October 26, 2025
Suddigaralive News
Uncategorized

ನಾಡು-ನುಡಿ ಕಟ್ಟುವಲ್ಲಿ ಹೋರಾಟ ಮತ್ತು ಸಂಘಟನೆಯೂ ಮುಖ್ಯ

ಚಿಕ್ಕಮಗಳೂರು: ನಾಡು-ನುಡಿ ಕಟ್ಟುವಲ್ಲಿ ಸಾಹಿತ್ಯ ರಚನೆಯಷ್ಟೇ, ಹೋರಾಟ ಮತ್ತು ಸಂಘಟನೆಯೂ ಮುಖ್ಯ ಎಂದು ಸಾಹಿತಿ ಡಾ. ಬೆಳವಾಡಿ ಮಂಜುನಾಥ ಹೇಳಿದರು.

ಕರ್ನಾಟಕ ವಿಕಾಸ ರಂಗದ ಜಿಲ್ಲಾ ಘಟಕ ನಗರದ ರಾಮನಹಳ್ಳಿಯ ಗುರುವೇಶ್ ಅವರ ಮನೆಯಂಗಳದಲ್ಲಿ ಶನಿವಾರ ಏರ್ಪಡಿಸಿದ್ದ ಕನ್ನಡಕ್ಕಾಗಿ ದುಡಿದವರು ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಭಾಷೆಯನ್ನು ಉಳಿಸಿಕೊಳ್ಳುವುದು ಎಂದರೆ ಅದರ ಬಳಕೆ ಮತ್ತು ಅದಕ್ಕೆ ಧಕ್ಕೆಯಾದಾಗ ಹೋರಾಟ ಮಾಡಿ ರಕ್ಷಿಸುವುದಾಗಿದೆ. ಅದಕ್ಕೆ ಪೂರಕವಾದುದು ಸಂಘಟನೆ. ಅದರಿಂದ ಸಂಸ್ಕೃತಿಯೂ ಉಳಿಯುತ್ತದೆ. ಇಂಥ ಕಾರ್ಯಗಳು ಎಲ್ಲಾ ಸ್ತರದ ಜನರಿಂದ ಸಾಧ್ಯವಾಗುವಂಥದ್ದು. ಇದರಲ್ಲಿ ಶ್ರೀಸಾಮಾನ್ಯರ ಪಾತ್ರವೇ ಮಹತ್ವದ್ದು ಎಂದರು.

ಸಾಹಿತ್ಯ ರಚನೆ ಬೌದ್ಧಿಕ ಕೆಲಸವಾದರೆ, ಸಂಘಟನೆ ಮತ್ತು ಹೋರಾಟ ಭೌತಿಕ ಕೆಲಸ. ಇದರಲ್ಲಿ ಸಮೂಹ ಪ್ರಜ್ಞೆ ಕ್ರಿಯಾಶೀಲವಾಗಿ ನಾಯಕತ್ವ ಮತ್ತು ಕಟ್ಟಾಳುಗಳನ್ನು ಬಯಸುತ್ತದೆ. ನಮ್ಮಲ್ಲಿ ಹಲವು ಬಗೆಯ ಚಳವಳಿಗಳು ನಡೆದಿವೆ. ಭಾಷಾವಾರು ಪ್ರಾಂತ್ಯ ವಿಂಗಡಣೆಯಿಂದ ಮೊದಲ್ಗೊಂಡು ಕರ್ನಾಟಕ ಏಕೀಕರಣದವರಗಿನ ಹೋರಾಟ ಒಂದು ಬಗೆಯದಾದರೆ ಅನಂತರದ್ದು ಮತ್ತೊಂದು ಬಗೆಯದು. ಅದರಲ್ಲಿ ಗಡಿ, ಜಲ ಮತ್ತು ಭಾಷೆ ಪ್ರಾಮುಖ್ಯವನ್ನು ಕುರಿತ ಆಂದೋಲನಗಳೇ ಹೆಚ್ಚು ಎಂದು ತಿಳಿಸಿದರು.

ಗುರುವೇಶ್ ಬೀದಿಗಿಳಿದು ಹೋರಾಡುವುದರಿಂದ ಹಿಡಿದು ಅನುಸಂಧಾನದವರೆಗೂ ಕನ್ನಡಕ್ಕಾಗಿ ಶ್ರಮಿಸಿದವರು. ಇದಕ್ಕೆ ಗೋಕಾಕ್ ಚಳವಳಿ, ತ್ರಿಭಾಷಾ ಸೂತ್ರದ ಹೇರಿಕೆ, ಕಾವೇರಿ ವಿವಾದಗಳೇ ಸಾಕ್ಷಿಯಾಗಿವೆ. ಕಾರ್ಯಕ್ರಮಗಳಲ್ಲಿ ತೋರಣ ಕಟ್ಟುವುದು, ಆಹಾರ ತಯಾರಿಕೆ, ವಿತರಣೆ, ಅತಿಥಿ ಸತ್ಕಾರದ ಹೊಣೆ ಹೊತ್ತು ನಿಸ್ವಾರ್ಥವಾಗಿ ದುಡಿಯುತ್ತಿರುವ ನುಡಿಸೇವಕ ಗುರುವೇಶ್ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ವಿಕಾಸ ರಂಗದ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್, ಸಾಹಿತ್ಯ ಮತ್ತು ಸಾಹಿತಿ ಹಾಗೂ ಭಾಷೆಯ ಬೆಳವಣಿಗೆಯಲ್ಲಿ ಸಂಘಟಕರು ಕನ್ನಡದ ಕಟ್ಟಾಳುವಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಕರ್ನಾಟಕ ವಿಕಾಸ ರಂಗ ಕನ್ನಡ ಕಟ್ಟುವಲ್ಲಿ ಅದನ್ನು ಉಳಿಸಿ ಬೆಳೆಸುವಲ್ಲಿ ದುಡಿದವರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಕನ್ನಡದ ಕೆಲಸಗಳಲ್ಲಿ ನಿರಂತರವಾಗಿ ದುಡಿದ ಹಿನ್ನೆಲೆಯಲ್ಲಿ ಗುರುವೇಶ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಲೇಖಕ ಡಿ.ಎಂ. ಮಂಜುನಾಥ ಸ್ವಾಮಿ ಗುರುವೇಶ್ ಅವರೊಂದಿಗೆ ಸಂವಾದ ನಡೆಸಿದರು.

ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್. ನಿವೃತ್ತ ಉಪನ್ಯಾಸಕ ಗಫಾರ್‌ಬೇಗ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಅಧ್ಯಕ್ಷ ದಯಾನಂದ, ಪ್ರಶಾಂತಿ ಕುವೇಲೊ ಉಪಸ್ಥಿತರಿದ್ದರು.

Lecture program on the topic of those who worked for Kannada

 

Related posts

Requirements Traceability Matrix Rtm

Team Suddigara

ಭಯೋತ್ಪಾದಕ ದಾಳಿ ಖಂಡಿಸಿ ವಂದೇ ಮಾತರಂ ಟ್ರಸ್ಟ್ ಆಶ್ರಯದಲ್ಲಿ ಮೇಣದಬತ್ತಿ ಮೆರವಣಿಗೆ

Team Suddigara

Step-by-Step Guide for Filling Out the 2024 W-4 Form

Team Suddigara

Leave a Comment

[t4b-ticker] [t4b-ticker]