Category: ರಾಜ್ಯ

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ₹8 ಕೋಟಿ ದರೋಡೆ

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ₹8 ಕೋಟಿ ದರೋಡೆ

    ವಿಜಯಪುರ: ಮಹಾರಾಷ್ಟ್ರ ಗಡಿಗೆ ಹೊಂದಿ ಕೊಂಡಿರುವ ಜಿಲ್ಲೆಯ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ಸುಮಾರು ₹‌8 ಕೋಟಿ ನಗದು, 50 ಕೆ.ಜಿ ಚಿನ್ನಾಭರಣ ದರೋಡೆ ಮಾಡಲಾಗಿದೆ.

    ಮಂಗಳವಾರ ಸಂಜೆ 7 ಗಂಟೆಗೆ ನುಗ್ಗಿರುವ ಏಳೆಂಟು ಮುಸುಕುಧಾರಿ ದರೋಡೆಕೋರರು ಪಿಸ್ತೂಲ್‌, ಮಾರಕಾಸ್ತ್ರಗಳನ್ನು ತೋರಿಸಿ, ಸಿಬ್ಬಂದಿ ಕೈಕಾಲು ಕಟ್ಟಿ ಹಾಕಿ ಕೃತ್ಯ ಎಸಗಿದ್ದಾರೆ. ‘₹8 ಕೋಟಿ ನಗದು, 50 ಕೆ.ಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ’ ಎಂದು ಬ್ಯಾಂಕ್‌ ಸಿಬ್ಬಂದಿ, ಪೊಲೀಸರು ತಿಳಿಸಿದ್ದಾರೆ.

    ‘ಚಡಚಣ ಪಟ್ಟಣದ ಪಂಢರಪುರ ಮುಖ್ಯರಸ್ತೆಯಲ್ಲಿರುವ ಎಸ್‌ಬಿಐ ಶಾಖೆಯ ಸಿಬ್ಬಂದಿ ಕೆಲಸ ಮುಗಿಸುತ್ತಿದ್ದಂತೆ ದರೋಡೆಕೋರರು ಮುಖ್ಯ ದ್ವಾರದ ಮೂಲಕ ಒಳಗಡೆ ನುಗ್ಗಿದ್ದಾರೆ.

    ‘ನಾಡ ಪಿಸ್ತೂಲ್ ಮತ್ತು ಮಾರಕಾಸ್ತ್ರ ತೋರಿಸಿ, ಬ್ಯಾಂಕ್ ವ್ಯವಸ್ಥಾಪಕ ಮತ್ತು ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿ, ದರೋಡೆ ಮಾಡಿದ್ದಾರೆ. ನಗದು, ಆಭರಣ ಹೇರಿಕೊಂಡು ಮಹಾರಾಷ್ಟ್ರ ಮಾರ್ಗದಲ್ಲಿ ಪರಾರಿಯಾಗಿದ್ದಾರೆ’ ಎಂದು ಮಾಹಿತಿ ಆಧರಿಸಿ ಪೊಲೀಸರು ತಿಳಿಸಿದ್ದಾರೆ.

    ಕಾರು ಅಪಘಾತ: ದರೋಡೆಕೋರರು ಪರಾರಿಯಾಗುವ ವೇಳೆ ಮಹಾರಾಷ್ಟ್ರದ ಹುಲಜಂತಿ ಬಳಿ ಕುರಿಗಳ ಹಿಂಡಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಜನರು ಅಡ್ಡಗಟ್ಟಿದಾಗ ಸ್ಥಳದಲ್ಲೇ ಕಾರು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಬಳಿಕ ಜನರು ಕಾರಿನಲ್ಲಿ ಇದ್ದ ಬಂಗಾರ ಮತ್ತು ಹಣವನ್ನು ಕೈಗೆ ಸಿಕ್ಕಷ್ಟು ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

    ₹8 crore robbery from State Bank of India branch

  • ಮಾಲೂರು ಕ್ಷೇತ್ರದ ‘ಕೈ’ ಶಾಸಕ ನಂಜೇಗೌಡ ಆಯ್ಕೆ ಅಸಿಂಧು

    ಮಾಲೂರು ಕ್ಷೇತ್ರದ ‘ಕೈ’ ಶಾಸಕ ನಂಜೇಗೌಡ ಆಯ್ಕೆ ಅಸಿಂಧು

    ಬೆಂಗಳೂರು: ವಿಧಾನಸಭೆಗೆ 2023ರಲ್ಲಿ ನಡೆದ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದಿಂದ ಗೆದ್ದಿರುವ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ಅವರ ಆಯ್ಕೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
    ‘ಮತ ಎಣಿಕೆ ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆದಿಲ್ಲ. ಭಾರಿ ಅಕ್ರಮ ಎಸಗಲಾಗಿದೆ’ ಎಂದು ಆರೋಪಿಸಿ ಪರಾಜಿತ ಅಭ್ಯರ್ಥಿ ಬಿಜೆಪಿಯ ಕೆ.ಎಸ್.ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿ, ಕಾಯ್ದಿರಿಸಲಾಗಿದ್ದ ತೀರ್ಪನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿದೆ.

    ‘ಈ ಕ್ಷೇತ್ರದ ಮತಗಳನ್ನು ನಾಲ್ಕು ವಾರಗಳಲ್ಲಿ ಪುನಃ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಿ. ಅದರಲ್ಲಿ ಯಾರು ಹೆಚ್ಚು ಮತ ಗಳಿಸಿದವರು ಎಂದು ಕಂಡುಬರುತ್ತದೆಯೋ ಅಂಥವರನ್ನು ಆಯ್ಕೆಯಾದ ಅಭ್ಯರ್ಥಿ ಎಂದು ಘೋಷಿಸಿ’ ಎಂದು ನ್ಯಾಯಪೀಠ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.

    ಕೋಲಾರ: ‘ ಮತ ಮರು ಎಣಿಕೆಗೆ ತಕರಾರು ಇಲ್ಲ. ಆದರೆ, ನನ್ನ ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್‌ ಆದೇಶ ಮಾಡಿದ್ದು ಬೇಸರ ಮೂಡಿಸಿದೆ. ಈ ಆದೇಶ ಅಚ್ಚರಿ ಉಂಟು ಮಾಡಿದೆ’ ಎಂದು ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

    ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಕ್ಷೇತ್ರದ ಮತದಾರರು ಯಾವುದೇ ಕಾರಣಕ್ಕೂ ಗಾಬರಿ ಆಗುವ ಅವಶ್ಯವಿಲ್ಲ. ಧೈರ್ಯವಾಗಿ ಹೋರಾಟ ಮಾಡುತ್ತೇನೆ’ ಎಂದರು.

    ‘ಕಳ್ಳಕಾಕರಿಗೆ ಶಿಕ್ಷೆ ಆಗಬೇಕು ಎಂಬುದು ನನ್ನ ಉದ್ದೇಶ. ಈ ಹಿಂದೆ ಶಾಸಕನಾಗಿ ಅಧಿಕಾರ ಅನುಭವಿಸಿದ್ದೇನೆ. ಆದರೆ, ಕೆಲವರು ಮತ ಎಣಿಕೆ ಯಲ್ಲೂ ಅಕ್ರಮ ಎಸಗುವ ಮೂಲಕ ಪ್ರಜಾ ಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ’ ಎಂದು ಮಾಲೂರು ಕ್ಷೇತ್ರದ ಮಾಜಿ ಶಾಸಕ ಕೆ.ಎಸ್‌.ಮಂಜುನಾಥಗೌಡ ಆರೋಪಿಸಿದರು.

    Malur constituency ‘hand’ MLA Nanjegowda elected Asindhu

  • ಕೃಷಿಕ್ರಾಂತಿ-ಹಸಿರು ಕ್ರಾಂತಿ ವೇಗದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ 

    ಕೃಷಿಕ್ರಾಂತಿ-ಹಸಿರು ಕ್ರಾಂತಿ ವೇಗದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ 

    ಹುಬ್ಬಳ್ಳಿ :  ಕೃಷಿಕ್ರಾಂತಿ-ಹಸಿರು ಕ್ರಾಂತಿ ವೇಗದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ. ಈ ಬಗ್ಗೆ ಕೃಷಿ ವಿವಿಗಳು ಹೆಚ್ಚಿನ‌ ಅಧ್ಯಯನ‌ ನಡೆಸಿ ಪರಿಹಾರ ಹುಡುಕಿ ರೈತಸ್ನೇಹಿ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

    ಧಾರವಾಡ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಕೃಷಿ ಮೇಳವನ್ನು ಉದ್ಘಾಟಿಸಿ, ಶ್ರೇಷ್ಠ ಕೃಷಿಕ ಮತ್ತು ಕೃಷಿ ಮಹಿಳೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ  ಸ್ವಾತಂತ್ರ್ಯದ ಹೊಸ್ತಿಲಲ್ಲಿ ಆಹಾರ ಉತ್ಪಾದನೆಯಲ್ಲಿ ಹಿಂದೆ ಇದ್ದೆವು. ಬಳಿಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭನೆ ಬೆಳೆಸಿಕೊಂಡು ರಫ್ತು ಮಾಡುವುದರಲ್ಲೂ ಮುಂದೆ ಬಂದೆವು. ಆದರೆ, ಇತ್ತೀಚಿಗೆ ಆಹಾರದ ಫಲವತ್ತತೆ ಕಡಿಮೆ ಆಗುತ್ತಾ ಆಹಾರ ಉತ್ಪಾದನಾ ಪ್ರಮಾಣ ಕಡಿಮೆ ಆಗಿದೆ. ಇದಕ್ಕೆ ಸ್ಪಷ್ಟ ಕಾರಣಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ ದಿಕ್ಕಿನಲ್ಲಿ ಕೃಷಿ ವಿವಿಗಳು ಹೆಚ್ಚೆಚ್ಚು ಅಧ್ಯಯನ‌ ನಡೆಸಿ. ಇದಕ್ಕೆ ಅಗತ್ಯವಾದ ಹಣಕಾಸಿನ‌ ನೆರವನ್ನು ಸಂಪೂರ್ಣವಾಗಿ ಒದಗಿಸಲು ಸರ್ಕಾರ ಸಿದ್ಧವಿದೆ ಎಂದರು.

    ಸದ್ಯ ರಾಜ್ಯ ಹಾಲಿನ‌ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಸದ್ಯದಲ್ಲೇ ಮಹಾರಾಷ್ಟ್ರ ರಾಜ್ಯವನ್ನು ಹಿಂದಿಕ್ಕಿ ನಾವೇ ನಂಬರ್ ಆದರೂ ಆಶ್ಚರ್ಯವಿಲ್ಲ. ಹೈನುಗಾರಿಕೆಯಲ್ಲಿನಾವು ಅಪಾರ ಪ್ರಗತಿ ಸಾಧಿಸಿದ್ದೇವೆ ಎಂದರು.

    ಅಕ್ಕಿ, ರಾಗಿ, ಗೋಧಿಯಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಿದ್ದು ಡಯಾಬಿಟಿಕ್ ಸಮಸ್ಯೆ ಇರುವವರ ಪ್ರಮಾಣ ಹೆಚ್ಚುತ್ತಿದೆ. ಆದ್ದರಿಂದ ಸಕ್ಕರೆ ಪ್ರಮಾಣ ಕಡಿಮೆ ಇರುವ ಸಿರಿಧಾನ್ಯ ಕೃಷಿಗೆ ಹೆಚ್ಚೆಚ್ಚು ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು.

    ಕೃಷಿ ವಿವಿಗಳು Lab to Land ಜೊತೆಗೆ Land to Lab ಕಡೆಗೆ ಗಮನ ಹರಿಸುವ ಕೆಲಸ ಮಾಡಬೇಕು. ಕಡಿಮೆ ಮಳೆಯಲ್ಲೂ ಉತ್ತಮ ಬೆಳೆ ಬೆಳೆಯುವ ರೀತಿ ಸುಸ್ಥಿರ ಕೃಷಿಗೆ ಪೂರಕವಾಗಿ ಅಧ್ಯಯನಗಳು ನಡೆಯಬೇಕು ಎಂದು ಕೃಷಿ ವಿವಿಗಳಿಗೆ ಕರೆ ನೀಡಿದರು.

    ಮೊದಲೆಲ್ಲಾ ಕೃಷಿ ಚಟುವಟಿಕೆಗೆ ಪೂರಕವಾಗಿ ಗ್ರಾಮ ಸಹಾಯಕರು ಇದ್ದು ಅವರು ಗ್ರಾಮಗಳಲ್ಲೇ ನೆಲೆಸುತ್ತಿದ್ದರು. ಈಗ ಇವರ ಸಂಖ್ಯೆ ಕಡಿಮೆ ಆಗಿದ್ದು ಮತ್ತೆ ಇವರ ಪ್ರಮಾಣ ಹೆಚ್ಚಾಗುವ ದಿಕ್ಕಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಸಿಎಂ ಸೂಚಿಸಿದರು.

    ಕೃಷಿ ಭೂಮಿಗಳು ಹೆಚ್ಚಾಗದೆ, ಕೃಷಿಯ ಪ್ರಮಾಣ ಹೆಚ್ಚಾಗದೆ ಕೇವಲ ಕೃಷಿ ವಿವಿಗಳನ್ನು ಹೆಚ್ಚಿಸಿದರೆ ಹೆಚ್ಚಿನ ಅನುಕೂಲಗಳು ಆಗುವುದಿಲ್ಲ ಎಂದರು.

    ಬೆಣ್ಣೆಹಳ್ಳಕ್ಕೆ 200 ಕೋಟಿ ಕೊಟ್ಟಿದ್ದೇವೆ. ಟೆಂಡರ್ ಕರೆಯಲಾಗಿದೆ. ಸದ್ಯದಲ್ಲೇ ಕೆಲಸ ಕೂಡ ಆರಂಭವಾಗಲಿದೆ ಎಂದರು.

    ಮಳೆಹಾನಿಯಿಂದ ಆಗಿರುವ ಬೆಳೆ ಹಾನಿ ಮತ್ತು ಅನಾಹುತಗಳ ಬಗ್ಗೆ ಧಾರವಾಡ ಜಿಲ್ಲಾಡಳಿತ ಶೇ 90 ರಷ್ಟು ಪ್ರಗತಿ ಪರಿಹಾರ ವರದಿ ನೀಡಿರುವುದಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರಿಗೆ ಮುಖ್ಯಮಂತ್ರಿಗಳು ಅಭಿನಂದಿಸಿದರು.

    Food production is not keeping pace with the agricultural revolution and the Green Revolution.

  • ಯು ಟ್ಯೂಬ್ ಚಾನಲ್ ಗಳ ಆರಂಭಕ್ಕೆ ಪರವಾನಗಿ ನಿಗಧಿ ಮಾಡುವ ಬಗ್ಗೆ ಪರಿಶೀಲನೆ

    ಯು ಟ್ಯೂಬ್ ಚಾನಲ್ ಗಳ ಆರಂಭಕ್ಕೆ ಪರವಾನಗಿ ನಿಗಧಿ ಮಾಡುವ ಬಗ್ಗೆ ಪರಿಶೀಲನೆ

    ಹುಬ್ಬಳ್ಳಿ:  ಮೊದಲು ನೀವೆಲ್ಲಾ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸಿ. ಇದು ಸಮಾಜಕ್ಕೆ ಹಾನಿಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರಿಗೆ ಕರೆ ನೀಡಿದರು.

    ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ, ಲೋಗೋ ಬಿಡುಗಡೆ ಮಾಡಿ ಮಾತನಾಡಿದರು.

    ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ ನನ್ನ ಬಗ್ಗೆ ಹೀಗೇ ಬರೆಯಿರಿ, ಹಾಗೇ ಬರೆಯಿರಿ ಎಂದು ಯಾವತ್ತೂ ಹೇಳಿಲ್ಲ. ನನ್ನ ಬಗ್ಗೆ ಸುಳ್ಳುಗಳನ್ನು ಸತತವಾಗಿ ತೋರಿಸುವಾಗಲೂ ಯಾಕೆ ಹೀಗೆ ತೋರಿಸ್ತೀರಿ ಅಂತಲೂ ಯಾರಿಗೂ ಕೇಳಿಲ್ಲ. ನಿಮ್ಮಿಂದ ನನಗೆ ಏನೇನೂ ಅಪೇಕ್ಷೆ ಇಲ್ಲ. ಸಾಧ್ಯವಾದರೆ ಸತ್ಯ ತೋರಿಸಿ, ಸತ್ಯ ಬರೆಯಿರಿ ಎಂದರು.

    ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದೇ ಏನ್ ದೊಡ್ಡ ದೊಡ್ಡ ಚರ್ಚೆ ನಡೆಸಿದರು. ಆ ಚರ್ಚೆಯಲ್ಲಿ ಜ್ಯೋತಿಷಿಗಳು, ಚಾನಲ್ ಗಳು ತೋರಿಸಿದ್ದೆಲ್ಲಾ ಅಪ್ಪಟ ಸುಳ್ಳಾಯ್ತು. ನೀವು ಹೀಗೆಲ್ಲಾ ತೋರಿಸಿದರೆ ಜನ ಒಪ್ತಾರಾ ಯೋಚನೆ ಮಾಡಿ ಎಂದರು.

    ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಮ್ಮ‌ ಸರ್ಕಾರ ಸದಾ ಸಿದ್ದ. ಯಾವತ್ತೂ ಇದಕ್ಕೆ ಧಕ್ಕೆ ತರುವ ಕೆಲಸವನ್ನು ನಾನೂ ಯಾವತ್ತೂ ಮಾಡಿಲ್ಲ, ನಮ್ಮ ಸರ್ಕಾರವೂ ಮಾಡುವುದಿಲ್ಲ ಎಂದರು.

    ಬ್ಲಾಕ್ ಮೇಲ್ ಮತ್ತು ಕೀಳು ಮಟ್ಟದ ಪ್ರಾಕ್ಟೀಸ್ ಮಾಡುತ್ತಿರುವ ಯು ಟ್ಯೂಬ್ ಚಾನಲ್ ಗಳು ಸಮಾಜಕ್ಕೆ ಶಾಪ ಆಗಿದ್ದು, ಇಂಥವರಿಂದ ಪತ್ರಿಕೋದ್ಯಮದ ಘನತೆ ಹಾಳಾಗಿದೆ. ಹೀಗಾಗಿ ಯು ಟ್ಯೂಬ್ ಚಾನಲ್ ಗಳ ಹಾವಳಿ ತಡೆಯಲು ಇವರಿಗೂ ಲೈಸೆನ್ಸ್ ಕಡ್ಡಾಯಗೊಳಿಸಬೇಕು ಎಂದು ಸಂಘ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿತು. ಈ ಬೇಡಿಕೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿಗಳುನುಡಿದರು.

    Review of licensing for launching YouTube channels

  • ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದರೆ ಕೇವಲ ವ್ಯಕ್ತಿ ಅಲ್ಲ, ಒಂದು ಸಿದ್ಧಾಂತ

    ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದರೆ ಕೇವಲ ವ್ಯಕ್ತಿ ಅಲ್ಲ, ಒಂದು ಸಿದ್ಧಾಂತ

    ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ. ಒಂದು ಸಿದ್ದಾಂತ. ಬೆವರಿನ‌ ಸಂಸ್ಕೃತಿಗೆ ಮೌಲ್ಯ ಮತ್ತು ಘನತೆ ತಂದು ಕೊಡುವ ಸಿದ್ಧಾಂತ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಪತ್ರಕರ್ತನಾಗಿ ಎರಡು ಕಣ್ಣುಗಳಿಂದ ಸಮಾಜವನ್ನು ನೋಡುತ್ತಿದ್ದ ನನಗೆ, ಸಮಾಜದ ಲಕ್ಷಾಂತರ ಕಣ್ಣುಗಳು ನನ್ನೊಬ್ಬನನ್ನು ಗಮನಿಸುತ್ತಿರುತ್ತದೆ ಎನ್ನುವ ಸಾಮಾಜಿಕ ಎಚ್ಚರವನ್ನು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಲ್ಲಿ ಕಲಿತುಕೊಂಡೆ.

    ಒಂದು ಬಲಿಷ್ಠವಾದ ವ್ಯವಸ್ಥೆ ಏಕಲವ್ಯರ ಬೆರಳುಗಳನ್ನು, ಅವಕಾಶ ಮತ್ತು ಪ್ರತಿಭೆಗಳನ್ನು ಹೇಗೆ ಕಿತ್ತುಕೊಳ್ಳುತ್ತದೆ ಎನ್ನುವುದನ್ನು ನಾನು ಪತ್ರಕರ್ತನಾಗಿ ಕಲಿತಿದ್ದೆ. ಆದರೆ, ಏಕಲವ್ಯರ ಬೆರಳುಗಳಿಗೆ ಶಕ್ತಿ ತುಂಬಿ ಬೆವರಿನ‌ ಸಂಸ್ಕೃತಿಗೆ ಘನತೆ ತರುವುದು ಹೇಗೆ ಎನ್ನುವುದನ್ನು ನಾನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕಲಿತೆ. ನಾನು ಮಾನ್ಯ ಮುಖ್ಯಮಂತ್ರಿಗಳ ನೆರಳಿಗೆ ಬಂದು ಒಂದು ಡಜನ್ ವರ್ಷಗಳೇ ಕಳೆದವು. ಈ ಅವಧಿಯಲ್ಲಿ ನಾನು ಗ್ರಹಿಸಿದ್ದು ಏನೆಂದರೆ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ಒಬ್ಬ ರಾಜಕೀಯ ನಾಯಕರಲ್ಲ. ಒಂದು ಸಿದ್ಧಾಂತ. ಈ ಸಿದ್ಧಾಂತಕ್ಕೆ ಒಂದು ಪರಂಪರೆ ಇದೆ. ಆ ಪರಂಪರೆ ಸೃಷ್ಟಿಸಿದ ಅವಕಾಶಗಳ ಕಾರಣಕ್ಕೇ ಇಂದು ಇಲ್ಲಿ ನಾನು ಸನ್ಮಾನಿತನಾಗುತ್ತಿದ್ದೇನೆ. ಆದ್ದರಿಂದ ಈ ಸನ್ಮಾನವನ್ನು ನಾನು ಸಿದ್ಧರಾಮಯ್ಯ ಅವರ ಪರಂಪರೆಗೆ ಅರ್ಪಿಸುತ್ತೇನೆ ಎಂದರು.

    ವಿಧಾನಸೌಧದಲ್ಲಿ ಬೇರೆ ಬೇರೆ ಜನ ಸಮುದಾಯಗಳ, ದುಡಿಯುವ ವರ್ಗಗಳ ಸಭೆಗಳು ನಡೆಯುವಾಗ ಅವರೆಲ್ಲರ ಬಾಯಲ್ಲಿ ಬರುವ ಒಂದು ಮಾತು ಪದೇ ಪದೇ ನನ್ನ ಕಿವಿಗೆ ಬೀಳುತ್ತದೆ. ” ಸಾರ್, ನಮಗೆ ನ್ಯಾಯ ಸಿಕ್ಕರೆ ನಿಮ್ಮ ಅವಧಿಯಲ್ಲೇ ಸಿಗಬೇಕು ಸರ್. ಹಿಂದಿನವರೂ ಮಾಡಿಲ್ಲ, ಮುಂದೆ ಬರುವವರೂ ಮಾಡುವುದೂ ಕಷ್ಟ ಸರ್”. ಈ ಮಾತು ನನ್ನನ್ನು ಸದಾ ಎಚ್ಚರದಲ್ಲಿ ಇರುವಂತೆ ಮಾಡಿ ನನ್ನ ಕರ್ತವ್ಯ ಪ್ರಜ್ಞೆಯನ್ನು ರೂಪಿಸಿದೆ ಎಂದರು.

    ಎರಡು ಬಾರಿ ಮುಖ್ಯಮಂತ್ರಿ ಆಗುವುದು, ಸತತ ಮೂರು ದಶಕಗಳ ಕಾಲ ಜನ ಸಮುದಾಯಗಳ ಭರವಸೆಯ ನಾಯಕರಾಗಿ ರೂಪುಗೊಂಡಿದ್ದು ಅವರ ಸಾಮಾಜಿಕ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಈ ಬದ್ಧತೆ ನೇರವಾಗಿ ನನ್ನ ಮೇಲೆ ಪ್ರಭಾವ ಬೀರಿದೆ ಎಂದು ವಿವರಿಸಿದರು.

    ಪತ್ರಕರ್ತ ಸಮುದಾಯದ 20-25 ವರ್ಷಗಳ ಬೇಡಿಕೆಗೆ ನಾನು ಮುಕ್ತಿ ದೊರಕಿಸಿಕೊಟ್ಟೆ ಎಂದು ನೀವೆಲ್ಲಾ ಹೇಳುತ್ತಿದ್ದೀರಿ. ಇದೆಲ್ಲವೂ ಒಬ್ಬನಿಂದ ಆಗಿದ್ದಲ್ಲ, ಮುಖ್ಯಮಂತ್ರಿಗಳು ನನಗೆ ಕೊಟ್ಟ ಶಕ್ತಿ ಮತ್ತು ಪತ್ರಕರ್ತರ ಸಂಘದ ಸತತ ಹೋರಾಟ, ನಿರಂತರ ಪ್ರಯತ್ನ ಕೂಡ ಕಾರಣ ಎಂದು ಹೇಳಲು ಬಯಸುತ್ತೇನೆ.

    ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷರಾದ ದಿಲೀಪ್ ಕುರಂದವಾಡೆ ಇಬ್ಬರೂ ಅಸಾಧ್ಯ ಸಂಘಟಕರು ಮತ್ತು ಅಷ್ಟೇ ಬದ್ಧತೆಯುಳ್ಳವರು. ನಿಮ್ಮಲ್ಲರ ಹಾರೈಕೆ ಮತ್ತು ಬೆಂಬಲದಲ್ಲಿ ನಾನು ಇಲ್ಲಿಯವರೆಗೂ ಹೆಜ್ಜೆ ಇಟ್ಟಿದ್ದೇನೆ. ನಡೆಯಬೇಕಾಗಿರುವ ಹಾದಿ ಬಹಳ ಇದೆ. ಆದರೆ, ನನಗೆ ಒದಗಿ ಬಂದಿರುವ ಈ ಅವಕಾಶದಲ್ಲಿ ನಾನು ಪತ್ರಕರ್ತರ ಬಹುತೇಕ ಸಮಸ್ಯೆಗಳಿಗೆ ಮುಕ್ತಿ ಹಾಡಬೇಕು ಎನ್ನುವ ಖಚಿತ ನಿರ್ಧಾರ ಮಾಡಿಯೇ ಕೆಲಸ ಮಾಡುತ್ತಿದ್ದೇನೆ.

    ಹತ್ತಾರು ವರ್ಷಗಳಿಂದ ಜಡ್ಡುಗಟ್ಟಿರುವ ತಾಂತ್ರಿಕ‌ ಅಡೆ ತಡೆಗಳನ್ನು, ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಲು ಇಲಾಖೆಯ ಕಾರ್ಯದರ್ಶಿಗಳಾದ ಕಾವೇರಿ ಮೇಡಂ, ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರೂ ಸಹಕಾರ ನೀಡುತ್ತಿದ್ದಾರೆ. ಜೊತೆಗೆ ನಿಮ್ಮೆಲ್ಲರ ಒತ್ತಾಯ ಮತ್ತು ಆಗ್ರಹಗಳಿಗೂ ನಾನು ಕಿವಿಯಾಗಿದ್ದೇನೆ. ಎಲ್ಲರ ಒಟ್ಟು ಶ್ರಮದಲ್ಲಿ ಇನ್ನಷ್ಟು ಅನುಕೂಲಗಳು ಪತ್ರಕರ್ತ ಸಮುದಾಯಕ್ಕೆ ಸಿಗಲಿದೆ ಎಂದು ಹೇಳುತ್ತಾ, ಇವತ್ತಿನ‌ ಈ ಸನ್ಮಾನ ಮತ್ತು ದೀಪಕ್ ಕುರಂದವಾಡೆ ತಂಡದ ಪ್ರೀತಿ, ಅಭಿಮಾನಕ್ಕೆ ಆಭಾರಿ‌ ಆಗಿದ್ದೇನೆ ಎಂದರು.

    ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷರಾದ ದೀಪಕ್ ಕುರಂದವಾಡೆ, KUWJ ಬೆಳಗಾವಿ ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಡಾ.ಭೀಮಶಿ ಎಲ್. ಜಾರಕಿಹೊಳಿ, ಸಂಘದ ಮುಖಂಡರಾದ ಮದನ್ ಗೌಡ ಸೇರಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಪದಾಧಿಕಾರಿಗಳು ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.

    Chief Minister Siddaramaiah is not just a person, but an ideology.

  • ನಟ ದರ್ಶನ್‌ ಮೆಂಟ್‌ನ ಫ್ಲ್ಯಾಟ್‌ನಲ್ಲಿ ಕಳ್ಳತನ

    ನಟ ದರ್ಶನ್‌ ಮೆಂಟ್‌ನ ಫ್ಲ್ಯಾಟ್‌ನಲ್ಲಿ ಕಳ್ಳತನ

    ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರ ಬನಶಂಕರಿ ಮೂರನೇ ಹಂತದ ಹೊಸಕೆರೆ ಹಳ್ಳಿಯ ಪ್ರೆಸ್ಟೀಜ್‌ ಸೌತ್‌ ರಿಡ್ಜ್‌ ಅಪಾರ್ಟ್‌ ಮೆಂಟ್‌ನ ಫ್ಲ್ಯಾಟ್‌ನಲ್ಲಿ ಕಳ್ಳತನ ನಡೆದಿದ್ದು, ಈ ಸಂಬಂಧ ಚನ್ನಮ್ಮನಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಿಜಯಲಕ್ಷ್ಮಿ ಅವರ ವ್ಯವಸ್ಥಾಪಕ ನಾಗರಾಜ್ ನೀಡಿರುವ ದೂರು ಆಧರಿಸಿ, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 306ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

    ₹3 ಲಕ್ಷ ನಗದು ಕಳ್ಳತನವಾಗಿದೆ ಎಂದು ದೂರು ನೀಡಲಾಗಿದೆ. ಮನೆ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲಸದವರನ್ನು ಕರೆಸಿ, ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದರು.

    ‘ಹತ್ತು ವರ್ಷಗಳಿಂದ ವಿಜಯಲಕ್ಷ್ಮಿ ಅವರ ಮನೆಯಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದೇನೆ. ಸೆ.4ರಂದು ವಿಜಯಲಕ್ಷ್ಮಿ ಅವರು ಕರೆದು ಬೆಡ್‌ ರೂಮ್‌ನ ಕಾಟನ್‌ ಬಾಕ್ಸ್‌ನಲ್ಲಿ ಹಣವಿದೆ. ಅದನ್ನು ತೆಗೆದುಕೊಂಡು ಬರುವಂತೆ ಸೂಚಿಸಿದ್ದರು. ಅವರು ಹೇಳಿದಷ್ಟು ಹಣ ತೆಗೆದುಕೊಂಡು ಉಳಿದ ಹಣವನ್ನೇ ಅಲ್ಲೇ ಬಿಟ್ಟು ಬಂದಿದ್ದೆ. ಆ ಹಣವನ್ನು ತೆಗೆದುಕೊಂಡು ವಿಜಯಲಕ್ಷ್ಮಿ ಅವರು ಮೈಸೂರಿಗೆ ತೆರಳಿದ್ದರು.

    ಮನೆಯ ಬಾಗಿಲಿಗೆ ಬೀಗ ಹಾಕಿ ಕೀ ನನಗೆ ಕೊಟ್ಟು ಹೋಗಿದ್ದರು. ವಿಜಯಲಕ್ಷ್ಮಿ ಅವರ ತಾಯಿಗೆ ಮನೆ ಕೀ ಕೊಟ್ಟು ನಾನೂ ಹೊರಗೆ ಹೋಗಿದ್ದೆ. ಸೆ.5ರಂದು ನಾನೂ ಮೈಸೂರಿಗೆ ತೆರಳಿ, ಸೆ.7ರಂದು ವಿಜಯಲಕ್ಷ್ಮಿ ಅವರನ್ನು ಕರೆದುಕೊಂಡು ಬಂದು ಹೊಸಕೆರೆಹಳ್ಳಿಯಲ್ಲಿ ಇರುವ ಅವರ ಫ್ಲ್ಯಾಟ್‌ಗೆ ಬಿಟ್ಟು ನನ್ನ ಮನೆಗೆ ತೆರಳಿದ್ದೆ.

    ಮರು ದಿನ ವಿಜಯಲಕ್ಷ್ಮಿ ಅವರು ಕರೆ ಮಾಡಿ ರೂಮ್‌ನಲ್ಲಿದ್ದ ಹಣ ಕಾಣಿಸುತ್ತಿಲ್ಲ ಎಂಬುದಾಗಿ ತಿಳಿಸಿದ್ದರು’ ಎಂದು ನಾಗರಾಜ್‌ ಅವರು ನೀಡಿರುವ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

    Theft at actor Darshan’s flat

  • ಗದ್ದಲವಿಲ್ಲದೆ, ಯಾವುದೇ ಅಡೆತಡೆಗಳು ಇಲ್ಲದೆ ಸದನದ ಕಲಾಪಗಳು ನಡೆಯಬೇಕು

    ಗದ್ದಲವಿಲ್ಲದೆ, ಯಾವುದೇ ಅಡೆತಡೆಗಳು ಇಲ್ಲದೆ ಸದನದ ಕಲಾಪಗಳು ನಡೆಯಬೇಕು

    ಬೆಂಗಳೂರು: ‘ಗದ್ದಲವಿಲ್ಲದೆ, ಯಾವುದೇ ಅಡೆತಡೆಗಳು ಇಲ್ಲದೆ ಸದನದ ಕಲಾಪಗಳು ನಡೆಯಬೇಕು. ರಾಜಕೀಯಯದ ಮಾತು ಸದನದಾಚೆ ಇರಬೇಕು’ ಎಂಬ ನಿರ್ಣಯದೊಂದಿಗೆ ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗ 11ನೇ ಸಮ್ಮೇಳನಕ್ಕೆ ಶನಿವಾರ ತೆರೆಬಿತ್ತು.

    ಇದೇ 12 ಮತ್ತು 13ರಂದು ನಡೆದ ಈ ಸಮ್ಮೇಳನದಲ್ಲಿ ಲೋಕಸಭೆಯ ಸ್ಪೀಕರ್‌, ರಾಜ್ಯಸಭೆಯ ಉಪಸಭಾಪತಿ, 26 ರಾಜ್ಯಗಳ ವಿಧಾನಸಭೆ ಸಭಾಧ್ಯಕ್ಷರು ಭಾಗಿಯಾಗಿದ್ದರು. ಸಮ್ಮೇಳನದ ಸಮಾರೋಪ ಸಮಾರಂಭದ ನಂತರ ತಮ್ಮ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ನಿರ್ಣಯಗಳನ್ನು ಮಂಡಿಸಿದರು.

    ‘ಜನಪರ ಕಾರ್ಯಗಳ ಬಗ್ಗೆ ಚರ್ಚಿಸಲಷ್ಟೇ ಸದನದ ಸಮಯ ಬಳಕೆ ಯಾಗಬೇಕು. ರಾಜಕೀಯದ ಮಾತು ಸದನದಾಚೆಗೆ ಇರಬೇಕು ಎಂದು ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ ತಿಳಿಹೇಳಬೇಕೆಂದು ನಿರ್ಧರಿಸಲಾಗಿದೆ. ಲೋಕಸಭೆ, ರಾಜ್ಯಸಭೆ, ರಾಜ್ಯಗಳ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಕಲಾಪವನ್ನು ಹೇಗೆ ನಡೆಸಬೇಕು ಎಂಬುದನ್ನು ಸೂಚಿಸುವ ಕೈಪಿಡಿ ಯೊಂದನ್ನು ಸಿದ್ಧಪಡಿಸುವ ಬಗ್ಗೆ ನಿರ್ಧರಿಸಲಾಗಿದೆ’ ಎಂದರು.

    ‘ಗದ್ದಲವೇ ಈಗ ಸದನ ಸರಾಗ ವಾಗಿ ನಡೆಯಲು ಇರುವ ದೊಡ್ಡ ತೊಡಕು. ಗದ್ದಲ, ಧರಣಿಗಳು ಅತ್ಯಮೂಲ್ಯವಾದ ವಿಷಯಗಳ ಮೇಲಿನ ಚರ್ಚೆಯನ್ನು ಹಾದಿತಪ್ಪಿಸುತ್ತವೆ. ಹಣವೂ ವ್ಯರ್ಥವಾಗುತ್ತದೆ. ಇದನ್ನು ಅರ್ಥ ಮಾಡಿಕೊಂಡು ಚುನಾಯಿತ ಪ್ರತಿನಿಧಿಗಳು ಸದನದಲ್ಲಿ ವರ್ತಿಸಬೇಕು’ ಎಂದು ಕರೆ ನೀಡಿದರು.

    ರಾಜ್ಯಸಭೆ ಉಪ ಸಭಾಪತಿ ಹರಿವಂಶ್‌, ‘ಸದನಗಳಲ್ಲಿ ಕಲಾಪಗಳು ನಡೆಯುವುದಿಲ್ಲ ಎಂಬುದನ್ನಷ್ಟೇ ಮಾಧ್ಯಮಗಳು ತೋರಿಸುತ್ತವೆ. ಆದರೆ ಸದನ ಸಮಿತಿಗಳು ಸದಾ ಕೆಲಸ ಮಾಡು ತ್ತವೆ. ಸದಸ್ಯರು ಪಕ್ಷಭೇದ ಮರೆತು ಜನರ ಒಳಿತಿಗಾಗಿ ದುಡಿಯುತ್ತಾರೆ. ಆ ಬಗ್ಗೆಯೂ ಜನರಿಗೆ ಸುದ್ದಿ ತಲುಪಿಸಬೇಕು’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ದೇಶದ ಎಲ್ಲ ಸದನಗಳ ಕಲಾಪ, ಚರ್ಚೆ, ಮಸೂದೆಗಳ ವಿವರಗಳನ್ನು ಒಳಗೊಂಡ ಏಕ ದತ್ತಾಂಶಕೋಶ ರೂಪಿಸಬೇಕು. ಯಾವುದಾದರೂ ಒಂದು ವಿಷಯದ ಬಗ್ಗೆ ಎಲ್ಲ ಸದನಗಳಲ್ಲಿ ಇರುವ ಮಾಹಿತಿಯು, ಸದಸ್ಯರಿಗೆ ಒಂದೆಡೆಯೇ ಲಭ್ಯವಾಗಬೇಕುಸದನ ಕಲಾಪಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿ, ಸಾರ್ವಜನಿಕರಿಗೆ ದೊರೆಯುವಂತೆ ಮಾಡಬೇಕು. ದೇಶದ ಸಾಂವಿಧಾನಿಕ ಸಂಸ್ಥೆಗಳ ಕಾರ್ಯ ನಿರ್ವಹಣೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಬೇಕು

    ಸಾಂವಿಧಾನಿಕ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ದೇಶದ ಯುವಜನರು ಭಾಗಿಯಾಗುವ ಸಾಧ್ಯತೆಗಳನ್ನು ಪರಿಶೀಲಿಸಿ, ಕ್ರಮ ತೆಗೆದುಕೊಳ್ಳಬೇಕು ಮಣಿಪುರದಲ್ಲಿ ಗಲಭೆ ನಡೆದು 2 ವರ್ಷಗಳಾಗುತ್ತಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಈಗ ಅಲ್ಲಿಗೆ ಭೇಟಿ ನೀಡಿದ್ದಾರೆ. ಈ ಭೇಟಿಯ ಪ್ರಯೋಜನವೇನು ಎಂಬ ಪ್ರಶ್ನೆ ಯನ್ನು ಸುದ್ದಿಗಾರ ರೊಬ್ಬರು ಓಂ ಬಿರ್ಲಾ ಅವರ ಎದುರು ಇರಿಸಿದರು.

    ಅದಕ್ಕೆ ಓಂ ಬಿರ್ಲಾ, ‘ಮಣಿ ಪುರ ಗಲಭೆ ಬಗ್ಗೆ ಚಳಿಗಾಲದ ಅಧಿವೇಶನ, ಬಜೆಟ್ ಅಧಿವೇಶನ. ಮುಂಗಾರು ಅಧಿವೇಶನದಲ್ಲಿ ಚರ್ಚಿಸಿದ್ದೇವೆ. ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಬಗ್ಗೆ ಚರ್ಚಿಸಿದ್ದೇವೆ’ ಎಂದಷ್ಟೇ ಹೇಳಿದರು. ಪ್ರಧಾನಿ ಭೇಟಿ ಬಗ್ಗೆ ಮರುಪ್ರಶ್ನಿಸಿದಾಗ, ಬೇರೆ ಪ್ರಶ್ನೆಯತ್ತ ಗಮನ ನೀಡಿದರು.

    ಜನಪರವಾದ ಚರ್ಚೆಗಳು ನಡೆಯಬೇಕು ಎಂದು ಇಲ್ಲಿ ಹೇಳುತ್ತಿದ್ದೀರಿ. ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಸದಸ್ಯರು ಮಾತನಾಡಿದರೆ ಕಲಾಪವನ್ನೇ ಮುಂದೂಡುತ್ತೀರಿ. ನೀವು ಕಲಾಪ ನಡೆಸಿದ್ದಕ್ಕಿಂತ, ಮುಂದೂಡಿದ್ದೇ ಹೆಚ್ಚು. ಈ ಬಗ್ಗೆ ಏನು ಹೇಳುತ್ತೀರಿ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಓಂ ಬಿರ್ಲಾ ಪ್ರತಿಕ್ರಿಯೆ ನೀಡಲಿಲ್ಲ.

    “The proceedings of the House should be conducted without noise and without any disruptions.”
  • ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಲಾಭದಾಯಕವಾಗಿಸಬೇಕು

    ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಲಾಭದಾಯಕವಾಗಿಸಬೇಕು

    ಮೈಸೂರು :  ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಮುಚ್ಚುವುದು ಸಾಧ್ಯವಿಲ್ಲ. ಆದರೆ ಅದನ್ನು ಲಾಭದಾಯಕವಾಗಿಸಲು ಎಲ್ಲಾ ಪ್ರಯತ್ನಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಚರ್ಚೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಅವರು ಇಂದು ಜಿಲ್ಲಾಡಳಿತ ಮಂಡ್ಯ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಇವರ ವತಿಯಿಂದ ಆಯೋಜಿಸಲಾಗಿದ್ದ ಗಗನ ಚುಕ್ಕಿ ಜಲಪಾತೋತ್ಸವ -2025 ನ್ನು ಉದ್ಘಾಟಿಸಿ ಮಾತನಾಡಿದರು.

    ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಂಡ್ಯ ಸಕ್ಕರೆ ಕಾರ್ಖಾನೆಗೆ 113 ಕೋಟಿಗಳನ್ನು ಒದಗಿಸಲಾಗಿದೆ. ಅಧಿಕಾರಕ್ಕೆ ಬಂದ ಕೂಡಲೇ 50 ಕೋಟಿಗಳನ್ನು ಒದಗಿಸಿ, ನಂತರ 52 ಕೋಟಿ ರೂ.ಗಳನ್ನು ವಿದ್ಯುತ್ ಶಕ್ತಿಯ ಬಾಕಿ ಬಲ್ಲುಗಳನ್ನು ಮನ್ನಾ ಮಾಡಲಾಯಿತು. ಇದಲ್ಲದೆ 10 ಕೋಟಿ ಇವುಗಳನ್ನು ಒದಗಿಸಲಾಗಿದೆ. ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ನಷ್ಟವಿಲ್ಲದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು. ಇದಕ್ಕೆ ಅಗತ್ಯವಿರುವ ಬಾಯ್ಲಿಂಗ್ ಹೌಸ್ ವ್ಯವಸ್ಥೆಯನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

    ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಪ್ರಕೃತಿ ಸೌಂದರ್ಯವನ್ನು ಜನರು ಕಾಣಲು ಬರಬೇಕು ಎಂಬ ಉದ್ದೇಶದಿಂದ ಸರ್ಕಾರವೇ ಜಲಪಾತೋತ್ಸವವನ್ನು ಆಚರಿಸುತ್ತಾ ಬಂದಿದೆ. ಕರ್ನಾಟಕದಲ್ಲಿ ಅನೇಕ ನದಿಗಳಿವೆ. ಕಾವೇರಿ, ಕೃಷ್ಣಾ, ತುಂಗಭದ್ರೆ, ಶರಾವತಿ, ನದಿಗಳು ನಮ್ಮ ರಾಜ್ಯದ ಆರ್ಥಿಕತೆ ವೃದ್ಧಿಸಲು ಸಹಕಾರಿಯಾಗಿವೆ. ಗಗನಚುಕ್ಕಿ ಕಾವೇರಿ ನದಿ ಕವಲೊಡೆದು 300 ಅಡಿ ಎತ್ತರದಿಂದ ನೆಲಕ್ಕೆ ಬೀಳುತ್ತದೆ. ಇದು ಅತ್ಯಂತ ಸುಂದರ ಹಾಗೂ ಸೊಗಸಾದ ಪ್ರದೇಶವಾಗಿದ್ದು, ಇದು ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿದೆ.

    ಈ ವಾತಾವರಣವನ್ನು ಅನುಭವಿಸಲು ಹೆಚ್ಚು ಜನ ಬರಬೇಕು. ಇದಕ್ಕಾಗಿಯೇ ನಾವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಮಂಡ್ಯ ಜಿಲ್ಲೆಯಲ್ಲಿ 3200 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಬೇಕು ಹಾಗೂ ಮಹಿಳೆಯರೂ ಸ್ವಾವಲಂಬಿಗಳಾಗಬೇಕೆಂಬ ಕಾರಣದಿಂದ ಈ ಯೋಜನೆಗಳನ್ನು ಜಾರಿ ಮಾಡಿದೆ ಎಂದರು.

    ಪ್ರತಿಯೊಬ್ಬರೂ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿಯುತರಾದಾಗ ಮಾತ್ರ ಸ್ವಾತಂತ್ರ್ಯ ಬಂದದ್ದು ಸಾರ್ಥಕ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ತಿಳಿಸಿದ್ದಾರೆ. ಕಳೆದ ಬಾರಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಜನರಿಗೆ ನೀಡಿದ್ದ ಭರವಸೆಗಳನ್ನು ಬಹುತೇಕ ಪೂರೈಸಿದ್ದೇವೆ. 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿದೆ. ಈ ಬಾರಿ 492 ಭರವಸೆಗಳಲ್ಲಿ 242 ಭರವಸೆಗಳನ್ನು ಈಡೇರಿಸಲಾಗಿದೆ ಎಂದರು. ನಮ್ಮ ಸರ್ಕಾರ ಕೊಟ್ಟ ಮಾತನ್ನು ಉಳಿಸಿ ಕೊಂಡಿದೆ ಎಂದರು.

    ಮಂಡ್ಯ ಕೃಷಿ ಪ್ರಧಾನವಾದ ಜಿಲ್ಲೆ. ಕಾವೇರಿ ನದಿಯ ಕುರಿತು ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ ವ್ಯಾಜ್ಯ ಈಗ ಇಲ್ಲ. ಮಳೆ ಸರಿಯಾಗಿ ಆಗಿದ್ದರೆ ಮಾತ್ರ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಒದಗಿಸಬೇಕೆಂದು ತೀರ್ಮಾನವಾಗಿದೆ. ಮಳೆಯಾಗಿಲ್ಲದಿದ್ದರೆ ಸಂಕಷ್ಟ ಸೂತ್ರ ಜಾರಿಗೆ ಬಂದು, ಅದರಂತೆ ನೀರನ್ನು ಹಂಚಿಕೆ ಮಾಡಲಾಗುವುದು. ಮೇಕೆದಾಟು ಅಣೆಕಟ್ಟು ಯೋಜನೆಗೆ ತಮಿಳುನಾಡು ಏಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ರಾಜಕೀಯಕ್ಕಾಗಿ ಇದನ್ನು ಆಕ್ಷೇಪಿಸುತ್ತಿದ್ದಾರೆ. ರಾಜ್ಯವು 98 ಟಿಎಂಸಿ ನೀರನ್ನು ತಮಿಳುನಾಡಿಗೆ ಕೊಡಬೇಕಿತ್ತು. ಆದರೆ ಇಂದಿನವರೆಗೆ 221 ಟಿಎಂಸಿ ನೀರು ತಮಿಳುನಾಡಿಗೆ ಹೋಗಿದೆ. ನಾವು ಕೊಡಬೇಕಿದ್ದ ನೀರಿಗಿಂತಲೂ 122 ಟಿಎಂಸಿ ನೀರು ಹೆಚ್ಚಾಗಿ ಹರಿದು ಹೋಗಿದೆ. ಮಳೆ ಉತ್ತಮವಾಗಿಯಾದರೆ ನೀರನ್ನು ಕೊಟ್ಟೆ ಕೊಡುತ್ತೇವೆ ಎಂದರು.

    ಅದೃಷ್ಟವಶಾತ್ ಎರಡು ವರ್ಷವೂ ಒಳ್ಳೆ ಮಳೆಯಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ. ಈ ವರ್ಷ ವಿದ್ಯುತ್ ಅಭಾವ ಬರಲು ಸಾಧ್ಯವಿಲ್ಲ. ನಮಗೂ ತಮಿಳುನಾಡಿಗೂ ನೀರಿನ ವಿಷಯವಾಗಿ ವಿವಾದವೂ ಬರುವುದಿಲ್ಲ. ಮಳೆ ಸಕಾಲಕ್ಕೆ ಆದರೆ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.

    ಮೇಕೆದಾಟು ಯೋಜನೆ ಜಾರಿಗೆ ತರಲು ತಮಿಳುನಾಡು ಹಾಗೂ ಕೇಂದ್ರ ಸರ್ಕಾರ ತಕರಾರು ಮಾಡಬಾರದು. ಮೇಕೆದಾಟು ಅಣೆಕಟ್ಟಿನಿಂದ 66 ಟಿಎಂಸಿ ನೀರನ್ನು ಶೇಖರಣೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ತಮಿಳುನಾಡು ಹಾಗೂ ಕರ್ನಾಟಕಕ್ಕೂ ಉಪಯೋಗವಾಗುತ್ತದೆ. ಮಳೆ ಬಾರದಿದ್ದಾಗ ತಮಿಳುನಾಡಿಗೆ ನೀರನ್ನು ಹರಿಸಲು ಮತ್ತು ಮಳೆ ಬಾರದೇ ಹೋದಾಗ ಮಳೆ ನೀರನ್ನು ಸಂಗ್ರಹ ಮಾಡಲು ಅನುಕೂಲವಾಗಲಿದೆ ಎಂದರು.

    ಗಗನಚುಕ್ಕಿ ಜಲಪಾತ ಅಭಿವೃದ್ಧಿಗೆ 6 ಕೋಟಿ ವೆಚ್ಚ ಮಾಡಲಾಗಿದೆ. ಜನ ಕೋಟಿ ನೋಡಲು ಆಸನಗಳ ವ್ಯವಸ್ಥೆ ಮಾಡಲಾಗಿದೆ.ಹೆಚ್ಚಿನ ಜನರು ಜಲಪಾತ ವೀಕ್ಷಿಸಲು ಬರಬೇಕು. ಕಳೆದ ಮೂರು ವರ್ಷಗಳಲ್ಲಿ 22 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದರು. ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದರು. ಶಿವನಸಮುದ್ರ ಜಲಾಶಯದಲ್ಲಿ 1902 ರಲ್ಲಿ ಏಷ್ಯಾದಲ್ಲಿಯೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆ ಮಾಡಿದ ಕೇಂದ್ರ ಎಂಬ ಹೆಗ್ಗಳಿಕೆ ನಮ್ಮದು. ರಾಜ್ಯ ಇಂದು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದರೆ ಅದಕ್ಕೆ ಶಿವನಸಮುದ್ರ ಮೂಲಕ ಕಾರಣ ಎಂದರು.

    ಪ್ರಸ್ತುತ ಕರ್ನಾಟಕಕ್ಕೆ ಅಗತ್ಯವಿರುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಅದನ್ನು ಬಳಸಿಕೊಳ್ಳುವ ಕೆಲಸವೂ ಆಗುತ್ತಿದೆ. ವಿದ್ಯುತ್ ಉತ್ಪಾದಿಸಿ ರೈತರಿಗೆ ಉಪಯೋಗವಾಗುವ ಕೆಲಸವಾಗುತ್ತಿದೆ ಎಂದರು. ಈ ವರ್ಷ ಸುಮಾರು 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಬಿತ್ತನೆ ಆಗಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಳೆ ಯಿಂದ ಬೆಳೆ ಹಾನಿಯಾಗಿದೆ. ಅವೆಲ್ಲಕ್ಕೂ ಕೂಡಾ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

    ಈಗಾಗಲೇ ಮಳೆಯಿಂದ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ, ಜಾನುವಾರು ಪ್ರಾಣ ಹಾನಿಗೆ, ಮನೆಗಳನ್ನು ಕಳೆದುಕೊಂಡವರಿಗೆ ಜಿಲ್ಲಾಡಳಿತದಿಂದ ಪರಿಹಾರ ಕೊಡಲಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಭೆ ನಡೆಸಿ, ಇನ್ನು ಹತ್ತು ದಿನಗಳಲ್ಲಿ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ .‌ ವರದಿ ಆಧರಿಸಿ ಆದಷ್ಟು ಬೇಗನೆ ಬೆಳೆ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

    ಪರಿಹಾರ ನೀಡಲು ಸರ್ಕಾರದಲ್ಲಿ ಹಣದ ಕೊರತೆಯಿಲ್ಲ. ಆದರೂ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದಲ್ಲಿ ದುಡ್ಡಿಲ್ಲ, ಅಭಿವೃದ್ಧಿ ಕಾರ್ಯಗಳಿಗೆ ದುಡ್ಡಿಲ್ಲ ಎಂದು ವಿರೋಧ ಪಕ್ಷದವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗಾಗಿ ಇದುವರೆಗೆ ಸರ್ಕಾರ 99 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ. ಶೀಘ್ರದಲ್ಲೇ 1ಲಕ್ಷ ಕೋಟಿ ರೂಪಾಯಿಗಳನ್ನು ಮುಟ್ಟುತ್ತೇವೆ. ಅಭಿವೃದ್ಧಿ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಾದ ಅನುದಾನ ಸರ್ಕಾರದಲ್ಲಿ ಲಭ್ಯವಿದೆ ಎಂದು ಸ್ಪಷ್ಟಪಡಿಸಿದರು.

    ವಿರೋಧ ಪಕ್ಷದವರ ಸುಳ್ಳು ಪ್ರಚಾರದಲ್ಲಿ, ಆಪಾದನೆಗಳಲ್ಲಿ ಯಾವುದೇ ಹುರುಳಿಲ್ಲ, ಸುಳ್ಳು ಸುದ್ದಿಗಳನ್ನು ಹೇಳಿ ಜನರನ್ನು ಪ್ರಚೋದಿಸಿ ಸಮಾಜದಲ್ಲಿ ಶಾಂತಿಯನ್ನು ಕದಡುವುದೇ ಅವರ ಕೆಲಸ . ಜನರು ಇದಕ್ಕೆ ಅವಕಾಶ ನೀಡದೆ ಅವರು ಮಾತುಗಳಿಗೆ ಕಿವಿಗೊಡುವುದು ಬೇಡ ಎಂದರು. ಸಮಾಜದಲ್ಲಿ ಜಾತಿ, ಧರ್ಮಗಳನ್ನು ಒಡೆಯುವುದು, ಜನರನ್ನು ಎತ್ತಿ ಕಟ್ಟುವುದು ವಿರೋಧಪಕ್ಷದ ಕೆಲಸ. ಕುವೆಂಪು ಹೇಳಿದ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ನಾವೆಲ್ಲರೂ ಮನುಷ್ಯರಾಗಿ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಬಾಳಬೇಕು ಹಾಗೂ ಸಮಾಜ ಒಡೆಯುವ ಶಕ್ತಿಗಳಿಂದ ದೂರ ಇರಬೇಕು ಎಂದರು.

    ಕಳೆದ ಲೋಕಸಭಾ ಚುನಾವಣೆಯಿಂದ ಜೆಡಿಎಸ್ ಪಕ್ಷವು, ಬಿಜೆಪಿಯೊಂದಿಗೆ ಸೇರಿ ಬಿಟ್ಟಿದೆ. ಮುಂದೆ ಅದೇ ಪಕ್ಷದೊಂದಿಗೆ ಸೇರಿ ಹೋದರೂ ಆಶ್ಚರ್ಯವಿಲ್ಲ. ಕೇವಲ ಕಾಂಗ್ರೆಸ್ ಸರ್ಕಾರ ಮಾತ್ರ ಸಾಂವಿಧಾನಿಕ ಮೌಲ್ಯಗಳಲ್ಲಿ ನಂಬಿಕೆ ಇಟ್ಟು ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು ಶ್ರಮಿಸುತ್ತಿದೆ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸೌಹಾರ್ದತೆಯನ್ನು ಪ್ರತಿಪಾದಿಸುತ್ತಿದೆ ಎಂದರು.

    ದ್ವೇಷ ಸಮಾಜವನ್ನು ಒಡೆಯುತ್ತದೆ, ಪ್ರೀತಿ ಮನಸುಗಳನ್ನು ಬೆಸೆಯುತ್ತದೆ. ಪರಧರ್ಮ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು . ಆಗ ಮಾತ್ರ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣಲು ಸಾಧ್ಯ ಎಂದರು. ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವರಾದ ಚೆಲುವರಾಯಸ್ವಾಮಿ, ಶಾಸಕರಾದ ಪಿ. ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿ ಸಿದ್ದೇಗೌಡ, ರವಿ ಗಣಿಗ, ಮಂಜುನಾಥ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಂದ್ರಮ್ಮ ಮೊದಲಾದವರು ಉಪಸ್ಥಿತರಿದ್ದರು.

    Mandya Sugar Factory should be made profitable

  • ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕ್ಯಾಂಟರ್‌ ಡಿಕ್ಕಿ-9 ಮಂದಿ ಮೃತ

    ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕ್ಯಾಂಟರ್‌ ಡಿಕ್ಕಿ-9 ಮಂದಿ ಮೃತ

    ಹಾಸನ: ತಾಲ್ಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕ್ಯಾಂಟರ್‌ ನುಗ್ಗಿದ್ದು, 8 ಮಂದಿ ಮೃತ ಪಟ್ಟಿದ್ದಾರೆ. ‘25ಕ್ಕೂ ಹೆಚ್ಚು ಮಂದಿ ಗಾಯ ಗೊಂಡಿದ್ದಾರೆ. ‘ಮೃತರ ಸಂಖ್ಯೆ ಹೆಚ್ಚಾಗಬಹುದು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

    ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಮೆರವಣಿಗೆ ಸಾಗುತ್ತಿರುವಾಗ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಕ್ಯಾಂಟರ್‌ಗೆ ಅಡ್ಡ ಬಂದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿದ ಕ್ಯಾಂಟರ್‌, ಮೆರವಣಿಗೆ ಮೇಲೆ ಎರಗಿ ಅಪಘಾತವಾಗಿದೆ.

    ಗಾಯಾಳುಗಳನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಐವರ ಸ್ಥಿತಿ ಗಂ‌ಭೀರವಾಗಿದೆ. ಅಪಘಾತದಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಅಪಘಾತದಿಂದಾಗಿ ಸ್ಥಳದಲ್ಲಿ ಗೊಂದಲ ಏರ್ಪಟ್ಟಿತ್ತು.

    ಸ್ಥಳಕ್ಕೆ ಭೇಟಿ ನೀಡಿದ ಸಂಸದ ಶ್ರೇಯಸ್ ಪಟೇಲ‌್ ಮಾತನಾಡಿ, ‘ಇದೊಂದು ದುರದೃಷ್ಟಕರ ಘಟನೆ. ನಡೆಯಬಾರದಿತ್ತು. ಸೂಕ್ತ ತನಿಖೆಯ ನಂತರ ಸ್ಪಷ್ಟ ಕಾರಣ ತಿಳಿಯಲಿದೆ’ ಎಂದರು.

    ಮೃತರ ಕುಟುಂಬ ಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್‌’ನಲ್ಲಿ ಪ್ರಕಟಿಸಿ ದ್ದಾರೆ. ‘ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ’ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಲತಾಕುಮಾರಿ, ಎಸ್‌ಪಿ ಮೊಹಮ್ಮದ್‌ ಸುಜೀತಾ ಭೇಟಿ ನೀಡಿದ್ದಾರೆ. ಕ್ಯಾಂಟರ್‌ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ.

    Canter hits Ganesh immersion procession, 9 dead

  • ಆದಿವಾಸಿ ಸಮುದಾಯಗಳ 6,856 ವಸತಿ ರಹಿತ ಕುಟುಂಬಗಳಿಗೆ ಗೃಹಭಾಗ್ಯ

    ಆದಿವಾಸಿ ಸಮುದಾಯಗಳ 6,856 ವಸತಿ ರಹಿತ ಕುಟುಂಬಗಳಿಗೆ ಗೃಹಭಾಗ್ಯ

    ಬೆಂಗಳೂರು: ಅರಣ್ಯ ಮತ್ತು ಅರಣ್ಯಾಧಾರಿತ ಆದಿವಾಸಿ ಸಮುದಾಯಗಳ 6,856 ವಸತಿ ರಹಿತ ಕುಟುಂಬಗಳಿಗೆ ‘ಮುಖ್ಯಮಂತ್ರಿ ಆದಿವಾಸಿ ಗೃಹಭಾಗ್ಯ ಯೋಜನೆ’ಯಡಿ ಮನೆಗಳನ್ನು ನಿರ್ಮಿಸಿಕೊಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

    ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಗುರುವಾರ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

    ಇದಕ್ಕಾಗಿ ₹160 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ. ಪ್ರತಿ ಮನೆಯನ್ನು ₹4.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು. ಸೋಲಿಗ, ಹಸಲ, ಗೌಡ್ಲು, ಸಿದ್ದಿ, ಕುಡಿಯ, ಮಲೆಕುಡಿಯ, ಕಾಡು ಕುರುಬ, ಇರುಳಿಗ, ಬೆಟ್ಟ ಕುರುಬ, ಯರವ, ಪಣಿಯನ್ ಮತ್ತಿತರ ಸಮುದಾಯಗಳಿಗೆ ಈ ಸೌಲಭ್ಯ ಸಿಗಲಿದೆ ಎಂದು ಅವರು ಹೇಳಿದರು.

    ನಿಯಮ ಸರಳೀಕರಣ: ‘ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳ ತಿದ್ದುಪಡಿ’ಗೆ ಒಪ್ಪಿಗೆ ನೀಡಲಾಗಿದೆ.

    ಈ ತಿದ್ದುಪಡಿಯಿಂದಾಗಿ ಭೂಮಿಯನ್ನು ಸಮತಟ್ಟು ಮಾಡುವಾಗ, ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡುವಾಗ, ಕೆರೆಗಳಲ್ಲಿ ಹೂಳು ತೆಗೆಯುವಾಗ, ಕೃಷಿ ಮತ್ತು ಮೀನುಗಾರಿಕೆ ಹೊಂಡ ಗಳ ನಿರ್ಮಾಣ ವೇಳೆ ದೊರೆಯುವ ಮರಳು, ಮತ್ತಿತರ ಉಪಖನಿಜಗಳನ್ನು ಬಳಕೆ ಮಾಡಿದ ನಂತರ ಉಳಿದದ್ದನ್ನು ಸಾಗಣೆಗೆ ಅವಕಾಶ ನೀಡಲಾಗುವುದು. ರಾಜಧನ ಮತ್ತು ಇತರ ಪಾವತಿಗಳಲ್ಲಿ ಸೋರಿಕೆ ಆಗುವುದನ್ನು ತಡೆಯಲು ನಿಯಮ ಸರಳೀಕರಣ ಮಾಡಲಾಗಿದೆ.

    ಪ್ರಮುಖ ತೀರ್ಮಾನಗಳು:

    lಸರ್ಕಾರಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿ ಹೆಸರು ಮುದ್ರಿಸುವ ಮತ್ತು ವೇದಿಕೆ ಮೇಲೆ ಆಸೀನರಾಗುವ ಗಣ್ಯರ ಹೆಸರುಗಳನ್ನು 9 ಅಥವಾ 9 ಕ್ಕೆ ಮೀರದಂತೆ, ಅನಿವಾರ್ಯ ಸಂದರ್ಭದಲ್ಲಿ 13ಕ್ಕೆ ಮೀರದಂತೆ ಆಯ್ಕೆ ಮಾಡಲು ಶಿಷ್ಟಾಚಾರದ ಮಾರ್ಗಸೂಚಿ ಪರಿಷ್ಕರಣೆ. ಕಾರ್ಯಕ್ರಮದಲ್ಲಿ ಹಾಜರಾಗುವವರ ಹೆಸರನ್ನು ಆಹ್ವಾನಪತ್ರದಲ್ಲಿ ಪ್ರಕಟಿಸಬೇಕು. ಆಹ್ವಾನಿತರಲ್ಲದವರು ವೇದಿಕೆ ಏರಬಾರದು

    lಮಾಲೂರು, ಮಾಗಡಿ, ಕುಶಾಲನಗರ, ಕೊರಟಗೆರೆ, ಜಗಳೂರು, ಸವಣೂರು, ರಾಮದುರ್ಗ ಮತ್ತು ಸವದತ್ತಿ ತಾಲ್ಲೂಕು ಮಟ್ಟದ ಆಸ್ಪತ್ರೆಗಳನ್ನು, ದಾವಣಗೆರೆ ಜಿಲ್ಲಾ ಆಸ್ಪತ್ರೆ,ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗಳ ನವೀಕರಣಕ್ಕೆ ₹542 ಕೋಟಿ

    lಸಂಚಾರಿ ಆರೋಗ್ಯ ಘಟಕಗಳನ್ನು ದುರಸ್ತಿಗೊಳಿಸಿ ಹೊಸದಾಗಿ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿ, ಈ ವಾಹನಗಳನ್ನು ಕನೆಕ್ಟೆಡ್‌ ಹೆಲ್ತ್‌ ಇಕೋ–ಸಿಸ್ಟಮ್‌ ಘಟಕಗಳಾಗಿ ಪರಿವರ್ತಿಸಲಾಗುವುದು. ಇದಕ್ಕಾಗಿ ₹12.25 ಕೋಟಿ. ವಾಹನಗಳ ವಾರ್ಷಿಕ ನಿರ್ವಹಣೆಗಾಗಿ ₹14.70 ಕೋಟಿ

    lಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ಸುಂಕ ಸಂಗ್ರಹಣೆಯನ್ನು ಹೆಚ್ಚಿಸಲು ಲೇಬರ್ ಸೆಸ್‌ ಟ್ರ್ಯಾಕಿಂಗ್‌ ಅಂಡ್ ಮಾನಿಟರಿಂಗ್ ಸಿಸ್ಟಮ್‌ ಸಾಫ್ಟ್‌ವೇರ್ ಎಂಬ ನೂತನ ತಂತ್ರಾಂಶ ಅಭಿವೃದ್ಧಿಪಡಿಸಲು ₹28.19 ಕೋಟಿ. ಸುಂಕ ಮೊತ್ತವನ್ನು ಸರಿಯಾಗಿ ಸಂಗ್ರಹಿಸಲು ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುವುದು

    lಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ 2.0 (ಕೆ.ಜಿಐಎಸ್‌ 2.0) ಅನ್ನು ಅನುಷ್ಠಾನಗೊಳಿಸಲು  ₹150 ಕೋಟಿ. ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ವತಿಯಿಂದ ಇದನ್ನು ಅನುಷ್ಠಾನಗೊಳಿಸಲಾಗುವುದು. ದತ್ತಾಂಶ ಸಂಗ್ರಹ ಸ್ಥಳ, ಹೋಸ್ಟಿಂಗ್‌ ಮೂಲ ಸೌಕರ್ಯ ಮತ್ತು ಅದರ ಭದ್ರತೆ ಕೈಗೊಳ್ಳಲಾಗುವುದು. ಡ್ರೋನ್‌ ಮತ್ತು ಉಪಗ್ರಹ ಸೆರೆ ಹಿಡಿದ ಚಿತ್ರಗಳನ್ನು ಸ್ವಯಂ ಚಾಲಿತವಾಗಿ ಅಳವಡಿಸಿಕೊಳ್ಳುತ್ತದೆ

    lಬಯೋ ಡೀಸೆಲ್‌(ಬಿ–100) ಅನ್ನು ಹೈ ಸ್ಪೀಡ್‌ ಡೀಸೆಲ್‌ನೊಂದಿಗೆ ಮಿಶ್ರಣ ಮಾಡುವ (ಪರವಾನಗಿ) ಆದೇಶ 2025 ಕರಡು ಅಧಿಸೂಚನೆಗೆ ಅನುಮೋದನೆ

    lಪಿಎಂ ಕುಸುಮ್‌–ಬಿ ಯೋಜನೆಯಡಿ ನೆಟ್‌ವರ್ಕ್‌ ಗ್ರಿಡ್‌ನಿಂದ ಎಷ್ಟೇ ದೂರದಲ್ಲಿದ್ದರೂ ಸೋಲಾರ್‌ ಪಂಪ್‌ಸೆಟ್‌ಗಳಿಗೆ ಅದರ ವೆಚ್ಚದ ಶೇ 50 ರಷ್ಟು ಮೊತ್ತವನ್ನು ಸಹಾಯಧನ ನೀಡಲು ತೀರ್ಮಾನ.  ಇದರಿಂದ ರೈತರ ಬೆಳೆಗಳಿಗೆ ಹಗಲು ನೀರು ನೀಡಬೇಕು ಎಂಬ ಬೇಡಿಕೆ ಈಡೇರಲಿದೆ

    6,856 homeless families from tribal communities get housing