ಚಿಕ್ಕಮಗಳೂರು: ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕ ಸಂಬಳ ೧೫ ಸಾವಿರ ರೂ. ನೀಡಬೇಕೆಂದು ಒತ್ತಾಯಿಸಿ ನಗರದಲ್ಲಿ ಶುಕ್ರವಾರ ಮಹಿಳೆಯರು ಅಕ್ಷರದಾಸೋಹ ಕಾರ್ಯಕರ್ತೆಯರ ಫೆಡರೇಷನ್ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ ಬಿಸಿಯೂಟ ಕಾರ್ಯಕರ್ತೆಯರು ಹಲವು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಧರಣಿ ನಡೆಸಿ, ಫೆಡರೇಷನ್ ಮುಖಂಡರ ನೇತೃತ್ವ ದಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಮೀನಾನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಶಾಲಾಮಕ್ಕಳ ಬಿಸಿಯೂಟ ತಯಾರಿಕಾರ್ಯದಲ್ಲಿ ದುಡಿಯುತ್ತಿರುವ ಕಾರ್ಯಕರ್ತೆಯರಿಗೆ ಸರ್ಕಾರ ತಿಂಗಳಿಗೆ ಕೇವಲ ೩೬೦೦ ರೂ.ಗಳಿಂದ ೩೭೦೦ರೂ.ಗಳವರೆಗೆ ನೀಡುತ್ತಿದೆ.ಇಂದಿನ ಬೆಲೆ ಏರಿಕೆ ದಿನದಲ್ಲಿ ಜೀವನ ಸಾಗಿಸುವುದು ಕಷ್ಟವಾಗಿದೆ. ಮಕ್ಕಳು ವಿದ್ಯಾಭ್ಯಾಸ ಮತ್ತು ಸಂಸಾರ ಸಾಗಿಸಲು ಕಷ್ಟಕರವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜ್ಯಸರ್ಕಾರ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ೬ನೇ ಗ್ಯಾರಂಟಿಯಾಗಿ ೬ಸಾವಿರ ರೂ. ಸಂಬಳ ನೀಡುವುದಾಗಿ ಘೋಷಣೆಮಾಡಲಾಗಿತ್ತು.ಇದುವರೆಗೆ ಸರ್ಕಾರ ಹೇಳಿದಂತೆ ನಡೆದುಕೊಳ್ಳದೆ ಮಹಿಳಾ ಶೋಷ ಣೆಗೆ ಕಾರಣವಾಗಿದೆ.ಕೇಂದ್ರ ಸರ್ಕಾರ ಕಳೆದ ೧೩ ವರ್ಷಗಳಿಂದ ತಾನು ನೀಡಬೇಕಾಗಿದ್ದ ಶೇ.೬೦ರಷ್ಟು ಸಂಬಳವನ್ನು ನೀಡದೆ ಕೇವಲ ೬೦೦ ರೂ.ಗಳನ್ನು ಮಾತ್ರ ನೀಡುತ್ತಿದೆ ಎಂದು ಫೆಡರೇಷನ್ ಮುಖಂಡ ಹೇಳಿದ್ದಾರೆ.
ರಾಜ್ಯಾದ್ಯಂತ ಈವರೆಗೆ ಹಲವು ಮಂದಿ ಮೃತಪಟ್ಟಿದ್ದಾರೆ ಅವರುಗಳಿಗೆ ಸರ್ಕಾರ ಯಾವುದೇ ಸಹಾಯನೀಡಿಲ್ಲ. ಭವಿಷ್ಯನಿಧಿ, ಇಎಸ್ಐನಂತಹ ಸೌಲಭ್ಯಗಳಿರುವುದಿಲ್ಲ.ನಿವೃತ್ತಿವೇತನ ಹಾಗೂ ಇನ್ಯಾವುದೇ ಸವಲತ್ತುಗಳು ಇರುವುದಿಲ್ಲ, ವಾರವಿಡಿ ಮಕ್ಕಳಿಗೆ ಮೊಟ್ಟೆಸುಲಿದ ಹಣವನ್ನು ವರ್ಷಾನುಗಟ್ಟಲೆ ಕೊಟ್ಟಿರುವುದಿಲ್ಲ. ಹಲವು ಹೋರಾಟಗಳ ಬಳಿಕ ಸರ್ಕಾರ ೨೦೨೨ರ ಮಾರ್ಚ್ ೩೧ರನಂತರ ನಿವೃತ್ತಿಗೊಳ್ಳುವ ಕಾರ್ಯಕರ್ತೆಯರಿಗೆ ಅವರವರಸೇವೆಗೆ ಅನುಗುಣವಾಗಿ ೩೦ರಿಂದ ೪೦ಸಾವಿರ ನೀಡುವುದಾಗಿ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ದಿನಕ್ಕೆ ೭ ಗಂಟೆ ದುಡಿಯುತ್ತಿರುವ ಕಾಯಕರ್ತೆಯರಿಗೆ ಕನಿಷ್ಟ ೧೫ಸಾವಿರ ಮಾಸಿಕ ವೇತನನೀಡಲು ಬಜೆಟ್ನಲ್ಲಿ ಅಳವಡಿಸಿಕೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಇಂದು ಬಿಸಿಯೂಟವನ್ನು ಬಂದ್ಗೊಳಿಸಿ ಪ್ರತಿಭಟನೆ ಮುಂದಾಗಿರುವುದಾಗಿ ಹೇಳಿದ್ದಾರೆ.
ಅಕ್ಷರದಾಸೋಹ ಕಾರ್ಯಕರ್ತೆಯರ ಫೆಡರೇಷನ್ ಜಿಲ್ಲಾಧ್ಯಕ್ಷ ಜಿ.ರಘು, ಜಿಲ್ಲಾ ಪ್ರಧಾನಕಾರ್ಯದರ್ಶಿ ಎಸ್.ವಿಜಯಕುಮಾರ್, ಉಪಾಧ್ಯಕ್ಷ ಕಳಸಪ್ಪ, ಸಿಪಿಐ ಜಿಲ್ಲಾಕಾರ್ಯದರ್ಶಿ ಎಸ್.ಎಲ್.ರಾಧಾಸುಂದರೇಶ್, ವಿವಿಧ ತಾಲೂಕು ಅಧ್ಯಕ್ಷರುಗಳಾದ ಬಗ್ಗವಳ್ಳಿ ಲತಾ, ಇಂದುಮತಿ, ನಾಗಮಣಿ ಗ್ರೇಸಿ, ಯಶೋಧ ಇದ್ದರು.
Hot meal workers protest demanding fulfillment of various demands
