May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಜಂಟಿಸರ್ವೇ ಬಳಿಕ ಪ್ಲಾಂಟೇಶನ್ ಭೂಮಿ ಗುತ್ತಿಗೆ ಅರ್ಜಿ ವಿಲೇವಾರಿ

ಚಿಕ್ಕಮಗಳೂರು: ಪ್ಲಾಂಟೇಶನ್ ಭೂಮಿಯನ್ನು ಗುತ್ತಿಗೆಗೆ ನೀಡುವ ಯೋಜನೆಗೆ ಅರ್ಜಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಲಾಗಿದ್ದು, ಜಂಟಿ ಸರ್ವೇ ಪೂರ್ಣಗೊಂಡು ಅರಣ್ಯ ಮತ್ತು ಕಂದಾಯ ಭೂಮಿಯ ನಿಖರ ಮಾಹಿತಿ ಲಭ್ಯವಾದ ಬಳಿಕ ಅರ್ಜಿ ವಿಲೇವಾರಿ ಪ್ರಕ್ರಿಯೆಯನ್ನು ಅಭಿಯಾನದ ಮಾದರಿಯಲ್ಲಿ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಹಳ ದಿನಗಳಿಂದ ಜಂಟಿ ಸರ್ವೇ ಆಗದೆ ಬಾಕಿ ಉಳಿದಿದೆ. ಇದೀಗ ಜಂಟಿ ಸರ್ವೇ ಕೈಗೊಳ್ಳಲು ಅರಣ್ಯ ಇಲಾಖೆಯೊಂದಿಗೆ ಸೇರಿ ನಿಯಮಾವಳಿಗಳನ್ನು ರೂಪಿಸಿ, ಸುತ್ತೋಲೆಗಳನ್ನು ಹೊರಡಿಸಿ, ಹಿಂದಿನಿಂದಲೂ ಉಳಿದಿದ್ದ ಕೆಲಸಕ್ಕೆ ಚಾಲನೆ ನೀಡಲಾಗಿದ್ದು, ಜಂಟಿ ಸರ್ವೇಯನ್ನು ಕಾರ್ಯ ರೂಪಕ್ಕೆ ತಂದಿರುವುದಾಗಿ ತಿಳಿಸಿದರು.

ಜಂಟಿ ಸರ್ವೇ ಆಗದೆ ಅರ್ಜಿ ವಿಲೇವಾರಿ ಮಾಡಲು ಸಾಧ್ಯವಿಲ್ಲ. ಅರಣ್ಯ ಮತ್ತು ಕಂದಾಯ ಜಮೀನಿನ ನಿಖರತೆ ತಿಳಿಯದಿದ್ದಲ್ಲಿ ಅರ್ಜಿ ವಿಲೇವಾರಿ ಪ್ರಕ್ರಿಯೆ ಸಾಧ್ಯವಾಗದು. ಹಿಂದೆ ಆಗಿರುವಂತೆ ಕಂದಾಯ ಜಮೀನೆಂದು ಅರಣ್ಯ ಭೂಮಿಯನ್ನು ಮಂಜೂರು ಮಾಡಿರುವಂತಹ ತಪ್ಪುಗಳು ಪುನರಾವರ್ತನೆಯಾಗಬಹುದು. ಹೀಗಾಗಿ ಜಂಟಿ ಸರ್ವೇ ಪೂರ್ಣಗೊಂಡ ಬಳಿಕವಷ್ಟೇ ಪ್ಲಾಂಟೇಶನ್ ಭೂಮಿ ಗುತ್ತಿಗೆಗೆ ನೀಡುವ ಕುರಿತ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ. ಎರಡು ವರ್ಷಗಳಲ್ಲಿ ಸಾಕಷ್ಟು ಕಾರ್ಯಗಳು ನಡೆದಿದ್ದು, ಇನ್ನೂ ಸಾಕಷ್ಟು ಕೆಲಸಗಳು ಆಗದೆ ಬಾಕಿ ಉಳಿದಿವೆ. ಹಿಂದೆ ಭೂಮಿ ಮಂಜೂರಾದ ಪ್ರಕರಣಗಳಲ್ಲಿ ಕಾಲ ಕಾಲಕ್ಕೆ ದಾಖಲಾತಿಗಳನ್ನು ನೀಡುವ ಕಾರ್ಯ ನಡೆದಿದ್ದಲ್ಲಿ ಇಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲ ಎಂದರು.

ಪೌತಿ ಖಾತೆ ಬದಲಾವಣೆ ಮಾಡುವ ಪ್ರಕ್ರಿಯೆ ಹಿಂದಿನಿಂದಲೂ ಕಾಲ ಕಾಲಕ್ಕೆ ಆಗಬೇಕಿತ್ತು. ಅದು ಬಾಕಿ ಉಳಿದಿವೆ. ಅವುಗಳ ಖಾತೆಯನ್ನೂ ನಾವು ಬದಲಾವಣೆ ಮಾಡಬೇಕಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಖಾತೆ ಬದಲಾವಣೆ ಮಾಡಲಾಗಿದ್ದರೂ ಇನ್ನೂ ಸಾಕಷ್ಟು ಪ್ರಕರಣಗಳು ನಮ್ಮ ಮುಂದಿವೆ. ನಮ್ಮ ಸಿಬ್ಬಂದಿಗೆ ಕೆಲಸದ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಇ-ಆಫೀಸ್ ವ್ಯವಸ್ಥೆಯನ್ನು ತಾಲ್ಲೂಕು ಕಚೇರಿ ಹಾಗೂ ನಾಡ ಕಚೇರಿವರೆಗೂ ವಿಸ್ತರಿಸಿದ್ದೇವೆ. ಗ್ರಾಮ ಲೆಕ್ಕಿಗರಿಗೆ ಲ್ಯಾಪ್‌ಟಾಪ್ ಒದಗಿಸಲಾಗಿದ್ದು, ಅವರು ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾಗಲೇ ನೇರವಾಗಿ ಅಲ್ಲಿಂದಲೇ ಅಪ್‌ಲೋಡ್ ಮಾಡುವಂತಾದರೆ ಅವರಿಗೂ ಕೆಲಸದ ಒತ್ತಡ ಕಡಿಮೆಯಾಗಲಿದೆ. ಆಗಬೇಕಾಗಿರುವ ಕೆಲಸಗಳಿಗೆ ಹೆಚ್ಚಿನ ಗಮನವನ್ನು ನೀಡಬೇಕಾಗಿದೆ ಎಂದರು

ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣ ಆಗಬೇಕೆನ್ನುವುದು ಬಹುದಿನಗಳ ಬೇಡಿಕೆ. ಇದೀಗ ನಿಂತು ಹೋಗಿರುವ ಕಾಮಗಾರಿಯ ಎರಡನೇ ಹಂತಕ್ಕೆ ಅಗತ್ಯ ಅನುದಾನ ಮಂಜೂರಾದಲ್ಲಿ ಈ ಜಿಲ್ಲೆಯ ಬಹುದಿನಗಳ ನಿರೀಕ್ಷೆ ಈಡೇರಲಿದೆ. ಜಿಲ್ಲೆಯಲ್ಲಿ ಹೊಸ ತಾಲ್ಲೂಕುಗಳ ರಚನೆಗೆ ಪೂರಕವಾಗಿ ಕಳಸ ಹಾಗೂ ಅಜ್ಜಂಪುರಕ್ಕೆ ತಾಲ್ಲೂಕು ಆಡಳಿತ ಕಚೇರಿಯನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪ್ರಕರಣಗಳನ್ನು ಹೊರ ತೆಗೆದು ಅವುಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸುವ ಮೂಲಕ ಜನರು ನೆಮ್ಮದಿಯಿಂದ ಬದುಕಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಹಿಂದೆ ೧೦, ೩೦, ೪೦, ೫೦ ವರ್ಷಗಳಿಂದ ಮಂಜೂರಾಗಿರುವ ಭೂಮಿಗಳಿಗೆ ಇಂದಿಗೂ ಪೋಡಿ ಮಾಡಿಕೊಡದೇ ಇರುವುದರಿಂದ ಆ ಜನರು ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಹಿಂದೆ ಜಮೀನು ಮಂಜೂರು ಮಾಡುವತ್ತ ಮಾತ್ರ ಗಮನ ಹರಿಸಲಾಗಿತ್ತು. ಅಂದೇ ಪೋಡಿಗಳನ್ನು ದುರಸ್ತಿಪಡಿಸಿ ದಾಖಲಾತಿಗಳನ್ನು ಒದಗಿಸಿದ್ದರೆ ಇಂದು ಇಷ್ಟೊಂದು ಕಡತಗಳು ಕಳೆದುಹೋಗಿವೆ ಎನ್ನುವ ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ಅಂಥವುಗಳನ್ನು ಹುಡುಕಿ ಅವುಗಳನ್ನು ಅಭಿಯಾನದ ರೂಪದಲ್ಲಿ ಕಾರ್ಯಗತಗೊಳಿಸುವ ಕಾರ್ಯವನ್ನು ಇಲಾಖೆ ಕೈಗೆತ್ತಿಕೊಂಡಿದೆ ಎಂದು ಹೇಳಿದರು.

ಹಿಂದೆ ಅರ್ಜಿ ಕೊಟ್ಟವರಿಗೆ ಮಾತ್ರ ಪೋಡಿ ಮಾಡಿಕೊಡಲಾಗುತ್ತಿತ್ತು. ಇದರಿಂದ ಯಾರು ಶಕ್ತರಿದ್ದಾರೆ ಅಂಥವರು ಮಾತ್ರ ಪ್ರಯೋಜನ ಪಡೆದುಕೊಳ್ಳುತ್ತಿದ್ದರು. ಇದೀಗ ನಾವೇ ರೈತರ ಮನೆ ಬಾಗಿಲಿಗೆ ಹೋಗಿ ಪೋಡಿ ಮಾಡಿಕೊಡುವ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಹಿಂದಿನ ದಾಖಲೆಗಳನ್ನು ಪರಿಶೀಲಿಸಿದಾಗ, ಮೂರು ವರ್ಷದಲ್ಲಿ ಕೇವಲ ೫೮೦೦ ಪ್ರಕರಣಗಳು ಮಾತ್ರ ಪೋಡಿ ದುರಸ್ತಿಯಾಗಿದ್ದವು. ಅಭಿಯಾನ ಆರಂಭವಾಗಿ ಕಳೆದ ಏಳೆಂಟು ತಿಂಗಳಲ್ಲಿ ನಾವು ರೈತರಿಗೆ ಮಂಜೂರಾದ ೮೨ ಸಾವಿರ ಜಮೀನುಗಳನ್ನು ಅಳತೆ ಮಾಡಲಾಗಿದೆ. ನಮ್ಮ ಇಲಾಖೆಯ ಅಧಿಕಾರಿಗಳೇ ಮನೆ ಬಾಗಿಲಿಗೆ ಹೋಗಿ ಈ ಕೆಲಸ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಅವರಿಗೆ ದೊರೆಯದಿದ್ದ ಎಲ್ಲಾ ಹಕ್ಕುಗಳು ದೊರಕಿವೆ ಎಂದು ತಿಳಿಸಿದರು.

ಕಂದಾಯ ಗ್ರಾಮ ಉಪ ಗ್ರಾಮಗಳನ್ನು ಮಾಡಿರುವುದರಿಂದ ಕಳೆದ ಎರಡು ವರ್ಷಗಳಲ್ಲಿ ಸುಮಾರು ೧.೧೧ ಲಕ್ಷಗಳಷ್ಟು ಜನರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಈ ಜಿಲ್ಲೆಯಲ್ಲಿ ೩೦೦ ಗ್ರಾಮಗಳನ್ನು ೩೦೦ ಉಪ ಗ್ರಾಮಗಳನ್ನು ಅರ್ಹವಾಗಿರುವವೆಂದು ಗುರುತಿಸಲಾಗಿದೆ. ಅವೆಲ್ಲವನ್ನು ಸರಿಪಡಿಸಿದರೆ ಸುಮಾರು ಈಗಾಗಲೇ ಆಗಿರುವ ಪ್ರಕರಣಗಳ ಹೊರತಾಗಿ ಇನ್ನೂ ೬೦೦ ವಸತಿ ಪ್ರದೇಶಗಳಿಗೆ ದಾಖಲೆ ಒದಗಿಸುವಂತಹ ಕಾರ್ಯ ಆಗಲಿದೆ. ಅದನ್ನು ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದರು.

ಮಲೆನಾಡು ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುವ ಸಂದರ್ಭದಲ್ಲಿ ಗುಡ್ಡದ ಮೇಲೆ ಹಾಗೂ ಗುಡ್ಡದ ಕೆಳಗೆ ವಾಸಿಸುವ ಜನರನ್ನು ಮುಂಚಿತವಾಗಿ ಬೇರೆಡೆಗೆ ವಾಸಿಸಲು ವ್ಯವಸ್ಥೆ ಮಾಡಬೇಕು. ಸಮಸ್ಯೆಯಾಗುವ ಮೊದಲೇ ಪ್ರಾಣಹಾನಿಯಾಗುವುದನ್ನು ತಡಗಟ್ಟಲು ಕ್ರಮ ವಹಿಸಬೇಕು. ಮಲೆನಾಡು ಹಾಗೂ ಕರಾವಳಿ ಪ್ರದೇಶಗಳ ಗುಡ್ಡ ಕುಸಿತವನ್ನು ತಡೆಯಲು ೪೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅನುದಾನ ಬಂದ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು. ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕ ಹಾಗೂ ಕ್ರೆಡಿಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ, ಶಾಸಕರುಗಳಾದ ಜಿ.ಹೆಚ್.ಶ್ರೀನಿವಾಸ್, ಕೆ.ಎಸ್.ಆನಂದ್, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಭದ್ರಾವತಿ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್ ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಉಪವಿಭಾಗಾಧಿಕಾರಿಗಳಾದ ಕಾಂತರಾಜ್, ಸುದರ್ಶನ್ ಬಿ.ಕೆ., ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Disposal of plantation land lease application after joint survey

Related posts

ಭಾರತದ ಪ್ರತಿಯೊಬ್ಬ ಪ್ರಜೆಯು ಅನುಸರಿಸಬೇಕಾದ ಮಹಾಗ್ರಂಥಾ ಭಾರತೀಯ ಸಂವಿಧಾನ

Team Suddigara

ಪ್ರತಿಯೊಬ್ಬರ ಆರೋಗ್ಯಕರ ಬದುಕಿಗೆ ಸರ್ಕಾರ ಸಿರಿಧಾನ್ಯಗಳಿಗೆ ಉತ್ತೇಜನ

Team Suddigara

ಮಾನಸಿಕ-ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ

Team Suddigara

Leave a Comment