May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಅಂತಿಮ ಕ್ಷಣದಲ್ಲಿ ಮೋಸ್ಟ್ ವಾಂಟೆಡ್ ನಕ್ಸಲರ ಶರಣಾಗತಿ ಬೆಂಗಳೂರಿಗೆ ಸ್ಥಳಾಂತರ

ಶರಣಾಗತಿಗೆ ಮುಂದಾಗಿದ್ದ ೬ ಜನ ನಕ್ಸಲರು

ಚಿಕ್ಕಮಗಳೂರು: ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ನಕ್ಸಲರು ಜಿಲ್ಲಾ ಆಡಳಿತದ ಮುಂದೆ ನಿಗದಿಯಾಗಿದ್ದ ೬ ಜನ ನಕ್ಸಲರ ಶರಣಾಗತಿ ಪ್ರಕ್ರಿಯೆ ಅಂತಿಮ ಕ್ಷಣದಲ್ಲಿ ಸ್ಥಳ ಬದಲಾಗುವ ಮೂಲಕ ಅನಗತ್ಯ ಗೊಂದಲ ಸೃಷ್ಟಿಯಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗಲು ತೆರಳಿದರು

ಬುಧವಾರ ಬೆಳಿಗ್ಗೆ ೧೦ ರಿಂದ ೧೨ ಗಂಟೆಯೊಳಗೆ ಆರು ಜನ ನಕ್ಸಲರು ಜಿಲ್ಲಾಡಳಿತದ ಮುಂದೆ ಶರಣಾಗುವ ಬಗ್ಗೆ ಸಮಯ ನಿಗದಿ ಆಗಿತ್ತು.
ಸರ್ಕಾರಿ ನೇತೃತ್ವದ ಶರಣಾಗತಿ ಸಮಿತಿ ಸದಸ್ಯರಾದ ಶ್ರೀಪಾಲ್, ಬಂಜಗೆರೆ ಜಯಪ್ರಕಾಶ್, ಪಾರ್ವತೀಶ್ ಜಯಪುರ ಸಮೀಪ ವಾಸ್ತವ್ಯ ಹೂಡಿದ್ದು ಇಂದು ಬೆಳಿಗ್ಗೆ ೮ ರ ಬಳಿಕ ನಕ್ಸಲರೊಂದಿಗೆ ಚಿಕ್ಕಮಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದರು.

ಇವರಿಗೆ ಜನದನಿ ಸಂಘಟನೆಯ ನೂರ್ ಶ್ರೀಧರ್, ಶ್ರೀಧರ್, ಹಾಗಲಗಂಜಿ ವೆಂಕಟೇಶ್ , ಕೌಳಿ ರಾಮು, ವಳಲೆ ಸರೋಜಾ, ಹಾಗಲಗಂಜಿ ಭಾಗ್ಯ ಸಾತ್ ನೀಡಿದ್ದರು. ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ ಅಮಟೆ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸೇರಿದಂತೆ ಪೊಲೀಸರ ಭಾರಿ ಬಿಗಿ ಬಂದೋಬಸ್ಥಿನಲ್ಲಿ ಶರಣಾಗತಿ ಆಗಲಿದ್ದ ನಕ್ಸಲರು ಜಿಲ್ಲಾ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ದರು

ಚಿಕ್ಕಮಗಳೂರು ಸಮೀಪದ ಕಡಬಗೆರೆ ಬಳಿ ಬರುತ್ತಿದ್ದಂತೆ ಮುಖ್ಯಮಂತ್ರಿಗಳ ಕಚೇರಿಯಿಂದ ಬಂದ ದೂರವಾಣಿ ಕರೆ ಪೋಲಿಸ್ ಅಧಿಕಾರಿಗಳನ್ನು ಕ್ಷಣ ಕಾಲ ಇಕ್ಕಟ್ಟಿಗೆ ಸಿಲುಕಿಸಿತು. ಶರಣಾಗತಿ ಪ್ರಕ್ರಿಯೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆಯಬೇಕು, ಎಲ್ಲರನ್ನೂ ಅಲ್ಲಿಗೆ ಕರೆತನ್ನಿ? ಎನ್ನುವ ಸಂದೇಶ ಜಿಲ್ಲಾ ಕೇಂದ್ರಕ್ಕೆ ಬರುತ್ತಿದ್ದವರಿಗೆ ಬ್ರೇಕ್ ಹಾಕಿತು. ಸರಿಸುಮಾರು ಅರ್ಧಗಂಟೆಗಳ ಕಾಲ ದಾರಿಯಲ್ಲೇ ನಿಂತು ಚರ್ಚಿಸಿ ಪ್ರಯಾಣ ಮುಂದುವರಿಸಿದ್ದು ಆಲ್ದೂರು ಸಮೀಪ ಬರುತ್ತಿದ್ದಂತೆ ?ಶರಣಾಗತಿ ಬೆಂಗಳೂರಿನಲ್ಲಿ? ಎನ್ನುವುದು ಸ್ಪಷ್ಟವಾಗಿತ್ತು.

ಇತ್ತ ಚಿಕ್ಕಮಗಳೂರು ಪ್ರವಾಸಿ ಕೇಂದ್ರದಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ, ಜನದನಿ ಸಂಘಟನೆ ಮುಖಂಡರು, ಕಾರ್ಯಕರ್ತರು, ಶರಣಾಗಲಿದ್ದ ನಕ್ಸಲಿಗರ ಬಂಧುಗಳು ಸಮಾವೇಶಗೊಂಡಿದ್ದು ಬರುವಿಕೆಗೆ ಕಾದು ನಿಂತಿದ್ದರು. ಪೊಲೀಸರು ಪ್ರವೇಶ ದ್ವಾರಗಳನ್ನು ಮುಚ್ಚಿ ನಿರ್ದಿಷ್ಟ ಪಡಿಸಿದ ಜನರಿಗಷ್ಟೇ ಒಳ ಬಿಡುತ್ತಿದ್ದು ಇದು ಕೂಡ ಅಸಮಾಧಾನಕ್ಕೆ ಕಾರಣವಾಗಿತ್ತು.

ಬೆಂಗಳೂರು, ಶಿವಮೊಗ್ಗ ಹಾಸನ ಇನ್ನಿತರ ಕಡೆಗಳಿಂದ ಮಾಧ್ಯಮ ಪ್ರತಿನಿಧಿಗಳು ಆಗಮಿಸಿದ್ದು ನಕ್ಸಲರ ಬರುವಿಕೆಗಾಗಿ ತುದಿಗಾಲಲ್ಲಿ ನಿಂತಿದ್ದರು.
ಈಗ ಬರುತ್ತಾರೆ ಇನ್ನೇನು ಬರುತ್ತಾರೆ ಎಂದು ಕಾದು ನಿಂತಿದ್ದವರಿಗೆ ಮಧ್ಯಾಹ್ನ ೧೨ ಗಂಟೆ ನಂತರ ಇದ್ದಕ್ಕಿದ್ದಂತೆ ಸ್ಥಳಬದಲಾವಣೆ ಸುದ್ದಿ ಮುಟ್ಟಿದ್ದು, ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.

ಶರಣಾಗತಿ ಆಗಲಿರುವ ನಕ್ಸಲೀಯರ ತಂದೆ, ತಾಯಿ, ಸಹೋದರ, ಸಹೋದರಿಯರು ಚಿಕ್ಕಮಗಳೂರಿಗೆ ಆಗಮಿಸಿದ್ದರು. ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ಕಾದು ಕುಳಿತಿದ್ದರು. ಅಂತಿಮ ಕ್ಷಣದಲ್ಲಿ ಸ್ಥಳ ಬದಲಾವಣೆಗೆ ಇರುವ ಕಾರಣಗಳು ಏನು ಎನ್ನುವ ಪ್ರಶ್ನೆಯೂ ಎದುರಾಗಿ ಹಲವು ಶಂಕೆ/ ವ್ಯಾಖ್ಯಾನಗಳಿಗೂ ದಾರಿ ನಿರ್ಮಿಸಿತು.

ಗೊಂದಲಕ್ಕೆ ಕಾರಣ ಯಾರು / ಏನು ಎನ್ನುವ ಪ್ರಶ್ನೆಗೆ ಯಾರಲ್ಲೂ ಸ್ಪಷ್ಟ ಉತ್ತರ ಇರಲಿಲ್ಲ. ಸಂಘಟಕರಿಗೆ ಉತ್ತರಿಸಲಾಗದ ಪರಿಸ್ಥಿತಿ ಎದುರಾಯಿತು. ಮಾಧ್ಯಮಗಳ ಪ್ರತಿನಿಧಿಗಳ ನಿರಂತರ ಪ್ರಶ್ನೆ ಹಿನ್ನೆಲೆಯಲ್ಲಿ ? ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸ್ಥಳ ಬದಲಾವಣೆ ಆಗಿದೆ? ಎಂದಷ್ಟೇ ಕಾರ್ಯಕ್ರಮ ಆಯೋಜಕರು ಉತ್ತರಿಸಬೇಕಾಯಿತು.

ಬಂದ ದಾರಿಗೆ ಸುಂಕ ಇಲ್ಲ ಎಂದು ಕೆಲವರು ಗೊಣಗುತ್ತಾ ತೆರಳಿದರೆ, ಸಂಬಂಧಿಕರು ಹಾಗೂ ಸಂಘಟಕರನ್ನು ಮೂರು ಪೋಲಿಸ್ ವಾಹನದಲ್ಲಿ ಬೆಂಗಳೂರಿಗೆ ಕಳುಹಿಸಲಾಯಿತು. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಬೇಕಾಗಿದ್ದ ಪ್ರವಾಸಿ ಮಂದಿರ ಆವರಣದಲ್ಲಿ ಕ್ಷಣಮಾತ್ರಕ್ಕೆ ಮೌನ ಆವರಿಸಿ ಬಿಕೋ ಎನ್ನ ತೊಡಗಿತು. ಬೆಳಗಿನಿಂದ ಕಾದಿದ್ದ ಪೊಲೀಸರು ನಿಟ್ಟುಸಿರು ಬಿಟ್ಟು ತೆರಳಿದರು.

Most wanted Naxal surrenders at the last minute shifted to Bengaluru

Related posts

ಹಿಂದೂ ಸಂಪ್ರದಾಯದಂತೆ ಕೆರೆ ಕೋಡಿಬಿದ್ದಾಗ ಗಂಗಾಪೂಜೆ

Team Suddigara

ಬೀರೂರು ಠಾಣಾ ಪೋಲಿಸರಿಂದ 1 ಕೋಟಿ ಮೌಲ್ಯದ ಅಡಿಕೆ ವಶ-ಅರೋಪಿಗಳ ಬಂಧನ

Team Suddigara

ನಿಗದಿತ ಸ್ಥಳದಲ್ಲಿಯೇ ಗಣಪತಿ ಮೂರ್ತಿ ವಿಸರ್ಜಿಸಬೇಕು

Team Suddigara

Leave a Comment