ಚಿಕ್ಕಮಗಳೂರು: ಮೇದ ಜನಾಂಗವು ಸದಾ ಸಮಾಜದೊಂದಿಗೆ ಗಟ್ಟಿಯಾಗಿ ಉಳಿದಿದೆ. ಆದಿಯಿಂದ ಅಂತ್ಯದವರೆಗೆ ಬಿದಿರನ್ನು ಪೂರೈಕೆ ಮಾಡುತ್ತಾ ಬಂದಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಅವರು ನಗರದ ಅಂಬೇಡ್ಕರ್ ರಸ್ತೆಯ ನಗರ ಪೊಲೀಸ್ ಠಾಣೆ ಪಕ್ಕದಲ್ಲಿ ನಗರಸಭೆ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಮೇದ ಸಮುದಾಯಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಸಮಾಜದ ಮುಖಂಡರುಗಳಾದ ಪಿ.ರಾಜೇಶ್, ಕುಮಾರ್ ಮತ್ತಿತರರು ಇಲ್ಲಿ ಮೇದ ಸಮುದಾಯ ಭವನ ನಿರ್ಮಿಸಬೇಕು ಎಂದು ಕನಸು ಕಂಡಿದ್ದರು. ಅದಕ್ಕೆ ಹಿಂದಿದ್ದ ಶಾಸಕರು, ನಗರಸಭೆ ಆಡಳಿತ, ಜಿಲ್ಲಾಧಿಕಾರಿಗಳು ನೀರೆರೆದ ಪರಿಣಾಮ ಇಂದು ಭವನ ನಿರ್ಮಾಣ ಕಾಮಗಾರಿ ಆರಂಭವಾಗುತ್ತಿದೆ. ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇವೆ ಎಂದರು.
ನೆನೆಗುದಿಗೆ ಬಿದ್ದಿದ್ದ ಈ ಕಾಮಗಾರಿಗೆ ನಾವು ಶಾಸಕರಾದ ನಂತರ ನಗರೋತ್ಥಾನ ಯೋಜನೆಯಡಿ ಅನುದಾನ ಮಂಜೂರಾಗಿದ್ದರೂ ಹಣಕಾಸಿನ ಸಮಸ್ಯೆಯಿಂದ ಮೂರು ಬಾರಿ ಟೆಂಡರ್ ಮುಂದೂಡಲ್ಪಟ್ಟಿತ್ತು. ಇದೀಗ ಹಣ ಬಿಡುಗಡೆ ಮಾಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಮೇದ ಜನಾಂಗದ ಕೃಷ್ಣಪ್ಪ ಇತರರು ಇಲ್ಲಿ ಗರಡಿ ಮನೆಯನ್ನು ನಡೆಸಿಕೊಂಡು ಬಂದಿದ್ದರು. ಗರಡಿ ಮನೆಯನ್ನು ಇಂದಿಗೂ ಮುಂದುವರಿಸುವುದಾದರೆ ಅದಕ್ಕೆ ಅವಕಾಶ ಮಾಡಿಕೊಡಲು ಸಿದ್ದರಿದ್ದೇವೆ ಎಂದರು.
೨೦೨೨-೨೩ರಲ್ಲೇ ನಗರೋತ್ಥಾನದಡಿ ಈ ಸಮುದಾಯ ಭವನಕ್ಕೆ ಅನುದಾನ ಮಂಜೂರಾಗಿತ್ತು. ಬೇರೆ ಬೇರೆ ಕಾರಣಕ್ಕೆ ಟೆಂಡರ್ ಮುಂದೂಡಲ್ಪಟ್ಟಿತ್ತು. ಜನಮೆಚ್ಚುವಂತೆ ಗುಣಮಟ್ಟದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಹಲವು ದೇಶಗಳು ಬಿದಿರನ್ನೇ ಉದ್ಯಮವನ್ನಾಗಿ ಮಾಡಿಕೊಂಡಿವೆ. ಬೆಂಗಳೂರಿನ ಏರ್ಪೋರ್ಟ್ನ ಟರ್ಮಿನಲ್-೨ ಗೆ ಹೋಗಿ ನೋಡಿದರೆ ಬಿದಿರಿನ ಸುಂದರ ಉಪಯೋಗ ಹೇಗೆ ಮಾಡಿಕೊಳ್ಳಬಹುದು ಎನ್ನುವುದನ್ನು ಕಾಣಬಹುದು ಎಂದರು.
ಮೇದ ಸಮಾಜದ ಮುಖಂಡ, ಪತ್ರಕರ್ತ ಪಿ.ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಸಮಾಜದವರು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಈಗ ಮುಂದುವರೆಯುತ್ತಿದ್ದಾರೆ, ನಮ್ಮ ಸಮುದಾಯಕ್ಕೆ ಸಮುದಾಯ ಬೇಕೆಂದು ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ರಮೇಶ್, ಶಾಸಕ ಸಿ.ಟಿ ರವಿ ಮತ್ತು ನಗರಸಭೆ ಆಯುಕ್ತರಾದ ಬಸವರಾಜ್ ಅವರಿಗೆ ಮನವಿ ಮಾಡಿದ್ದೆವು ಅವರ ಶ್ರಮ ಮತ್ತು ಈಗಿನ ಶಾಸಕರಾದ ಹೆಚ್.ಡಿ ತಮ್ಮಯ್ಯ ರವರ ನೇತೃತ್ವದಲ್ಲಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರೆವೇರಿಸಿರುವುದು ಅತ್ಯಂತ ಸಂತೋಷದ ವಿಷಯ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ನಾಸೀರ್, ಗುರುಮಲ್ಲಪ್ಪ, ಕವಿತಾ ಶೇಖರ್, ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಪೌರಾಯುಕ್ತ ಬಸವರಾಜ್, ಮೇದಾ ಸಜಾಜದ ಅಧ್ಯಕ್ಷ ಪಟೇಲ್ ಕುಮಾರ್, ಸಮಾಜದ ಮುಖಂಡರುಗಳಾದ ಶೋಭಾ, ಜಗದೀಶ್, ಮಲ್ಲೇನಹಳ್ಳಿ ಶಂಕರ್, ಸುಮಾ, ಶೋಭಾ ಮಂಜುನಾಥ್, ಗುತ್ತಿಗೆದಾರರಾದ ಸಂತೋಷ್ ಕುಮಾರ್, ಪವನ್, ರವಿಶಂಕರ್, ಮತ್ತಿತರರು ಉಪಸ್ಥಿತರಿದ್ದರು.
The Meda community has always remained strong with society