ಚಿಕ್ಕಮಗಳೂರು: ಸರ್ಕಾರಿ ಕರ್ತವ್ಯದ ಒತ್ತಡಗಳನ್ನು ಮರೆತು ಕ್ರೀಡೆಯಲ್ಲಿ ಭಾಗವಹಿಸಿದಾಗ ಮಾನಸಿಕ ಮತ್ತು ದೈಹಿಕ ಸದೃಢತೆಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್ ಮೀನಾನಾಗರಾಜ್ ಕ್ರೀಡಾಪಟುಗಳಿಗೆ ತಿಳಿಸಿದರು.
ಅವರು ಇಂದು ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ ಏರ್ಪಡಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ೨೦೨೪-೨೫ ನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ನಡೆಯುತ್ತಿರುವ ಕ್ರೀಡಾಕೂಟದಲ್ಲಿ ತುಂಬಾ ಉತ್ಸಾಹದಿಂದ ಭಾಗವಹಿಸಿರುವ ಕ್ರೀಡಾಪಟುಗಳು ವರ್ಷವಿಡೀ ಇಲಾಖೆಗಳಲ್ಲಿ ನಡೆಯುವ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕರೆನೀಡಿದ ಅವರು ಎರಡುದಿನ ಒಟ್ಟಾಗಿ ಸೇರಿ ಕ್ರೀಡಾಕೂಟದಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಎಂದು ಶುಭ ಹಾರೈಸಿದರು.
ಕಳೆದ ಬಾರಿ ಆರ್ಡಿಬಿಆರ್ ಕ್ರೀಡಾಕೂಟ ಅತ್ಯಂತ ಅದ್ದೂರಿಯಾಗಿ ನಡೆದಿತ್ತು, ಈ ಬಾರಿ ಅದಕ್ಕಿಂತ ಹೆಚ್ಚು ಉತ್ಸಾಹದಿಂದ ಭಾಗವಹಿಸಿದ್ದೀರಿ, ಸರ್ಕಾರಿ ಸೇವೆಯಲ್ಲಿ ಇರುವವರು ಇಷ್ಟು ದೊಡ್ಡ ಮಟ್ಟದಲ್ಲಿ ಕ್ರೀಡಾಪಟುಗಳು ಇದ್ದಾರೆಂದು ಭಾವಿಸಿರಲಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್ ಕೀರ್ತನ ಮಾತನಾಡಿ, ಕಳೆದ ವರ್ಷ ಸಿಇಓ ಗೋಪಾಲಕೃಷ್ಣ ಅವರು ಹಾಕಿಕೊಟ್ಟ ಈ ಕ್ರೀಡಾಕೂಟ ಇಂದು ಅವರ ಮಾರ್ಗದರ್ಶನದಲ್ಲಿ ಸಾಗುತ್ತಿದ್ದೇವೆ. ಇದರ ಯಶಸ್ವಿಗೆ ಶಕ್ತಿಮೀರಿ ಶ್ರಮಿಸಬೇಕೆಂದು ಹೇಳಿದರು.
ಸರ್ಕಾರಿ ಕೆಲಸಕಾರ್ಯಗಳ ಒತ್ತಡವನ್ನು ಮರೆತು ತುಂಬಾ ಸಂತೋಷದಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಯಗಳಿಸಿ ಎಂದು ಶುಭ ಹಾರೈಸಿದರು. ಕ್ರೀಡಾಕೂಟವನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ ಮಾತನಾಡಿ, ಕ್ರೀಡಾಕೂಟಗಳು ಒಂದು ತಂಡದ ಕ್ರಿಯಾಶೀಲ ಚಟುವಟಿಕೆಗೆ ಪೂರಕವಾಗಿದ್ದು, ಈ ಸಂದರ್ಭದಲ್ಲಿ ಮಕ್ಕಳ ಮನಸ್ಸಿನ ರೀತಿ ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಕಿವಿಮಾತು ಹೇಳಿದರು.
ಕ್ರೀಡೆಯಲ್ಲಿ ಮಾತ್ರ ಆಸಕ್ತಿಯಿಂದ ಸ್ಪರ್ಧೆ ಮಾಡಬೇಕು, ಬೇರೆಯವರ ಬಗ್ಗೆ ಗಮನಹರಿಸದೆ ಎಲ್ಲರೂ ಸೇರಿ ಒಟ್ಟಿಗೆ ಕೆಲಸ ಮಾಡಲು ತಂಡ ಬೇಕು. ಅದಕ್ಕಾಗಿ ಈ ಕ್ರೀಡಾಕೂಟವನ್ನು ಆಯೋಜಿಸಿದ್ದಾರೆ ಎಂದರು.
ಇದೇ ಸ್ಪೂರ್ತಿಯಿಂದ ಆಟ ಆಡಿ ಜಿಲ್ಲೆ, ತಾಲ್ಲೂಕು, ಹೋಬಳಿಗಳಿಗೆ ಹೆಸರು ಕೀರ್ತಿ ತನ್ನಿ ಎಂದು ಆಶಿಸುತ್ತ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿ.ಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಕೃಷ್ಣನಾಯಕ್.ಹೆಚ್, ಉಪ ಕಾರ್ಯದರ್ಶಿ(ಆಡಳಿತ) ಕೋರವರ್ ಎಸ್.ಜಿ, ಮುಖ್ಯ ಲೆಕ್ಕಾಧಿಕಾರಿ ಶಿವಕುಮಾರ್, ಮುಖ್ಯ ಯೋಜನಾಧಿಕಾರಿ ರಾಜಗೋಪಾಲ್ ಟಿ.ಆರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಂಜುನಾಥ್.ಎನ್, ಯೋಜನಾ ನಿರ್ದೇಶಕರಾದ ನಯನ ಮತ್ತಿತರರು ಉಪಸ್ಥಿತರಿದ್ದರು.
ಮೊದಲಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ಯೋಗೀಶ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
Rural Development and Panchayat Raj Sports Meet
