ಚಿಕ್ಕಮಗಳೂರು: ರಾಜ್ಯದಲ್ಲಿ ಮುಂಬರುವ ಜಿ.ಪಂ, ತಾ.ಪಂ, ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಆಮ್ ಅದ್ಮಿ ಪಕ್ಷ ಸಿದ್ಧತೆಯ ಜೊತೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ದರಿಸಲಾಗಿದೆ ಎಂದು ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಂ ಗುಂಡಪ್ಪ ತಿಳಿಸಿದರು.
ಅವರು ಇಂದು ನಗರಕ್ಕಾಗಮಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಮದ್ಯ ಹಾಗೂ ಡ್ರಗ್ಸ್ ಹಾವಳಿಯಿಂದಾಗಿ ಯುವಜನತೆ ಸಮಾಜ ನೈತಿಕ ಅದಃಪತನಕ್ಕೆ ಇಳಿಯುತ್ತಿದ್ದು, ಸರ್ಕಾರ ಮತ್ತಷ್ಟು ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುತ್ತಿರುವುದನ್ನು ಖಂಡಿಸಿದರು.
ಪಕ್ಕದ ತಮಿಳುನಾಡು, ಕೇರಳ ಇನ್ನಿತರ ರಾಜ್ಯಗಳಲ್ಲಿ ಮದ್ಯದ ಅಂಗಡಿಗಳು ಊರಾಚೆ ಇವೆ. ಬಿಹಾರ ಮತ್ತು ಗುಜರಾತ್ ರಾಜ್ಯಗಳಲ್ಲಿ ಮದ್ಯಪಾನ ಸಂಪೂರ್ಣ ನಿಷೇಧವಾಗಿದೆ. ಈ ಹಿಂದೆ ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ಪರವಾನಗಿ ನೀಡಿದ ಪರಿಣಾಮ ಮದ್ಯದಂಗಡಿಗಳು ತಲೆಎತ್ತಿದ ಹಿನ್ನೆಲೆಯಲ್ಲಿ ದುಷ್ಪರಿಣಾಮ ಎದುರಿಸುವಂತಾಗಿ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಅಬಕಾರಿ ಪರವಾನಗಿಗಳನ್ನು ಮುಂದೆ ನೀಡಬಾರದು ಎಂದು ಒತ್ತಾಯಿಸಿದ ಅವರು, ಚಿಕ್ಕಮಗಳೂರು ನಗರ ಅವ್ಯವಸ್ಥೆಯ ಆಗರವಾಗಿದ್ದು, ಗುಂಡಿಗಳ ನಗರವಾಗಿದೆ ಎಂದು ದೂರಿದರು.
ನಗರದ ಹೃದಯ ಭಾಗದಲ್ಲಿರುವ ಬಸವನಹಳ್ಳಿ ಕೆರೆ ಜೂಜುಕೋರರ ಅಡ್ಡೆಯಾಗಿ ಪರಿವರ್ತನೆಯಾಗಿದೆ. ಈ ಬಗ್ಗೆ ಪೊಲೀಸರು ಗಮನಹರಿಸದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಈ ಸಂಬಂಧ ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಕಾಡುಪ್ರಾಣಿಗಳು ಮತ್ತು ಮಾನವ ಸಂಘರ್ಷ ಹೆಚ್ಚಾಗಿದ್ದು, ಕಾಡಾನೆ ದಾಳಿಗೆ ೪೦ ಜನ ತುತ್ತಾಗಿದ್ದಾರೆ. ಈ ಬಗ್ಗೆ ಅರಣ್ಯ ಸಚಿವರು ಗಮನಹರಿಸಿ ರೈತರ ಸಮಸ್ಯೆಯನ್ನು ಪರಿಹರಿಸಿ ಮೃತ ಕುಟುಂಬಗಳಿಗೆ ಸಾಂತ್ವಾನ ಹೇಳಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಮ್ ಅದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಹೇಮಂತ್ಕುಮಾರ್, ಸಂಘಟನಾ ಕಾರ್ಯದರ್ಶಿ ಈರೇಗೌಡ, ಮಾಧ್ಯಮ ಸಂಚಾಲಕರಾದ ಡಾ. ಕೆ. ಸುಂದರಗೌಡ, ಯುವಮೋರ್ಚಾ ಅಧ್ಯಕ್ಷ ಪ್ರಭು, ಮುಖಂಡರಾದ ಗೋವಿಂದಪ್ಪ, ಸುನಂದಮ್ಮ, ಜಯಮ್ಮ ಉಪಸ್ಥಿತರಿದ್ದರು.
Aam Aadmi Party is preparing for the upcoming G.P.-T.P. Elections
