ಚಿಕ್ಕಮಗಳೂರು: ಉದ್ಯೋಗ ಕಾಯಂ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟು ಹೊರಗುತ್ತಿಗೆ ಪೌರನೌಕರರು ನಡೆಸುತ್ತಿರುವ ಅರ್ನಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ನಗರವೆಲ್ಲ ಗಬ್ಬೆದ್ದು ಕೊಳಕಾಗುತ್ತಿದೆ.
ಸಂತೆ ಮೈದಾನ, ಎಪಿಎಂಸಿ ಯಾರ್ಡ್, ಮೀನು ಮಾರುಕಟ್ಟೆ, ದಿನನಿತ್ಯ ಕಸ ಸಂಗ್ರಹ ಮಾಡುತ್ತಿದ್ದ ಕಸ ಸಂಗ್ರಹ ಪಾಯಿಂಟ್ಗಳಲ್ಲಿ ರಾಶಿರಾಶಿ ಕಸ ಬಿದ್ದಿದ್ದು, ಜಿಲ್ಲಾ ಶಕ್ತಿ ಕೇಂದ್ರವಾದ ಜಿಲ್ಲಾಧಿಕಾರಿಗಳ ಕಚೇರಿ ಆವರಣವನ್ನು ಎರಡು ದಿನದಿಂದ ಸ್ವಚ್ಚಗೊಳಿಸದ ಹಿನ್ನೆಲೆಯಲ್ಲಿ ಕಸ ಕಡ್ಡಿಯಿಂದ ಕಚೇರಿ ಪಾಳುಬಿದ್ದ ಬಂಗಲೆಯಂತೆ ಕಾಣುತ್ತಿದೆ.
ನೀರುಗಂಟಿಗಳ ಹೊರತುಪಡಿಸಿ ಉಳಿದಂತೆ ಕಸ ಗುಡಿಸುವವರು, ಕಸ ಲೋಡ್ ಮಾಡುವವರು ಸೇರಿದಂತೆ ಹೊರಗುತ್ತಿಗೆ ನೌಕರರೆಲ್ಲರೂ ಮುಷ್ಕರದಲ್ಲಿ ಪಾಲ್ಗೊಂಡಿರುವುದರಿಂದ ನಗರ ಸ್ವಚ್ಛತೆ ಮಾಡುವವರಿಲ್ಲದೆ ಇಡೀ ನಗರ ಸ್ಮಶಾನ ಸದೃಶ್ಯವಾಗಿದೆ.
ಎಲ್ಲೆಂದರಲ್ಲಿ ಕಸದ ರಾಶಿ, ರಾಶಿ ತುಂಬಾ ಹಂದಿ, ನಾಯಿಗಳ ಹಿಂಡು, ಜಾನುವಾರುಗಳು ಪ್ಲಾಸ್ಟಿಕ್ ಮತ್ತಿತರೆ ವಸ್ತುಗಳನ್ನು ಮೆಲ್ಲುತ್ತಿರುವ ದೃಶ್ಯ ಕಾಣಸಿಗುತ್ತಿದೆ. ನಗರದ ಸಂತೆ ಮಾಳದಲ್ಲಿ ಸಂತೆ ನಂತರ ವ್ಯಾಪಾರಿಗಳು ಬಿಟ್ಟುಹೋದ ತರಕಾರಿ ಗುಡ್ಡೆಗಳು, ಟೊಮೆಟೋ ಮತ್ತಿತರೆ ತ್ಯಾಜ್ಯಗಳು ಸಂತೆ ಆವರಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು ಸುತ್ತುಮುತ್ತಲು ಇರುವ ಜನವಸತಿ ಪ್ರದೇಶದ ಜನ ಮೂಗು ಮುಚ್ಚಿ ತಿರುಗುವಂತಾಗಿದೆ.
ಮಾರ್ಕೆಟ್ ರಸ್ತೆ ಮೀನು ಮಾರುಕಟ್ಟೆಯಂತೂ ಗಬ್ಬೆದ್ದು ನಾರುತ್ತಿದೆ. ನಗರದ ಹೃದಯ ಭಾಗವಾದ ತೊಗರಿಹಂಕಲ್ ವೃತ್ತದಲ್ಲಿ ಕಸದ ರಾಶಿ ಪ್ರಯಾಣಿಕರು ಹಾಗೂ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ.
ವಿಧಾನ ಪರಿಷತ್ ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ ಅವರ ಮನೆ ಆವರಣದಲ್ಲಿ ಕಸದ ರಾಶಿ ಬಿದ್ದಿದೆ. ಇದಲ್ಲದೆ ನಗರದಲ್ಲಿ ದಿನನಿತ್ಯ ಕಸ ಸಂಗ್ರಹಿಸಿ ನಂತರ ಎತ್ತುವಳಿ ಮಾಡುತ್ತಿದ್ದ ಕಸದ ಪಾಯಿಂಟ್ಗಳಲ್ಲಿ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ಒಟ್ಟಾರೆ ಒಂದು ದಿನ ಪೌರನೌಕರರು ಕೆಲಸ ಸ್ಥಗಿತಗೊಳಿಸಿದರೆ ಸ್ವಚ್ಛತೆಯ ಪಾಡು ಏನಾಗುತ್ತದೆ ಎಂಬುದು ಸಾರ್ವಜನಿಕರಿಗೆ ನಿತ್ಯ ದರ್ಶನವಾಗುತ್ತಿದೆ.
ಪೌರನೌಕರರ ನ್ಯಾಯಯುತ ಬೇಡಿಕೆಗಳನ್ನು ಸರಕಾರ ಶೀಘ್ರ ಇತ್ಯರ್ಥಪಡಿಸಿ ಅವರನ್ನು ಕರ್ತವ್ಯಕ್ಕೆ ಮರಳುವಂತೆ ಮಾಡಬೇಕು ಎಂಬುದು ನಗರವಾಸಿಗಳು, ಸಾರ್ವಜನಿಕರ ಆಗ್ರಹವಾಗಿದೆ.
Coffee country turned into a garbage dump for civic employees on indefinite strike
