ಚಿಕ್ಕಮಗಳೂರು: ಪ್ರವಾಸಿಗರು ಹಾಗೂ ಅತಿಥಿಗಳ ಭದ್ರತೆ ಮತ್ತು ಸುರಕ್ಷತೆ ದೃಷ್ಠಿಯಿಂದ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಮಾರ್ಗಸೂಚಿಗಳನ್ನು ಖಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ಅವರು ಜಿಲ್ಲೆಯ ಎಲ್ಲಾ ಹೋಂಸ್ಟೇ, ರೆಸಾರ್ಟ್ ಮತ್ತು ಲಾಡ್ಜ್ ಮಾಲೀಕರಿಗೆ ಸೂಚನೆ ನೀಡಿದರು.
ಅವರು ಇಂದು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿ.ಪಂ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ಹೋಂಸ್ಟೇ, ರೆಸಾರ್ಟ್, ಲಾಡ್ಜ್ಗಳ ಮಾಲೀಕರು ಮತ್ತು ವ್ಯವಸ್ಥಾಪಕರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿನ ಎಲ್ಲಾ ಪ್ರವಾಸಿ ತಾಣಗಳಲ್ಲಿನ ಹೋಂಸ್ಟೇಗಳು ರೆಸಾರ್ಟ್ ಮತ್ತು ಲಾಡ್ಜ್ಗಳಲ್ಲಿ ವಿದೇಶಿ ಪ್ರವಾಸಿಗರನ್ನು ಒಳಗೊಂಡಂತೆ ಎಲ್ಲಾ ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆಯ ಸಂಬಂಧ ಸೂಕ್ತ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಹೊರ ವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುಂಚಿತವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅನುಮತಿ ಪಡೆಯಬೇಕು. ಅನುಮತಿಯಿಲ್ಲದೆ ಪ್ರವಾಸಿಗರನ್ನು ಕರೆದೊಯ್ದಲ್ಲಿ ದುಷ್ಕರ್ಮಿಗಳಿಂದ ಅಥವಾ ಕಾಡುಪ್ರಾಣಿಗಳಿಂದ ಸಂಭವಿಸುವ ದುರ್ಘಟನೆಗಳಿಗೆ ಸಂಬಂಧಪಟ್ಟ ಆಯಾ ಹೋಂಸ್ಟೇ, ರೆಸಾರ್ಟ್ ಅಥವಾ ಲಾಡ್ಜ್ ಮಾಲೀಕರುಗಳೆ ಜವಾಬ್ದಾರರಲ್ಲದೆ, ಶಿಕ್ಷಾರ್ಹ ಅಪರಾಧಕ್ಕೆ ಒಳಪಡುತ್ತಾರೆ ಎಂದು ಎಚ್ಚರಿಸಿದರು.
ಹೋಂ ಸ್ಟೇಗಳು, ರೆಸಾರ್ಟ್ಗಳಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಡ್ರಗ್ಸ್ ಮತ್ತು ಮಾದಕ ವಸ್ತುಗಳ ಬಳಕೆ ಕಡ್ಡಾಯವಾಗಿ ನಿಷೇಧಿಸಿ, ಅತಿಥಿಗಳಿಗೆ ಗೋಚರಿಸುವಂತೆ ಫಲಕಗಳನ್ನು ಅಳವಡಿಸಬೇಕು. ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡಬಾರದು, ಪಾರ್ಟಿಗಳು, ಇನ್ನಿತರೆ ಕಾರ್ಯಕ್ರಮಗಳಲ್ಲಿ ಮದ್ಯ ಬಳಸುವುದಾದರೆ ಕಾನೂನು ಪ್ರಕಾರ ಸಿಎಲ್ ೫ರ ಪರವಾನಗಿ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
ಪ್ರಮುಖವಾಗಿ ಬಾಂಗ್ಲಾ, ಪಾಕಿಸ್ಥಾನದ ಪ್ರಜೆಗಳ ಬಗ್ಗೆ ಗಮನಹರಿಸಬೇಕು. ಇವರೊಂದಿಗೆ ಯಾವುದೇ ವಿದೇಶಿ ಪ್ರಜೆಗಳ ಆಗಮನದ ಬಗ್ಗೆ ತಕ್ಷಣ ಮಾಹಿತಿ ನೀಡಬೇಕು ಎಂದರು.
ಎಲ್ಲಾ ನೌಕರರ ಪೂರ್ವಾಪರ ಪರಿಶೀಲನೆಯ ಮಾಡಬೇಕು. ಸಿಸಿ ಟಿವಿ, ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ದೃಶ್ಯಾವಳಿಗಳನ್ನು ಕನಿಷ್ಠ ಮೂರು ತಿಂಗಳವರೆಗೆ ಸಂಗ್ರಹಿಸಿಡಬೇಕು. ಸುತ್ತಲಿನ ಸಾರ್ವಜನಿಕ ಶಾಂತಿಗೆ ಭಂಗವಾಗದಂತೆ ನೋಡಿಕೊಳ್ಳಬೇಕು. ಪೊಲೀಸ್ ಇಲಾಖೆಯ ಪೂರ್ವಾನುಮತಿಯಿಲ್ಲದೆ ಡಿಜೆ, ಧ್ವನಿವರ್ಧಕಗಳು, ಸಂಗೀತ ವ್ಯವಸ್ಥೆಗಳನ್ನು ಬಳಸಬಾರದು. ವಾಹನದ ವಿವರಗಳು ಸೇರಿದಂತೆ ಎಲ್ಲಾ ಅತಿಥಿಗಳ ಚೆಕ್-ಇನ್ ಮತ್ತು ಚೆಕ್-ಔಟ್ ಸಂಪೂರ್ಣ ಮಾಹಿತಿಯನ್ನು ರಿಜಿಸ್ಟರ್ನಲ್ಲಿ ನಮೂದಿಸಬೇಕು. ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ಸಂಗ್ರಹಿಸಬೇಕು. ಪೊಲೀಸ್ ಭೇಟಿಯ ಸಮಯದಲ್ಲಿ ಅದನ್ನು ಹಾಜರುಪಡಿಸಬೇಕು ಎಂದರು.
ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಬೀಟ್ ಕಾನ್ಸ್ಟೇಬಲ್ಗಳು ಹಠಾತ್ ತಪಾಸಣೆ ನಡೆಸಬೇಕು. ಆಗಾಗ ಮಾಲೀಕರ ಸಭೆ ನಡೆಸಬೇಕು. ವನ್ಯ ಪ್ರಾಣಿಗಳು, ಪರಿಸರಕ್ಕೆ ಹಾನಿ ಉಂಟುಮಾಡುವ ಚಟುವಟಿಕೆಗೆ ಅನುಮತಿಸಬಾರದು. ಕಸ, ತ್ಯಾಜ್ಯ ಹಾಕಿ ಪರಿಸರಕ್ಕೆ ಧಕ್ಕೆ ತರಬಾರದು. ಸುಸ್ಥಿರ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವ ನಾಮಫಲಕವನ್ನು ಅಳವಡಿಸಬೇಕು. ಫೈರ್ ಕ್ಯಾಂಪ್ಗಳಿಂದ ಸುತ್ತಲ ಪ್ರದೇಶದಲ್ಲಿ ಶಾಂತಿಗೆ ಭಂಗವಾಗಬಾರದು. ನೈಸರ್ಗಿಕ ಜಲ ಮೂಲಗಳನ್ನು ಹೋಂಸ್ಟೇ, ರೆಸಾರ್ಟ್ಗೆ ಬಳಸಬಾರದು. ಅಗತ್ಯವಿದ್ದಲ್ಲಿ ಕಡ್ಡಾಯವಾಗಿ ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದರು.
ಪರವಾನಗಿಯ ಪ್ರತಿಯನ್ನು ಸಾರ್ವಜನಿಕರಿಗೆ ಪ್ರದರ್ಶಿಸಬೇಕು. ಅಗ್ನಿ ಸುರಕ್ಷತಾ ಭದ್ರತಾ ಕ್ರಮಗಳು ಜಾರಿಯಲ್ಲಿರಬೇಕು. ಚಾರಣ ಮತ್ತು ಇತರ ಹೊರಾಂಗಣ ಚಟುವಟಿಕೆಗಳನ್ನು ಆಯೋಜಿಸುವ ಮೊದಲು ಸಂಬಂಧಪಟ್ಟ ಇಲಾಖೆಗಳಿಂದ ಪೂರ್ವಾನುಮತಿ ಪಡೆಯಬೇಕು. ವಿದೇಶಿ ಪ್ರಜೆಗಳು ಸೇರಿದಂತೆ ಎಲ್ಲಾ ಅತಿಥಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಡಿವೈಎಸ್ಪಿ ಶೈಲೇಂದ್ರ, ಡಿಎಫ್ಓಗಳಾದ ಕೆ.ಸಿ.ಆನಂದ್, ಚಿಕ್ಕಮಗಳೂರು ವಿಭಾಗದ ರಮೇಶ್ ಬಾಬು, ಕೊಪ್ಪದ ನಂದೀಶ್ ಎಸಿಎಫ್ ಶಿವರಾತ್ರಿಶ್ವರ ಸ್ವಾಮಿ, ಭದ್ರಾ ವೈಲ್ಡ್ಲೈಫ್ನ ಉಮರ್ ಬಾಷಾ, ತರೀಕೆರೆ ಎಸಿಎಫ್ ಎ.ಎಸ್.ಮೋಹನ್, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕ ನಾಗರಾಜ್ ಚಿಟ್ಟ ಸೇರಿದಂತೆ ಜಿಲ್ಲೆಯ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಮಾಲೀಕರು ಮತ್ತು ವ್ಯಸ್ಥಾಪಕರು ಉಪಸ್ಥಿತರಿದ್ದರು.
Tourists must follow the guidelines of the police department.
