲಿ ರೋಗಮುಕ್ತ ದೇಶವಾಗಿಸಲು ಪರಿಣಾಮಕಾರಿಯಾಗಲಿದ್ದು, ಜೂ.೨೧ ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಯೋಗದ ಬಗ್ಗೆ ವಿಶ್ವದೆಲ್ಲೆಡೆ ಜಾಗೃತಿ ಮೂಡಿಸಿದ್ದಾರೆಂದು ಹೇಳಿದರು.

    ಇಂದು ಕಲುಷಿತ ಆಹಾರ ಸೇವನೆಯಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪ್ರತಿಯೊಬ್ಬರೂ ಆರೋಗ್ಯಕ್ಕೆ ಆದ್ಯ ಗಮನ ನೀಡಿಬೇಕಾದರೆ ಯೋಗಾಭ್ಯಾಸ ಅತೀ ಮುಖ್ಯ ಎಂದರು.

    ಜಿಲ್ಲಾ ಆಯುಷ್ ಅಧಿಕಾರಿ ಗೀತಾ.ಎಸ್ ಮಾತನಾಡಿ, ಭಾರತ ದೇಶ ನೀಡಿದ ವಿಶ್ವಕ್ಕೆ ಅತೀ ದೊಡ್ಡ ಅಮೂಲ್ಯ ಕೊಡುಗೆಯಲ್ಲಿ ಯೋಗವೂ ಒಂದಾಗಿದೆ. ಈ ವರ್ಷ ೧೧ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದು, ಆಯುಷ್ಮಾನ್ ಆರೋಗ್ಯ ಸಂಗಮ ಮಂದಿರ, ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೂ.೨೧ ರಂದು ಆಯೋಜಿಸಲಾಗಿದೆ ಎಂದರು.

    ಯೋಗದ ಬಗ್ಗೆ ಜಾಗೃತಿ ಮೂಡಿಸಲು ಇಂದು ಯೋಗ ನಡಿಗೆ ಏರ್ಪಡಿಸಲಾಗಿದೆ, ತಾಲ್ಲೂಕು ಕಚೇರಿಯಿಂದ ಎಂ.ಜಿ ರಸ್ತೆ ಮಾರ್ಗವಾಗಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದವರೆಗೆ ಮೆರವಣಿಗೆ ನಡೆಸಲಾಯಿತು.

    ಯೋಗ ಧನುಷ್ ಕೆಎಸ್‌ಆರ್‌ಟಿಸಿ ನೌಕರರು ಹಾಗೂ ಸಿಬ್ಬಂದಿ ವರ್ಗದವರಿಗೆ ಮತ್ತು ಜಿಲ್ಲಾ ಕಾರಾಗೃಹ ಕೈದಿಗಳಿಗೆ, ದಿವ್ಯಾಂಗರಿಗೆ ಈ ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

    ಹಸಿರು ಯೋಗವನ್ನು ವಿಶ್ವ ಪರಿಸರ ದಿನದಂದು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ೧೦೦ ಗಿಡಗಳನ್ನು ನೆಡುವ ಮೂಲಕ ಹಮ್ಮಿಕೊಳ್ಳಲಾಗಿತ್ತು ಎಂದು ವಿವರಿಸಿದರು.

    ಈ ಮೆರವಣಿಗೆಯಲ್ಲಿ ಎಸ್‌ಎಸ್‌ವೈ, ಪ್ರಭೋದಿನಿ, ಎಸ್‌ಪಿವೈಎಸ್, ಭಾರತ್ ಸ್ವಾಭಿಮಾನ್, ಅನುರತ್ ಸಮಿತಿ, ಜ್ಞಾನರಶ್ಮಿ ಶಾಲೆ, ಎಂಇಎಸ್ ಶಾಲೆ, ಸ್ಕೌಟ್ ಮತ್ತು ಗೈಡ್ಸ್, ಮೇರಾ ಯುವ ಭಾರತ್, ಎನ್‌ಎಸ್‌ಎಸ್ ಘಟಕ ಪಾಲ್ಗೊಂಡಿದ್ದವು.

    Yoga is helpful for good health.

  • ದಾಸರಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಟಿ.ಎಸ್. ಶಿವೇಗೌಡ ಅವಿರೋಧ ಆಯ್ಕೆ

    ದಾಸರಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಟಿ.ಎಸ್. ಶಿವೇಗೌಡ ಅವಿರೋಧ ಆಯ್ಕೆ

    ಚಿಕ್ಕಮಗಳೂರು: ತಾಲ್ಲೂಕು ದಾಸರಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಮೂರನೇ ಬಾರಿಗೆ ಬಿಜೆಪಿ ಬೆಂಬಲಿತ ಟಿ.ಎಸ್. ಶಿವೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ, ಕಳೆದ ೧೫ ವರ್ಷಗಳಿಂದ ಬಿಜೆಪಿಯ ಕಟ್ಟಾಳುಗಳಾಗಿ ಇಲ್ಲಿರುವ ೮ ಗ್ರಾ.ಪಂ ಕ್ಷೇತ್ರಗಳಲ್ಲಿ ನಾಯಕತ್ವ ಬೆಳೆಸಿಕೊಂಡು ಚುನಾವಣೆ ಸಂದರ್ಭದಲ್ಲಿ ೭ ಸದಸ್ಯರನ್ನು ಗೆಲ್ಲಿಸುವ ಮೂಲಕ ಸಾಧನೆ ಮಾಡಿರುವ ನೂತನ ಅಧ್ಯಕ್ಷ ಶಿವೇಗೌಡರಿಗೆ ಎಲ್ಲಾ ಸದಸ್ಯರು ಒಮ್ಮತದ ಸಹಕಾರ ನೀಡಿದ್ದಾರೆಂದು ಶ್ಲಾಘಿಸಿದರು.

    ಶಿವೇಗೌಡರ ಅಧಿಕಾರವಧಿಯಲ್ಲಿ ಈ ಪಂಚಾಯಿತಿಯಲ್ಲಿ ಹಲವಾರು ವಿವಿಧ ಅಭಿವೃದ್ಧಿ ಕೆಲಸಗಳಾಗಿದ್ದು, ಈ ಕಾರ್ಯದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕೊಡುಗೆ ಜೊತೆಗೆ ಇವರ ಪ್ರಯತ್ನ ಬಹಳ ಮುಖ್ಯ ಎಂದು ಹೇಳಿದರು.

    ಬಡವರು, ಕೂಲಿಕಾರ್ಮಿಕರ ಕೆಲಸಗಳಿಗೆ ಹೆಚ್ಚು ಒತ್ತುನೀಡುವ ಮೂಲಕ ಶ್ರದ್ಧೆ, ನಿಷ್ಠೆಯಿಂದ ಅವರ ಪರವಾಗಿ ಕೆಲಸ ಮಾಡುತ್ತಿರುವ ಶಿವೇಗೌಡರು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ವಿಶ್ವಾಸದೊಂದಿಗೆ ಅಧಿಕಾರದಲ್ಲಿ ಮುಂದುವರೆಯಲಿ, ಬಿಜೆಪಿ ಪಕ್ಷಕ್ಕೆ ಒಳ್ಳೆಯ ಹೆಸರು ತರಲಿ ಎಂದು ಶುಭ ಹಾರೈಸಿದರು.

    ಮಾಜಿ ಅಧ್ಯಕ್ಷ ದೀಪಕ್ ಮಾತನಾಡಿ, ಕಳೆದ ೧೫ ವರ್ಷಗಳಿಂದ ಅಧಿಕಾರದಲ್ಲಿ ಮುಂದುವರೆಯುತ್ತಿರುವ ಶಿವೇಗೌಡರಿಗೆ ಸಿ.ಟಿ. ರವಿಯವರ ಮಾರ್ಗದರ್ಶನ ಭದ್ರ ಬುನಾದಿಯಾಗಿದ್ದು, ದಾಸರಹಳ್ಳಿ ಗ್ರಾಮ ಪಂಚಾಯಿತಿ ಇದೂವರೆಗೆ ಬಿಜೆಪಿಯ ಭದ್ರ ಕೋಟೆಯಾಗಿದೆ ಎಂದು ಹೇಳಿದರು.

    ಪಂಚಾಯಿತಿ ವ್ಯಾಪ್ತಿಯಲ್ಲಿ ಜನಪರ ಆಡಳಿತ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದು ಯೋಜನೆಗಳು ಕಾರಣ ಎಂದ ಅವರು, ಕೇಂದ್ರಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕಳೆದ ೧೧ ವರ್ಷಗಳ ನರೇಂದ್ರ ಮೋದಿಯವರ ಕನಸು ನನಸು ಮಾಡಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೆಚ್ಚು ಅಭಿವೃದ್ಧಿ ಆದಾಗ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಎಂದರು.

    ಮುಂಬರುವ ಗ್ರಾ.ಪಂ, ಜಿ.ಪಂ, ತಾ.ಪಂ, ಎಂಎಲ್‌ಎ, ಎಂಎಲ್‌ಸಿ ಚುನಾವಣೆಗಳಲ್ಲಿ ಇದೇ ರೀತಿ ದಾಸರಹಳ್ಳಿ ಗ್ರಾಮ ಪಂಚಾಯಿತಿ ಬಿಜೆಪಿಯ ಭದ್ರ ಕೋಟೆಯಾಗಿ ಉಳಿಯಲಿ ಎಂದು ಇಂಗಿತ ವ್ಯಕ್ತಪಡಿಸಿದರು.

    ನೂತನ ಅಧ್ಯಕ್ಷ ಟಿ.ಎಸ್. ಶಿವೇಗೌಡ ಅಧಿಕಾರ ಸ್ವೀಕರಿಸಿ ಮಾತನಾಡಿ, ಮುಂದೆಯೂ ಬಿಜೆಪಿ ಅಭ್ಯರ್ಥಿಗಳು ಈ ಪಂಚಾಯಿತಿಯ ಅಧಿಕಾರ ಹಿಡಿಯಬೇಕು ಆ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಆಶೀರ್ವಾದ ನೀಡಿ ನನ್ನನ್ನು ಆಯ್ಕೆಮಾಡಿದ್ದು, ಎಲ್ಲರಿಗೂ ತುಂಬ ಹೃದಯದ ಧನ್ಯವಾದ ಸಲ್ಲಿಸಿದರು.

    ಶಾಸಕ ಸಿ.ಟಿ. ರವಿಯವರ ಅಧಿಕಾರವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಆದ ಜನಪರ ಅಭಿವೃದ್ಧಿ ಕಾರ್ಯಗಳು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಿ ೭ ಗ್ರಾ.ಪಂ ಸದಸ್ಯರು ಆಯ್ಕೆಯಾಗಲು ಕಾರಣ ಎಂದು ಹೇಳಿದರು.

    ಈ ಗ್ರಾ.ಪಂ ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ, ಮನೆ ಹಂಚಿಕೆ ಬಗ್ಗೆ ಜಾಗ ಗುರ್ತಿಸಿಲ್ಲ. ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಬಂದು ಎರಡು ವರ್ಷವಾದರೂ ನಿವೇಶನ ಹಂಚಿಕೆ ಮಾಡಲಾಗಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಲಲಿತ, ಸದಸ್ಯರುಗಳಾದ ಅವಿಲಾ ಹೆಚ್.ಸಿ, ಚಂದ್ರಶೇಖರ್ ಹೆಚ್.ಎನ್, ಮಂಜುನಾಥ್. ಎಸ್, ಮಾಲಾಶ್ರೀ, ವಿನೋದ ನಾಗೇಶ್, ಗ್ರಾಮಸ್ಥರಾದ ಸತೀಶ್, ಪಾಪಣ್ಣ ಮತ್ತಿತರರು ಉಪಸ್ಥಿತರಿದ್ದರು

    T.S. Sivegowda elected unopposed as Dasarahalli Gram Panchayat President

  • ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ನಿಷೇಧ

    ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ನಿಷೇಧ

    ಚಿಕ್ಕಮಗಳೂರು:  ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಹೋಟೆಲ್, ಬೇಕರಿ, ಸಹಿ-ಖಾರ ತಿಂಡಿಗಳ ತಯಾರಕರು, ಕಲ್ಯಾಣ ಮಂಟಪ ಮತ್ತಿತರೆ ಉದ್ದಿಮೆದಾರರು ಸ್ವಚ್ಛತೆಗೆ ಆಧ್ಯತೆ ನೀಡಿ ಸಾಂಕ್ರಾಮಿಕ ರೋಗಗಳ ತಡೆಗೆ ನಗರಸಭೆಯೊಂದಿಗೆ ಕೈ ಜೋಡಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮನವಿ ಮಾಡಿದರು.

    ಅವರು ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಬೇಕರಿ, ಸಿಹಿ-ಖಾರ ತಿನಿಸುಗಳ ತಯಾರಕರು, ಮಾರಾಟಗಾರರು, ಸ್ವೀಟ್ಸ್ ಸ್ಟಾಲ್, ಕಾಂಡಿಮೆಂಟ್ಸ್, ಕಲ್ಯಾಣ ಮಂಟಪಗಳ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಆಹಾರ ನಮ್ಮ ಆರೋಗ್ಯ ಒಂದು ಭಾಗ ಗುಣಮಟ್ಟದ ಆಹಾರ ಸೇವನೆ ಅಗತ್ಯವಿರುತ್ತದೆ. ಹೋಟೆಲ್‌ಗಳು, ಬೇಕರಿ ಇನ್ನಿತರೆ ತಿನಿಸು ಮಾರಾಟ ಮಾಡುವವರು ಉತ್ತಮವಾದ ಆಹಾರ ಪೂರೈಕೆ ಮಾಡಬೇಕು. ಅಗತ್ಯ ಇರುವಷ್ಟು ಮಾತ್ರ ತಯಾರು ಮಾಡಿಕೊಳ್ಳಬೇಕು. ಉಳಿಸಿ ಮತ್ತೆ ಮಾರಾಟ ಮಾಡಬಾರದು ಎಂದರು.

    ಬಸ್ ನಿಲ್ದಾಣ, ಇತರೆ ಕೆಲವುಕಡೆ ತೆರೆದ ವಾತಾವರಣದಲ್ಲಿ ತಿಂಡಿ, ತಿನಿಸು ಮಾರಾಟ ಮಾಡುವುದನ್ನು ಗಮನಿಸಿದ್ದೇನೆ. ಜನ ಸಂದಣಿ ಪ್ರದೇಶಗಳಲ್ಲಿ ಧೂಳು, ಕ್ರಿಮಿ, ಕೀಟಗಳು ಇರುತ್ತವೆ. ಇವು ಆಹಾರ ಪದಾರ್ಥಗಳನ್ನು ಕೆಡಿಸಿ ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಈ ಕಾರಣಕ್ಕೆ ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿ ಮುಚ್ಚಿದ ವಾತಾವರಣದಲ್ಲಿಟ್ಟು ಮಾರಾಟಮಾಡಬೇಕು ಎಂದರು.

    ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಗೂ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟು ಮಾಡುತ್ತಿದೆ. ಈಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ವರ್ತಕರೇ ಕಡಿವಾಣ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಕೆಲವರು ಮದ್ಯ ಸೇವಿಸಿ ಸಾರ್ವಜನಿಕ ಪ್ರದೇಶದಲ್ಲೇ ಬಾಟಲಿಗಳನ್ನು ಬಿಸಾಡಿ ಬರುತ್ತಿದ್ದಾರೆ. ವಿದ್ಯಾವಂತರಾದರೂ ಅವಿವೇಕಿಗಳ ರೀತಿ ನಡೆದುಕೊಳ್ಳುತ್ತಿರುವುದು ವಿಪರ್ಯಾಸ ಅದಕ್ಕೆ ಅವರೇ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು ಎಂದರು.

    ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ನಿಷೇಧವಿದೆ. ಅದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು. ಅಲ್ಲದೆ ಶುಚಿತ್ವಕ್ಕೆ ಮಹತ್ವ ನೀಡಬೇಕು ಎಂದು ತಿಳಿಸಿದರು.

    ನಗರಸಭೆ ಆಯಕ್ತ ಬಿ.ಸಿ.ಬಸವರಾಜು ಮಾತನಾಡಿ, ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗಳು, ಬೇಕರಿಗಳು ಮತ್ತಿತರೆ ತಿಂಡಿ-ತಿನಿಸುಗಳನ್ನು ತಯಾರಿಸುವವರು ಸ್ವಚ್ಛತೆ ಕಾಪಾಡಿಕೊಳ್ಳುವ ಜೊತೆಗೆ ಗ್ರಾಹಕರಿಗೆ ಕುಡಿಯಲು ಬಿಸಿಯಾದ ಅಥವಾ ಕಾಯಿಸಿ ಆರಿಸಿದ ನೀರು ನೀಡಬೇಕು ಎಂದು ಸೂಚಿಸಿದರು.

    ಅಕ್ಟೋಬರ್ ವರೆಗೆ ಇದೇ ರೀತಿ ಮಳೆ ಮುಂದುವರಿಯಲಿದೆ. ಸೊಳ್ಳೆಗಳು ಉತ್ಪತ್ತಿಯಾಗುವ ಸಂದರ್ಭ ಇದಾಗಿರುತ್ತದೆ. ಈ ಬಗ್ಗೆ ಆರೋಗ್ಯ ಇಲಾಖೆ ಸಾಕಷ್ಟು ಜಾಗೃತಿಯ ಮಾಹಿತಿಗಳನ್ನು ನೀಡಿದೆ. ಇದಲ್ಲದೆ ಆಹಾರ ಪದಾರ್ಥಗಳನ್ನು ಪ್ರಿಡ್ಜ್‌ಗಳಲ್ಲಿಟ್ಟು ಮಾರಾಟ ಮಾಡವ ತಿನಿಸುಗಳಿಂದ ಸಾರ್ವಜನಿಕರ ಆರೋಗ್ಯಕ್ಕೆ ಕುತ್ತಾಗಬಾರದು. ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ವಿಶೇಷವಾಗಿ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಿಕೊಳ್ಳಬೇಕು ಎಂದರು.

    ಪದೇ ಪದೇ ನಮ್ಮ ಸಿಬ್ಬಂದಿ ದಾಳಿ ಮಾಡಿ ದಂಡ ವಿಧಿಸಿದರೂ ಮತ್ತದೇ ಅಭ್ಯಾಸ ಪುನರಾವರ್ತನೆ ಆಗುತ್ತಲೇ ಇದೆ. ಆದರೆ ಅದಕ್ಕೆ ಶಾಶ್ವತ ಕಡಿವಾಣ ಹಾಕಬೇಕಿದೆ. ಜಿಲ್ಲೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಬೇಕೆಂದು ಆದೇಶವಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು. ಇಲ್ಲವಾದಲ್ಲಿ ಅಂಗಡಿ, ಉದ್ದಿಮೆಗಳನ್ನು ಮುಚ್ಚಿ ದಂಡ ವಿಧಿಸುವುದು ಅನಿವಾರ್ಯವಾಗುತ್ತದೆ. ನಂತರ ಕೋರ್ಟ್‌ಗೆ ಹೋಗಿ ಆದೇಶ ತರಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಪ್ಲಾಸ್ಟಿಕ್ ನಿಷೇಧದ ವಿಚಾರದಲ್ಲಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪ ಮಾದರಿಯಾಗಿದೆ. ಅಲ್ಲಿ ಕುಡಿಯುವ ನೀರನ್ನೂ ಸಹ ಪ್ಲಾಸ್ಟಿಕ್ ಬಾಟಲಿಯಲ್ಲಿ ಕೊಡುವುದಿಲ್ಲ. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡಿದ್ದಾರೆ. ಅದೇ ರೀತಿ ಉಳಿದವರು ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ ತೆಗೆದುಕೊಳ್ಳಬೇಕು. ಇನ್ನು ಏಳೆಂಟು ದಿನಗಳಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಗಂಭೀರ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

    ಕಲ್ಯಾಣ ಮಂಟಪಗಳಲ್ಲಿ ಸಮಾರಂಭ ನಡೆಯುವಾಗ ಪಾರ್ಕಿಂಗ್ ಸಮಸ್ಯೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಒಕ್ಕಲಿಗರ ಕಲ್ಯಾಣ ಮಂಟಪದ ಬಳಿ ಸ್ವಲ್ಪ ಹೆಚ್ಚೇ ತೊಂದರೆ ಆಗುತ್ತಿದೆ. ಈ ಬಗ್ಗೆ ಗಮನ ಹರಿಸಿ ಟ್ರಾಫಿಕ್‌ನಿಂದ್ ಕಿರಿಕಿರಿ ಉಂಟಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

    ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಕ ಶ್ರೀಧರ್ ಸ್ವಚ್ಛತೆ-ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ನಗರಸಭೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

    Ban on the use of plastic items in welfare centres